AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಕಷ್ಟದಲ್ಲೂ ದುಡಿಯುವ ಕೈಗಳಿಗೆ ವರವಾದ ಈ ಯೋಜನೆ

ಹಾವೇರಿ : ಕೊರೊನಾ ಹೆಮ್ಮಾರಿಯ ಆರ್ಭಟ ಶುರುವಾದ ಮೇಲೆ‌ ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿತ್ತು. ದುಡಿಯುವ ಕೈಗಳಿಗೆ ಕೆಲಸವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ‌ ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಅಕ್ಷರಶಃ ಕಂಗಾಲಾಗಿದ್ದವು. ಮನೆಯಿಂದ ಹೊರಗಡೆ ಹೋಗಿ ದುಡಿಯಬೇಕು ಅಂದರೆ ಎಲ್ಲೆಲ್ಲೂ ಕೆಲಸವಿಲ್ಲದಂತಾಗಿತ್ತು. ಎಲ್ಲವೂ ಲಾಕ್​ಡೌನ್ ಆಗಿದ್ದರಿಂದ ಕೂಲಿಯನ್ನೆ ನಂಬಿ ಬದುಕುತ್ತಿದ್ದ ಜನರ ಸ್ಥಿತಿಯಂತೂ ಹೇಳತೀರದಾಗಿತ್ತು. ಲಾಕ್​ಡೌನ್ ಶುರುವಾದ ಮೇಲೆ ಕೂಲಿಯನ್ನೇ ನಂಬಿದ್ದವರಿಗೆ ಕುಟುಂಬ ನಡೆಸುವುದು ತೀರಾ ಕಷ್ಟದಾಯಕ ಆಗಿತ್ತು. ಆಗ ನೆರವಿಗೆ ಬಂದಿದ್ದು ಮಹಾತ್ಮ ಗಾಂಧಿ […]

ಕೊರೊನಾ ಸಂಕಷ್ಟದಲ್ಲೂ ದುಡಿಯುವ ಕೈಗಳಿಗೆ ವರವಾದ ಈ ಯೋಜನೆ
Follow us
ಸಾಧು ಶ್ರೀನಾಥ್​
| Updated By:

Updated on: May 25, 2020 | 8:13 AM

ಹಾವೇರಿ : ಕೊರೊನಾ ಹೆಮ್ಮಾರಿಯ ಆರ್ಭಟ ಶುರುವಾದ ಮೇಲೆ‌ ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿತ್ತು. ದುಡಿಯುವ ಕೈಗಳಿಗೆ ಕೆಲಸವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ‌ ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಅಕ್ಷರಶಃ ಕಂಗಾಲಾಗಿದ್ದವು. ಮನೆಯಿಂದ ಹೊರಗಡೆ ಹೋಗಿ ದುಡಿಯಬೇಕು ಅಂದರೆ ಎಲ್ಲೆಲ್ಲೂ ಕೆಲಸವಿಲ್ಲದಂತಾಗಿತ್ತು. ಎಲ್ಲವೂ ಲಾಕ್​ಡೌನ್ ಆಗಿದ್ದರಿಂದ ಕೂಲಿಯನ್ನೆ ನಂಬಿ ಬದುಕುತ್ತಿದ್ದ ಜನರ ಸ್ಥಿತಿಯಂತೂ ಹೇಳತೀರದಾಗಿತ್ತು.

ಲಾಕ್​ಡೌನ್ ಶುರುವಾದ ಮೇಲೆ ಕೂಲಿಯನ್ನೇ ನಂಬಿದ್ದವರಿಗೆ ಕುಟುಂಬ ನಡೆಸುವುದು ತೀರಾ ಕಷ್ಟದಾಯಕ ಆಗಿತ್ತು. ಆಗ ನೆರವಿಗೆ ಬಂದಿದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ. ಹಾವೇರಿ ಜಿಲ್ಲೆಯಲ್ಲಿರುವ 224 ಗ್ರಾಮ ಪಂಚಾಯಿತಿಗಳಲ್ಲೂ ಕೊರೊನಾ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಸಲುವಾಗಿ ಉದ್ಯೋಗ ಖಾತ್ರಿ ಕೆಲಸ ಆರಂಭಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಕೂಲಿಯನ್ನೆ ನಂಬಿದ್ದ ಜನರಿಗೆ ಉದ್ಯೋಗ ಖಾತ್ರಿ ಕೆಲಸ ದೊರೆತಿದೆ. ಇದರಿಂದ ಕೂಲಿ ಕೆಲಸ ನಂಬಿದ್ದವರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಮಾಜಿಕ ಅಂತರ, ಸ್ಯಾನಿಟೈಸರ್, ‌ಮಾಸ್ಕ್ ಬಳಕೆ: ಉದ್ಯೋಗ ಖಾತ್ರಿ ಯೋಜನೆ ಅಂದಾಕ್ಷಣ ನೂರಾರು ಕಾರ್ಮಿಕರು ಒಂದೆಡೆ ಸೇರಿ ಕೆಲಸ ಮಾಡುತ್ತಾರೆ. ಹೀಗಾಗಿ ಕೆಲಸದ ಸ್ಥಳದಲ್ಲಿ ಕಾರ್ಮಿಕರು ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಕೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಪ್ರತಿದಿನ ಉದ್ಯೋಗ ಖಾತ್ರಿ ಕೆಲಸಕ್ಕೆ 285 ರೂಪಾಯಿ ಕೂಲಿ ನೀಡಲಾಗುತ್ತಿದೆ. ಕೆರೆ ಹೂಳೆತ್ತುವುದು, ಬದುವು ನಿರ್ಮಾಣ, ಹಳ್ಳ ಕೊಳ್ಳಗಳ ಸ್ವಚ್ಛತೆ ಸೇರಿದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ವಿವಿಧ ಕೆಲಸಗಳನ್ನು ಒದಗಿಸಲಾಗುತ್ತಿದೆ.

ಕೆಲಸವಿಲ್ಲದೆ ಲಾಕ್​ಡೌನ್ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ಉದ್ಯೋಗ ಖಾತ್ರಿ ಸಾಕಷ್ಟು ಖುಷಿ ನೀಡಿದೆ. ವಾರಕ್ಕೊಮ್ಮೆ ಕೆಲಸಗಾರರಿಗೆ ಸಂಬಳ ನೀಡುವ ವ್ಯವಸ್ಥೆ ಇದೆ. ಜಾಬ್ ಕಾರ್ಡ್ ಹೊಂದಿದವರಿಗೆ ನೇರವಾಗಿ ಹಣ ಸಿಗುತ್ತದೆ. ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಬದುಕಿನ ಹೊಸ ಭರವಸೆ ಮೂಡಿಸಿದೆ.

ಕೂಲಿ ಕಾರ್ಮಿಕರಿಗೆ ಉತ್ಸಾಹ ಮೂಡಿಸಿದ ಯೋಜನೆ: ಉದ್ಯೋಗ ಖಾತ್ರಿ ಯೋಜನೆಯಿಂದ ಬದುಕಿನ ಭರವಸೆಯನ್ನೆ ಬಿಟ್ಟಿದ್ದ ನಮಗೆ ಕೆಲಸ ಸಿಕ್ಕು ಮತ್ತೆ ಬದುಕಿನ ಉತ್ಸಾಹ ಮೂಡುವಂತಾಗಿದೆ ಅಂತಾರೆ ಕೂಲಿ ಕಾರ್ಮಿಕರು. ಉದ್ಯೋಗ ಖಾತ್ರಿ ಯೋಜನೆಯಡಿ ಯಾರು ಕೆಲಸ ಮಾಡುತ್ತೇನೆಂದು ಮುಂದೆ ಬರುತ್ತಾರೋ ಅವರೆಲ್ಲರಿಗೂ ಕೆಲಸ ನೀಡಲಾಗುತ್ತಿದೆ. ಕೊರೊನಾ ಸೋಂಕಿನ‌ ಹಾವಳಿ ಇರುವುದರಿಂದ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು. ಆಗಾಗ ಕೂಲಿ ಕಾರ್ಮಿಕರು ಸ್ಯಾನಿಟೈಸರ್ ಬಳಸುವಂತೆ ಇಲಾಖೆತಯಿಂದ ವ್ಯವಸ್ಥೆ ಮಾಡಲಾಗಿದೆ.

ಕೂಲಿ ಕಾರ್ಮಿಕರು ಕೊರೊನಾ ಸೋಂಕು ಹರಡದಂತೆ ತಡೆಯಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಲಾಕ್​ಡೌನ್​ನಿಂದ ಕೂಲಿಯೂ ಇಲ್ಲದೆ, ಮನೆಯಲ್ಲಿ ಒಂದೊತ್ತಿನ ಊಟಕ್ಕೂ ಕೂಲಿ ಕಾರ್ಮಿಕರು ಪರದಾಡುವ ಸ್ಥಿತಿ ಎದುರಾಗಿತ್ತು. ಅಂತಹವರಿಗೆ ಉದ್ಯೋಗ ಖಾತ್ರಿ ಯೋಜನೆ ವರವಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ.

ಕೊರೊನಾ ಲಾಕ್‌ಡೌನ್ ನಿಂದಾಗಿ ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಕೈಯಲ್ಲಿ ಹಣವೂ ಇಲ್ಲದೆ, ಮನೆಯಲ್ಲಿ ದಿನಸಿ ಸಾಮಗ್ರಿಗಳು ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕೂಲಿ ಕಾರ್ಮಿಕರ ಮೊಗದಲ್ಲಿ ಈಗ ಉದ್ಯೋಗ ಖಾತ್ರಿ ಯೋಜನೆ ಹೊಸ‌ ಭರವಸೆ ಮೂಡಿಸಿದೆ. ಕೆಲಸವಿಲ್ಲ ಎನ್ನುತ್ತಿದ್ದವರಿಗೆ ಕೆಲಸ‌ ನೀಡಿದೆ. ಕೆಲಸವಿಲ್ಲ ಎನ್ನುತ್ತಿದ್ದವರ ಪಾಲಿಗೆ ಉದ್ಯೋಗ ಖಾತ್ರಿ ಯೋಜನೆ ವರವಾಗಿದೆ.