
ಯಾದಗಿರಿ, ಫೆಬ್ರವರಿ 14: ಆಂಧ್ರಪ್ರದೇಶದ ಜಡಚರ್ಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಯಾದಗಿರಿ (Yadagiri) ಜಿಲ್ಲೆಯ ಶಾಹಪುರ ತಾಲೂಕಿನ ಗೋಗಿ ಗ್ರಾಮ ನಿವಾಸಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೋಗುತ್ತಿದ್ದ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಕುಟುಂಬವು ನಿನ್ನೆ (ಶುಕ್ರವಾರ) ಯಾದಗಿರಿ ನಗರದಲ್ಲಿ ಮೊಮ್ಮಗನ ಜವಳ ಮುಗಿಸಿಕೊಂಡು ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಕ್ರೂಸರ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ತಡೆಗೋಡೆಗೆ ಡಿಕ್ಕಿಯಾಗಿ ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಮತ್ತು ವಿಜಯಪುರ ಮೂಲದ ಮಹದೇವಪ್ಪ (65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದು ಬಂದಿದೆ. ಕಾರು ಚಲಿಸುತ್ತಿದ್ದ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗುವಳ್ಳಿ ಗೇಟ್ ಬಳಿ ಲಾರಿ ಮತ್ತು ಟ್ರ್ಯಾಕ್ಟರ್ ನಡುವಿನ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, 13 ಜನರಿಗೆ ಗಾಯವಾಗಿದೆ. ಮೃತರು ಹೊಸದುರ್ಗ ತಾಲೂಕಿನ ಮಾಳಿಗೆಹಟ್ಟಿ ಗ್ರಾಮಸ್ಥರಾದ ಮಂಜುನಾಥ್ (34) ಮತ್ತು ಹೊಳಿಯಪ್ಪ (48) ಎಂದು ತಿಳಿದು ಬಂದಿದೆ. ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಹೊಳಿಯಪ್ಪ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ. 3 ಟ್ರ್ಯಾಕ್ಟರ್ಗಳಲ್ಲಿ ಕಲ್ಲತ್ತಿಗಿರಿದೇಗುಲಕ್ಕೆ ಬಂದಿದ್ದ ಗ್ರಾಮಸ್ಥರು, ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.