Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ

|

Updated on: Mar 10, 2021 | 8:56 PM

ಒಂದು ವರ್ಷದ ಕಾಲದಲ್ಲಿ ಯಾವ ಯಾವ ಸಮಯದಲ್ಲಿ ಹೇಗೆ ಉಪವಾಸವಿರಬೇಕೆಂಬುದನ್ನು ವಿವರಿಸಿದ್ದಾರೆ. ಎಲ್ಲವೂ ಲಭ್ಯವಿದ್ದರೂ, ಯಾವುದನ್ನೂ ಮುಟ್ಟದೇ ಕೂರುವ ಉಪವಾಸ ದೀಕ್ಷೆ ಸಾಕಷ್ಟು ಶಕ್ತಿಯುತವಾದದ್ದು.

Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವ ಶಿವ ಎಂದರೆ ಭಯವಿಲ್ಲ..
Follow us on

ಮಹಾಶಿವರಾತ್ರಿಯ ಆಚರಣೆ ನಮ್ಮ ನಾಡಿನಲ್ಲಿ ತುಂಬ ಜನಪ್ರಿಯ. ಆ ದಿನ ಇಡೀ ರಾತ್ರಿ ಗುಡಿ-ಮಠಗಳಲ್ಲಿ, ಅಷ್ಟೇ ಏಕೆ, ಅನೇಕ ಮನೆಗಳಲ್ಲೂ ನಿರಂತರ ಭಜನೆಗಳು ನಡೆಯುತ್ತವೆ. ಭಕ್ತರೆಲ್ಲರೂ ಉಪವಾಸವಿದ್ದು, ಇಡೀ ರಾತ್ರಿ ಅಖಂಡ ಜಾಗರಣೆಯ ನಿಯಮ ಪಾಲಿಸುತ್ತಾರೆ. ಉಪವಾಸ-ಜಾಗರಣೆ ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಶಿವರಾತ್ರಿ. ಶಿವನು ನಮಗಾಗಿ ಧರಣಿಗೆ ಅವತರಿಸಿ ಬಂದಾಗ ನಾವು ನಿದ್ರೆ ಮಾಡುವುದೂ ಮಾಯೆಯಲ್ಲವೇ? ಅಂದು ಎಲ್ಲ ಶಿವಲಿಂಗಗಳಿಗೆ ಅರ್ಚನೆ, ಅಭಿಷೇಕ ಆಗಿ ಮಂತ್ರಪಠಣೆ-ಭಜನೆ ಸಂಕೀರ್ತನೆಗಳು ಸಂಭ್ರಮದಿಂದ ನೆರವೇರುತ್ತವೆ. ಹಲವು ಶಿವಾಲಯಗಳಲ್ಲಿ 11 ಸಲ ರುದ್ರಾಭೀಷೇಕ ಮಾಡುತ್ತಾರೆ. ಭಕ್ತರು ನೂರಾ ಒಂದು… ಇಲ್ಲವೆ ಸಾವಿರದ ಒಂದು… ಬಿಲ್ವ ಪತ್ರೆಗಳನ್ನು ಪಂಚಾಕ್ಷರಿ ಮಂತ್ರ ಪಠನದೊಂದಿಗೆ ಹರನಿಗೆ ಸಮರ್ಪಿಸುತ್ತಾರೆ. ಹೀಗೆ ಶಿವರಾತ್ರಿ ಕೇವಲ ಉಣ್ಣುವ, ಉಡುವ ತೊಡುವ ಹಬ್ಬ ಮಾತ್ರವಲ್ಲದೆ ನಮ್ಮ ಆಚಾರ-ವಿಚಾರಗಳು ಮಹಾ ಪರಿವರ್ತನೆಯ ಸಾಂಸ್ಕೃತಿಕ ಹಬ್ಬವೂ ಹೌದು.

ನಮ್ಮ ನಾಡಿನ ತಾಯ್ನೆಲದ ಭಾಷೆಯ ಮಣ್ಣಲ್ಲಿ ಮಹಾಲಿಂಗ… ಬೆವರಲ್ಲಿ … ಅಭಿಷೇಕ… ಕಲ್ಲಲ್ಲಿ ಕರ್ಪೂರ ಲಿಂಗ… ನುಡಿಯಲ್ಲಿ ನೈವೇದ್ಯ. ಈ ಅಧ್ಯಾತ್ಮಿಕ ಸಂಸ್ಕಾರ ಹಾಗೂ ಸಾಂಸ್ಕೃತಿಕ ಜೀವನದ ಒಡಲಾಳದ ಮಹಾ ಶೋಧನೆಯ ಯಾತ್ರೆಯೇ ಮಹಾ ಶಿವರಾತ್ರಿ! ಹಿಂದುಗಳು ವರ್ಷದುದ್ದಕ್ಕೂ ಒಂದಲ್ಲ ಒಂದು ಹಬ್ಬ ಹಾಗೂ ವೃತ ಆಚರಿಸುತ್ತಾರೆ. ಇವುಗಳಿಗೆ ಅತ್ಯಂತ ಮಹತ್ವ ಕೊಟ್ಟಿದ್ದಾರೆ. ಇವೆಲ್ಲವುಗಳಿಗೆ ಪುರಾಣದ ಹಿನ್ನೆಲೆ ಉಂಟು.

ಇದಕ್ಕೆ ವಿಜ್ಞಾನ ಹಿನ್ನಲೆಯೂ ಇದೆ. ಇವುಗಳಲ್ಲಿ ಒಂದು ಶಿವರಾತ್ರಿಯ ಜಾಗರಣೆ ಆ ದಿನ ಶಿವನು ಲೋಕ ಕಲ್ಯಾಣಕ್ಕಾಗಿ ವಿಷವನ್ನು ಆಪ್ರೋಶನ ಮಾಡಿದ ದಿನ. ಹಿಂದೆ ದೇವಾಸುರರು ಅಮೃತ ಪಡೆಯಲು ಕ್ಷೀರಸಾಗರ ಮಥನಕ್ಕೆ ಮುಂದಾದರು. ಮಂದರಪರ್ವತ ಕಡಗೋಲಾಯಿತು. ವಾಸುಕಿ ಹಗ್ಗವಾಯಿತು. ಮಥನಕಾರ್ಯ ರಭಸವಾಗಿ ನಡೆದಾಗ ಸರ್ಪವಾದ ವಾಸುಕಿಯ ಬಾಯಿಂದ ವಿಷ ಜ್ವಾಲೆ ಹೊರಬಂದು ಕ್ಷೀರ ಸಾಗರವನ್ನು ವ್ಯಾಪಿಸಿತು. ಅದರ ಬಾಧೆಗೆ ಎಲ್ಲರೂ ಓಡಿ ಹೋದಾಗ ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನು. ಕೂಡಲೇ ಪಾರ್ವತಿ ಮಾತೆ ಶಿವನ ಕಂಠ ಒತ್ತಿ ಹಿಡಿಯಲು ವಿಷವು ಅಲ್ಲಿಯೇ ನಿಂತಿತಂತೆ. ಅಲ್ಲಿಂದ ಶಿವನು ವಿಷಕಂಠ ಅಥವಾ ನೀಲಕಂಠ ಎನಿಸಿದನು. ಆ ದಿನವೇ ಮಾಘ ಕೃಷ್ಣ ಚತುರ್ದಶಿ. ಆ ದಿನವನ್ನು ಪ್ರತಿ ವರ್ಷ ಶಿವರಾತ್ರಿಯ ಆಚರಣೆ ಪ್ರಾರಂಭವಾಯಿತು. ಇನ್ನು ಆ ದಿನ ನಡೆಸುವ ಜಾಗರಣೆ ಇದರಲ್ಲಿ ವಿಜ್ಞಾನವಿದೆ. ವಿಷವನ್ನು ಕುಡಿದರೆ ಅಥವಾ ವಿಷ ಜಂತುಗಳು ಕಚ್ಚಿದರೆ 24 ಗಂಟೆ ಅವರನ್ನು ನಿದ್ರಿಸಲು ಬಿಡುವುದಿಲ್ಲ. ಕಾರಣ ವಿಷವು ದೇಹದಾದ್ಯಂತ ವ್ಯಾಪಿಸಬಾರದು ಎಂದು. ನಿದ್ರಿಸಿದರೆ ವಿಷ ವ್ಯಾಪಿಸಿ ರೋಗಿಯ ಸ್ಥಿತಿ ಚಿಂತಾಜನಕ ಆಗುತ್ತದೆ. ವಿಷ ಶರೀರದಲ್ಲಿ ತಾಪ ಹೆಚ್ಚು ಮಾಡುವುದರಿಂದ ಅದರ ಶಮನಕ್ಕಾಗಿ ಎಳನೀರು, ಹಣ್ಣುಗಳು, ಪಾನಕ ಕೊಡುತ್ತಾರೆ.

ಲೋಕ ಕಲ್ಯಾಣಕ್ಕಾಗಿ ನಂಜುಂಡನನ್ನು ಸ್ಮರಿಸಿ ಸ್ತುತಿಸುವ ಆ ದಿನವೇ ಶಿವರಾತ್ರಿ. ಉಪವಾಸ ಹಸಿವಾದರಷ್ಟೇ ಆಹಾರಕ್ಕಿರುವ ಬೆಲೆ ಏನೆಂಬುದು ತಿಳಿಯುವುದು. ಹಸಿವು ಸಹಜವಾದ ಜೀವನ ಕ್ರಿಯೆ. ಶರೀರಕ್ಕೆ ಅವಶ್ಯಕವಾದ ಶಕ್ತಿ ನೀಡುವ ಇಂಧನವೇ ಆಹಾರ. ಇದು ಮುಗಿಯುತ್ತಿದ್ದರೆ ವಾಹನ ಎಂತಹ ಸಂಕೇತ ಸೂಚಿಸುತ್ತದೋ ಅದೇ ಪದ್ಧತಿಯಲ್ಲಿ ಹೊಟ್ಟೆಯಲ್ಲಿ ಖಾಲಿ ಆದಾಗ ಆಹಾರಕ್ಕಾಗಿ ಹಸಿವು ಸಂಕೇತಗಳು ಬರುತ್ತವೆ. ಹೊಟ್ಟೆಯನ್ನು ಖಾಲಿ ಇಡಬೇಡಿರೆಂದು ದೊಡ್ಡವರು ಹೇಳುತ್ತಾರೆ. ಆಹಾರದ ಬಗ್ಗೆ ಇಷ್ಟೊಂದು ಎಚ್ಚರಿಕೆಗಳನ್ನು ಹೇಳಿದ ದೊಡ್ಡವರೇ ಉಪವಾಸ ದೀಕ್ಷೆಯ ಅಗತ್ಯದ ಬಗ್ಗೆ ಹೇಳಿದ್ದಾರೆ.

ಒಂದು ವರ್ಷದ ಕಾಲದಲ್ಲಿ ಯಾವ ಯಾವ ಸಮಯದಲ್ಲಿ ಹೇಗೆ ಉಪವಾಸವಿರಬೇಕೆಂಬುದನ್ನು ವಿವರಿಸಿದ್ದಾರೆ. ಎಲ್ಲವೂ ಲಭ್ಯವಿದ್ದರೂ, ಯಾವುದನ್ನೂ ಮುಟ್ಟದೇ ಕೂರುವ ಉಪವಾಸ ದೀಕ್ಷೆ ಸಾಕಷ್ಟು ಶಕ್ತಿಯುತವಾದದ್ದು. ಇದರಿಂದ ಯಾವುದನ್ನಾದರೂ ಸಾಧಿಸಬಹುದು ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಋಷಿ ಮುನಿಗಳು, ಆಹಾರ, ನೀರು ತ್ಯಜಿಸಿ ತಪಸ್ಸು ಮಾಡಿದ್ದಾರೆಂದು ಹಲವು ಗ್ರಂಥಗಳಲ್ಲಿ ಇದೆ. ಆ ಶಕ್ತಿಗೆ ಮೂರು ಲೋಕಗಳೂ ನಡುಗಿ ತ್ರಿಮೂರ್ತಿಗಳು ಪ್ರತ್ಯಕ್ಷರಾಗುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ.

“ನಂಬಿ ಕರೆದರೆ ಓ ಎನ್ನನೇ ಶಿವನು”

ಡಾ.ಬಸವರಾಜ್ ಗುರೂಜಿ, ಜ್ಯೋತಿಷಿ, 9972848937

ಇದನ್ನೂ ಓದಿ: ಶಿವನಿಗೆ ಬಿಲ್ವಪತ್ರೆ ಶ್ರೇಷ್ಠವೇಕೆ? ಈ ಮರ ಹುಟ್ಟಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

Published On - 4:41 pm, Wed, 3 March 21