ಯಾದಗಿರಿ: ನಿವೃತ್ತ ಮಹಿಳಾ ಅಧಿಕಾರಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 10 ಲಕ್ಷ ರೂ. ದೋಚಿದ ಸೈಬರ್ ವಂಚಕರು
ಯಾದಗಿರಿ ಜಿಲ್ಲೆಯ ನಿವೃತ್ತ ಮಹಿಳಾ ಅಧಿಕಾರಿಯೊಬ್ಬರು ಸೈಬರ್ ಅಪರಾಧಿಗಳಿಂದ 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯ ಸೋಗಿನಲ್ಲಿ ವಂಚಕ, ಡಿಜಿಟಲ್ ಅರೆಸ್ಟ್ ಮಾಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಸಂತ್ರಸ್ತೆ ಯಾದಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಯಾದಗಿರಿಯಲ್ಲಿ ನಡೆದ ಮೊದಲ ಡಿಜಿಟಲ್ ಅರೆಸ್ಟ್ ಪ್ರಕರಣವಾಗಿದೆ.

ಯಾದಗಿರಿ, ಫೆಬ್ರವರಿ 18: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ಎಲ್) ನಿವೃತ್ತ ಮಹಿಳಾ ಅಧಿಕಾರಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿದ ಸೈಬರ್ ಅಪರಾಧಿಗಳು, ಅವರಿಂದ 10 ಲಕ್ಷ ರೂಪಾಯಿ ದೋಚಿದ ವಿಚಾರ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿಯ ಯುಕೆಪಿ ಕ್ಯಾಂಪ್ನ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾದವರು. ಸದ್ಯ ಸಂತ್ರಸ್ತೆ ಯಾದಗಿರಿ ಸೆನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮುಂಬೈ ಕ್ರೈಂ ಬ್ರ್ಯಾಂಚ್ ಹೆಸರಲ್ಲಿ ಬಂತು ವಿಡಿಯೋ ಕಾಲ್
ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿ ಎಂದು ಹೇಳಿಕೊಂಡು ನಿವೃತ್ತ ಮಹಿಳಾ ಅಧಿಕಾರಿಗೆ ವಿಡಿಯೋ ಕರೆ ಬಂದಿದೆ. ಸೈಬರ್ ಅಪರಾಧಿಗಳು ಜನವರಿ 26 ರಿಂದ ಫೆಬ್ರವರಿ 7 ರ ಅವಧಿಯಲ್ಲಿ ವಿಡಿಯೋ ಕಾಲ್ ಮಾಡಿ, ಕರೆ ಕಟ್ ಮಾಡದಂತೆ ದಿಗ್ಬಂಧನ ಹೇರಿ ಹಂತ ಹಂತವಾಗಿ 10 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಮನಿಲ್ಯಾಂಡರಿಂಗ್ ಕೇಸ್ ಇದೆ ಎಂದು ಬೆದರಿಸಿ ಕೃತ್ಯ
ವಿಡಿಯೋ ಕಾಲ್ ಮಾಡಿದ ಸೈಬರ್ ವಂಚಕರು, ‘ನಿನ್ನ ಮೇಲೆ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ’ ಎಂದು ಎಂದು ವಿಡಿಯೋ ಹೇಳಿರುವ ಮಹಿಳಾ ಅಧಿಕಾರಿಯನ್ನು ಬೆದರಿಸಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ನರೇಶ್ ಗೋಯಲ್ ಎಂಬಾತನ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದೀರಿ. ಹೀಗಾಗಿ ಬ್ಯಾಂಕ್ ಅಕೌಂಟ್ ಪಾಸ್ ಬುಕ್, ಆಧಾರ್, ಪ್ಯಾನ್ ಕಾರ್ಡ್ ಕಳುಹಿಸಿ ಎಂದು ವಂಚಕ ಹೇಳಿದ್ದಾನೆ. ತಕ್ಷಣ ಹೆದರಿದ ಮಹಿಳೆ ಎಲ್ಲವನ್ನು ಕಳುಹಿಸಿದ್ದಾರೆ.
ಮಾಹಿತಿ ಕಳುಹಿಸಿದ ಮೇಲೇನಾಯ್ತು?
ಮಹಿಳಾ ಅಧಿಕಾರಿಯಿಂದ ಅಗತ್ಯ ಮಾಹಿತಿಯನ್ನೆಲ್ಲ ತರಿಸಿಕೊಂಡ ವಂಚಕ, ‘ಈ ಪ್ರಕರಣ ಮುಖ್ಯ ಆರೋಪಿ ನರೇಶ್ ಗೋಯಲ್ ಅರೆಸ್ಟ್ ಅಗಿದ್ದಾನೆ’ ಎಂದು ಹೇಳಿದ್ದಾನೆ. ನ್ಯಾಯಾಧೀಶರ ರೀತಿಯಲ್ಲಿ ಡ್ರಸ್ ಧರಿಸಿ ಕುಳಿತಿದ್ದ ಚಿತ್ರ ತೋರಿಸಿ, ಮನಿ ಲ್ಯಾಂಡರಿಂಗ್ ಕೇಸ್ನಿಂದ ಪಾರಾಗಲು ಹೇಳಿದಂತೆ ಕೇಳುವಂತೆ ಬೆದರಿಕೆಯೊಡ್ಡಿದ್ದಾನೆ. ಈ ವಿಷಯ ನಿಮ್ಮ ಮಗನಿಗೆ ಗೊತ್ತಾದ್ರೆ ಅವನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಸತತವಾಗಿ ಭಯ ಹುಟ್ಟಿಸಿದ್ದಾನೆ. ಹೀಗೆ ಭಯ ಹುಟ್ಟಿಸಿ ಹಂತ ಹಂತವಾಗಿ 10 ಲಕ್ಷ ರೂಪಾಯಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ನಿವೃತ್ತ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಡಿಜಿಟಲ್ ಅರೆಸ್ಟ್ ಪ್ರಕರಣ ನಡೆದಿದೆ.