
ಬೆಂಗಳೂರು, (ಜುಲೈ 06): ಕರ್ನಾಟಕ ಬಿಜೆಪಿಯಲ್ಲಿನ (Karnataka BJP) ಇತ್ತೀಚಿನ ವಿದ್ಯಮಾನಗಳ ಬಗ್ಗೆ ಆರ್ಎಸ್ಎಸ್ (RSS) ಅಸಮಾಧಾನ ಹೊರಹಾಕಿದೆ. ಮೊನ್ನೇ ನಡೆದ ಬಿಜೆಪಿ ನಾಯಕರೊಂದಿಗೆ ಸಭೆಯಲ್ಲಿ ಆರ್ಎಸ್ಎಸ್ ಕೆಲ ವಿಚಾರಳನ್ನು ಪ್ರಸ್ತಾಪಿಸಿ ಕಿಡಿಕಾರಿದೆ. ನಾಯಕರ ನಡವಳಿಕೆ ಬದಲಿಸಿಕೊಳ್ಳಲು ಸಂಘದ ಪ್ರಮುಖರು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರು ಸೇರಿಕೊಂಡು ಸಂಸದ ಡಾ ಕೆ ಸುಧಾಕರ್ (D K Sudhakar) ಹಾಗೂ ಶಾಸಕ ಎಸ್ಆರ್ ವಿಶ್ವನಾಥ್ (SR VIshwanath) ಬಹಿರಂಗ ಕಿತ್ತಾಟಕ್ಕೆ ಬ್ರೇಕ್ ಹಾಕಿದ್ದಾರೆ. ಆರ್ಎಸ್ಎಸ್ ಸೂಚನೆ ಮೇರೆಗೆ ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಸಂಧಾನ ಸಭೆ ಮಾಡಿದ್ದು, ಇಬ್ಬರಿಗೆ ಕೆಲ ಖಡಕ್ ಸೂಚನೆಗಳನ್ನು ನೀಡಲಾಗಿದೆ.
ಬಿಜೆಪಿಯಲ್ಲಿ ಅಡ್ಡ ಮತ ಪ್ರಕರಣ ಬಳಿಕ ಸಾಕಷ್ಟು ಆಂತರಿಕ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ನಡೆದ ಆರ್ ಎಸ್ ಎಸ್ ಬೈಠಕ್ನಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ಕೆಲ ಮುಜುಗರದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಸರಿ ನಾಯಕರಿಗೆ ಸಂಘ ಲೆಫ್ಟ್ ರೈಟ್ ತೆಗೆದಕೊಂಡಿದೆ. ಹೊಂದಾಣಿಕೆ ಸಮಸ್ಯೆ ಇನ್ನೂ ಪಕ್ಷದಲ್ಲಿ ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಒಗ್ಗಟ್ಟಿನ ಶಕ್ತಿ ಬಗ್ಗೆಯೂ ಬೋಧನೆ ಮಾಡಲಾಗಿದೆ. ಹೀಗಾಗಿ ಬಿಜೆಪಿಯ ಹಿರಿಯ ನಾಯಕರಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸಮ್ಮುಖದಲ್ಲಿ ಸುಧಾಕರ್ ಹಾಗೂ ವಿಶ್ವನಾಥ್ ನಡುವೆ ಸಂಧಾನ ಸಭೆ ನಡೆದಿದ್ದು, ಸಭೆ ಸಕ್ಸಸ್ ಕಂಡಿದೆ. ಹಿರಿಯ ನಾಯಕರಿಗೆ ಸಲಹೆ ಸೂಚನೆಗಳಿಗೆ ಬೆಲೆ ಕೊಡುವುದಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.
ನನ್ನನ್ನು ಕಾರ್ಯಕ್ರಮಗಳಿಗೆ ಕರೆಯುತ್ತಿರಲಿಲ್ಲ ಎಂದಿದ್ದ ಸುಧಾಕರ್ ಹೇಳಿಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ವಿಶ್ವನಾಥ್, ಮಾಹಿತಿ ಇಲ್ಲದೆ ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡೋದು ಸರಿಯಲ್ಲ. ಇನ್ನು ಮುಂದೆ ನಾನು ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತೇನೆ. ಎಂಪಿ ಚುನಾವಣೆಯಲ್ಲಿ ಸುಧಾಕರ್ ಸ್ಪರ್ಧಿಸಿದರೆ ಯಲಹಂಕದಿಂದ ಒಂದು ಒಂದು ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ ಎಂದಿದ್ದಾರೆ.
ಇನ್ನು ಭಾನುವಾರ (ಜುಲೈ 05) ನಡೆದ ಸಧಾನ ಸಭೆಯಲ್ಲಿ ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಗೆ ಹಿರಿಯ ನಾಯಕರು ಏನೆಲ್ಲಾ ಸೂಚನೆಗಳನ್ನು ನೀಡಲಾಗಿದೆ ಎನ್ನುವುದನ್ನು ನೋಡವುದಾದರೆ, ಹಳೆಯದ್ದನ್ನು ಮರೆತು ಒಟ್ಟಾಗಿ ಹೋಗಬೇಕು, ಕಾರ್ಯಕ್ರಮಗಳ ಫ್ಲೆಕ್ಸ್ಗಳಲ್ಲಿ ಪರಸ್ಪರರ ಫೋಟೋ ಹಾಕಿಕೊಳ್ಳಬೇಕು. ಹಾಗೇ ಕಾರ್ಯಕ್ರಮಗಳಿಗೆ ಪರಸ್ಪರರ ಆಹ್ವಾನಿಸಬೇಕು ಎಂದು ಇಬ್ಬರಿಗೂ ಸಲಹೆ ನೀಡಲಾಗಿದೆ.
ಸಂಸದರು ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಂಡೇ ಕೆಲಸ ಮಾಡಬೇಕು, ಶಾಸಕರೇ ಹೆಚ್ಚು ಕ್ಷೇತ್ರದಲ್ಲಿ ಜನಸಂಪರ್ಕ ಹೊಂದಿರುತ್ತಾರೆ . ಶೀಘ್ರದಲ್ಲೇ ವಿಶ್ವನಾಥ್ ಮನೆಗೆ ಸುಧಾಕರ್ ಭೇಟಿ ನೀಡಬೇಕು, ಶೀಘ್ರದಲ್ಲೇ ವಿಶ್ವನಾಥ್ ಮನೆಗೆ ಸುಧಾಕರ್ ಭೇಟಿ ನೀಡಬೇಕು, ಸುಧಾಕರ್ ಮನೆಗೆ ವಿಶ್ವನಾಥ್ ಭೇಟಿ ನೀಡಬೇಕೆಂದು ಎಂದು ನಿರ್ದೇಶನ ನೀಡಲಾಗಿದೆ. ಇದಕ್ಕೆ ವಿಶ್ವನಾಥ್ ಹಾಗೂ ಸುಧಕರ್ ಸಹ ಒಪ್ಪಿಕೊಂಡಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತೆ? ಈ ಇಬ್ಬರು ನಾಯಕರ ಕಾರ್ಯಕರ್ತರು, ಮುಖಂಡರು ಹೇಗೆ ಇರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.