ಚಿಕ್ಕಬಳ್ಳಾಪುರ: ಮಗಳನ್ನು ಪ್ರೀತಿಸಿದ್ದಕ್ಕೆ ಆಕೆಯ ಪ್ರಿಯಕರನನ್ನು ಯುವತಿಯ ತಂದೆ ಹಾಗೂ ಸಹೋದರ ಇಬ್ಬರು ಸೇರಿ ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಯುವಕನ ಕುಟುಂಬದವರು ಇಂದು ಆರೋಪಿಗಳ ಮನೆಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮದ್ದಲಕಾನ ಗ್ರಾಮದ ಹರೀಶ್ ಎಂಬ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು. ಈ ವಿಚಾರ ತಿಳಿದ ಯುವತಿಯ ತಂದೆ ವೆಂಕಟೇಶಪ್ಪ ಹಾಗೂ ಗಣೇಶ್ ಎಂಬ ಇಬ್ಬರು ಸೇರಿ ನಿನ್ನೆ ರಾತ್ರಿ ಹರೀಶ್ ನನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದರು.
ಇದರಿಂದ ಕೋಪಗೊಂಡ ಯುವಕನ ಕುಟುಂಬಸ್ಥರು ಆರೋಪಿಗಳ ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಸದ್ಯ ಕೊಲೆ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಈ ಎರಡು ಘಟನೆಗಳಿಂದ ಮದ್ದಲಕಾನ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.