
ಯುವಶಕ್ತಿ ದೇಶದ ಶಕ್ತಿ. ಹೌದು ಯುವ ಜನತೆಯ (Youth) ಸಾಮಾಜಿಕ, ಆರ್ಥಿಕ, ರಾಜಕೀಯ, ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳುವುದರಿಂದ ದೇಶ ಪ್ರಗತಿಯತ್ತ ಸಾಗುತ್ತದೆ. ಜೊತೆಗೆ ಯುವಕ ಭವಿಷ್ಯವೂ ಉಜ್ವಲವಾಗಿರುತ್ತದೆ. ಹಾಗಾಗಿ ಸಮಾಜವು ಸುಸ್ಥಿರ ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಎಷ್ಟು ಮುಖ್ಯ ಎಂದು ಸಾರಲು, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಯುವ ದಿನದ ಈ ವಿಶೇಷ ಸಂದರ್ಭದಲ್ಲಿ ಯುವಕರು ಯಾವೆಲ್ಲಾ ಅಭ್ಯಾಸಗಳಿಂದ ದೂರವಿದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂಬುದನ್ನು ನೋಡೋಣ ಬನ್ನಿ.
1999 ರಲ್ಲಿ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಬೇಕು ಎಂಬ ನಿರ್ಣಯವನ್ನು ವಿಶ್ವ ಸಂಸ್ಥೆಯ ಸಅಮಾನ್ಯ ಸಭೆ ಘೋಷಿಸಿತು. 1998 ರಲ್ಲಿ, ಪೋರ್ಚುಗಲ್ನ ಲಿಸ್ಬನ್ನಲ್ಲಿ ವಿಶ್ವ ಯುವ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ, ಭಾಗವಹಿಸಿದ್ದ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಾಡಿದರು. ನಂತರ ಡಿಸೆಂಬರ್ 17, 1999 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ಪ್ರಸ್ತಾಪವನ್ನು ಅನುಮೋದಿಸಿತು. ಅಂದಿನಿಂದ, ಪ್ರತಿ ವರ್ಷ ಆಗಸ್ಟ್ 12 ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಯುವ ದಿನದ ಮಹತ್ವವೇನು?
ಕೆಟ್ಟ ಸಹವಾಸದಿಂದ ದೂರವಿರಿ: ಯುವಕರು ಕೆಟ್ಟವರ ಸಹವಾಸದಿಂದ ದೂರವಿರಬೇಕು. ಸಹವಾಸವು ನಮ್ಮ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ, ಸ್ನೇಹಿತರನ್ನು ಮಾಡಿಕೊಳ್ಳುವಾಗ ಬಹಳ ಜಾಗರೂಕರಾಗಿರಿ. ಕೆಟ್ಟ ಗುಣ ಹಾಗೂ ಕೆಟ್ಟ ಚಟವನ್ನು ಹೊಂದಿರುವ ವ್ಯಕ್ತಿಗಳ ಸಹವಾಸದಿಂದ ಆದಷ್ಟು ದೂರವಿರಿ. ಇಲ್ಲದಿದ್ದರೆ ಇದು ನಿಮ್ಮ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಯುವಕರು ಯಾವಾಗಲೂ ಸಜ್ಜನರ ಸಹವಾಸದಲ್ಲಿ ಇರಬೇಕು.
ಕೆಟ್ಟ ಚಟದಿಂದ ದೂರವಿರಿ: ಯೌವನದ ಈ ವಯಸ್ಸಿನಲ್ಲಿ, ಕೆಟ್ಟ ಚಟಗಳು ಹೆಚ್ಚು ಆಕರ್ಷಿಸುತ್ತವೆ. ಇದಕ್ಕೇನಾದರೂ ಬಲಿಯಾದರೆ ಜೀವನವೇ ಸಂಪೂರ್ಣವಾಗಿ ನಾಶವಾಗುತ್ತದೆ. ಹೌದು, ನಿಮ್ಮ ಯೌವನದಲ್ಲಿ ನೀವು ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡರೆ, ಅವುಗಳಿಂದ ಹೊರಬರುವುದು ಕಷ್ಟಸಾಧ್ಯ. ಇದರಿಂದ ಸಂಪೂರ್ಣ ಜೀವನವೇ ಹಾಳಾಗಬಹುದು. ಹಾಗಾಗಿ ಜೀವನದಲ್ಲಿ ಮುಂದುವರೆಯಲು ಬಯಸಿದರೆ ಸಾಧ್ಯವಾದಷ್ಟು ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿಂದ ದೂರವಿರಿ.
ಏನೂ ಮಾಡದೆ ಸುಮ್ಮನೆ ಕೂರುವುದು: ಸೋಮಾರಿತನದಿಂದ ಏನನ್ನೂ ಮಾಡದೆ ಸುಮ್ಮನೆ ಕೂರುವುದರಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಯೌವನದ ಸಮಯದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುವುದು ಅಷ್ಟೇನೂ ಕಷ್ಟಕರವಲ್ಲ ಏಕೆಂದರೆ ಆ ಶಕ್ತಿ, ಸಾಮರ್ಥ್ಯ ನಿಮ್ಮ ಬಳಿ ಇರುತ್ತದೆ. ಆದ್ದರಿಂದ ಸೋಮಾರಿತನವನ್ನು ಬಿಟ್ಟು ಯೌವನದ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ. ಇದು ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ.
ಇದನ್ನೂ ಓದಿ: ದೇಶವನ್ನು ಮುನ್ನಡೆಸುವ ಯುವಜನತೆ ಸ್ವಾಮಿ ವಿವೇಕಾನಂದರ ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು
ನಿಮ್ಮ ಭಯದಿಂದ ದೂರ ಓಡುವುದು: ಕೆಲವರು ಭಯದಿಂದಾಗಿ ತಾವು ಅಂದುಕೊಂಡ ಕಾರ್ಯವನ್ನು ಮಾಡಲು ಹಿಂದೇಟು ಹಾಕುತ್ತಾರೆ. ಹೌದು ನಾನು ಈ ಬಿಸಿನೆಸ್ ಮಾಡಿ ನಷ್ಟ ಅನುಭವಿಸಿದರೆ ಏನು ಮಾಡೋದು ಎಂದ ಭಯದಿಂದ ಅನೇಕರು ತಮ್ಮ ಕನಸಿಗೆ ಮುನ್ನುಡಿ ಬರೆಯಲು ಹಿಂದೇಟು ಹಾಕುತ್ತಾರೆ. ಈ ಭಯವಿದ್ದರೆ ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಯುವಕರು ಭಯವನ್ನು ಬಿಟ್ಟು ಮುನ್ನಡೆಯಬೇಕು. ಅಪಾಯಗಳನ್ನು ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಬರುವ ಎಂತಹದ್ದೇ ಕಷ್ಟಗಳನ್ನು ಎದುರಿಸಲು ಸಾಧ್ಯ.
ಸಮಯವನ್ನು ದುರುಪಯೋಗಪಡಿಸುವುದು: ಸಮಯಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ. ಅದರಲ್ಲೂ ಯೌವನದ ಪ್ರಾಯದಲ್ಲಿ ಮೋಜು, ಮಸ್ತಿ ಎಂದು ಸಮಯ ಕಳೆಯುತ್ತಾ ಭವಿಷ್ಯಕ್ಕಾಗಿ ಕೆಲಸ ಮಾಡದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಯುವಕರು ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು, ತಮ್ಮ ಕಾರ್ಯಗಳತ್ತ ಗಮನವನ್ನು ಹರಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ