ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಕಾಂಗ್ರೆಸ್​ನವರೇ ಕುತಂತ್ರ ಮಾಡ್ತಿದ್ದಾರೆ; ಸಿಎಂ ಪರ ಯತ್ನಾಳ್ ಬ್ಯಾಟಿಂಗ್

| Updated By: ಸುಷ್ಮಾ ಚಕ್ರೆ

Updated on: Oct 03, 2023 | 8:34 PM

ಡಿಕೆ ಶಿವಕುಮಾರ್ ಹೇಳಿದಂತೆ ಶಾಮನೂರು ಶಿವಶಂಕರಪ್ಪ, ಬಿಕೆ ಹರಿಪ್ರಸಾದ್‌ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದೆ. ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಇಳಿಸಲು ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.

ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಕಾಂಗ್ರೆಸ್​ನವರೇ ಕುತಂತ್ರ ಮಾಡ್ತಿದ್ದಾರೆ; ಸಿಎಂ ಪರ ಯತ್ನಾಳ್ ಬ್ಯಾಟಿಂಗ್
ಬಸನಗೌಡ ಪಾಟೀಲ್ ಯತ್ನಾಳ್
Follow us on

ಯಾದಗಿರಿ: ಕಾಂಗ್ರೆಸ್‌ನವರೇ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಕುತಂತ್ರ ಮಾಡ್ತಿದ್ದಾರೆ. ಆಡಳಿತ ಮಾಡಲು ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್‌ನವರೇ ಬಿಡುತ್ತಿಲ್ಲ. ಒಬ್ಬೊಬ್ಬರಾಗಿ ಶಾಸಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯನವರನ್ನು (Siddaramaiah) ಸಿಎಂ ಸ್ಥಾನದಿಂದ ಇಳಿಸಲು ಡಿಕೆ ಶಿವಕುಮಾರ್ (DK Shivakumar) ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ, ತಮ್ಮದೇ ಹಾದಿಯಲ್ಲಿ ಸಿಎಂ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಕರ್ನಾಟಕದ ಜನರು, 135 ಶಾಸಕರ ಬೆಂಬಲ ಸಿಎಂ ಸಿದ್ದರಾಮಯ್ಯನವರಿಗೆ ಇದೆ. ಹೀಗಾಗಿ, ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಿಎಂ ಪರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (Basanagowda Yatnal) ಬ್ಯಾಟಿಂಗ್ ಮಾಡಿದ್ದಾರೆ.

ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯನವರೇ, ನೀವು ಯಾವ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪನವರಿಗೂ ಹೆದರಬೇಡಿ. ಜಾತಿ – ಜನಾಂಗದ ಮೇಲೆ ಯಾರೂ ಸಿಎಂ ಆಗಲ್ಲ. ಯಾರ ಸಮರ್ಥ ಆಡಳಿತ ಕೊಡುತ್ತಾರೋ ಅವರು ಸಿಎಂ ಆಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಗಲಭೆ ಕಾರಣರಾದವರು ಯಾವುದೇ ಕೋಮಿನವರಾಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು: ಸಿದ್ದರಾಮಯ್ಯ, ಸಿಎಂ

ಕಾಂಗ್ರೆಸ್​ ಸರ್ಕಾರದಿಂದ ಹಿಂದೂಗಳಿಗೆ ಭಯ ಉಂಟಾಗಿದೆ:

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಸ್​ಪಿ, ಪೊಲೀಸರ ಮೇಲೆಯೇ ಕಲ್ಲುತೂರಾಟ ಮಾಡುತ್ತಾರೆಂದರೆ ಎಷ್ಟು ಧೈರ್ಯವಿರಬೇಕು? ಎಂದು ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ, ಹುಬ್ಬಳ್ಳಿ ಗಲಾಟೆಯ ಕೇಸ್​ಗಳನ್ನು​ ಹಿಂಪಡೆಯಲು ಚಿಂತನೆ ನಡೆಸಿದೆ. ಇನ್ನುಮುಂದೆ ಕರ್ನಾಟಕದಲ್ಲಿ ಹಿಂದೂಗಳು ಬದುಕಬೇಕಾ? ಬೇಡವಾ? ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರಿಗೆ ಮುಕ್ತವಾಗಿ ಅಧಿಕಾರ ಕೊಡದೆ ಅಸಹಾಯಕರನ್ನಾಗಿ ಮಾಡಿದ್ದಾರೆ. ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡುವವರು ಯಾರೆನ್ನುವ ಪ್ರಶ್ನೆ ಉದ್ಭವಿಸಿದೆ. ಬಹಿರಂಗವಾಗಿ ಖಡ್ಗ, ಚೂರಿಗಳನ್ನು ಪ್ರದರ್ಶನ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಕೋಮಿಗೆ ಬೆಂಬಲ ಕೊಡುತ್ತಿದೆ. ಈ ಮೂಲಕ ಯಾರು ಹಿಂದೂಗಳ ರಕ್ಷಣೆ ಮಾಡುತ್ತಾರೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹೀಗೇ ನಡೆದುಕೊಂಡರೆ ಹಿಂದೂಗಳು ರಕ್ಷಣೆಗೆ ಮನೆಯಿಂದ ಹೊರಗೆ ಬರಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  

ಬೇರೆ ಯಾರೂ ವೋಟ್ ಹಾಕಿಲ್ವ?:

ಎಸ್​ಸಿ, ಎಸ್​ಟಿಗೆ ಮೀಸಲು ಇಟ್ಟ ಹಣವನ್ನು ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ 10 ಸಾವಿರ ರೂ. ಅನುದಾನ ನೀಡಿ ಅವರ ಋಣ ತೀರಿಸುತ್ತೇನೆ ಎಂದು ಹೇಳಿದ್ದಾರೆ. ಇದು ಯಾರಪ್ಪನ ದುಡ್ಡು? ಅಲ್ಪಸಂಖ್ಯಾತರು ವಾಹನ ಖರೀದಿ ಮಾಡಿದರೆ ಶೇ.50ರಷ್ಟು ಸಬ್ಸಿಡಿ ಅಂತ ಹೇಳಿದ್ದಾರೆ. ಅದೇ ಯೋಜನೆ ಹಿಂದುಳಿದವರಿಗೂ ಇಲ್ಲ, ಆರ್ಥಿಕವಾಗಿ ಹಿಂದುಳಿದವರಿಗೂ ಇಲ್ಲ. 10 ಸಾವಿರ ಕೋಟಿ ಹಣವನ್ನು ಮುಸ್ಲಿಮರಿಗೆ ಕೊಟ್ಟರೆ ನೀರಾವರಿಗೆ ದುಡ್ಡಿಲ್ಲ, ಅಭಿವೃದ್ಧಿಗೂ ದುಡ್ಡಿಲ್ಲ. ರಾಜ್ಯದಲ್ಲಿ ಮುಸ್ಲಿಮರನ್ನು ಬಿಟ್ಟು ಬೇರೆ ಯಾರೂ ಮತ ಹಾಕಿಲ್ವಾ? ಎಂದು ಯತ್ನಾಳ್ ಪ್ರಶ್ನೆ‌‌ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸಿ.ಪಿ. ಯೋಗೇಶ್ವರ್‌ ಈ ಬಗ್ಗೆ ಈಗ ಹೇಳಿದ್ದಾರೆ. ಆದರೆ, ನಾನು ಮೊದಲೇ ಹೇಳಿದ್ದೇನೆ. ಡಿಸೆಂಬರ್ ತನಕ ಈ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಡಿಕೆ ಶಿವಕುಮಾರ್ ಹೇಳಿದಂತೆ ಶಾಮನೂರು ಶಿವಶಂಕರಪ್ಪ, ಬಿಕೆ ಹರಿಪ್ರಸಾದ್‌ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದೆ, 4-5 ಸಲ ಗೆದ್ದರೂ ಸಚಿವರಾಗಿಲ್ಲವೆಂಬ ಅಸಮಾಧಾನವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:32 pm, Tue, 3 October 23