
ಬಹಳ ಹಿಂದಿನಿಂದಲೂ ಕಲ್ಲಿದ್ದಲು, ತೈಲದಂತಹ ಪಳೆಯುಳಿಕೆ ಇಂಧನಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದಾಗಿ ಇಂಧನ ಮೂಲಗಳು ಕ್ಷೀಣಿಸುತ್ತಿರುವುದಲ್ಲದೆ, ಈ ಇಂಧನಗಳ ಅತಿಯಾದ ಬಳಕೆ ಪರಿಸರಕ್ಕೂ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತಿವೆ. ಹೌದು ಇವುಗಳ ಅನಿಯಂತ್ರಿತ ಬಳಕೆ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ವಾಯು ಮಾಲಿನ್ಯ, ಹಸಿರು ಮನೆ ಅನಿಲದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಹಾಗಾಗಿ ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಿ, ಪರಿಸರಸ್ನೇಹಿಯಾದ ಜೈವಿಕ ಇಂಧನದ (biofuels) ಬಳಕೆಯನ್ನು ಉತ್ತೇಜಿಸಲು ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೈವಿಕ ಇಂಧನ ಬಳಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ.
ಜೈವಿಕ ಇಂಧನಗಳ ಮಹತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅವುಗಳ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಡೀಸೆಲ್ ಎಂಜಿನ್ನ ಸಂಶೋಧಕ ಸರ್ ರುಡಾಲ್ಫ್ ಡೀಸೆಲ್ ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಆಗಸ್ಟ್ 8, 1893 ರಂದು, ಸರ್ ಡೀಸೆಲ್ ಮೊದಲ ಬಾರಿಗೆ ಕಡಲೆಕಾಯಿ ಎಣ್ಣೆಯನ್ನು ಯಾಂತ್ರಿಕ ಎಂಜಿನ್ಗೆ ಶಕ್ತಿ ತುಂಬಲು ಯಶಸ್ವಿಯಾಗಿ ಬಳಸಿದರು. ಇದು ಭವಿಷ್ಯದಲ್ಲಿ ಸಸ್ಯಜನ್ಯ ಎಣ್ಣೆ ಪಳೆಯುಳಿಕೆ ಇಂಧನಗಳನ್ನು ಬದಲಾಯಿಸಬಹುದೆಂಬ ಕಲ್ಪನೆಯನ್ನು ಹುಟ್ಟುಹಾಕಿತು. ಈ ಸಾಧನೆಯನ್ನು ಆಚರಿಸಲು ಮತ್ತು ಜೈವಿಕ ಇಂಧನದ ಬಳಕೆಯ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು, ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. 2015 ರಿಂದ ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭಾರತದಲ್ಲೂ ಇದನ್ನು ಆಚರಿಸುತ್ತಿದೆ.
ಸಸ್ಯಗಳು, ಬೆಳೆಗಳು ಮತ್ತು ಪ್ರಾಣಿಗಳ ತ್ಯಾಜ್ಯದಂತಹ ಜೈವಿಕ ಮೂಲಗಳಿಂದ ಪಡೆದ ಜೈವಿಕ ಇಂಧನವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗೆ ಉತ್ತಮ ಪರ್ಯಾಯವಾಗಿದೆ. ಸಸ್ಯಗಳು, ಕೃಷಿ ತ್ಯಾಜ್ಯ, ಬೆಳೆಗಳು, ಪಾಚಿ ಇತ್ಯಾದಿಗಳಂತಹ ಜೀವರಾಶಿಯಿಂದ ಪಡೆದ ಯಾವುದೇ ಇಂಧನವನ್ನು ಜೈವಿಕ ಇಂಧನ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು
ಮಾಹಿತಿಯ ಪ್ರಕಾರ, ಅಮೆರಿಕ ವಿಶ್ವದ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜೈವಿಕ ಇಂಧನ ಉತ್ಪಾದನೆಯ ಅತಿದೊಡ್ಡ ಮೂಲವೆಂದರೆ ಜೋಳ. ಜೋಳದಿಂದ ಎಥೆನಾಲ್ ಉತ್ಪಾದಿಸಲಾಗುತ್ತದೆ. ಈ ಎಥೆನಾಲ್ ಅನ್ನು ಗ್ಯಾಸೋಲಿನ್ನೊಂದಿಗೆ ಬೆರೆಸಲಾಗುತ್ತದೆ, ಇದು ಗ್ಯಾಸೋಲಿನ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಯುನೈಟೆಡ್ ಸ್ಟೇಟ್ಸ್ ನಂತರ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಜೈವಿಕ ಇಂಧನ ಉತ್ಪಾದನೆಯಲ್ಲಿ ಇಂಡೋನೇಷ್ಯಾ ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೀನಾ ನಾಲ್ಕನೇ ಸ್ಥಾನದಲ್ಲಿದೆ.
ಭಾರತವು ವಿಶ್ವದ ಐದನೇ ಪ್ರಮುಖ ಜೈವಿಕ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಭಾರತದ ಪ್ರಾಥಮಿಕ ಗಮನವು ಎಥೆನಾಲ್ ಮಿಶ್ರಣದಲ್ಲಿದೆ. ಪೆಟ್ರೋಲ್ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಮೂಲಕ, ಭಾರತವು ಪೆಟ್ರೋಲಿಯಂ ಆಮದುಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ. ಕಬ್ಬಿನ ಜೊತೆಗೆ, ಜೋಳ, ಮುರಿದ ಅಕ್ಕಿ ಮತ್ತು ಇತರ ಅನುಮತಿಸಲಾದ ಕೃಷಿ ಮೂಲಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಭಾರತಕ್ಕೆ ಜೈವಿಕ ಇಂಧನಗಳ ಪ್ರಾಮುಖ್ಯತೆಯು ಕೇವಲ ಇಂಧನ ಶಕ್ತಿಯ ಸಂರಕ್ಷಣೆಗೆ ಸೀಮಿತವಾಗಿಲ್ಲ. ಇದು ರೈತರ ಆದಾಯ ಹೆಚ್ಚಿಸಲೂ ಸಹಾಯ ಮಾಡುತ್ತಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ