ದೇವೇಗೌಡರ ಭೇಟಿ ಬಳಿಕ ಜಿಟಿಡಿ ಸ್ಫೋಟಕ ಹೇಳಿಕೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ!

ಎಚ್​​ಡಿ ಕುಮಾರಸ್ವಾಮಿಯೊಂದಿಗಿನ ಮನಸ್ತಾಪದಿಂದ ಜೆಡಿಎಸ್ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಜಿಟಿ ದೇವೇಗೌಡ ಅವರು ಏಕಾಏಕಿ ಎಚ್​​ಡಿ ದೇವೇಗೌಡ ಅವರನ್ನ ಭೇಟಿ ಮಾಡಿದ್ದಾರೆ. ಕೋರ್ ಕಮಿಟಿಯಿಂದ ಗೇಟ್ ಪಾಸ್ ನೀಡಿದ ಬಳಿಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಮಧ್ಯೆ ಜಿಟಿಡಿ, ದೇವೇಗೌಡ್ರನ್ನ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಇನ್ನು ಬಹುದಿನಗಳ ನಂತರ ದೇವೇಗೌಡರ ಭೇಟಿ ಬಳಿಕ ಜಿಟಿಡಿ ತಮ್ಮ ಮುಂದಿನ ರಾಜಕೀಯ ನಿಲುವು ಸ್ಪಷ್ಟಪಡಿಸಿದ್ದಾರೆ.

ದೇವೇಗೌಡರ ಭೇಟಿ ಬಳಿಕ ಜಿಟಿಡಿ ಸ್ಫೋಟಕ ಹೇಳಿಕೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ!
Gt Devegowda And Hd Devegowda

Updated on: May 15, 2026 | 7:41 PM

ಬೆಂಗಳೂರು, (ಮೇ 15): ಜೆಡಿಎಸ್​​ನಿಂದ (JDS) ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ದಿಢೀರ್ ಅಂತ ಪಕ್ಷದ ವರಿಷ್ಠ ಎಚ್​​ಡಿ ದೇವೇಗೌಡ (HD Devegowda) ಅವರನ್ನು ಭೇಟಿ ಮಾಡಿದ್ದಾರೆ. ಬಹಳ ದಿನಗಳ ಬಳಿಕ ಇಂದು (ಮೇ 15) ಬೆಂಗಳೂರಿನ (Bengaluru)  ಪದ್ಮನಾಭನಗರ ನಿವಾಸಕ್ಕೆ ತೆರಳಿ ದೇವೇಗೌಡರ ಭೇಟಿ ಮಾಡಿದರು. ಕೆಲ ಕಾರಣಾಂತರಗಳಿಂದ  ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿರುವ ಜಿಟಿ ದೇವೇಗೌಡ, ಇದೀಗ ಏಕಾಏಕಿ ದೇವೇಗೌಡ್ರನ್ನ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಮಧ್ಯೆ  2025ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​​ನಿಂದಲೇ ಸ್ಪರ್ಧಿಸುವುದಾಗಿ ಜಿಟಿ ದೇವೇಗೌಡ ಜಿಟಿಡಿ ಸ್ಪಷ್ಟಪಡಿಸಿದ್ದಾರೆ.

  • H.D.ದೇವೇಗೌಡರ ಭೇಟಿಯಾದ ಶಾಸಕ ಜಿ.ಟಿ.ದೇವೇಗೌಡ
  • ಬೆಂಗಳೂರಿನ ಪದ್ಮನಾಭನಗರದ HDD ನಿವಾಸದಲ್ಲಿ ಭೇಟಿ
  • ಬಹಳ ದಿನಗಳ ಬಳಿಕ ದೇವೇಗೌಡರ ಭೇಟಿಯಾದ ಜಿಟಿಡಿ
  • ಬಳಿಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್​​ನಿಂದಲೇ ಸರ್ಧೆ ಎಂದ ಜಿಟಿ ದೇವೇಗೌಡ
  • ಈ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಅಂತೆ ಕಂತೆಗಳಿಗೆ ಜಿಟಿಡಿ ತೆರೆ

ಇನ್ನು ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ, ಇವತ್ತು ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿ ಮಾಡಿದ್ದೆ. ಇಡೀ ದೇಶದಲ್ಲಿ ಪ್ರಧಾನಿಯಾಗಿ ಪ್ರಖ್ಯಾತಿ ಪಡೆದವರು. ರೈತರ ಪರ ನಿಂತು ದುಡಿದವರು. ಹೀಗಾಗಿ ಮೋದಿಯವರೇ ಅವರನ್ನ ಗುಣಗಾನ ಮಾಡಿದ್ದಾರೆ. ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವ ಇದೆ ಎಂದರು.

ಇದನ್ನೂ ಓದಿ: ಜೆಡಿಎಸ್ 25ರ ಸಂಭ್ರಮದಲೇ ಜಿಟಿ ದೇವೇಗೌಡಗೆ ಶಾಕ್ ಕೊಟ್ಟ ಕುಮಾರಸ್ವಾಮಿ

2025ಲ್ಲಿ ಜೆಡಿಎಸ್​​ನಿಂದಲೇ ಸ್ಪರ್ಧೆ ಎಂದ ಜಿಟಿಡಿ

GTDevegowda on HDD: ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಗ್ಗೆ GTD ರಿಯಾಕ್ಷನ್|#TV9D
ಇನ್ನು ಇದೇ ವೇಳೆ ಪಕ್ಷದಿಂದ ಅಂತರ ಕಾಯ್ದುಕೊಂಡ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, ದೇವೇಗೌಡ್ರು ರಾಜಕೀಯ ಮಾತಾಡಿಲ್ಲ. ನಾನು ಮಾತಾಡಿಲ್ಲ. ಚೆನ್ನಾಗಿರು, ಒಳ್ಳೆದಾಗಲಿ ಅಂತ ಅಶೀರ್ವಾದ ಮಾಡಿದ್ದಾರೆ. ನಾನು ಎಷ್ಟು ಪ್ರಮಾಣಿಕವಾಗಿ ದುಡಿದ್ದೇನೆ ಅಂತ ಅವರಿಗೆ ಗೊತ್ತಿದೆ. ಕ್ಷೇತ್ರ ದೊಡ್ಡದಿದೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ . ನಾನು ಇನ್ನೂ ಜನತಾದಳದಲ್ಲೆ ಇದ್ದೇನೆ. 2025 ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಜಿಟಿ ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದರು.

ಜಿಟಿಡಿ-ಎಚ್​​ಡಿಕೆ ಮಧ್ಯೆ ಮುಸುಕಿನ ಗುದ್ದಾಟ

ಇನ್ನು ಜಿಟಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​​ಡಿ ಕುಮಾರಸ್ವಾಮಿ ಮಧ್ಯೆ ಯಾವುದು ಸರಿ ಇಲ್ಲ. ಇಬ್ಬರು ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇನ್ನು ಜಿಟಿಡಿ ವಿರುದ್ಧ ಕುಮಾರಸ್ವಾಮಿ ಬಹಿರಂಗವಾಗಿಯೇ ಕಿಡಿಕಾರಿದ್ದರು. ಅವರು ನಮ್ಮ ಜತೆ ಇಲ್ಲ, ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಅವರಿಗೆ ಇಲ್ಲ. ಅಂತಹವರನ್ನು ನಮ್ಮ ಜತೆ ಇಟ್ಟುಕೊಳ್ಳಬೇಕಾ ಎಂದು ಕುಮಾರಸ್ವಾಮಿ ಖಾರವಾಗಿ ಹೇಳಿದ್ದರು.

ಇನ್ನು ಜೆಡಿಎಸ್​ ಹಿರಿಯ ನಾಯಕ ಜಿಟಿ ದೇವೇಗೌಡ ಅವರು ಸಹ ಆಗಾಗ ಪರೋಕ್ಷವಾಗಿ ಪಕ್ಷದಿಂದ ದೂರ ಸರಿಯುವ ಮಾತಾಡಿದ್ದು ಉಂಟು. ಹಾಗೇ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಕೋರ್‌ ಕಮಿಟಿ ಅಧ್ಯಕ್ಷರ ಬದಲಾವಣೆ. ಕೋರ್‌ ಕಮಿಟಿಗೆ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡ ಅವರನ್ನು ಬದಲಿಸಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿಗೆ ಕಮಿಟಿಯ ಸಾರಥ್ಯವನ್ನು ನೀಡಲಾಗಿದೆ.

ಈ ಹಿಂದೆಯೇ ಸಮಾಧಾನಪಡಿಸಿದ್ದ ಎಚ್​​ಡಿಡಿ

ಕುಮಾರಸ್ವಾಮಿ ನಡೆಗೆ ಬೇಸರಗೊಂಡು ಪಕ್ಷದಿಂದ ದೂರ ಉಳಿದಿದ್ದ ಜಿಟಿ ದೇವೇಗೌಡ ಅವರನ್ನ ಸ್ವತಃ ಎಚ್​​ಡಿ ದೇವೇಗೌಡ್ರೆ ಸಮಾಧಾನಪಡಿಸಿದ್ದರು. ಅವರ ನಿವಾಸಕ್ಕೆ ತೆರಳಿ ಜಿಟಿ ದೇವೇಗೌಡರನ್ನ ಮನವೊಲಿಸಿದ್ದರು. ಬಳಿಕ ಎಲ್ಲವೂ ಕೂಲ್ ಆಗಿತ್ತು. ತದನಂತರ  ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಗೇಟ್ ಪಾಸ್ ನೀಡಿದ್ದು ಜಿಟಿಡಿ ಆಕ್ರೋಶಕ್ಕೆ ಕಾರಣವಾಗಿತ್ತು. ಏನು ಹೇಳದೇ ಕೇಳದೇ ಕಿತ್ತಾಕಿದ್ದಾರೆ ಎಂದು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದರು. ಇದೀಗ ಏಕಾಏಕಿ ಜಿಟಿಡಿ, ದೇವೇಗೌಡ ಅವರನ್ನ ಭೇಟಿ ಮಾಡಿ ಜೆಡಿಎಸ್​​ನಲ್ಲೇ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್​​ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ಜಿಟಿಡಿಗಿದ್ದ ಮುನಿಸು ತಣ್ಣಗಾದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Fri, 15 May 26

Loading...
Unable to load recommendations.
Follow Us