ರಾಜ್ಯ ವಿಭಜನೆಯಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ: ಚಂದ್ರಶೇಖರ ಶ್ರೀ ಅಚ್ಚರಿಯ ಹೇಳಿಕೆ

| Updated By: ಗಣಪತಿ ಶರ್ಮ

Updated on: Jun 29, 2024 | 12:36 PM

ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಅದಷ್ಟೇ ಅಲ್ಲದೆ ಇನ್ನೂ ಕೆಲವು ಮಹತ್ವದ ವಿಚಾರಗಳ ಬಗ್ಗೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರಂತೆ. ಆ ಬಗ್ಗೆ ಅವರು ಇದೀಗ ‘ಟಿವಿ9’ಗೆ ಹೇಳಿಕೆ ನೀಡಿದ್ದಾರೆ. ರಾಜ್ಯ ವಿಭಜನೆ ಬಗ್ಗೆಯೂ ಅವರು ಮಾತನಾಡಿದ್ದು, ಇದೀಗ ಮಹತ್ವ ಪಡೆದುಕೊಂಡಿದೆ.

ಬೆಂಗಳೂರು, ಜೂನ್ 29: ಡಿಸಿಎಂ ಡಿಕೆ ಶಿವಕುಮಾರ್​ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯನವರಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಬಹಿರಂಗವಾಗಿ ಮನವಿ ಮಾಡಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿ ‘ಟಿವಿ9’ ಜತೆ ಮಾತನಾಡಿರುವ ಸ್ವಾಮೀಜಿ, ಅಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದು ವೈಜ್ಞಾನಿಕವಾಗಿ ಅಷ್ಟೆ. ಸಿಎಂ ಹುದ್ದೆ ವಿಚಾರವಲ್ಲದೆ ಇನ್ನೂ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದೆ ಎಂದು ತಿಳಿಸಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಇಬ್ಭಾಗವಾಗಬೇಕು. ಹಾಗಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ಮತ್ತು ನಿಲುವಿಗೆ ಇಂದೂ ಸಹ ಬದ್ಧನಾಗಿದ್ದೇನೆ. ಕೆಂಪೇಗೌಡರ ಜಯಂತಿಯಂದು 3 ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೆ. ಮೊದಲ ಅಂಶ ಬೆಂಗಳೂರು ವಿಭಜನೆಗೆ ಸಂಬಂಧಿಸಿದ್ದು. ಬೆಂಗಳೂರನ್ನು 3 ಅಥವಾ 5 ಭಾಗ ಮಾಡುವುದು ಬೇಡ ಎಂಬ ವಿಚಾರದ ಬಗ್ಗೆ ಮಾತನಾಡಿದ್ದೆ. ಕೆಂಪೇಗೌಡರೆಂದರೆ ಬೆಂಗಳೂರು, ಬೆಂಗಳೂರೆಂದರೆ ಕೆಂಪೇಗೌಡರು. ಆದ್ದರಿಂದ ಬೆಂಗಳೂರು ವಿಭಜನೆ ಮಾಡಿದರೆ ಕೆಂಪೇಗೌಡರ ಹೆಸರು ಹೋಗುತ್ತೆ. ಕೆಂಪೇಗೌಡ ಉಳಿಯಬೇಕಾದ್ರೆ ಬೆಂಗಳೂರು ಒಂದಾಗಿರಬೇಕು ಎಂದು ಹೇಳಿದ್ದೆ.

‘ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗವಾಗಲಿ’

ಎರಡನೆಯೇ ಅಂಶವೆಂದರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎರಡು ಭಾಗ ಆಗಲಿ ಎಂಬುದು. ಎರಡು ಭಾಗ ಆದಾಗ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಕಷ್ಟಪಟ್ಟಿದ್ದಾರೆ: ಚಂದ್ರಶೇಖರ ಶ್ರೀ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆಡಿದ್ದ ಮಾತಿನ ಮೂರನೇ ಅಂಶ ಡಿಕೆ‌ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದು. ಕಾಂಗ್ರೆಸ್ ಪಕ್ಷಕ್ಕೆ‌ ಡಿಕೆ‌ ಶಿವಕುಮಾರ್ ಮೊದಲಿಂದಲೂ ಕಷ್ಟ ಪಟ್ಟಿದ್ದಾರೆ. 135 ಸೀಟ್ ಬರಬೇಕು ಅಂದರೆ ಅದರ ಹಿಂದೆ ಡಿಕೆ ಶಿವಕುಮಾರ್ ಶ್ರಮ ಬಹಳಷ್ಟಿದೆ. ಇವರದ್ದು ಹೆಚ್ಚು ಶ್ರಮ ಇದೆ. ಬಹಳ ದಿನಗಳಿಂದಲೂ ಅವರಿಗೆ ಸಿಎಂ ಆಗಬೇಕು ಎಂಬ ಇಚ್ಛೆ ಇದೆ. ನಮಗೂ ಶಿವಕುಮಾರ್ ಮುಖ್ಯಮಂತ್ರಿ ಆದರೆ ಬಹಳ ಒಳ್ಳೆಯದು. ನಮ್ಮ ಕರ್ನಾಟಕದಲ್ಲಿ ಮುಖ್ಯವಾದವರೆಲ್ಲರೂ ಸಿಎಂ ಆಗಿದ್ದಾರೆ. ಇವರ ಒಂದು‌ ಸರದಿ‌ ಆಗಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ಹೇಳಿದ್ದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ ದಯವಿಟ್ಟು ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಿ: ಚಂದ್ರಶೇಖರಶ್ರೀ ಮನವಿ

ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಊಟ ಮಾಡಿ, ಇನ್ನೊಂದು ವರ್ಷ ಊಟ ಮಾಡಿದ್ದಾರೆ. ಅವರು ದಯೆ ತೋರಿಸಿ ಸಿಎಂ ಆಗಲು‌ ಅವಕಾಶ ಕೊಡಲಿ ಅಂತ ಹೇಳಿದ್ದೆ ಎಂದು ಚಂದ್ರಶೇಖರ ಶ್ರೀ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Sat, 29 June 24