ಹಚ್ಚಹಸಿರಾದ ವನರಾಶಿಯ ಸೊಬಗು, ಬೆಟ್ಟದ ಮೇಲೆ ದುರ್ಗಾದೇವಿ ದೇವಾಲಯ

ಕೃಷ್ಣನಗರಿ ಉಡುಪಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದೇ ಸಾಲು ಸಾಲು ದೇವಾಲಯಗಳ ಚಿತ್ರಣ. ಹೌದು, ದೇವಾಲಯಗಳ ತವರು ಎಂದೇ ಕರೆಯಲ್ಪಡುವ ಉಡುಪಿಯಲ್ಲಿ ಹಚ್ಚಹಸಿರಿನ ಪರಿಸರದ ನಡುವೆ ದುರ್ಗಾ ದೇವಿ ನೆಲೆ ನಿಂತಿದ್ದಾಳೆ. ಈ ಗಿರಿದುರ್ಗೆ ನೆಲೆ ನಿಂತ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಇರುವುದು ಎಲ್ಲಿ ಹಾಗೂ ಏನಿದರ ವಿಶೇಷ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಚ್ಚಹಸಿರಾದ ವನರಾಶಿಯ ಸೊಬಗು, ಬೆಟ್ಟದ ಮೇಲೆ ದುರ್ಗಾದೇವಿ ದೇವಾಲಯ
ಕುಂಜಾರುಗಿರಿಯ ದುರ್ಗಾದೇವಿ ದೇವಾಲಯ

Updated on: Oct 04, 2025 | 4:27 PM

ಹಚ್ಚಹಸಿರಿನ ಸೊಬಗು, ನಡುವೆ ಕಿರಿದಾದ ರಸ್ತೆ ಹಾಗೂ ಎತ್ತರದ ಬೆಟ್ಟ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಯಾರಾದ್ರೂ ತಲೆ ಬಾಗಲೇ ಬೇಕು. ಮನಸ್ಸಿಗೆ ನೆಮ್ಮದಿಯೆನಿಸುವ ಈ ತಾಣಕ್ಕೆ ಬಂದರೆ ಸ್ವರ್ಗಕ್ಕೆ ಕಾಲಿಟ್ಟ ಅನುಭವವಾಗುವುದಂತೂ ಖಂಡಿತ. ಸೌಂದರ್ಯವೇ ಹೊದ್ದು ಮಲಗಿದಂತಿರುವ ಕುಂಜಾರುಗಿರಿ (Kunjarugiri) ಪ್ರದೇಶದಲ್ಲಿ ದುರ್ಗಾದೇವಿ (Durga Devi Temple) ನೆಲೆ ನಿಂತಿದ್ದು ಭಕ್ತವೃಂದವನ್ನು ಪೊರೆಯುತ್ತಿದ್ದಾಳೆ. ಹಾಗಾದರೆ ಈ ಪುಣ್ಯಕ್ಷೇತ್ರ ಉಡುಪಿಯಿಂದ ಎಷ್ಟು ದೂರದಲ್ಲಿದೆ? ಈ ಕ್ಷೇತ್ರಕ್ಕೆ ತಲುಪುವುದು ಹೇಗೆ? ಈ ಬಗ್ಗೆ ನೀವಿಲ್ಲಿ ತಿಳಿದುಕೊಳ್ಳಬಹುದು.

ದುರ್ಗಾದೇವಿಯ ನೆಲೆ ನಿಂತ ಈ ಪುಣ್ಯ ಕ್ಷೇತ್ರವಿರುವುದೇ ಉಡುಪಿ ಜಿಲ್ಲೆಯ ಶಂಕರಪುರದ ಸಮೀಪವಿರುವ ಕುಂಜಾರುಗಿರಿಯಲ್ಲಿ. ಭೂಮಟ್ಟಕ್ಕಿಂತ 100 ಅಡಿ ಎತ್ತರದಲ್ಲಿ ಗಿರಿದುರ್ಗೆಯೂ ನೆಲೆಸಿದ್ದು, ಹೀಗಾಗಿ ಈ ಬೆಟ್ಟವನ್ನು ದುರ್ಗಾ ಬೆಟ್ಟ, ವಿಮಾನಗಿರಿ ಹೀಗೆ ನಾನಾ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇದೊಂದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ವನರಾಶಿಯಿಂದ ಆವೃತವಾಗಿರುವ ಪವಿತ್ರ ಪುಣ್ಯ ಕ್ಷೇತ್ರವಾಗಿದ್ದು, ನೂರಾರು ಭಕ್ತರು ಇಲ್ಲಿಗೆ ಬಂದು ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.

ಹಚ್ಚಹಸಿರಿನ ಪರಿಸರದ ನಡುವೆ ನೆಲೆ ನಿಂತ ದುರ್ಗಾದೇವಿ

ಇದನ್ನೂ ಓದಿ
ಮುಸ್ಲಿಂ ವಾಸ್ತು ಶಿಲ್ಪಿ ನಿರ್ಮಿಸಿದ ದೇವಾಲಯವಿದು
ಬಾವಲಿಗೆ ಪೂಜೆ ಮಾಡುವ ಗ್ರಾಮವಿದು
ಈ ಸುಂದರ ಸಂಸ್ಕೃತ ಗ್ರಾಮಕ್ಕೆ ಒಮ್ಮೆಯಾದರೂ ನೀವು ಭೇಟಿ ನೀಡಲೇಬೇಕು
ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”

ಪೂರ್ವಾಭಿಮುಖವಾಗಿ ಈ ದೇವಾಲಯವು ನಿರ್ಮಾಣಗೊಂಡಿದ್ದು ಗರ್ಭಗೃಹ, ತೀರ್ಥ ಮಂಟಪ, ಪ್ರಾಕಾರ ಮಂಟಪ, ಚಂದ್ರಶಾಲೆ, ಬಲಿಪೀಠ ಹಾಗೂ ಧ್ವಜಸ್ತಂಭವನ್ನು ಒಳಗೊಂಡಿದೆ. ಗರ್ಭಗೃಹದ ಅಧಿಷ್ಠಾನವು ಎತ್ತರವಾಗಿದ್ದು, ಗರ್ಭಗೃಹದ ಒಳಗೆ ಪಾಣಿಪೀಠದ ಮೇಲೆ ಚತುರ್ಭುಜಧಾರಿ ದೇವಿಯೂ ನೆಲೆ ನಿಂತಿದ್ದಾಳೆ. ದೇವಿಯ ಮೇಲಿನ ಕೈಗಳಲ್ಲಿ ಶಂಖ-ಚಕ್ರ ಹಾಗೂ ಕೆಳಗಿನ ಕೈಗಳಲ್ಲಿ ತ್ರಿಶೂಲ ಮತ್ತು ಬಿಲ್ಲುಗಳಿವೆ. ಬಲಗಾಲಿನ ಬಳಿ ಮಹಿಷನ ಶಿರವಿದ್ದು, ಆತನನ್ನು ಶೂಲದಿಂದ ಇರಿಯುವಂತೆ ಕೆತ್ತಲಾಗಿದೆ.

ಪರಶುರಾಮನಿಗೂ ಈ ದೇವಸ್ಥಾನಕ್ಕೂ ಇದೆ ನಂಟು

ಪುರಾಣದ ಕಥೆಯ ಪ್ರಕಾರವಾಗಿ ಕುಂಜಾರುಗಿರಿಯ ದುರ್ಗೆಯನ್ನು ಪರಶುರಾಮನು ಪ್ರತಿಷ್ಠಾಪಿಸಿ ಪೂಜಿಸಿದನು ಎನ್ನಲಾಗಿದೆ. ಇನ್ನು ಈ ಬೆಟ್ಟದ ಪೂರ್ವ ದಿಕ್ಕಿನಲ್ಲಿರುವ ಪರಶು ತೀರ್ಥ, ಪಶ್ಚಿಮ ದಿಕ್ಕಿನಲ್ಲಿರುವ ಗದಾ ತೀರ್ಥ, ಉತ್ತರದಲ್ಲಿರುವ ಬಾಣ ತೀರ್ಥ ಮತ್ತು ದಕ್ಷಿಣದಲ್ಲಿರುವ ಧನುಸ್ ತೀರ್ಥಗಳು ಪರಶುರಾಮನ ಸೃಷ್ಟಿ ಎನ್ನಲಾಗಿದೆ.

ಇದನ್ನೂ ಓದಿ:ಮುಸ್ಲಿಂ ವಾಸ್ತು ಶಿಲ್ಪಿ ನಿರ್ಮಿಸಿದ ದೇವಾಲಯವಿದು, ಲಿಂಗರೂಪದಲ್ಲಿ ನೆಲೆನಿಂತ ಬ್ರಾಹ್ಮಿ ದುರ್ಗಾ ಪರಮೇಶ್ವರಿ

 

ಇಲ್ಲಿಗೆ ತಲುಪುವುದು ಹೇಗೆ?

ಕುಂಜಾರುಗಿರಿಯು ಉಡುಪಿಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ.ಕಟಪಾಡಿಯಿಂದ 5 ಕಿಮೀ ದೂರ, ಸುಭಾಸನಗರ ಅಥವಾ ಕುಂಜಾರುಗಿರಿ ಕ್ರಾಸ್ ರಸ್ತೆಯಿಂದ 2 ಕಿಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ನಿಯಮಿತ ಬಸ್ಸುಗಳಿದ್ದರೂ ನಿಮ್ಮ ಬಳಿ ಸ್ವಂತ ವಾಹನವಿದ್ದರೆ ಸುಲಭವಾಗಿ ಈ ಸ್ಥಳಕ್ಕೆ ತೆರಳಬಹುದು. ಇನ್ನು, ಕುಂಜಾರುಗಿರಿ ಕ್ರಾಸ್ ರಸ್ತೆಯಿಂದ ಆಟೋ ಮಾಡಿಸಿಕೊಂಡು ಹೋದರೆ ಈ ದೇವಸ್ಥಾನವನ್ನು ತಲುಪಬಹುದು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ