
ನಮ್ಮ ಸಂಪ್ರದಾಯದ ಪ್ರಕಾರ, ಸಂಜೆ ವಿಶೇಷವಾಗಿ ಸೂರ್ಯಾಸ್ತದ ನಂತರ, ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸಿ ಸಂಪತ್ತು ಮತ್ತು ಸಮೃದ್ಧಿಯನ್ನು ಸ್ಥಾಪಿಸುವ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕಸ ತೆಗೆಯುವುದು ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವಂತಹ ಕೆಲಸಗಳನ್ನು ಅಶುಭ ಹೇಳಲಾಗುತ್ತದೆ ಮತ್ತು ಇದು ದುರದೃಷ್ಟವನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಪ್ರತಿ ನಂಬಿಕೆಗಳ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಇಂತಹ ನಂಬಿಕೆಗಳಲ್ಲಿ ಸೂರ್ಯಾಸ್ತದ ನಂತರ ಉಗುರು (nails) ಕತ್ತರಿಸಬಾರದು ಎಂಬುದು ಸಹ ಒಂದು. ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಿದರೆ ಹಿರಿಯರು ಗದರುವುದನ್ನು ನೀವು ನೋಡಿರುತ್ತೀರಿ ಅಲ್ವಾ. ಅಷ್ಟಕ್ಕೂ ರಾತ್ರಿ ಏಕೆ ಉಗುರು ಉಗುರು ಕತ್ತರಿಸಬಾರದು, ಅದರ ಹಿಂದಿರುವ ನೈರ್ಮಲ್ಯ, ಆರೋಗ್ಯ ಮತ್ತು ವೈಜ್ಞಾನಿಕ ಕಾರಣವಾದರೂ ಏನು ಎಂಬುದನ್ನು ತಪ್ಪದೇ ತಿಳಿಯಿರಿ.
ರಾತ್ರಿ ಉಗುರು ಕತ್ತರಿಸಬಾರದಂತೆ ಮನೆಯ ಹಿರಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಇದರ ಹಿಂದಿನ ಮುಖ್ಯ ಕಾರಣವೆಂದರೆ ಪ್ರಾಚೀನ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ರಾತ್ರಿಯಲ್ಲಿ ಬೆಳಕು ಸಹ ತುಂಬಾ ಕಡಿಮೆ ಇತ್ತು, ಸೀಮೆಎಣ್ಣೆ ದೀಪಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿತ್ತು. ಅಲ್ಲದೆ ಆ ಸಮಯದಲ್ಲಿ, ಇಂದು ಲಭ್ಯವಿರುವ ಆಧುನಿಕ ನೈಲ್ ಕಟರ್ಗಳೂ ಇರಲಿಲ್ಲ. ಅಗೆಲ್ಲಾ ಸಾಮಾನ್ಯವಾಗಿ ಉಗುರುಗಳನ್ನು ಕತ್ತರಿಸಲು ಚಾಕುಗಳು ಅಥವಾ ಚೂಪಾದ ವಸ್ತುಗಳನ್ನು ಬಳಸುತ್ತಿದ್ದರು. ಹೀಗಿರುವಾಗ ರಾತ್ರಿ ಸಮಯದಲ್ಲಿ ಕಡಿಮೆ ಬೆಳಕಿನಲ್ಲಿ ಉಗುರು ಕತ್ತರಿಸಿದರೆ ಬೆರಳಿಗೆ ಗಾಯವಾಗುವ ಸಾಧ್ಯತೆ ಹೆಚ್ಚು. ರಾತ್ರಿಯಲ್ಲಿ ಗಾಯವಾದರೆ, ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿತ್ತು. ಇದಲ್ಲದೆ ಕತ್ತರಿಸಿದ ಉಗುರಿನ ತುಂಡುಗಳು ಕೆಳಗೆ ಬಿದ್ದರೆ, ಅವುಗಳನ್ನು ಸಂಗ್ರಹಿಸಿ ಕತ್ತಲೆಯಲ್ಲಿ ಸರಿಯಾಗಿ ವಿಲೇವಾರಿ ಮಾಡುವುದು ಕಷ್ಟಕರವಾಗಿತ್ತು. ಹೀಗೆ ಆರಂಭದಲ್ಲಿ ರಾತ್ರಿ ಉಗುರು ಕತ್ತರಿಸಬಾರದು ಎನ್ನುವುದಕ್ಕೆ ಮುಖ್ಯ ಕಾರಣ ಸುರಕ್ಷತೆ ಮತ್ತು ಸ್ವಚ್ಛತೆಯ ದೃಷ್ಟಿಕೋನವಾಗಿತ್ತು. ಕಾಲಾನಂತರದಲ್ಲಿ, ಜನರು ಇದನ್ನು ಸರಿಯಾಗಿ ಅನುಸರಿಸಲು ಆಧ್ಯಾತ್ಮಿಕ ವಿವರಣೆಗಳು ಮತ್ತು ಕಥೆಗಳನ್ನು ಸೇರಿಸಲಾಯಿತು.
ದಿನವಿಡೀ ಕೆಲಸ ಮಾಡುವುದರಿಂದ ನಿಮ್ಮ ಉಗುರುಗಳ ಒಳಗೆ ಕೊಳಕು, ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಸಿಕ್ಕಿಹಾಕಿಕೊಳ್ಳುತ್ತವೆ. ಹೀಗಿರುವಾಗ ರಾತ್ರಿಯಲ್ಲಿ ನಿಮ್ಮ ಕೈಗಳನ್ನು ತೊಳೆಯದೆ ಉಗುರುಗಳನ್ನು ಕತ್ತರಿಸಿದಾಗ, ಆ ತುಂಡುಗಳು ಬೆಡ್ ಶೀಟ್ಗಳು, ಸೋಫಾ ಅಥವಾ ನೆಲದ ಮೇಲೆ ಬಿದ್ದು ಸೂಕ್ಷ್ಮಜೀವಿಗಳು ಹರಡುವ ಅಪಾಯವಿರುತ್ತದೆ. ಅಲ್ಲದೆ ಕತ್ತರಿಸಿದ ಉಗುರುಗಳು ಆಹಾರ ಅಥವಾ ಇತರ ವಸ್ತುಗಳೊಂದಿಗೆ ಬೆರೆತು ಅದು ಕೂಡ ಸೋಂಕಿಗೆ ಕಾರಣವಾಗಬಹುದು. ಹಗಲು ಹೊತ್ತಿನಲ್ಲಿ ಉಗುರು ಕತ್ತರಿಸಿದರೆ, ಅವುಗಳನ್ನು ವಿಲೇವಾರಿ ಮಾಡಲು ಸುಲಭವಾಗುತ್ತದೆ. ಹಾಗಾಗಿ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು. ಆಯುರ್ವೇದದ ಪ್ರಕಾರ, ಚಂದ್ರನ ಶಕ್ತಿಯು ರಾತ್ರಿಯಲ್ಲಿ ಅತ್ಯಂತ ಬಲವಾಗಿರುತ್ತದೆ ಮತ್ತು ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ದೇಹದ ಆಂತರಿಕ ಸಮತೋಲನಕ್ಕೆ ಅಡ್ಡಿಯಾಗುತ್ತದೆ ಮತ್ತು ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಭಯಗೊಂಡಾಗ ಕೈ ಕಾಲುಗಳು ನಡುಗುವುದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?
ನಮ್ಮ ಉಗುರುಗಳು ಕೆರಾಟಿನ್ ನಿಂದ ಮಾಡಲ್ಪಟ್ಟಿದೆ. ಆದ್ದರಿಂದ, ಸ್ನಾನದ ನಂತರ ನಿಮ್ಮ ಉಗುರುಗಳನ್ನು ಕತ್ತರಿಸುವುದು ಉತ್ತಮ, ಏಕೆಂದರೆ ಈ ಸಮಯದಲ್ಲಿ ಉಗುರುಗಳು ನೀರಿನಲ್ಲಿ ನೆನೆದಿರುವ ಕಾರಣ ಅವುಗಳನ್ನು ಕತ್ತರಿಸಲು ಸುಲಭವಾಗುತ್ತದೆ. ಇದಲ್ಲದೆ ಬೆಳಗಿನ ಸಮಯದಲ್ಲಿ ಉಗುರುಗಳನ್ನು ಸೌಮ್ಯವಾದ ಎಣ್ಣೆ ಅಥವಾ ನೀರಿನಲ್ಲಿ ನೆನೆಸಿ, ಉಗುರು ಮೃದುವಾದ ನಂತರ ಉಗುರು ಕತ್ತರಿಸಿ. ಉಗುರಿ ಕತ್ತರಿಸಿದ ಬಳಿಕ ಕೈಗಳನ್ನು ತೊಳೆದುಕೊಳ್ಳಿ. ಕೈ ಒಣಗಿದ ಬಳಿಕ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ಹಚ್ಚಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ