ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ; ಮಳೆ ಬಂದರೆ ಮಕ್ಕಳ ಪಾಡು ಅಧೋಗತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 06, 2024 | 8:31 PM

ಅದು ಶತಮಾನಗಳಿಂದಲೂ ಬಡವರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿರುವ ಸರ್ಕಾರಿ ಶಾಲೆ. ಈ ಶಾಲೆಯಲ್ಲಿ ಕಲಿತವರು ಜೀವನ ರೂಪಿಸಿಕೊಂಡಿದ್ದಾರೆ. ಆದರೆ, ಸದ್ಯ ಈ ಶಾಲೆಯ ಸ್ಥಿತಿ ಮಾತ್ರ ಆಯೋಮಯವಾಗಿದೆ. ಪಾಠ ಪ್ರವಚನ ಮಾಡಲು ಯೋಗ್ಯವಿಲ್ಲವಾಗಿದೆ. ಬೇಸಿಗೆಯಲ್ಲಿ ಬಿಸಿಲು ತಲೆ ಮೇಲೆ ಬಿದ್ದರೆ ಮಳೆಗಾಲದಲ್ಲಿ ತರಗತಿಗಳಲ್ಲಿಯೇ ನೀರು ತೊಟ್ಟಿಕ್ಕುತ್ತದೆ. ಇಂಥಹ ಸ್ಥಿತಿಯಲ್ಲಿ ಮಕ್ಕಳು ಪಾಠ ಕಲಿಯಬೇಕಾಗಿದೆ. ಸರ್ಕಾರಿ ಶಾಲೆಯ ದುರ್ಗತಿ ಕುರಿತ ಒಂದು ಸ್ಟೋರಿ ಇಲ್ಲಿದೆ.

ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ; ಮಳೆ ಬಂದರೆ ಮಕ್ಕಳ ಪಾಡು ಅಧೋಗತಿ
ವಿಜಯಪುರದಲ್ಲಿ ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ
Follow us on

ವಿಜಯಪುರ, ಜೂ.06: ನಗರದ ಮಧ್ಯಭಾಗದಲ್ಲಿರುವ ಈ ಸರ್ಕಾರಿ ಶಾಲೆ(Government School)ಯೂ 1918 ರಲ್ಲಿ ಸ್ಥಾಪನೆಯಾಗಿದ್ದು, ಶತಮಾನದ ಸಂಭ್ರಮ ಕಂಡಿರೋ ಈ ಶಾಲೆ ದುಸ್ಥಿತಿಗಳ ಆವಾಸವಾಗಿದೆ. ಮುರಿದ ಕಿಡಕಿಗಳು, ಸೋರುವ ಮೇಲ್ಚಾವಣಿ, ಗಬ್ಬು ನಾರುತ್ತಿರುವ ನೆಲ ಹಾಸಿಗೆ, ಬಿರುಕು ಬಿಟ್ಟ ಕಟ್ಟಡ ಇದು ಶಾಲೆಯ ಸದ್ಯದ ದುಸ್ಥಿತಿ. ಇಂತಹ ಸಮಸ್ಯೆಗಳ ಮಧ್ಯೆಯೇ ಮಕ್ಕಳಿಗೆ ಪಾಠ ಹೇಳುವ ಅನಿವಾರ್ಯತೆ ಶಿಕ್ಷಕರಿಗಾಗಿದೆ. ಈ ಹಿಂದೆ ದೇಶವನ್ನಾಳಿದ ಬ್ರೀಟಿಷರ ಕಾಲದಲ್ಲಿ ನಮ್ಮ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ 4 ಮೊದಲು ಬಾಲಮಂದಿರ ಆಗಿತ್ತು. ಬಾಲಾಪರಾಧಿಗಳಿಗೆ ಶಿಕ್ಷಣ ಕೊಡುವುದಕ್ಕೆ ಉಪಯೋಗಿಸುತ್ತಿದ್ದ ಕಟ್ಟಡವಾಗಿತ್ತು. ನಂತರದ ದಿನಗಳಲ್ಲಿ ಇದು ಸರ್ಕಾರಿ ಶಾಲೆಯಾಗಿ ಪರಿವರ್ತನೆಯಾಗಿದೆ.

270 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಿದು

ಸಧ್ಯ ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡ ಪುನಶ್ಚೇತನವಾಗದೇ ಪಾಳು ಬಿದ್ದಂತಾಗಿದೆ. ಬಡ ಜನರೇ ಹೆಚ್ಚಾಗಿರುವ ಏರಿಯದಲ್ಲಿರುವ ನಮ್ಮ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಶಾಲೆ ನಂ 4, ವಿದ್ಯಾರ್ಥಿಗಳ ಪಾಲಿಗೆ ಯಮ ಸ್ವರೂಪಿಯಾಗಿದೆ. ಈ ಶಾಲೆಯ ದುಸ್ಥಿತಿ ಬಗ್ಗೆ ಪೋಷಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಬೇಸಿಗೆ ರಜೆ ಕಳೆದು ಶಾಲೆ ಆರಂಭವಾಗಿದ್ದು, ಇಲ್ಲಿ 270 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಟಿವಿ9 ‘ಹೇಗಿದೆ ನಮ್‌ ಶಾಲೆ’ ಅಭಿಯಾನದ ಇಂಪ್ಯಾಕ್ಟ್‌; ವರದಿ ಬಳಿಕ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿಯಿಂದ ಶಾಲೆಗೆ ಭೇಟಿ

ಈ ಶಾಲೆಯ ಮಕ್ಕಳ ಈ ಸಮಸ್ಯೆಗೆ ಪರಿಹಾರವೆಂಬಂತೆ ಮೂರು ಕೊಠಡಿಗಳ ನೂತನ ಕಟ್ಟಡ ನಿರ್ಮಾಣ ಮಾಡಲು ಇಲಾಖೆ ಮುಂದಾಗಿದೆ. ಆದರೆ ,ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ಎರಡು ವರ್ಷಗಳ ಮೇಲಾದರೂ ಕಟ್ಟಡ ಕಾಮಗಾರಿ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ಹಾಗಾಗಿ ಪಾಳು ಬಿದ್ದ ಹಳೆಯ ಕಟ್ಟಡವೇ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಈ ಶಾಲಾ ಕಟ್ಟಡದ ಸಮಸ್ಯೆ ಕುರಿತು ಶಾಲಾ ಶಿಕ್ಷಕರು ಮೇಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತಿಗೆ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇ ಬಂತು. ಪರಿಹಾರ ಮಾತ್ರ ಯಾರೋಬ್ಬರೂ ನೀಡಿಲ್ಲ.

ಅನಿವಾರ್ಯವಾಗಿ ನಾವು ದುಸ್ಥಿತಿಯಲ್ಲಿರುವ ಈ ಕಟ್ಟಡದಲ್ಲೇ ಮಕ್ಕಳಿಗೆ ಪಾಠ ಮಾಡುತ್ತೇವೆ ಎಂದು ಹೇಳಿದ್ದಾರೆ. ಶಾಲಾ ಕಟ್ಟಡದ ದುರ್ಗತಿ ಅಷ್ಟೇಯಲ್ಲ, ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. 1 ರಿಂದ 7 ನೇ ತಗರತಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇರುವ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳು ಇಲ್ಲಿವೆ. ಹಾಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಬಿಇಓ ಇತ್ತ ಗಮನ ಹರಿಸಬೇಕಿದೆ. ಅಪೂರ್ಣವಾಗಿರೋ ಹೊಸಕಟ್ಟಡವನ್ನು ಪೂರ್ಣಗೊಳಿಸಬೇಕಿದೆ. ಇಲ್ಲವಾದರೆ ದೊಡ್ಡ ಮಳೆ ಆದರೆ ಇಲ್ಲಿ ಅನಾಹುತವಾಗಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ