AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠಾತ್ ಆಗಿ ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್

ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಮರಣಗಳಿಗೆ ಕೋವಿಡ್-19 ಲಸಿಕೆ ಕಾರಣವಾಗಿರಬಹುದೇ? ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ. ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ? ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು? ಎಂಬುದನ್ನು ತಿಳಿದುಕೊಳ್ಳಿ.

ಹಠಾತ್ ಆಗಿ ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್
Covid Vaccine And Sudden Deaths
ಪ್ರೀತಿ ಭಟ್​, ಗುಣವಂತೆ
|

Updated on: Mar 06, 2026 | 3:29 PM

Share

ಇತ್ತೀಚಿಗೆ ಭಾರತದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಮರಣಗಳಿಗೆ ಕೋವಿಡ್- 19 ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಏನೂ ಅರಿಯದ ಜನ ಇದನ್ನು ಸತ್ಯ ಎಂದು ನಂಬಿದ್ದಾರೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಂಯುಕ್ತವಾಗಿ ನಡೆಸಿದ ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಇದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ (Kshemavana) ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ (Dr Narendra K Shetty) ಅವರು ಹಂಚಿಕೊಂಡಿದ್ದಾರೆ.

ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ?

ಡಾ. ನರೇಂದ್ರ ಕೆ ಶೆಟ್ಟಿ ಹೇಳುವ ಪ್ರಕಾರ, ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಕೋವಿಡ್- 19 ಲಸಿಕೆ ಮತ್ತು ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಮರಣಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ವಿಶ್ಲೇಷಿಸಿದೆ. ಬದಲಾಗಿ, ಯುವಜನರಲ್ಲಿ ಕಾಣಿಸಿಕೊಳ್ಳುವ ಆಕಸ್ಮಿಕ ಹೃದಯಾಘಾತ ಮತ್ತು ಹಠಾತ್ ಆಗಿ ಸಂಭವಿಸುವ ಸಾವು (Sudden Cardiac Death – SCD) ಅನೇಕ ಕಾರಣಗಳಿಂದ ಉಂಟಾಗುತ್ತಿರಬಹುದು ಎಂದು ವಿವರಿಸಿದೆ. ಪಾಶ್ಚಾತ್ಯ ದೇಶಗಳಲ್ಲಿ ನಡೆದ ಹಲವು ಅಧ್ಯಯನಗಳು ಹೃದಯ ಸ್ನಾಯುಕೋಶದ ರೋಗಗಳು (ಕಾರ್ಡಿಯೊಮಯೋಪಥಿಗಳು) ಮತ್ತು ಹೃದಯದ ವಿದ್ಯುದ್ವಿಚಲನ ವ್ಯತ್ಯಯಗಳು (ಅರಿದಮಿಯಾಸ್) ಯುವಜನತೆಯಲ್ಲಿ ಹೆಚ್ಚುತ್ತಿರುವ ಪ್ರಮುಖ ಕಾರಣಗಳೆಂದು ಗುರುತಿಸಿವೆ. ಆದರೆ ಭಾರತೀಯ ಪರಿಸ್ಥಿತಿಯಲ್ಲಿ ಇಂತಹ ಸಮಗ್ರ ಅಧ್ಯಯನಗಳ ಕೊರತೆ ಇತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ AIIMS– ICMR ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಅಧ್ಯಯನದಲ್ಲಿ ಪ್ರಾಥಮಿಕವಾಗಿ ಕಂಡುಬಂದ ಮಾಹಿತಿಗಳು, ಬದಲಾಯಿಸಲಾಗದ ಕಾರಣಗಳ ಜೊತೆಗೆ ಬದಲಾಯಿಸಬಹುದಾದ ಜೀವನಶೈಲಿ ಅಂಶಗಳು ಯುವಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಇದನ್ನೂ ಓದಿ: ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ

ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು?

ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಅಸಮರ್ಪಕ ನಿದ್ರೆ ಮತ್ತು ನಿರಂತರ ಮಾನಸಿಕ ಒತ್ತಡವು ಯುವಜನರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಮದ್ಯಪಾನ ಮತ್ತು ಧೂಮಪಾನವು ಕೊರೊನರಿ ಆರ್ಟರಿ ರೋಗ, ಹೃದಯಾಘಾತ (ಮೈಕಾರ್ಡಿಯಲ್ ಇನ್ಫಾರ್ಕ್ಷನ್) ಮತ್ತು ಹೃದಯ ಬಡಿತದ ಅಸಮತೋಲನಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದೀರ್ಘಕಾಲದ ಕೆಲಸ, ನಿರ್ದಿಷ್ಟ ಸಮಯವನ್ನು ಕೆಲಸಕ್ಕೆ ಇಡದಿರುವುದು ಮತ್ತು ಕೆಲಸದ ಒತ್ತಡವು ಹೃದಯ ರಕ್ತನಾಳ ಸಂಬಂಧಿತ ಸಂಕೀರ್ಣತೆಗಳನ್ನು ಉಂಟುಮಾಡುತ್ತವೆ. ಮಧ್ಯವಯಸ್ಕರಿಗೆ ಹೋಲಿಸಿದರೆ, ಹೃದಯಾಘಾತಕ್ಕೆ ಒಳಗಾಗುವ ಯುವ ವಯಸ್ಕರು ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸಿರುವುದು ವರದಿಯಲ್ಲಿ ಬಹಿರಂಗವಾಗಿದ್ದು, ಒತ್ತಡ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ದಾರಿ ಮಾಡಿಕೊಡುವ ಪ್ರಮುಖ ಕಾರಣ ಎಂಬುದು ತಿಳಿದು ಬಂದಿದೆ.

ಲಸಿಕೆಗಳ ಕುರಿತು ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಮಾತ್ರವಲ್ಲದೆ, ತಡೆಗಟ್ಟಬಹುದಾದ ಅಪಾಯಕಾರಕ ಅಂಶಗಳತ್ತ ಗಮನ ಹರಿಸಬೇಕಾಗಿದೆ. ಅದಕ್ಕಾಗಿಯೇ ಯುವಜನರಲ್ಲಿ ಮುಂಚಿತ ತಪಾಸಣೆ, ಆರೋಗ್ಯಕರ ಜೀವನಶೈಲಿಯ ಅಳವಡಿಕೆ, ಸಕಾರಾತ್ಮಕ ಕೆಲಸದ ವಾತಾವರಣ ನಿರ್ಮಾಣ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಅಕಾಲಿಕ ಮರಣಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಭಾರತದಲ್ಲಿ ಯುವ ವಯಸ್ಕರ ಆಕಸ್ಮಿಕ ಮರಣಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಇಂತಹ ಅಧ್ಯಯನಗಳ ಆಧಾರದ ಮೇಲೆ ರೂಪುಗೊಳ್ಳುವ ಸ್ಪಷ್ಟ ಉತ್ತರ ಯುವಜನರ ಅಮೂಲ್ಯ ಜೀವಗಳನ್ನು ರಕ್ಷಿಸಲು ಸಹಾಯಕವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us