ತುಮಕೂರು: ರಾಜ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದ್ದು, ಈ ಬಾರಿ ಹಬ್ಬದ ಪ್ರಯುಕ್ತ ಪ್ರಸಿದ್ಧ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಬೇಕು ಅಂದುಕೊಂಡವರಿಗೆ ಕೊಂಚ ನಿರಾಸೆ ಕಾದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿಯ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಅರ್ಚಕನ ಮಡದಿಗೆ ಜುಲೈ 11ರಂದು ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಹೀಗಾಗಿ ಅಂದೇ ಆ ಮಹಿಳೆಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಜುಲೈ 20ರಂದು ಅರ್ಚಕರ ಮಡದಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದೆ. ಹೀಗಾಗಿ ಅರ್ಚಕರ ಮಡದಿಯನ್ನು ಚಿಕಿತ್ಸೆಗೆ ಕಳುಹಿಸಲಾಗಿದ್ದು,ಅರ್ಚಕರ ಕುಟುಂಬದವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ.
ಅರ್ಚಕರ ಮಡದಿ ಗುಣಮುಖರಾಗಿ ಮನೆಗೆ ವಾಪಸಾಗಿದ್ದರೂ ಸಹ ಕೊರೊನಾ ಟೆಸ್ಟ್ ವರದಿಗಾಗಿ ಅರ್ಚಕರ ಕುಟುಂಬಸ್ಥರು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಜುಲೈ 11 ರಿಂದ 20ರವರೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಆತಂಕ ಭಾವ ಮೂಡಿದೆ. ಹಾಗೂ ಈ ಯಾವುದೇ ಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸದೆ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಬೇಜವಾಬ್ದಾರಿತನ ತೊರಿದೆ. ಇದರಿಂದಾಗಿ ಆಡಳಿತ ಮಂಡಳಿ ವಿರುದ್ಧ ಭಕ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.