ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮೋಡ ಕವಿದ ವಾತಾವರಣದಿಂದ ವಿಜಯಪುರದ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ

TV9 Digital Desk

| Edited By: preethi shettigar

Updated on:Nov 13, 2021 | 2:52 PM

ತಂಪು ವಾತಾವರಣ ಹಾಗೂ ಚಳಿಯ ಕಾರಣ ಹಿಂಗಾರು ಹಂಗಾಮಿನ ಬೆಳೆಗಳು ಉತ್ತಮವಾಗಿ ಬರುತ್ತವೆ ಎಂಬ ಸಂತಸ ವ್ಯಕ್ತವಾಗಿದೆ. ಇನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಸಹ ಅಡ್ಡಿಯಿಲ್ಲಾ ಎಂದು ರೈತರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮೋಡ ಕವಿದ ವಾತಾವರಣದಿಂದ ವಿಜಯಪುರದ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ
ಮೋಡ ಕವಿದ ವಾತಾವರಣ
Follow us

ವಿಜಯಪುರ: ದೀಪಾವಳಿ ನಂತರ ಕೊರೆವ ಚಳಿಗೆ ಸಾಕ್ಷಿಯಾಗಬೇಕಿದ್ದ ವಿಜಯಪುರ ಜಿಲ್ಲೆಯ ವಾತಾವರಣದಲ್ಲಿ ದಿಡೀರ್ ಬದಲಾವಣೆಯಾಗಿದೆ. ಚಳಿಯ ನಡುವೆ ಮೋಡ ಮುಸುಕಿದ ವಾತಾವರಣ ಮನೆ ಮಾಡಿದ್ದು, ಜನರು ಮನೆಯಾಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಲ್ಲಿ ಅಲ್ಪಸ್ವಲ್ಪ ತುಂತುರು ಮಳೆಯಾಗುತ್ತಿದ್ದು, ಚಳಿಗಾಲ, ಮಳೆಗಾಲದ ಮಿಶ್ರಣವಾದಂತಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಕಾರಣ ಈ ರೀತಿಯ ವಾತಾವರಣ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಸದಾ ಬಿಸಿಲನ್ನೇ ಹೆಚ್ಚಾಗಿ ನೋಡುತ್ತಿದ್ದ ಗುಮ್ಮಟ ನಗರಿಯ ಜನರು ಚಳಿಗಾಲ ಹಾಗೂ ಮಳೆಯ ವಾತಾವರಣವನ್ನು ನೋಡುವಂತಾಗಿದೆ. ನಿನ್ನೆ(ನವೆಂಬರ್ 12) ರಾತ್ರಿಯಿಂದಲೇ ವಾತಾವರಣದಲ್ಲಿ ಭಾರೀ ಬದಲಾವಣೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಅನುಭವ ಪಡೆಯುತ್ತಿದ್ದ ಜನರಿಗೆ ಇದೀಗಾ ತಂಪು ವಾತಾವರಣದೊಂದಿಗೆ ಮಳೆಗಾಲದಂತಾಗಿದೆ.

ಹಿಂಗಾರು ಬೆಳೆಗಾರ ರೈತರದಲ್ಲಿ ಸಂತಸ ದಿಡೀರ್ ವಾತಾವರಣ ಬದಲಾವಣೆಯಿಂದ ಜಿಲ್ಲೆಯ ರೈತರಲ್ಲಿ ಇಬ್ಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಳೆಯಾಶ್ರಿತ ಕೃಷಿ ಮಾಡಿ ತೊಗರಿ, ಜೋಳ, ಕಡಲೆ, ಗೋಧಿ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದ ರೈತರಿಗೆ ಮಳೆಯಾಗುತ್ತಿರುವುದು ಚಳಿಯ ಜೊತೆಗೆ ಮೋಡ ಮುಸುಕಿದ್ದು, ಒಂದು ರೀತಿಯಲ್ಲಿ ವರವಾಗಿದೆ. ತಂಪು ವಾತಾವರಣ ಹಾಗೂ ಚಳಿಯ ಕಾರಣ ಹಿಂಗಾರು ಹಂಗಾಮಿನ ಬೆಳೆಗಳು ಉತ್ತಮವಾಗಿ ಬರುತ್ತವೆ ಎಂಬ ಸಂತಸ ವ್ಯಕ್ತವಾಗಿದೆ. ಇನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಸಹ ಅಡ್ಡಿಯಿಲ್ಲಾ ಎಂದು ರೈತರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4.60 ಲಕ್ಷ ಹೆಕ್ಟೇರ್ ಪ್ರದೇಶ ಜೊಳ 75,000 ಹೆಕ್ಟೇರ್, ಗೋಧಿ 50,000, ಕಡಲೆ 1 ಲಕ್ಷ ಹೆಕ್ಟೇರ್, ಸೂರ್ಯಕಾಂತಿ 6000 ಹೆಕ್ಟೇರ್ ಬೆಳೆಗಳಿಗೆ ಮಳೆಯ ಅವಶ್ಯಕತೆಯಿದ್ದು, ಮಳೆಯಾದರೆ ಉತ್ತಮ ಎಂದು ಅನ್ನದಾತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಸದ್ಯದ ವಾತಾವರಣದ ಕಾರಣ ಮಳೆಯಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ದ್ರಾಕ್ಷಿ ಬೆಳೆಗಾರರು ಮಾತ್ರ ದಿಡೀರ್ ಬದಲಾವಣೆಯಾದ ವಾತಾವರಣಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ದ್ರಾಕ್ಷಿಗೆ ಮೋಡ ಮುಸುಕಿದ ವಾತಾವರಣ. ತುಂತುರು ಮಳೆ ಅಥವಾ ಬಿರುಸಾದ ಮಳೆಯಾದರೆ ಕಷ್ಟವಾಗುತ್ತದೆ. ದ್ರಾಕ್ಷಿ ಕಾಳುಗಟ್ಟಲು ಹಾಗೂ ಕಾಳುಗಟ್ಟಿದ ದ್ರಾಕ್ಷಿ ಗೊಣೆ ಮಳೆಗೆ ಮುರಿದು ಬೀಳುತ್ತದೆ. ಅದಲ್ಲದೇ ಮೋಡ ಮುಸುಕಿದ ವಾತಾವರಣದಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗಗಳು ಬಾಧೆ ಕಾಡುತ್ತದೆ ಎಂದು ರೈತರು ಹೇಳಿದ್ದಾರೆ.

ಜಿಲ್ಲೆಯಲ್ಲಿ 25,000 ಹೆಕ್ಟೇರ್ ದ್ರಾಕ್ಷಿ ಬೆಳೆಯಲಾಗಿದೆ. ಒಂದು ಎಕರೆ ದ್ರಾಕ್ಷಿ ಬೆಳೆಯಲು ವರ್ಷಕ್ಕೆ ಕನಿಷ್ಟ 3 ರಿಂದ 5 ಲಕ್ಷ ರೂಪಾಯಿ ಖರ್ಚು ಮಾಡಲೇಬೇಕಿದೆ. ಅಪಾರ ಪ್ರಮಾಣದ ರಾಸಾಯನಿಕ ಹಾಗೂ ಔಷಧ ಬಳಕೆ ಹೆಚ್ಚಿನ ಖರ್ಚಿಗೆ ಕಾರಣ. ರಾಸಾಯನಿಕ, ಔಷಧಿ ಬಳಕೆ ಮಾಡಬೇಕಾದ ಅನಿವಾರ್ಯತೆ ಹೆಚ್ಚಿನ ಖರ್ಚಿಗೆ ಮೂಲವಾಗಿದೆ. ಸದ್ಯ ವಾತಾವರಣ ಬದಲಾವಣೆ ದ್ರಾಕ್ಷಿಗೆ ಕಂಟಕವಾಗುವುದರಲ್ಲಿ ಯಾವುದೇ ಗೊಂದಲವಿಲ್ಲ ಎನ್ನುವಂತಾಗಿದೆ.

ಭಾರೀ ಮಳೆಯಾಗೋ ಸಾದ್ಯತೆ ಕಡಿಮೆ; ಅಲ್ಲಲ್ಲಿ ಮಳೆಯಾಗಬಹುದು: ಹವಾಮಾನ ಇಲಾಖೆ ಮಾಹಿತಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದಲ್ಲಿ ವಾತಾವರಣ ಬದಲಾವಣೆ ಹಾಗೂ ಅಲ್ಲಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಆಧಿಕಾರಿಗಳು ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ವಿಜಯಪುರದ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಹವಾಮಾನ ಶಾಸ್ತ್ರ ವಿಭಾಗದ ತಾಂತ್ರಿಕ ವಿಭಾಗದ ಆಧಿಕಾರಿ ಶಂಕರ ಎನ್. ಕುಲಕರ್ಣಿ ಅವರು ಹೇಳಿರುವ ಪ್ರಕಾರ, ಕಳೆದ ಹಲವಾರು ವರ್ಷಗಳಿಂದ ಈ ರೀತಿಯ ಹವಾಮಾನ ಬದಲಾವಣೆ ಆಗುತ್ತಾ ಬಂದಿದೆ. ಹಿಂದಿನ ವರ್ಷಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ರೀತಿ ವಾತಾವರಣ ಬದಲಾವಣೆ ಸ್ವಲ್ಪ ಪ್ರಮಾಣದಲ್ಲಿ ಆಗುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈಚೆಗೆ ಇಂಥ ವಾತಾವರಣ ಬದಲಾವಣೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಜಾಗತೀಕ ತಾಪಮಾನ ಏರಿಕೆ ಹಾಗೂ ಹವಾಮಾನ ಸ್ಥಿತಿಗತಿಯಲ್ಲಿ ಆದಂಥ ಪ್ರಮುಖ ಬದಲಾವಣೆಗಳು ಕಾರಣವೆನ್ನಬಹುದು. ಸದ್ಯ ಈ ಬದಲಾವಣೆಯಿಂದ ಮುಂದಿನ ಐದಾರು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ. ಅಲ್ಲಲ್ಲಿ ಸ್ವಲ್ಪ ಮಳೆಯಾಗೋ ಸಾದ್ಯತೆಯಿದೆ. ಆದರೆ ಬಾರೀ ಮಳೆಯಾಗೋ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.

ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ: Weather Forecast: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ನ. 11ರವರೆಗೆ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕಾರು ಕೊಚ್ಚಿ ಹೋಗಿ ಮಹಿಳೆ ಸಾವು

ತಾಜಾ ಸುದ್ದಿ

Related Stories

Click on your DTH Provider to Add TV9 Kannada