ಯಾದಗಿರಿ: ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ. ಇಬ್ಬರು ಶಿಕ್ಷಕರು ಈಗ ಗಣೇಶನ ಮೂರ್ತಿ ತಯಾರಕರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕೊರೊನಾದಿಂದ ಪ್ರಾಥಮಿಕ ಶಾಲೆಗಳು ಬಾಗಿಲು ತೆರೆದಿಲ್ಲ. ಇದೇ ಕಾರಣದಿಂದ ಕೆಲಸನೂ ಇಲ್ಲ ಸಂಬಂಳನೂ ಇಲ್ಲದ ಸಂಕಷ್ಟದಲ್ಲಿದ್ದ ಶಿಕ್ಷಕರು ಈಗ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಸ್ವಂತ ಕಲೆಯನ್ನು ಬಳಸಿಕೊಂಡು ಬಣ್ಣ ಬಣ್ಣದ ಗಣೇಶನ ವಿಗೃಹಗಳನ್ನು ಮಾಡಿದ್ದಾರೆ.
ಯಾದಗಿರಿ ನಗರದ ಖಾಸಗಿ ಶಾಲೆಯ ಇಬ್ಬರು ಕಲಾ ಶಿಕ್ಷಕರು ಇದೆ ಮೊದಲ ಬಾರಿಗೆ ಯಾದಗಿರಿ ಮಾರುಕಟ್ಟೆಗೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ತರುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 15 ತಿಂಗಳುಗಳಿಂದ ಪ್ರಾಥಮಿಕ ಶಾಲೆಗಳನ್ನು ಕೊರೊನಾದಿಂದಾಗೆ ಬೀಗ ಹಾಕಲಾಗಿದೆ. ಇದರಿಂದ ಖಾಸಗಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ, ನಗರದ ಭೀಮೇಶ್ ಮತ್ತು ಅರುಣ್ ಎಂಬವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲಸ ಇಲ್ಲದೆ ಮನೆಯಲ್ಲಿ ಕುಳಿತ್ತಿದ್ದ ಇಬ್ಬರು ಶಿಕ್ಷಕರು ಈ ಬಾರಿ ಯಾದಗಿರಿ ಜನರಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬೇಕು ಎಂದು ಯೋಜನೆ ಮಾಡಿದ್ದಾರೆ. ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ. ಈ ಇಬ್ಬರು ತಮ್ಮ ಬಳಿಯೇ ಕಲೆ ಇದ್ದ ಕಾರಣಕ್ಕೆ ಬೆಂಗಳೂರು ಸೇರಿದಂತೆ ಬೇರೆ ಕಡೆಯಿಂದ ಕಚ್ಚಾ ಮಣ್ಣು ತರಿಸಿಕೊಂಡಿದ್ದಾರೆ.
ದೊಡ್ಡ ದೊಡ್ಡ ಗಣೇಶ ವಿಗೃಹಗಳ ಅಳತೆ (ಸಾಚಾ)ಗಳನ್ನು ಬಳಸಿಕೊಂಡು ಮೂರ್ತಿ ತಯಾರು ಮಾಡಿದ್ದಾರೆ. ಮಣ್ಣಿನಿಂದ ಈಗಾಗಲೇ ನೂರಾರು ಗಣೇಶನ ವಿಗೃಹಗಳನ್ನು ತಯಾರು ಮಾಡಿದ್ದಾರೆ. ಇನ್ನು ಸಣ್ಣ ಸಣ್ಣ ಗಣೇಶನ ವಿಗೃಹಗಳನ್ನು ಖುದ್ದು ಈ ಇಬ್ಬರು ಶಿಕ್ಷಕರೇ ತಯಾರು ಮಾಡಿದ್ದಾರೆ. ಇನ್ನು ಶಾಲೆಗಳು ಬಂದ್ ಆಗಿದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿ ಮಾಡಿ ನಮ್ಮ ಕೈಹಿಡಿಯಬೇಕು ಎಂದು ಕಲಾ ಶಿಕ್ಷಕ ಭೀಮೇಶ್ ಮನವಿ ಮಾಡಿದ್ದಾರೆ.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡಿ ಮಾರಾಟ ಮಾಡಿದರೆ ತಾತ್ಕಾಲಿಕವಾಗಿ ಜೀವನ ನಡೆಸಲು ಸಹಕಾರ ಆಗುತ್ತೆ ಎನ್ನುವ ಕಾರಣಕ್ಕೆ ಇಬ್ಬರು ಸ್ನೇಹಿತರು ಸೇರಿ ಇನ್ನೊಬ್ಬರ ಗೋಡೌನ್ನಲ್ಲಿ ಜಾಗ ಪಡೆದು ಕಳೆದ 15 ದಿನಗಳಿಂದ ನಿರಂತರವಾಗಿ ಗಣೇಶನ ಮೂರ್ತಿ ತಯಾರು ಮಾಡುವ ಕೆಲಸ ಮಾಡುತ್ತಿದ್ದಾರೆ. ಇನ್ನು ಗಣೇಶ ಮೂರ್ತಿಗಳನ್ನು ತಯಾರು ಮಾಡಲು ಮತ್ತೊಂದು ಕಾರಣವೆಂದರೆ ಈ ಬಾರಿ ಜನ ಇಂತಹ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನೇ ಖರೀದಿ ಮಾಡಲಿ ಎಂಬುವುದು ಆಗಿದೆ.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಂದ ನೀರು ಮಾಲಿನ್ಯ ಆಗಲ್ಲ, ಪರಿಸರಕ್ಕೂ ಸಹ ಯಾವುದು ಹಾನಿ ಇಲ್ಲ. ಹೀಗಾಗಿ ಜನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿ ಮಾಡಿ ಗಣೇಶ ಉತ್ಸವವನ್ನು ಆಚರಿಸಿ ಎಂದು ಕಲಾ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊರೊನಾದಿಂದ ಇಂತಹ ಸಾವಿರಾರು ಮಂದಿ ಖಾಸಗಿ ಶಾಲೆಯ ಶಿಕ್ಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಆದರೆ ಯಾದಗಿರಿಯಲ್ಲಿ ಶಿಕ್ಷಕರು ತಮ್ಮ ಕಲೆಯನ್ನು ಬಳಸಿಕೊಂಡು ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ತಯಾರು ಮಾಡುತ್ತಿದ್ದು, ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ.
ವರದಿ: ಅಮೀನ್ ಹೊಸುರ್
ಇದನ್ನೂ ಓದಿ:
ಎರಡು ವರ್ಷದಿಂದ ಕೊರೊನಾ ಕರಿನೆರಳು; ಗಣೇಶ ಮೂರ್ತಿ ತಯಾರಕರು ಕಂಗಾಲು
ಬೆಳಗಾವಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹಮ್ಮದ್ ಜಮಾದಾರ್ ತಯಾರಿಸುವ ಗಣಪತಿ