ಸರಣಿ ಧಾರಾವಾಹಿ ರೂಪದಲ್ಲಿ ಬಿಡುಗಡೆ ಆಗುತ್ತಿರುವ ಆಡಿಯೋ- ವಿಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ: ಬಸವರಾಜ ಬೊಮ್ಮಾಯಿ

|

Updated on: Mar 27, 2021 | 12:20 PM

ಈಗ ಬಿಡುಗಡೆ ಆಗಿರುವ ಆಡಿಯೋ ಮತ್ತು ವಿಡಿಯೋಗಳನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು. ಅದರಲ್ಲಿರುವ ಸತ್ಯಾಸತ್ಯತೆ ಅಂಶಗಳನ್ನು ಪರಿಶೀಲಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸರಣಿ ಧಾರಾವಾಹಿ ರೂಪದಲ್ಲಿ ಬಿಡುಗಡೆ ಆಗುತ್ತಿರುವ ಆಡಿಯೋ- ವಿಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ:  ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆಡಿಯೋ ಮತ್ತು ವಿಡಿಯೋಗಳು ಸರಣಿ ಧಾರಾವಾಹಿ ತರಹ ಬರುತ್ತಿವೆ. ಸಿಡಿ, ಆಡಿಯೋ ಮತ್ತು ವಿಡಿಯೋ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಯಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, SIT ತನಿಖೆಯ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೇ ತನಿಖಾ ತಂಡ ಕೆಲಸ ಮಾಡಲಿದೆ. ಕಾನೂನು ಪ್ರಕಾರ ನಿಷ್ಠುರವಾಗಿ ನಡೆಯುತ್ತಿರುವ ತನಿಖೆ, ಯಾರ ಪರವೂ ಇಲ್ಲ. ಯಾರ ವಿರೋಧವೂ ಇಲ್ಲ ಎಂದರು.

ಈಗ ಬಿಡುಗಡೆ ಆಗಿರುವ ಆಡಿಯೋ ಮತ್ತು ವಿಡಿಯೋಗಳನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು. ಅದರಲ್ಲಿರುವ ಸತ್ಯಾಸತ್ಯತೆ ಅಂಶಗಳನ್ನು ಪರಿಶೀಲಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು

ಸರಣಿ ವಿಡಿಯೋ ಬಿಡುಗಡೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಒಂದೊಂದೇ ವಿಡಿಯೋ ಮತ್ತು ಆಡಿಯೋ ತುಣುಕುಗಳು ಹೊರಬರುತ್ತಿವೆ. ಈ ಮೊದಲು ವಿಡಿಯೋ ಬಿಡುಗಡೆಯಾದಾಗ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ‘ಸೂಕ್ತ ಭದ್ರತೆ ಒದಗಿಸಲು SIT ಮುಖ್ಯಸ್ಥರಿಗೆ ತಿಳಿಸಿದ್ದೇನೆ. ಸಿಡಿ ಸತ್ಯತೆ ಬಗ್ಗೆ ವೈಯಕ್ತಿಕ ಅಭಿಪ್ರಾಯ ಮುಖ್ಯವಾಗಲ್ಲ. ತನಿಖೆ SITಗೆ ವಹಿಸಿರುವುದರಿಂದ ಸತ್ಯಾಂಶ ಹೊರಬೀಳಲಿದೆ’  ಎಂದು ಹೇಳಿದ್ದರು. (Home Minister Basavaraj Bommai on Ramesh Jarkiholi CD, audio and video release case)

ನಾಲ್ಕನೇ ವಿಡಿಯೋದಲ್ಲಿ ಏನಿದೆ?
ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳುತ್ತಾರೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳುತ್ತಾರೆ. ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇನೆಂದು ಹೇಳ್ತಾರೆ. ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು.‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’. ನನಗೆ ಅಷ್ಟೊಂದು ಕಿರುಕುಳವಾಗುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾಳೆ

ಮೂರನೇ ವಿಡಿಯೋದಲ್ಲಿ ಏನಿತ್ತು?
ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಇಂದು ನಾಲ್ಕನೆ  ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಅದಕ್ಕೂ ಮುನ್ನ ನಿನ್ನೆ ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದ ಯುವತಿ, ‘ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ. ವಕೀಲ ಜಗದೀಶ್ ಮೂಲಕ ದೂರು ನೀಡುತ್ತೇನೆ. 24 ದಿನದಿಂದ ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ಕಂಗಾಲಾಗಿದ್ದೆ. ಎಲ್ಲ ಪಕ್ಷದ ನಾಯಕರು, ಎಲ್ಲ ಸಂಘಟನೆಗಳು, ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ, ಈಗ ನನಗೆ ಧೈರ್ಯ ಬಂದಿದೆ. ನನಗೆ ಧೈರ್ಯ ಬಂದಿರುವುದರಿಂದ ದೂರು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡ್ತಿದ್ದೇನೆ’ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಳು.

ನಿನ್ನೆ ರಾತ್ರಿ ಡಿಕೆಶಿ ಹೆಸರಿನ ಪ್ರಸ್ತಾಪದ ಆಡಿಯೋ ಬಿಡುಗಡೆ

ಆ ಸಿಡಿಗೆ ಸಂಬಂಧಿಸಿದ ಯುವತಿ ತನ್ನ ಕುಟುಂಬದವರ ಜತೆ ಮಾತಾಡಿರುವುದು ಎಂದು ಹೇಳಲಾದ ಆಡಿಯೋ ತುಣುಕು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಗೆಳೆಯ ಆಕಾಶ್​ ಜತೆಗಿದ್ದ ವೇಳೆyಲ್ಲಿ ಅವಳು ತನ್ನ ತಮ್ಮನ ಜತೆ ಮಾತನಾಡಿದ್ದಾಳೆ ಎನ್ನುವ 6 ನಿಮಿಷ 59 ಸೆಕೆಂಡ್​ಗಳ ಆಡಿಯೋ ಹೊರಬಿದ್ದಿದೆ.  ‘ನಾನು ನಂಬುವ ಕೃಷ್ಣನ ಮೇಲಾಣೆ ವೈರಲ್ ಆದ ಸಿಡಿ ವಿಡಿಯೋದಲ್ಲಿ ಇರುವುದು  ನಾನಲ್ಲ, ನನ್ನ ನಂಬು’ ಎಂದು ಆಡಿಯೋ ತುಣುಕಿನಲ್ಲಿ ತನ್ನ ತಮ್ಮನ ಬಳಿ ಯುವತಿ ಮನವಿ ಮಾಡಿದ್ದಾಳೆ. ಅಲ್ಲದೇ ‘ಇವೆಲ್ಲವೂ ನಿನಗೆ ಬೇಕಾ?‘ ಎಂದು ಯುವತಿಯ ತಮ್ಮ ಅವಳನ್ನು ಪ್ರಶ್ನಿಸುತ್ತಾನೆ.  ಅದಕ್ಕುತ್ತರಿಸುವ ಯುವತಿ,  ಖುದ್ದು ಡಿ. ಕೆ.ಶಿವಕುಮಾರ್ ಮತ್ತು ಡಿಕೆಶಿ ಕಡೆಯವರೇ  ಬರುತ್ತಿದ್ದಾರೆ ಎಂದು ಆಡಿಯೋ ತುಣುಕಿನಲ್ಲಿ ಹೇಳಲಾಗಿದೆ. ಈ ಆಡಿಯೋ ತುಣುಕು ವೈರಲ್ ಆಗುತ್ತಿದೆ. ಈ ಆಡಿಯೋದ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಅಥವಾ ಹೇಳಿಕೆ ಹೊರಬಿದ್ದಿಲ್ಲ. ತನಿಖೆಯ ನಂತರವಷ್ಟೇ ಅಧಿಕೃತ ಮಾಹಿತಿ ತಿಳಿದುಬರಬೇಕಿದೆ.

ಇದನ್ನೂ ಓದಿ: ಸಿಡಿ ಯುವತಿ ನನ್ನನ್ನು ಭೇಟಿ ಮಾಡಿಲ್ಲ; ನೆರವು ಕೋರಿ ಬಂದರೆ ನೆರವು ನೀಡುವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪ: ಆನೇಕಲ್​ನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ ಪ್ರತಿಕ್ರಿಯೆ