Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಪಘಾತಕ್ಕೆ ಪರಿಹಾರ ನೀಡೋಕೆ ಬಿಬಿಎಂಪಿ ನಿರಾಕರಿಸಿದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ರಸ್ತೆ ಅಪಘಾತದಲ್ಲಿ ಬೆಂಗಳೂರಲ್ಲಿ ಮೃತಪಟ್ಟವರ ಸಂಖ್ಯೆ ಕೇಳಿದ್ರೆ ನೀವು ಅಚ್ಚರಿ ಪಡೋದು ಗ್ಯಾರಂಟಿ. ಏಕೆಂದರೆ, ನಾಲ್ಕು ವರ್ಷಗಳಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದ ಬರೋಬ್ಬರಿ 3,250 ಮಂದಿ ಮೃತಪಟ್ಟಿದ್ದಾರಂತೆ.

ರಸ್ತೆ ಅಪಘಾತಕ್ಕೆ ಪರಿಹಾರ ನೀಡೋಕೆ ಬಿಬಿಎಂಪಿ ನಿರಾಕರಿಸಿದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಸಂಗ್ರಹ ಚಿತ್ರ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 07, 2020 | 3:49 PM

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಅಪಘಾತ ಆಗುವುದರ ಜೊತೆಗೆ ರಸ್ತೆಗಳ ಕಳಪೆ ಗುಣಮಟ್ಟದಿಂದಲೂ ಅಪಘಾತಗಳು ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಇದಕ್ಕಾಗಿಯೇ ಬಿಬಿಎಂಪಿ ಕಳಪೆ ಗುಣಮಟ್ಟ ಅಥವಾ ಹೊಂಡ ಬಿದ್ದಿರುವ ರಸ್ತೆಗಳಿಂದ ಅಪಘಾತಕ್ಕೆ ತುತ್ತಾದರೆ ಅಂಥ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದೆ.

ರಸ್ತೆ ಹಾಳಾದ ಕಾರಣಕ್ಕೆ ಅಪಘಾತ ಸಂಭವಿಸಿದ್ದು ಸಾಬೀತಾದರೆ ಬಿಬಿಎಂಪಿ ಮೃತರ ಕುಟುಂಬಕ್ಕೆ ₹ 3 ಲಕ್ಷ ರೂಪಾಯಿ ಹಾಗೂ ಗಾಯಗೊಂಡರೆ ₹ 15 ಸಾವಿರ ರೂಪಾಯಿ ಪರಿಹಾರ ನೀಡಲಿದೆ. ಸಣ್ಣ-ಪುಟ್ಟ ಗಾಯಗಳಾಗಿದ್ದರೆ ₹ 10 ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ.

ಬಿಬಿಎಂಪಿ ಪ್ರಕಟಣೆ

ಎಲ್ಲಿ ಅರ್ಜಿ ಸಲ್ಲಿಸಬೇಕು? ಅಪಘಾತ ನಡೆದ ಒಂದು ತಿಂಗಳೊಳಗಾಗಿ ವಿಶೇಷ ಆಯುಕ್ತ (ಕಂದಾಯ) ಅಥವಾ ಇದಕ್ಕಾಗಿ ನೇಮಕಗೊಂಡ ವಿಶೇಷ ಅಧಿಕಾರಿ ಎದುರು ಅರ್ಜಿ ಸಲ್ಲಿಸಬೇಕು. ಒಂದು ತಿಂಗಳ ನಂತರದಲ್ಲಿ ಬರುವ ಮನವಿಯನ್ನು ಬಿಬಿಎಂಪಿ ಸ್ವೀಕಾರ ಮಾಡುವುದಿಲ್ಲ. ಅರ್ಜಿ ಸಲ್ಲಿಕೆ ಆದ ಏಳು ದಿನಗಳ ಒಳಗಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅರ್ಜಿದಾರ ನೀಡಿದ ದಾಖಲೆಗಳು ಸರಿಯಾಗಿದ್ದರೆ, ಆಯುಕ್ತರು ಅಥವಾ ವಿಶೇಷ ಅಧಿಕಾರಿ ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ನೀವು ಮನವಿಯಲ್ಲಿ ಸತ್ಯ ಇದೆ ಎಂಬುದು ಮನದಟ್ಟಾದರೆ ಅವರು ಪರಿಹಾರ ನೀಡುವಂತೆ ಸೂಚಿಸುತ್ತಾರೆ.

ವಕೀಲರು ಏನಂತಾರೆ? ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರು ಪಂಚನಾಮೆ ಮಾಡಿರುತ್ತಾರೆ. ಈ ವೇಳೆ ಅಲ್ಲಿ ತೆಗೆದಿರುವ ಫೋಟೋಗಳನ್ನು ಇಟ್ಟುಕೊಂಡು ರಸ್ತೆಯ ಗುಂಡಿಯಿಂದಲೇ ಅಪಘಾತವಾಗಿದೆ ಎಂದು ಸಾಬೀತು ಮಾಡಬಹುದು. ಹೀಗೆ ಸಾಬೀತು ಮಾಡಿದ ನಂತರವೂ ಅಧಿಕಾರಿ ಪರಿಹಾರ ಹಣ ನೀಡಲು ನಿರಾಕರಿಸಿದರೆ ಸಂತ್ರಸ್ತರಿಗೆ ಕೋರ್ಟ್​ಗೆ ಹೋಗುವ ಅವಕಾಶ ಕೂಡ ಇದೆ ಎಂಬುದು ಹೈಕೋರ್ಟ್​ ವಕೀಲ ಗಿರೀಶ್ ಭಟ್​ ಅವರ ಮಾತು.

ಬೆಂಗಳೂರಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರೆಷ್ಟು? ನಾಲ್ಕು ವರ್ಷಗಳಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದ ಸುಮಾರು 3,250 ಮಂದಿ ಮೃತಪಟ್ಟಿದ್ದಾರೆ. 2014-18ರ ಅವಧಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ 511, ಲಾರಿ ಅಪಘಾತದಲ್ಲಿ 477, ದ್ವಿಚಕ್ರ ವಾಹನ ಅಪಘಾತದಲ್ಲಿ 458 ಜನರು ಅಸುನೀಗಿದ್ದಾರೆ. ದ್ವಿಚಕ್ರ ವಾಹನದಿಂದ ಮೃತಪಟ್ಟವರಲ್ಲಿ ಕೆಲವರು ವಾಹನ ಗುಂಡಿಗಳಿಂದಲೂ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿದೆ. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಬರೋಬ್ಬರಿ 760 ಜನರು ಮೃತಪಟ್ಟಿದ್ದಾರೆ. ಕೆಲವರು ಹೊಂಡ-ಗುಂಡಿ ಇರುವ ರಸ್ತೆಯಲ್ಲಿ ವಾಹನ ಚಲಾಯಿಸಿ, ಬಿದ್ದು ಮೃತಪಟ್ಟಿದ್ದು ಸಾಬೀತಾಗಿದೆ.

ಬೆಂಗಳೂರಿನ ಹೊಂಡ-ಗುಂಡಿಗಳಿಂದ ಅಪಘಾತವಾದರೆ BBMP ನೀಡುತ್ತೆ ಪರಿಹಾರ; ಇದನ್ನು ಪಡೆಯೋದು ಹೇಗೆ?

Published On - 3:45 pm, Mon, 7 December 20