ಪಹಲ್ಗಾಮ್ನ ಸ್ಥಳೀಯ ಜನ ತುಂಬಾನೇ ಫ್ರೆಂಡ್ಲಿ ಆಗ್ತಿದ್ರು; ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಮಂಗಳೂರಿನ ದಂಪತಿ
ಪ್ರವಾಸ ಎಂದ ತಕ್ಷಣ ಎಲ್ಲರೂ ಹೋಗ ಬಯಸುವುದೇ ಭೂಮಿಯ ಮೇಲಿನ ಸ್ವರ್ಗ ಎಂದೇ ಜನಪ್ರಿಯವಾಗಿರುವ ಕಾಶ್ಮೀರ. ಅದೆಷ್ಟೋ ರೊಮ್ಯಾಂಟಿಕ್ ತಾಣಗಳು ಇಲ್ಲಿದ್ದು, ಇದೇ ಕಾರಣಕ್ಕೆ ನವ ದಂಪತಿಗಳು ಹೆಚ್ಚಾಗಿ ಇಲ್ಲಿಗೆಯೇ ಪ್ರವಾಸ ಹೋಗಲು ಇಷ್ಟಪಡ್ತಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನವ ದಂಪತಿಗಳಿಬ್ಬರು ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಮೊನ್ನೆ ಉಗ್ರರ ದಾಳಿ ನಡೆದ ಬೈಸರಾನ್ ಕಣಿವೆ ಪ್ರದೇಶಕ್ಕೂ ಮೂರು ವಾರಗಳ ಹಿಂದೆಯಷ್ಟೆ ಈ ದಂಪತಿ ಭೇಟಿ ನೀಡಿದ್ದು, ಅಲ್ಲಿ ತಮಗಾದ ಅನುಭವ ಹೇಗಿತ್ತು ಎಂಬುದನ್ನು ಟಿವಿ9 ಕನ್ನಡದ ಹಂಚಿಕೊಂಡಿದ್ದಾರೆ.
ಹಿಮ ಪರ್ವತಗಳು, ಹಚ್ಚ ಹಸಿರಿನಿಂದ ಕೂಡಿದ ಮರ ಗಿಡಗಳು, ಸುಂದರ ಸರೋವರಗಳಿಂದ ಕೂಡಿದ ಕಾಶ್ಮೀರ (Kashmir) ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲೆಂದೇ ಅದೆಷ್ಟೋ ಪ್ರವಾಸಿಗರು ಇಲ್ಲಿನ ಸೋನಾಮಾರ್ಗ್, ಗುಲ್ಮಾರ್ಗ್, ಪಹಲ್ಗಾಮ್ (Pahalgam) ಸೇರಿದಂತೆ ಇಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾರೆ. ಅದೆಷ್ಟೋ ರೊಮ್ಯಾಂಟಿಕ್ ತಾಣಗಳು ಇಲ್ಲಿದ್ದು, ಇದೇ ಕಾರಣಕ್ಕೆ ನವ ದಂಪತಿಗಳು ಹೆಚ್ಚಾಗಿ ಇಲ್ಲಿಗೆಯೇ ಹನಿಮೂನ್ (Honeymoon) ಹೋಗಲು ಇಷ್ಟಪಡ್ತಾರೆ. ಇತ್ತೀಚಿಗಷ್ಟೇ ಮದುವೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಹೇಮ್ಚಂದ್ರ ಮತ್ತು ವಿದ್ಯಾಶ್ರೀ ದಂಪತಿ ಕೂಡಾ ಮೂರು ವಾರಗಳ ಹಿಂದೆಯಷ್ಟೇ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಮೊನ್ನೆಯಷ್ಟೇ ಉಗ್ರರ ದಾಳಿ ನಡೆದ ಪಹಲ್ಗಾಮ್ನ ಬೈಸರಾನ್ ಕಣಿವೆ ಪ್ರದೇಶಕ್ಕೂ ಅವರು ಹೋಗಿದ್ದು, ಈ ಪ್ರದೇಶ ಹೇಗಿತ್ತು, ಅಲ್ಲಿನ ಭದ್ರತಾ ವ್ಯವಸ್ಥೆ, ಸ್ಥಳೀಯರು ಹೇಗಿದ್ರು ಎಂಬುದನ್ನು ಹಾಗೂ ತಮ್ಮ ಪ್ರವಾಸದ ಅನುಭವವನ್ನು ಟಿವಿ9 ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ನವ ದಂಪತಿ:
ಹೇಮ್ಚಂದ್ರ ಮತ್ತು ವಿದ್ಯಾಶ್ರೀ ದಂಪತಿ ಮೂರು ವಾರಗಳ ಹಿಂದೆಯಷ್ಟೇ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. 10 ದಿನಗಳ ಟ್ರಿಪ್ ಪ್ಯಾಕೇಜ್ ಮೂಲಕ ಇಲ್ಲಿಗೆ ಪ್ರವಾಸ ಹೋಗಿದ್ದ ಇವರು ಸೋನಾಮಾರ್ಗ್, ಶ್ರೀನಗರಕ್ಕೆ ಹೋಗಿ ಕೊನೆಯ ದಿನ ಪಹಲ್ಗಾಮ್ಗೆ ಭೇಟಿ ನೀಡಿದ್ದರು. ಜೊತೆಗೆ ಉಗ್ರರು ದಾಳಿ ನಡೆಸಿದ ಪಹಲ್ಗಾಮ್ನಲ್ಲಿರುವ ಬೈಸರಾನ್ ಕಣಿವೆ ಪ್ರದೇಶಕ್ಕೂ ಇವರು ಭೇಟಿ ನೀಡಿದ್ದರು. ಇಲ್ಲಿನ ಅನುಭವವನ್ನು ಹಂಚಿಕೊಂಡ ಅವರು ಈ ಸ್ಥಳ ನಿಜಕ್ಕೂ ಮಿನಿ ಸ್ವಿಟ್ಜರ್ಲ್ಯಾಂಡ್ನಂತೆಯೇ ಇದೆ. ಅದರಲ್ಲೂ ಬೈಸರಾನ್ ಕಣಿವೆ ಪ್ರದೇಶ ತುಂಬಾನೇ ಸುಂದರವಾಗಿದೆ. ಇಲ್ಲಿಗೆ ತಲುಪುವುದು ತುಂಬಾನೇ ಕಷ್ಟದಾಯಕ. ಇಲ್ಲಿಗೆ ಯಾವುದೇ ವಾಹನಗಳು ಹೋಗದ ಕಾರಣ ಕುದುರೆ ಸವಾರಿ ಮೂಲಕವೇ ನಾವು ಹೋಗಬೇಕಾಯಿತು. ಗುಲ್ಮಾರ್ಗ್ ಮತ್ತು ಸೋನಾಮಾರ್ಗ್ನಲ್ಲಿ ಅಲ್ಲಲ್ಲಿ ಸೈನಿಕರು ಇದ್ರು. ಪಹಲ್ಗಾಮ್ನಲ್ಲೂ ಸೈನಿಕರು ಇದ್ರು, ಆದ್ರೆ ಬೈಸರಾನ್ ಕಣಿವೆಯಲ್ಲಿ ಮಾತ್ರ ಸೆಕ್ಯುರಿಟಿಗಿಂತ ಬರೀ ಪ್ರವಾಸಿಗರು ಮತ್ತು ಸ್ಥಳೀಯರೇ ತುಂಬಿದ್ರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭೂಮಿಯ ಮೇಲಿನ ಸ್ವರ್ಗ ಈ ʼಪಹಲ್ಗಾಮ್ʼ
ನಮ್ಮ ಕ್ಯಾಬ್ ಡ್ರೈವರ್ ಕಾಶ್ಮೀರದ ಇತರ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿನ ಜನ ತುಂಬಾನೇ ಒಳ್ಳೆಯವರು ಅಂತ ಹೇಳಿದ್ರು. ಅವರ ಮಾತಿನಂತೆ ಪಹಲ್ಗಾಮ್ನ ಜನ ತುಂಬಾನೇ ಫ್ರೆಂಡ್ಲಿ ಆಗಿದ್ರು. ಇಲ್ಲಿನ ಸುಂದರ ತಾಣಗಳನ್ನು ನೋಡಿ ಇನ್ನೊಂದು ಬಾರಿ ಕಾಶ್ಮೀರಕ್ಕೆ ಪ್ರವಾಸ ಹೋಗ್ಬೇಕು ಎಂದು ಭಾವಿಸಿದ್ದೆವು. ಆದರೆ ಮೊನ್ನೆ ನಡೆದ ಆಘಾತಕಾರಿ ಘಟನೆಯನ್ನು ನೋಡಿ ತುಂಬಾನೇ ಶಾಕ್ ಆಗಿದ್ದು, ಆ ಸ್ಥಳಕ್ಕೆ ಹೋಗಲು ಭಯ ಶುರುವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಪಹಲ್ಗಾಮ್ನಲ್ಲಿರುವ ಬೈಸರಾನ್ ಕಣಿವೆ ಪ್ರದೇಶದ ಸುಂದರ ದೃಶ್ಯವನ್ನು ವಿದ್ಯಾಶ್ರೀ (vidyashri_acharya) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಶೇರ್ ಮಾಡಿಕೊಂಡಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ