ಕಲಬುರಗಿ: ತಪ್ಪು ಮಾಡಿದವರಿಗೆ ಪೊಲೀಸರು ಶಿಕ್ಷೆ ಕೊಡಿಸೋದು ಸಾಮಾನ್ಯ. ಆದ್ರೆ ಪೊಲೀಸರಿಗೆ ಶಿಕ್ಷೆ ಆಗುವುದನ್ನ ಎಲ್ಲಾದ್ರೂ ನೋಡಿದ್ದೀರಾ. ಆದ್ರೆ ಕಲಬುರಗಿ ಹೈಕೋರ್ಟ್ ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ನೀಡಿ ಖಡಕ್ ಆದೇಶ ನೀಡಿದೆ. ಈ ಆದೇಶ ನೋಡಿ ಇಡೀ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ.
ಎಫ್ಐಆರ್ ದಾಖಲಿಸದ ಪೊಲೀಸ್ ಸಿಬ್ಬಂದಿಗೆ ವಿಭಿನ್ನ ಶಿಕ್ಷೆ
ಹೌದು ಯಾರಾದ್ರೂ ಠಾಣೆಗೆ ದೂರು ತಗೆದುಕೊಂಡು ಹೋದ್ರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಹಿಂದೇಟು ಹಾಕೋದು, ದೂರು ಕೊಡಲು ಬಂದವರಿಗೆ ಬೆದರಿಸಿ ಕಳುಹಿಸುವ ಅನೇಕ ಘಟನೆಗಳು ನಡೆದಿವೆ. ಇಂತಹ ಪೊಲೀಸ್ ಸಿಬ್ಬಂದಿಗೆ ಬಿಸಿ ಮುಟ್ಟಿಸುವ ಕೆಲಸವನ್ನ ಕಲಬುರಗಿ ಹೈಕೋರ್ಟ್ ಮಾಡಿದೆ. ಪ್ರಕರಣವನ್ನು ದಾಖಲಿಸಿಕೊಳ್ಳದ ಕಲಬುರಗಿ ಸ್ಟೇಷನ್ ಬಜಾರ್ ಠಾಣಾಧಿಕಾರಿಗೆ ಒಂದು ವಾರ ಠಾಣೆಯ ಮುಂದಿನ ರಸ್ತೆಯಲ್ಲಿ ಕಸ ಗೂಡಿಸುವ ಶಿಕ್ಷೆಯನ್ನ ನೀಡಿದೆ.
ಕಲಬುರಗಿ ತಾಲೂಕಿನ ಮಿಣಜಗಿ ತಾಂಡಾದ ತಾರಾಬಾಯಿ ಅನ್ನೋ ಮಹಿಳೆ ತನ್ನ ಮಗ ಸುರೇಶ್ ಕಾಣೆಯಾದ ಬಗ್ಗೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ನೀಡಲು ಅಕ್ಟೋಬರ್ 20 ರಂದು ಹೋಗಿದ್ದಳು. ದಯವಿಟ್ಟು ನನ್ನ ಮಗನನ್ನ ಹುಡುಕಿಕೊಡಿ ಅಂತ ದೂರು ನೀಡಲು ಮುಂದಾಗಿದ್ಲು. ಆದ್ರೆ ದೂರು ದಾಖಲಿಸಿಕೊಳ್ಳದ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಆಕೆಯನ್ನ ವಾಪಸ್ ಕಳುಹಿಸಿದ್ರು. ಹೀಗಾಗಿ ತಾರಾಬಾಯಿ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ತನ್ನ ಮಗನನ್ನು ಹುಡುಕಿ ಕೊಡಬೇಕು ಅಂತ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ರಿಟ್ ಸಲ್ಲಿಸಿದ್ದಳು.
FIR ದಾಖಲಿಸದಕ್ಕೆ ಸಿಕ್ತು ತಕ್ಕ ಶಿಕ್ಷೆ
ನಂತರ ಕೋರ್ಟ್ ಎಫ್ಐಆರ್ ದಾಖಲಿಸದ ಸ್ಟೇಷನ್ ಬಜಾರ್ ಠಾಣೆಯ ಇನ್ಸ್ಪೆಕ್ಟರ್ ಆಗಿರುವ ಸಿದ್ದರಾಮೇಶ್ವರ ಗಡೇದ್ ಅವರನ್ನು ನ್ಯಾಯಾಲಯಕ್ಕೆ ಕರೆಸಿ, ಛೀಮಾರಿ ಹಾಕಿದೆ. ದೂರು ದಾಖಲಿಸಲು ಬಂದಾಗ ದೂರು ದಾಖಲಿಸಿಕೊಂಡು ನ್ಯಾಯ ಕೊಡಿಸುವ ಬದಲಾಗಿ ಅವರನ್ನು ಸಾಗು ಹಾಕಿರೋದು ಕರ್ತವ್ಯಲೋಪ ಅಂತ ಹೇಳಿದೆ. ಇಲ್ಲಿ ಮಹಿಳೆ ಮತ್ತು ಆಕೆಯ ಮಗನ ಹಕ್ಕಿಗೆ ಚ್ಯುತಿ ತರಲಾಗಿದೆ. ಹೀಗಾಗಿ ಒಂದು ವಾರ ಸ್ಟೇಷನ್ ಮುಂದಿನ ರಸ್ತೆಯಲ್ಲಿ ಕಸ ಗೂಡಿಸುವಂತೆ ಸೂಚಿಸಿ ಆದೇಶ ನೀಡಿದೆ. ಹೈಕೋರ್ಟ್ ಕ್ಷಮೆ ಕೇಳಿದ ಅಧಿಕಾರಿ ಸಿದ್ದರಾಮೇಶ್ವರ ಗಡೇದ ಪ್ರಾಯಶ್ಚಿತ್ತವಾಗಿ ಸ್ಟೇಷನ್ ಮುಂದಿನ ರಸ್ತೆ ಗುಡಿಸಲು ಒಪ್ಪಿಗೆ ನೀಡಿದ್ದಾರೆ.
ಕಲಬುರಗಿ ಹೈಕೋರ್ಟ್ ಆದೇಶ ಇಡೀ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸಿದೆ. ದೂರು ಕೊಡಲು ಹೋದಾಗ ದೂರು ದಾಖಲಿಸಿಕೊಳ್ಳಲು ಹಿಂದು ಮುಂದು ನೋಡುವ ಪೊಲೀಸ್ ಅಧಿಕಾರಿಗಳಿಗೆ ಇದು ಖಡಕ್ ಎಚ್ಚರಿಕೆ ನೀಡಿದಂತೆ ಆಗಿದೆ.
Delhi Chalo ಬೆಂಬಲಿಸಿ ರಾಷ್ಟ್ರಪತಿ ಭೇಟಿಗೆ ತೆರಳಿದ ನಿಯೋಗ; ಪ್ರಿಯಾಂಕಾ ಗಾಂಧಿ ವಶಕ್ಕೆ ಪಡೆದು, ಬಿಡುಗಡೆ
Published On - 12:48 pm, Thu, 24 December 20