
ಬೆಂಗಳೂರು, (ಮೇ 15): ಜೆಡಿಎಸ್ನಿಂದ (JDS) ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ದಿಢೀರ್ ಅಂತ ಪಕ್ಷದ ವರಿಷ್ಠ ಎಚ್ಡಿ ದೇವೇಗೌಡ (HD Devegowda) ಅವರನ್ನು ಭೇಟಿ ಮಾಡಿದ್ದಾರೆ. ಬಹಳ ದಿನಗಳ ಬಳಿಕ ಇಂದು (ಮೇ 15) ಬೆಂಗಳೂರಿನ (Bengaluru) ಪದ್ಮನಾಭನಗರ ನಿವಾಸಕ್ಕೆ ತೆರಳಿ ದೇವೇಗೌಡರ ಭೇಟಿ ಮಾಡಿದರು. ಕೆಲ ಕಾರಣಾಂತರಗಳಿಂದ ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿರುವ ಜಿಟಿ ದೇವೇಗೌಡ, ಇದೀಗ ಏಕಾಏಕಿ ದೇವೇಗೌಡ್ರನ್ನ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಮಧ್ಯೆ 2025ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದಲೇ ಸ್ಪರ್ಧಿಸುವುದಾಗಿ ಜಿಟಿ ದೇವೇಗೌಡ ಜಿಟಿಡಿ ಸ್ಪಷ್ಟಪಡಿಸಿದ್ದಾರೆ.
ಇನ್ನು ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ, ಇವತ್ತು ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿ ಮಾಡಿದ್ದೆ. ಇಡೀ ದೇಶದಲ್ಲಿ ಪ್ರಧಾನಿಯಾಗಿ ಪ್ರಖ್ಯಾತಿ ಪಡೆದವರು. ರೈತರ ಪರ ನಿಂತು ದುಡಿದವರು. ಹೀಗಾಗಿ ಮೋದಿಯವರೇ ಅವರನ್ನ ಗುಣಗಾನ ಮಾಡಿದ್ದಾರೆ. ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವ ಇದೆ ಎಂದರು.
ಇನ್ನು ಇದೇ ವೇಳೆ ಪಕ್ಷದಿಂದ ಅಂತರ ಕಾಯ್ದುಕೊಂಡ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, ದೇವೇಗೌಡ್ರು ರಾಜಕೀಯ ಮಾತಾಡಿಲ್ಲ. ನಾನು ಮಾತಾಡಿಲ್ಲ. ಚೆನ್ನಾಗಿರು, ಒಳ್ಳೆದಾಗಲಿ ಅಂತ ಅಶೀರ್ವಾದ ಮಾಡಿದ್ದಾರೆ. ನಾನು ಎಷ್ಟು ಪ್ರಮಾಣಿಕವಾಗಿ ದುಡಿದ್ದೇನೆ ಅಂತ ಅವರಿಗೆ ಗೊತ್ತಿದೆ. ಕ್ಷೇತ್ರ ದೊಡ್ಡದಿದೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ . ನಾನು ಇನ್ನೂ ಜನತಾದಳದಲ್ಲೆ ಇದ್ದೇನೆ. 2025 ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಜಿಟಿ ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದರು.
ಇನ್ನು ಜಿಟಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಮಧ್ಯೆ ಯಾವುದು ಸರಿ ಇಲ್ಲ. ಇಬ್ಬರು ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇನ್ನು ಜಿಟಿಡಿ ವಿರುದ್ಧ ಕುಮಾರಸ್ವಾಮಿ ಬಹಿರಂಗವಾಗಿಯೇ ಕಿಡಿಕಾರಿದ್ದರು. ಅವರು ನಮ್ಮ ಜತೆ ಇಲ್ಲ, ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಅವರಿಗೆ ಇಲ್ಲ. ಅಂತಹವರನ್ನು ನಮ್ಮ ಜತೆ ಇಟ್ಟುಕೊಳ್ಳಬೇಕಾ ಎಂದು ಕುಮಾರಸ್ವಾಮಿ ಖಾರವಾಗಿ ಹೇಳಿದ್ದರು.
ಇನ್ನು ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ಅವರು ಸಹ ಆಗಾಗ ಪರೋಕ್ಷವಾಗಿ ಪಕ್ಷದಿಂದ ದೂರ ಸರಿಯುವ ಮಾತಾಡಿದ್ದು ಉಂಟು. ಹಾಗೇ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಕೋರ್ ಕಮಿಟಿ ಅಧ್ಯಕ್ಷರ ಬದಲಾವಣೆ. ಕೋರ್ ಕಮಿಟಿಗೆ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡ ಅವರನ್ನು ಬದಲಿಸಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿಗೆ ಕಮಿಟಿಯ ಸಾರಥ್ಯವನ್ನು ನೀಡಲಾಗಿದೆ.
ಕುಮಾರಸ್ವಾಮಿ ನಡೆಗೆ ಬೇಸರಗೊಂಡು ಪಕ್ಷದಿಂದ ದೂರ ಉಳಿದಿದ್ದ ಜಿಟಿ ದೇವೇಗೌಡ ಅವರನ್ನ ಸ್ವತಃ ಎಚ್ಡಿ ದೇವೇಗೌಡ್ರೆ ಸಮಾಧಾನಪಡಿಸಿದ್ದರು. ಅವರ ನಿವಾಸಕ್ಕೆ ತೆರಳಿ ಜಿಟಿ ದೇವೇಗೌಡರನ್ನ ಮನವೊಲಿಸಿದ್ದರು. ಬಳಿಕ ಎಲ್ಲವೂ ಕೂಲ್ ಆಗಿತ್ತು. ತದನಂತರ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಗೇಟ್ ಪಾಸ್ ನೀಡಿದ್ದು ಜಿಟಿಡಿ ಆಕ್ರೋಶಕ್ಕೆ ಕಾರಣವಾಗಿತ್ತು. ಏನು ಹೇಳದೇ ಕೇಳದೇ ಕಿತ್ತಾಕಿದ್ದಾರೆ ಎಂದು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದರು. ಇದೀಗ ಏಕಾಏಕಿ ಜಿಟಿಡಿ, ದೇವೇಗೌಡ ಅವರನ್ನ ಭೇಟಿ ಮಾಡಿ ಜೆಡಿಎಸ್ನಲ್ಲೇ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ಜಿಟಿಡಿಗಿದ್ದ ಮುನಿಸು ತಣ್ಣಗಾದಂತಾಗಿದೆ.
Published On - 7:26 pm, Fri, 15 May 26