ಕೊರೊನಾ ಲಾಕ್​ಡೌನ್: ರಾಮಾಯಣ, ಮಹಾಭಾರತ ಪ್ರಸಂಗ ಪ್ರದರ್ಶಿಸಿ ಜೀವನ ಸಾಗಿಸುತ್ತಿದ್ದ ಅಲೆಮಾರಿ ಕುಟುಂಬಗಳ ಕಷ್ಟ ಕೇಳುವವರಿಲ್ಲ

|

Updated on: Jun 02, 2021 | 7:28 AM

ಗ್ರಾಮಗಳಿಗೆ ತೆರಳಿ ನಾಟಕ, ರಾಮಾಯಣ, ಮಹಾಭಾರತ ಸೇರಿದಂತೆ ವಿವಿಧ ಪ್ರಸಂಗಗಳ ಪ್ರದರ್ಶನ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೆವು. ಈಗ ಲಾಕ್​ಡೌನ್​ನಿಂದ ಹಣ ಹೊಂದಿಸಲಾಗುತ್ತಿಲ್ಲ. ದಯವಿಟ್ಟು ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಕೊರೊನಾ ಲಾಕ್​ಡೌನ್: ರಾಮಾಯಣ, ಮಹಾಭಾರತ ಪ್ರಸಂಗ ಪ್ರದರ್ಶಿಸಿ ಜೀವನ ಸಾಗಿಸುತ್ತಿದ್ದ ಅಲೆಮಾರಿ ಕುಟುಂಬಗಳ ಕಷ್ಟ ಕೇಳುವವರಿಲ್ಲ
ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಅಲೆಮಾರಿ ಕುಟುಂಬ
Follow us on

ವಿಜಯನಗರ: ಕೊರೊನಾ ಎರಡನೇ ಅಲೆ ಹಬ್ಬುವುದನ್ನು ತಪ್ಪಿಸಲು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ. ಲಾಕ್​ಡೌನ್​ ಮೂಲಕ ಸೋಂಕು ಹರಡುವಿಕೆ ತಪ್ಪಿಸಿ ಕೊರೊನಾದಿಂದ ಜೀವ ಉಳಿಸಬಹುದು ಎನ್ನುವುದು ಲೆಕ್ಕಾಚಾರವಾದರೂ ದಿನದ ದುಡಿಮೆಯನ್ನೇ ನಂಬಿಕೊಂಡು ಹೊತ್ತು ಊಟವನ್ನು ಸಂಪಾದಿಸುತ್ತಿದ್ದವರ ಗೋಳು ಹೇಳತೀರದಾಗಿದೆ. ಕಳೆದ ಬಾರಿಯ ಲಾಕ್​ಡೌನ್​ನಲ್ಲೇ ತತ್ತರಿಸಿ ಹೋಗಿದ್ದ ಎಷ್ಟೋ ಜನರು ಈ ಬಾರಿಯೂ ಅದೇ ತೆರನಾದ ದುಸ್ಥಿತಿಗೆ ಸಿಲುಕಿ ನಲುಗುತ್ತಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಆಶ್ರಯ ಕ್ಯಾಂಪ್​ನಲ್ಲಿ ಅಲೆಮಾರಿ ಜನಾಂಗದ ಕುಟುಂಬ ಇಂತಹದ್ದೇ ಸಂಕಷ್ಟವನ್ನು ಎದುರಿಸುತ್ತಿದ್ದು, ರಾಮಾಯಣ, ಮಹಾಭಾರತ ಪ್ರಸಂಗಗಳನ್ನು ಪ್ರದರ್ಶಿಸಿ ಅದರಿಂದ ಕೈ ಸೇರುವ ಸಂಪಾದನೆಯಲ್ಲೇ ಬದುಕು ಸಾಗಿಸುತ್ತಿದ್ದವರು ಈಗ ಹಸಿವಿನಿಂದ ಕಂಗಾಲಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಆಶ್ರಯ ಕ್ಯಾಂಪ್​ನಲ್ಲಿ ಅಲೆಮಾರಿ ಜನಾಂಗದ ಸುಮಾರು 25 ಕುಟುಂಬಗಳು ನೆಲೆಯೂರಿದ್ದು, ಊಟಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಅಂಗಲಾಚುತ್ತಿದ್ದಾರೆ. ಬುಡ್ಗ ಜಂಗಮ ಹಗಲು ವೇಷಧಾರಿಗಳು ಹೇಳುವ ಪ್ರಕಾರ, ಕಳೆದ ಬಾರಿ ಈ ರೀತಿ ಸಂಕಷ್ಟ ಎದುರಾದಾಗ ಹಲವರು ಮುಂದೆ ಬಂದು ಫುಡ್​ ಕಿಟ್​ಗಳನ್ನು ನೀಡಿದ್ದ ಕಾರಣ ಊಟಕ್ಕೆ ಸಮಸ್ಯೆಯಾಗಿರಲಿಲ್ಲ. ಆದರೆ, ಈ ಬಾರಿ ಯಾರೂ ಇವರತ್ತ ತಿರುಗಿ ನೋಡದ ಕಾರಣ ಫುಡ್​ ಕಿಟ್​ ಆಗಲಿ, ಯಾವುದೇ ಪರ್ಯಾಯ ವ್ಯವಸ್ಥೆಯಾಗಲೀ ಲಭ್ಯವಾಗಿಲ್ಲ. ಆದ್ದರಿಂದಾಗಿ ಹಸಿವಿನಿಂದಲೇ ದಿನದೂಡುವಂತಾಗಿದೆ.

ಕೊರೊನಾಕ್ಕೂ ಮುನ್ನ ಅಲೆಮಾರಿ ಕುಟುಂಬದವರು ನೀಡುತ್ತಿದ್ದ ಕಲಾ ಪ್ರದರ್ಶನ

ಒಂದೇ ಕಡೆ 25ಕ್ಕೂ ಹೆಚ್ಚು ಕುಟುಂಬಗಳು ನೆಲೆಯೂರಿದ್ದು, ಇವರ ಕಷ್ಟವನ್ನು ಆಲಿಸಲು ಶಾಸಕ ಕರುಣಾಕರ ರೆಡ್ಡಿ ಕೂಡಾ ಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಣ್ಣ ಮಕ್ಕಳೊಂದಿಗೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿರುವುದರಿಂದ ಕನಿಷ್ಠ ಊಟಕ್ಕಾದರೂ ವ್ಯವಸ್ಥೆ ಮಾಡಿ ಎಂದು ಹಗಲು ವೇಷಧಾರಿಗಳು ಬೇಡಿಕೆ ಇಟ್ಟಿದ್ದಾರೆ. ಗ್ರಾಮಗಳಿಗೆ ತೆರಳಿ ನಾಟಕ, ರಾಮಾಯಣ, ಮಹಾಭಾರತ ಸೇರಿದಂತೆ ವಿವಿಧ ಪ್ರಸಂಗಗಳ ಪ್ರದರ್ಶನ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೆವು. ಈಗ ಲಾಕ್​ಡೌನ್​ನಿಂದ ಹಣ ಹೊಂದಿಸಲಾಗುತ್ತಿಲ್ಲ. ದಯವಿಟ್ಟು ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಚೇತರಿಕೆಯ ಹಾದಿಯಲ್ಲಿ ಬೀದರ್​ ಜಿಲ್ಲೆ
ಬೀದರ್: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದ್ದು, 7 ದಿನದಲ್ಲಿ 303 ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಈ ಮೂಲಕ ರೆಡ್ ಜೋನ್‌ನಿಂದ ಗ್ರೀನ್ ಜೋನ್‌ನತ್ತ ಬೀದರ್ ಜಿಲ್ಲೆ ಸಾಗುತ್ತಿದ್ದು, ಪ್ರಸ್ತುತ 319 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಕೇವಲ 94 ಮಂದಿ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 225 ಸೋಂಕಿತರು ಹೋಮ್​ ಐಸೋಲೇಷನ್​ನಲ್ಲಿದ್ದಾರೆ ಎನ್ನುವುದು ಗಮನಾರ್ಹವಾಗಿದೆ.

ಬೀದರ್ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 0.90ಕ್ಕೆ ಇಳಿದಿದ್ದು, ಬಿಮ್ಸ್​ನಲ್ಲಿ ಶೇಕಡಾ 90 ರಷ್ಟು ಬೆಡ್​ಗಳು ಖಾಲಿ ಇವೆ. ಎರಡನೇ ಅಲ್ಲೆಯಲ್ಲಿ ರಾಜ್ಯದಲ್ಲೇ ಹಾಟ್​ಸ್ಪಾಟ್​ ಆಗಿದ್ದ ಜಿಲ್ಲೆ, ಲಾಗ್​ಡೌನ್​ ನಂತರದಲ್ಲಿ ಕೊರೊನಾ ಸೋಂಕಿತರ ವಿಚಾರದಲ್ಲಿ ಚೇತರಿಕೆ ಕಂಡಿದೆ.

ಇದನ್ನೂ ಓದಿ:
ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕೆ ಹುಡುಕಾಟ, ಹಾಸನದಲ್ಲಿ ಮನಕಲಕುವ ಘಟನೆ 

ಲಾಕ್​ಡೌನ್ ಸಂಕಷ್ಟ: ಬಡವರಿಗೆ ಮಂಗಳವಾರದ ಬಿರಿಯಾನಿ ಬಾಡೂಟ ಹಂಚಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್

Published On - 7:25 am, Wed, 2 June 21