ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು: ನಾರಾಯಣ ಗೌಡ

| Updated By: ರಶ್ಮಿ ಕಲ್ಲಕಟ್ಟ

Updated on: Feb 05, 2021 | 11:45 AM

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಮೇಲುಕೋಟೆ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಇಬ್ಬರೂ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಹೊಗಳಿಕೊಂಡಿದ್ದಾರೆ.

ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು: ನಾರಾಯಣ ಗೌಡ
ಸಚಿವ ಕೆ.ಸಿ. ನಾರಾಯಣ ಗೌಡ
Follow us on

ಮಂಡ್ಯ: 2019ರ ನವೆಂಬರ್ ತಿಂಗಳಲ್ಲಿ ನಡೆದ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುಣಾವಣೆಯಲ್ಲಿ ಬದ್ಧ ವೈರಿಗಳಂತೆ ಮಾತಿಗೆ ಮಾತು ಬೆಳೆಸಿದ್ದ ಜಿಲ್ಲೆಯ ಇಬ್ಬರು ನಾಯಕರು ಇತ್ತೀಚೆಗೆ  ಒಂದೇ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಬ್ಬರಿಗೊಬ್ಬರು ಹೊಗಳಿಕೊಂಡಿದ್ದು ಆಶ್ಚರ್ಯದಾಯಕವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 1600 ಕೋಟಿ ರೂಪಾಯಿಗಳನ್ನ ತಮ್ಮ ಕ್ಷೇತ್ರಕ್ಕೆ ಮಂಜೂರು ಮಾಡಿಕೊಳ್ಳುವ ಮೂಲಕ ತಮ್ಮ ಕ್ಷೇತ್ರವನ್ನ ಕಡೆಗಣಿಸಿದರು ಎನ್ನುತ್ತಿದ್ದವರೇ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ 1200 ಕೋಟಿ ರೂಪಾಯಿ ಯೋಜನೆ ಮಂಜೂರು ಮಾಡಿಸಿಕೊಂಡಿದ್ದೀನಿ. ನಮಗೆ ಪವರ್ ಇದ್ದಾಗಲೇ ನಾವು ನಮ್ಮ ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಮೇಲುಕೋಟೆ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಇಬ್ಬರೂ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಹೊಗಳಿಕೊಂಡಿದ್ದಾರೆ.

ಸಿ. ಎಸ್. ಪುಟ್ಟರಾಜು

ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಶಾಸಕ ಸಿ. ಎಸ್. ಪುಟ್ಟರಾಜು ನಾನು ಸಚಿವನಿದ್ದಾಗ ಎಲ್ಲಾ ಕೆಲಸವನ್ನು ಅವರ ಕ್ಷೇತ್ರಕ್ಕೆ ಮಾಡಿಕೊಂಡರು ಎಲ್ಲರೂ ಗಲಾಟೆ ಮಾಡಿದ್ದರು. ನಾವು ಇದ್ದ ಸರ್ಕಾರ ಎಷ್ಟು ದಿನ ಇರುತ್ತದೋ, ಇರಲ್ವೋ ಎಂದು ನಮಗೆ  ಗೊತ್ತಿತ್ತು. ಇದೇ ಕಾರಣಕ್ಕೆ ನಾನು ಸ್ವಲ್ಪ ಸ್ವಾರ್ಥದ ಕೆಲಸಗಳನ್ನು ಹೆಚ್ಚಾಗಿ ಮಾಡಿದೆ. ಈ ಮೂಲಕ ನನ್ನ ಕೇತ್ರದಲ್ಲಿ ನೀರಾವರಿಯನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿದರು.

ಇನ್ನೂ ವೇದಿಕೆಯಲ್ಲಿ ಕುಳಿತಿದ್ದ ಸಚಿವ ನಾರಾಯಣ ಗೌಡರ ಕುರಿತು ಮಾತನಾಡಿದ ಪುಟ್ಟರಾಜು, ನಮ್ಮನ್ನು ನೀವು ಕಿತ್ತು ಹಾಕಿದ್ದಿರಾ ಎಂದು ನಮಗೆ ಕೋಪನೂ ಇಲ್ಲ ಬೇಸರನೂ ಇಲ್ಲ. ನಾರಾಯಣ ಗೌಡರೇ ರಾಜಕೀಯ ಚದುರಂಗದಾಟದಲ್ಲಿ ಮೇಲೆ ಇದ್ದವರು ಕೆಳಗೆ ಬರಹುದು, ಕೆಳಗೆ ಇದ್ದವರು ಮೇಲೆ ಬರಬಹುದು. ಈಗ ನೀವು ಸಚಿವರಾಗಿದ್ದೀರಾ ನೀವು ಸಹ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಸಿ. ಎಸ್. ಪುಟ್ಟರಾಜು ತಿಳಿಸಿದರು.

ಎಲ್ಲರೂ ಹೇಳುತ್ತಾರೆ ಬಿಜೆಪಿ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳನ್ನು ತಡೆಹಿಡಿದರು ಎಂದು ಆದರೆ ನನ್ನ ಕ್ಷೇತ್ರದಲ್ಲಿ ಅವರು 1 ಕೋಟಿ ರೂಪಾಯಿ ಕೆಲಸವನ್ನು ಸಹ ತಡೆಹಿಡಿದಿಲ್ಲ. ನನ್ನ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅವುಗಳ ಉದ್ಘಾಟನೆಗೆ ನಾರಾಯಣ ಗೌಡ ಹಾಗೂ ಯಡಿಯೂರಪ್ಪ ಅವರನ್ನು ಕರೆಯುತ್ತೇನೆ ಎಂದು ಸಿ. ಎಸ್. ಪುಟ್ಟರಾಜು ಹೇಳಿದರು.

ಮೇಲುಕೋಟೆ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ

ಇನ್ನು ಇದೇ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಪುಟ್ಟರಾಜು ಅವರು ಮಂತ್ರಿಯಾಗಿದ್ದಾಗ ಅವರ ಕ್ಷೇತ್ರಕ್ಕೆ 1600 ಕೋಟಿ ಅಭಿವೃದ್ಧಿ ಕೆಲಸವನ್ನು ತೆಗೆದುಕೊಂಡರು. ಆಗ ನಾನು ಕೇಳಿಕೊಂಡೆ ನಮಗೂ ಸ್ವಲ್ಪ ಕೊಡಿ ಎಂದು. ಆಗ ಅವರು ನಮ್ಮನ್ನು ಕೈ ಬಿಟ್ಟು ಬಿಟ್ಟರು. ಅವರು ಏಕೆ ಮಾಡಿದರು ಎಂದು ನನಗೆ ಈಗ ಗೊತ್ತಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿದರು.

ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ನಮಗೆ ಈಗ ಗೊತ್ತಾಗಿದೆ. ಪವರ್ ಇರುವ ಕಾರಣ ಕೆ.ಆರ್‌‌.ಪೇಟೆ ಕ್ಷೇತ್ರಕ್ಕೆ 1200 ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳನ್ನು ತೆಗೆದುಕೊಂಡಿದ್ದೇನೆ. ಹಾಗಂತ ನಾನು ಬೇರೆ ಕ್ಷೇತ್ರಗಳಿಗೆ ಮೋಸ ಮಾಡಿಲ್ಲ, ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿ ಕೆಲಸಗಳನ್ನು ನೀಡಿದ್ದೇನೆ ಸಚಿವ ನಾರಾಯಣ ಗೌಡ ತಿಳಿಸಿದರು.

ಒಟ್ಟಾರೆ ಚುನಾವಣೆ ಸಮಯದಲ್ಲಿ ಒಬ್ಬರಿಗೊಬ್ಬರು ಪರಸ್ಪರ ನಿಂದಿಸಿಕೊಂಡು ಬೈದಾಡಿಕೊಳ್ಳುತ್ತಿದ್ದ ನಾಯಕರು ಇತ್ತೀಚೆಗೆ ಒಂದೇ ವೇದಿಕೆಯಲ್ಲಿ ಪಾಲ್ಗೊಂಡು ಒಬ್ಬರಿಗೊಬ್ಬರು ಹೊಗಳಿಕೊಂಡದ್ದು ವಿಶೇಷವಾಗಿತ್ತು.

 

ಯಾರೂ ಆತಂಕ ಪಡುವ ಅಗತ್ಯವಿಲ್ಲ: ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ