Republic Day 2026: ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮಗಳೇನು?
77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿದೆ. ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಶಾಲಾ-ಕಾಲೇಜು, ಸರ್ಕಾರಿ, ಸರ್ಕಾರೇತರ ಕಚೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಸಹ ನೆರವೇರಿಸಲಾಗುತ್ತದೆ. ಹೀಗಿರುವಾಗ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಿಸುವಾಗ ಮತ್ತು ಇಳಿಸುವಾಗ ಕೆಲವೊಂದು ನಿಮಯಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಅವು ಯಾವುವು ಎಂಬುದನ್ನು ತಿಳಿಯಿರಿ.

ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು (Republic Day) ಸಹ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ 77 ನೇ ಗಣರಾಜ್ಯೋತ್ಸವದ ಆಚರಣೆಗೂ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಈ ದಿನದಂದು, ಶಾಲಾ ಕಾಲೇಜುಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಆದ್ದರಿಂದ, ತ್ರಿವರ್ಣ ಧ್ವಜಕ್ಕೆ ಅವಮಾನವಾಗದಂತೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಬೇಕಾಗುತ್ತದೆ. ಮತ್ತು ಮುಖ್ಯವಾಗಿ ದೇಶದ ಪ್ರತಿಯೊಬ್ಬರೂ ಸಹ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಮತ್ತು ಇಳಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಯಲೇಬೇಕು.
ತ್ರಿವರ್ಣ ಧ್ವಜವನ್ನು ಹಾರಿಸುವಾಗ, ಇಳಿಸುವಾಗ ಪಾಲಿಸಬೇಕಾದ ನಿಯಮಗಳೇನು?
- ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು ಮತ್ತು ಘನತೆಯಿಂದ ನಿಧಾನವಾಗಿ ಕೆಳಗಿಳಿಸಬೇಕು. ಕೆಳಗಿಳಿಸಿದ ನಂತರ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
- ತ್ರಿವರ್ಣ ಧ್ವಜವನ್ನು ಎಂದಿಗೂ ತಲೆ ಕೆಳಗಾಗಿ ಪ್ರದರ್ಶಿಸಬಾರದು. ಮೇಲಿನ ಫಲಕದ ಬಣ್ಣವು ಕೇಸರಿ, ಮಧ್ಯ ಬಿಳಿ ಮತ್ತು ಕೆಳಗಿನ ಫಲಕವು ಹಸಿರು ಬಣ್ಣದ್ದಾಗಿರಬೇಕು.
- ಪ್ರದರ್ಶನದಲ್ಲಿರುವ ತ್ರಿವರ್ಣ ಧ್ವಜವು ಗೌರವದ ಸ್ಥಾನದಲ್ಲಿರುವಂತೆ ನೋಡಿಕೊಳ್ಳಿ.
- ಹಾನಿಗೊಳಗಾದ ಅಥವಾ ಸ್ವಚ್ಛವಾಗಿರದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ನೀವು ಹಾರಿಸುವ ರಾಷ್ಟ್ರ ಧ್ವಜ ಪರಿಪೂರ್ಣ ಸ್ಥಿತಿಯಲ್ಲಿ ಇರಬೇಕು.
- ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೇಯ್ದ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇಷ್ಮೆ ಖಾದಿ ಬಂಟಿಂಗ್ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಹಾರಿಸಬಹುದು.
- ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ಮತ್ತು ಧ್ವಜದ ಮಧ್ಯ ಭಾಗವು 24 ಸಮಾನ ಅಂತರದ ಗೆರೆಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು.
- ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಿರಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರನ್ನು ಮುಟ್ಟದಂತೆ ನೋಡಿಕೊಳ್ಳಿ.
- ಒಂದು ವೇಳೆ ತ್ರಿವರ್ಣ ಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
- ಧ್ವಜವನ್ನು ಸಾರ್ವಜನಿಕವಾಗಿ ಉದ್ದೇಶಪೂರ್ವಕವಾಗಿ ಹರಿದು ಹಾಕಬಾರದು, ಸುಡಬಾರದು ಅಥವಾ ವಿರೂಪಗೊಳಿಸಬಾರದು, ಏಕೆಂದರೆ ಇದು ಅಪರಾಧವಾಗಿದೆ.
ಇದನ್ನೂ ಓದಿ: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಈ ಕುರಿತ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ
ಗಣರಾಜ್ಯೋತ್ಸವದ ದಿನ ಜವಾಬ್ದಾರಿಯುತ ಪ್ರಜೆಯಾಗಿ ನೀವು ಏನು ಮಾಡಬೇಕು?
- ತ್ರಿವರ್ಣ ಧ್ವಜಕ್ಕೆ ಅಗೌರವ ತೋರಬೇಡಿ.
- ದೇಶಭಕ್ತಿಯನ್ನು ಅಣಕಿಸಬೇಡಿ. ನಕಲಿ ಸುದ್ದಿ, ಪ್ರಚೋದನಕಾರಿ ಪೋಸ್ಟ್ಗಳು ಅಥವಾ ರಾಜಕೀಯ ವಿಡಂಬನೆಯನ್ನು ತಪ್ಪಿಸಿ.
- ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ. ಏಕೆಂದರೆ ರ್ಯಾಲಿ ಅಥವಾ ಆಚರಣೆಯ ಹೆಸರಿನಲ್ಲಿ ಧ್ವಂಸ ಮಾಡುವುದು ದೇಶಭಕ್ತಿಯಲ್ಲ.
- ಇದು ಕೇವಲ ರಜಾದಿನ ಎಂದು ಭಾವಿಸಿ ದಿನವನ್ನು ವ್ಯರ್ಥ ಮಾಡಬೇಡಿ. ಇದು ರಾಷ್ಟ್ರೀಯ ಪ್ರಜ್ಞೆಯ ದಿನ. ಆದ್ದರಿಂದ ಮಕ್ಕಳಿಗೆ ದೇಶಭಕ್ತಿಯ ವಿಚಾರಗಳ ಬಗ್ಗೆ ತಿಳಿಸಿಕೊಡಿ.
- ಮದ್ಯಪಾನ ಅಥವಾ ಅವ್ಯವಸ್ಥೆಯ ನಡವಳಿಕೆಯನ್ನು ತಪ್ಪಿಸಿ. ಏಕೆಂದರೆ ಈ ದಿನವು ಸಂಯಮ, ಘನತೆ ಮತ್ತು ಶಿಸ್ತನ್ನು ಸಂಕೇತಿಸುತ್ತದೆ.
- ಸಾಮಾಜಿಕ ಮಾಧ್ಯಮದಲ್ಲಿ ದೇಶಭಕ್ತಿಯ ವಿಷಯವನ್ನು ಚಿಂತನಶೀಲವಾಗಿ ಹಂಚಿಕೊಳ್ಳಿ. ಸ್ಪೂರ್ತಿದಾಯಕ ಆಲೋಚನೆಗಳು, ಸಾಂವಿಧಾನಿಕ ಸಂಗತಿಗಳು ಅಥವಾ ಐತಿಹಾಸಿಕ ಮಾಹಿತಿಯನ್ನು ಹಂಚಿಕೊಳ್ಳಿ.
- ಕನಿಷ್ಠ ಪಕ್ಷ ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದಿ. ಮಕ್ಕಳು ಮತ್ತು ಯುವಕರಿಗೆ ಅದರ ಅರ್ಥ ಮತ್ತು ಮಹತ್ವವನ್ನು ಸರಳ ಭಾಷೆಯಲ್ಲಿ ವಿವರಿಸಿ, ಇದರಿಂದ ಅವರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ತಿಳಿಯುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




