ಆಂಧ್ರದಿಂದ ದಾವಣಗೆರೆಗೆ ಗಾಂಜಾ ಸಪ್ಲೈ; ಅಲರ್ಟ್ ಆದ ಪೊಲೀಸ್ ಪಡೆ, ಎಲ್ಲೆಡೆ ಹದ್ದಿನ ಕಣ್ಣು

ಅಲ್ಲಿ ಪೊಲೀಸ್ ಪಡೆಯ ದೃಷ್ಟಿ ಬಸ್​ನಿಲ್ದಾಣ, ರೈಲು ನಿಲ್ದಾಣಗಳ ಮೇಲೆ ನೆಟ್ಟಿದೆ. ಕಾರಣ ಬೆಣ್ಣೆ ನಗರಿಗೆ ಆಂಧ್ರದಿಂದ ಗಾಂಜಾ ಪೂರೈಕೆ ಆಗುತ್ತಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಅಲರ್ಟ್ ಆಗಿರುವ ಖಾಕಿ ಪಡೆ ಸರ್ಚಿಂಗ್ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಲು ಸಿದ್ಧವಾಗಿದೆ.

ಆಂಧ್ರದಿಂದ ದಾವಣಗೆರೆಗೆ ಗಾಂಜಾ ಸಪ್ಲೈ; ಅಲರ್ಟ್ ಆದ ಪೊಲೀಸ್ ಪಡೆ, ಎಲ್ಲೆಡೆ ಹದ್ದಿನ ಕಣ್ಣು
ಸಂಗ್ರಹ ಚಿತ್ರ
Updated By: Digi Tech Desk

Updated on: Mar 16, 2021 | 9:51 AM

ಬೆಣ್ಣೆ ನಗರಿ ದಾವಣಗೆರೆ ಪೊಲೀಸರಿಗೆ ಹೊಗೆ ವಿಚಾರವೇ ತಲೆಬಿಸಿ ತಂದಿದೆ. ಎಲ್ಲಿ ಹೊಗೆ ವಾಸನೆ ಬರುತ್ತೋ ಅಲ್ಲಿ ಪ್ರತಿದಿನ ದಾಳಿ ಮಾಡುತ್ತಿದ್ದಾರೆ. ಹಿಂದೆ ಅಡಕೆ ತೋಟ ಹಾಗೂ ತೆಂಗಿನ ತೋಟಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ಈಗ ಬೇರೆ ರಾಜ್ಯಗಳಿಂದಲೂ ಗಾಂಜಾ ಬರುತ್ತಿರುವುದು ಪತ್ತೆಯಾಗಿದೆ. ಅಂದಹಾಗೆ ಕೆಲ ತಿಂಗಳ ಹಿಂದೆ ನಡೆದಿದ್ದ ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಗಾಂಜಾ ಕೇಸ್ ಪತ್ತೆಯಾಗಿ, ಹಲವರನ್ನ ವಶಕ್ಕೆ ಪಡೆಯಲಾಗಿತ್ತು. ಆದ್ರೆ ಈಗ ಈ ಪಟ್ಟಿಗೆ ಆಂಧ್ರಪ್ರದೇಶದ ಕಾಕಿನಾಡಾ ಕೂಡ ಸೇರ್ಪಡೆಯಾಗಿದೆ.

ಆಂಧ್ರದಿಂದ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಪೂರ್ವ ವಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ಗಾಂಜಾ ಪೂರೈಕೆಯಾಗುತ್ತಿರುವ ಜಾಗಗಳನ್ನ ಗುರುತಿಸುವ ಕಾರ್ಯ ಭರದಿಂದ ಸಾಗಿದೆ.

ದಾವಣಗೆರೆ ಪೊಲೀಸರು ಎಚ್ಚೆತ್ತುಕೊಳ್ಳಲು ಕಾರಣವಿದೆ. ಇಡೀ ರಾಜ್ಯ ಬೆಚ್ಚಿಬಿದ್ದಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು ಇದಕ್ಕೆ ಪ್ರಮುಖ ಕಾರಣ. ಅಂದಹಾಗೆ ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಜಾಲವನ್ನ ಸಿಇಎನ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದರು. ಸುಮಾರು 30 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಖಾಕಿ ಪಡೆ ಅಲರ್ಟ್ ಆಗಿ ನಶೆ ದಂಧೆಕೋರರ ಬೇಟೆಗೆ ಇಳಿದಿದೆ.

ಒಟ್ನಲ್ಲಿ ದಿನದಿಂದ ದಿನಕ್ಕೆ ತನ್ನ ಉಪಟಳ ಹೆಚ್ಚಿಸುತ್ತಿದ್ದ ಗಾಂಜಾ ಗ್ಯಾಂಗ್ ಹೆಡೆಮುರಿ ಕಟ್ಟಲು ಬೆಣ್ಣೆನಗರಿ ಖಾಕಿ ಪಡೆ ಪಣತೊಟ್ಟಿದೆ. ಗಾಂಜಾ ಸಪ್ಲೈ ಆಗುತ್ತಿರುವ ಮೂಲವನ್ನೇ ಕೆದಕುತ್ತಿದ್ದು, ದಂಧೆಕೋರರ ಶಾಕ್‌ ನೀಡ್ತಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರದ ವ್ಯಕ್ತಿ ಬಂಧನ!

Published On - 7:48 am, Tue, 16 March 21