ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ, ಮಲಗಿದ್ದಲ್ಲೇ ಸುಟ್ಟು ಕರಕಲಾದ ವೃದ್ಧ ದಂಪತಿ

| Updated By: ಆಯೇಷಾ ಬಾನು

Updated on: Feb 26, 2023 | 9:52 AM

ತಡರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು ಮಲಗಿದ್ದಲ್ಲೇ ಪತಿ-ಪತ್ನಿ ಸುಟ್ಟು ಕರಕಲಾಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ, ಮಲಗಿದ್ದಲ್ಲೇ ಸುಟ್ಟು ಕರಕಲಾದ ವೃದ್ಧ ದಂಪತಿ
ಕರೀಂಸಾಬ್ ಟಪಾಲ್, ಸಾಜನಬೀ ಟಪಾಲ್
Follow us on

ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ವೃದ್ಧ ದಂಪತಿ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಹೊರವಲಯದ ಜಮೀನಿನಲ್ಲಿ ನಡೆದಿದೆ. ಕರೀಂಸಾಬ್ ಟಪಾಲ್(82), ಸಾಜನಬೀ ಟಪಾಲ್(72) ಮೃತ ವೃದ್ಧರು. ಮತ್ತೊಂದೆಡೆ ಯಾದಗಿರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಗುಡಿಸಲು ಸುಟ್ಟು ಕರಕಲಾಗಿದೆ.

ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಕರೀಂಸಾಬ್ ಟಪಾಲ್ ಮತ್ತು ಸಾಜನಬೀ ಟಪಾಲ್ ಎಂಬ ವೃದ್ಧ ದಂಪತಿ ವಾಸವಾಗಿದ್ದರು. ತಡರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು ಮಲಗಿದ್ದಲ್ಲೇ ಪತಿ-ಪತ್ನಿ ಸುಟ್ಟು ಕರಕಲಾಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: 8 ವರ್ಷಗಳ ಪ್ರೀತಿ: ಬರಸಿಡಿಲಿನಂತೆ ಬಂದು ಅಪ್ಪಳಿಸಿದ ಪ್ರೇಯಸಿಯ ಲಗ್ನ ಪತ್ರಿಕೆ, ವಿಷ ಕುಡಿದ ಪ್ರಿಯಕರ

ಸಿಲಿಂಡರ್ ಸ್ಫೋಟಕ್ಕೆ ಸುಟ್ಟು ಕರಕಲಾದ ಗುಡಿಸಲು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿ ನಗರ ಕ್ಯಾಂಪ್ ನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಗುಡಿಸಲು ಸುಟ್ಟು ಕರಕಲಾದ ಘಟನೆ ನಡೆದಿದೆ. ಆಂಧ್ರ ಮೂಲದ ಟಿ.ಮದು ಅವರಿಗೆ ಸೇರಿದ ಗುಡಿಸಲು ಇದಾಗಿದ್ದು ಸ್ನಾನ ಮಾಡಲು ನೀರು ಕಾಯಿಸಲು ಇಟ್ಟಾಗ ಸಿಲಿಂಡರ್ ಸ್ಪೋಟಗೊಂಡಿದೆ. ಗುಡಿಸಲಿನಲ್ಲಿದ್ದ 2 ಲಕ್ಷ ಹಣ, ವಾಷಿಂಗ್ ಮಷೀನ್, ಟಿವಿ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಇನ್ನು ಮದು ಅವರು ಮಗಳ ಚಿಕಿತ್ಸೆಗಾಗಿ ಗುಡಿಸಲಲ್ಲಿ ಹಣ ತಂದಿಟ್ಟಿದ್ದರು. ಆದ್ರೆ ಈಗ ಹಣ ಸುಟ್ಟು ಹೋಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ‌ ಬಂದು ಬೆಂಕಿ ನಂದಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿ, ಕಾರಿನಲ್ಲಿದ್ದ 4 ವರ್ಷದ ಮಗು ಸಾವು

ಕೊಪ್ಪಳ ತಾಲೂಕಿನ ಬಹದ್ದೂರ್​​ ಬಂಡಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮರುಳು ತುಂಬಿದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ 4 ವರ್ಷದ ಮಗು ಮೃತಪಟ್ಟಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗದಗದಿಂದ ಹೊಸಪೇಟೆಯತ್ತ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೊಪ್ಪಳ ಗ್ರಾಮೀಣ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:52 am, Sun, 26 February 23