New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

|

Updated on: Feb 27, 2022 | 6:04 PM

Saibaba : ಜ್ಞಾನಪೀಠ ಪಡೆದ ಪ್ರಸಿದ್ಧ ಸಾಹಿತಿಯೊಬ್ಬರು ಸಾಯಿಬಾಬಾರು ಕ್ರಿಸ್ತನ ಅವತಾರವಲ್ಲವೆಂದೂ, ಆದರೆ ಕ್ರಿಸ್ತನನ್ನೇ ಭೂಮಿಗೆ ಕಳಿಸಿದ್ದ ಭಗವಂತನೆಂದೂ ಘೋಷಿಸಿದರು.

New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ
ಅನುವಾದಕ ಸಂತೋಷ್ ನಾಯಕ್ ಆರ್, ಲೇಖಕ ಮುಕುಂದ ರಾವ್
Follow us on

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

*

ಕೃತಿ: ಭ್ರಮೆ ಮತ್ತು ವಾಸ್ತವಗಳ ನಡುವೆ
ಇಂಗ್ಲಿಷ್ : ಮುಕುಂದ ರಾವ್
ಕನ್ನಡಕ್ಕೆ : ಸಂತೋಷ್ ನಾಯಕ್. ಆರ್
ಪುಟ : 249
ಬೆಲೆ : ರೂ. 250
ಮುಖಪುಟ ವಿನ್ಯಾಸ : ಎಂ. ಎಸ್. ಮೂರ್ತಿ
ಪ್ರಕಾಶನ : ಗೌರಿ ಮೀಡಿಯಾ ಟ್ರಸ್ಟ್​, ಬೆಂಗಳೂರು

*

ಒಮ್ಮೆ ಗಮನಿಸಿದರೆ, ಭಾರತೀಯ ದರ್ಶನ ಪರಂಪರೆಗೆ ದೀರ್ಘವಾದ ಇತಿಹಾಸವಿದ್ದು, ಚಿಂತನೆ ಹಾಗು ಪ್ರಶ್ನೆಯೇ ಇಲ್ಲಿನ ತಾತ್ವಿಕತೆಯ ತಳಹದಿಯಾಗಿದೆ. ಆದರೀಗ ಪ್ರಶ್ನೆ, ವಿಮರ್ಶೆಗಳಿಗೆ ಅವಕಾಶ ಕೊಡದೆ, ತಾತ್ವಿಕ ಚರ್ಚೆ ಅಥವಾ ಆಧ್ಯಾತ್ಮಿಕ ಸ್ಪಷ್ಟತೆಗಳೂ ಇಲ್ಲದ, ಕೇವಲ ಹಿಂಬಾಲಕರನ್ನು ಹುಟ್ಟು ಹಾಕಿಕೊಂಡು ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್ ಆಗುವ ಸಲುವಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆಯ ಸ್ಪರ್ಧೆ ನಡೆಸುತ್ತಿರುವ ಗುರುಗಳ, ಸಂಸ್ಥೆಗಳ ನಡುವೆ ನಿಜವಾದ ದಾರ್ಶನಿಕ ಪಥಗಳು ಮತ್ತು ಪಥಿಕರು ನೇಪಥ್ಯದಲ್ಲಿದ್ದಾರೆ. ಸತ್ಯಾನ್ವೇಷಣೆಯ ಪಥಗಳು ಮುಚ್ಚಿಹೋಗುತ್ತಿವೆ. ಭಾರತೀಯ ಸಮಾಜದ ಇಂದಿನ ರಾಜಕೀಯ, ಆರ್ಥಿಕ ಹಾಗು ಸಾಮಾಜಿಕ ಪರಿಸ್ಥಿತಿಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾದ ಧಾರ್ಮಿಕ ಪರಂಪರೆಗಳನ್ನೂ, ಹಾಗೆಯೇ ಸಾಕಷ್ಟು ಸಂಕಷ್ಟಗಳ ನಡುವೆ ಜೀವನವನ್ನು ದೂಡುತ್ತಿರುವ ಸಾಮಾನ್ಯರ ಬದುಕನ್ನು ಸಹನೀಯಗೊಳಿಸಿರುವ ಜೀವಪರ ದರ್ಶನಗಳನ್ನು ಸಮಾಜಶಾಸ್ತ್ರೀಯವಾಗಿ ಅಧ್ಯಯನ ಮಾಡುವ, ಸಂಶೋಧಿಸುವ, ವಿಮರ್ಶಿಸುವ ಅಗತ್ಯವು ಸಹ ಹಿಂದೆಂದಿಗಿಂತಲೂ ಹೆಚ್ಚಿದೆ.

ಕನ್ನಡಿಗರೇ ಆದ ಮುಕಂದರಾವ್ ಬರೆದಿದ್ದೆಲ್ಲಾ ಇಂಗ್ಲಿಷ್‍ನಲ್ಲಿ. ಅವರ ಈ ಪುಸ್ತಕವು ಅವರದೇ ಆದ ತಾತ್ತ್ವಿಕ ಜಿಜ್ಞಾಸೆಗಳ, ಹುಡುಕಾಟಗಳ, ಚಿಂತನೆಗಳ, ಒಳನೋಟಗಳ ಫಲ. ಅಂತೆಯೇ ಅವರು ವಿವಿಧ ಗುರುಗಳು ಹಾಗು ದಾರ್ಶನಿಕರೊಡನೆ ನಡೆಸಿದ ವೈಯಕ್ತಿಕ ಅನುಸಂಧಾನದ ಸಂಕಲನ. ಜೊತೆಗೆ ಸಮಕಾಲೀನ ಆಧ್ಯಾತ್ಮಿಕ ಚಿಂತಕರನ್ನು ಕುರಿತ ಗಮನಾರ್ಹ ವಿಶ್ಲೇಷಣಾತ್ಮಕ ದಾಖಲೆಯೂ ಹೌದು. ಈ ಆಧ್ಯಾತ್ಮಿಕ ಹುಡುಕಾಟ ಮತ್ತು ತಲ್ಲಣಗಳ ಹಾದಿಯು ಅವರ ವೈಯಕ್ತಿಕ ಪಯಣವಾಗಿದ್ದರೂ, ಈ ಬಗೆಯ ಹಾದಿಯ ಕುರಿತು ಆಸಕ್ತಿಯಿರುವ ಕನ್ನಡದ ಪ್ರಾಜ್ಞ ಓದುಗರಿಗೆ ಆಸಕ್ತಿದಾಯಕವಾಗಬಹುದಾದ ಕಾರಣದಿಂದ ಈ ಪುಸ್ತಕವನ್ನು ನಾನು ಪ್ರೀತಿಯಿಂದ ಅನುವಾದಿಸಿದ್ದೇನೆ.
ಸಂತೋಷ್ ನಾಯಕ್, ಆರ್, ಅನುವಾದಕ

*

‘ಎಲ್ಲರೂ ಮನುಷ್ಯರೇ’

ಮುಕುಂದ ರಾವ್ ಅವರ ಇಂಗ್ಲಿಷ್ ಆವೃತ್ತಿ

2004ರಲ್ಲಿ ಬಿಬಿಸಿಯು ‘ದಿ ಸೀಕ್ರೇಟ್ ಸ್ವಾಮಿ’ ಎಂಬ ಹೆಸರಿನ ಸಾಕ್ಷ್ಯಚಿತ್ರವೊಂದನ್ನು ಪ್ರಸಾರ ಮಾಡಿತ್ತು. ಇದರ ಪ್ರಮುಖ ವಿಷಯವು ಸಾಯಿಬಾಬಾರ ಲೈಂಗಿಕ ದೌರ್ಜನ್ಯವನ್ನು ಕುರಿತದ್ದು. ಮಾರ್ಕ್ ರೊಶೆ ಎಂಬ ಸಾಯಿಬಾಬಾರ ಭಕ್ತ ತಾನು ಸಾಯಿಬಾಬಾರ ಜೊತೆಗಿದ್ದ 25 ವರ್ಷಗಳ ಒಡನಾಟದಲ್ಲಿ ಅನೇಕ ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದೆನೆಂದು ಇದರಲ್ಲಿ ದೂರಿದ್ದ. ಮತ್ತೊಂದು ಸಾಕ್ಷ್ಯಚಿತ್ರವು ಡೆನ್ಮಾರ್ಕ್‍ನ ನ್ಯಾಶನಲ್ ಟೆಲಿವಿಷನ್ ಅಂಡ್ ರೇಡಿಯೋ ಬ್ರಾಡ್ ಕಾಸ್ಟ್ ಕಂಪನಿ ನಿರ್ಮಿಸಿದ್ದು, ಅದು ಸಾಯಿಬಾಬಾರ ಅನೇಕ ಲೈಂಗಿಕ ದೌರ್ಜನ್ಯಗಳ ಕುರಿತು ಸಂದರ್ಶನಗಳನ್ನು ಪ್ರಸಾರ ಮಾಡಿತ್ತು. ಅದರ ಹೆಸರು ‘ಸೆಡ್ಯುಸಡ್ ಬೈ ಸಾಯಿಬಾಬಾ’. ಮತ್ತೊಂದು ಟಿ.ವಿ.ಸಾಕ್ಷ್ಯಚಿತ್ರವನ್ನು ‘ಗುರು ಬಸ್ಟರ್ಸ್’ ಹೆಸರಿನಲ್ಲಿ ರಾಬರ್ಟ್ ಈಗಲ್ ಎಂಬ ನಿರ್ಮಾಪಕನು ಚಾನಲ್ 4 ಎಂಬ ಟಿವಿ ಮಾಧ್ಯಮಕ್ಕಾಗಿ ತಯಾರಿಸಿದ್ದು. ಅದರಲ್ಲಿ ಸಾಯಿಬಾಬಾ ಚಮತ್ಕಾರ ಮಾಡಿ ಸೃಷ್ಟಿಸುತ್ತಿದ್ದ ವಸ್ತುಗಳಲ್ಲೆವೂ ಕೃತಕವಾದದ್ದು ಎಂದು ಹೇಳಲಾಗಿದೆ.

1970ರ ಮಧ್ಯಭಾಗದಲ್ಲಿ, ಪ್ರಸಿದ್ಧ ಗಾಂಧಿವಾದಿಗಳು, ಭೌತಶಾಸ್ತ್ರಜ್ಞರು, ವಿಚಾರವಾದಿಗಳು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳೂ ಆಗಿದ್ದ ಡಾ.ಎಚ್.ನರಸಿಂಹಯ್ಯನವರು ಸಾಯಿಬಾಬಾರಿಗೆ ಮೂರು ಬಹಿರಂಗ ಪತ್ರಗಳನ್ನು ಬರೆದಿದ್ದು, ಸಾಯಿಬಾಬ ತಮ್ಮ ಪವಾಡಗಳನ್ನು ಸಾರ್ವಜನಿಕವಾಗಿ ನಿಗದಿತ ಸನ್ನಿವೇಶದಲ್ಲಿ ಬಂದು ಪ್ರದರ್ಶಿಸಲು ಸವಾಲು ಹಾಕಿದ್ದರು. ಡಾ.ನರಸಿಂಹಯ್ಯನವರು ಅದೃಷ್ಟವಶಾತ್ ನನಗೆ ಭೌತಶಾಸ್ತ್ರದ ಉಪನ್ಯಾಸಕರಾಗಿದ್ದು, ನಾನು ಪ್ರಿಯೂನಿವರ್ಸಿಟಿ ಕೋರ್ಸ್ ಮಾಡುವಾಗ ನನ್ನ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಆದರೆ ಸಾಯಿಬಾಬಾರು ಈ ಸವಾಲನ್ನು ಸ್ವೀಕರಿಸಲಿಲ್ಲ ಮತ್ತು ನರಸಿಂಹಯ್ಯ ಹಾಗೂ ಅವರ ತಂಡದ ಸದಸ್ಯರನ್ನು ಪುಟ್ಟಪರ್ತಿಯ ಒಳಕ್ಕೂ ಸೇರಿಸಿಕೊಳ್ಳಲಿಲ್ಲ.

1986ರಲ್ಲಿ ಬಸವ ಪ್ರೇಮಾನಂದ ಎಂಬ ಸಂದೇಹವಾದಿ ಹಾಗೂ ಜಾದೂಗಾರರು, ಸಾಯಿಬಾಬಾರ ಬಗೆಗೆ 1968ರಿಂದಲೂ ಕೆಲವು ಅನುಮಾನಗಳನ್ನು ಹೊಂದಿದ್ದು ತನಿಖೆ ನಡೆಸುತ್ತಿದ್ದು, ಗೋಲ್ಡ್ ಕಂಟ್ರೋಲ್ ಆಕ್ಟ್‍ನ ಅಡಿಯಲ್ಲಿ ಮೊಕದ್ದಮೆ ಹೂಡಿದರು. ಏಕೆಂದರೆ ಬಾಬಾರವರು ಗಾಳಿಯಿಂದ ಚಿನ್ನವನ್ನು ಪ್ರತ್ಯಕ್ಷಗೊಳಿಸಿ ಭಕ್ತರಿಗೆ ನೀಡುತ್ತಿದ್ದರು. ಆದರೆ ಈ ಪ್ರಕರಣವನ್ನು ವಜಾಗೊಳಿಸಲಾಯಿತು. ಆಧ್ಯಾತ್ಮಿಕ ಶಕ್ತಿಯೆನ್ನುವ ವಿಷಯವು ಕಾನೂನಿನ ಮೂಲಕ ಮಾನ್ಯವಾಗುವುದಿಲ್ಲವೆಂಬ ಅವರ ಆಗ್ರಹಕ್ಕೆ ಮನ್ನಣೆ ದೊರೆಯಲಿಲ್ಲ.

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ನಾಗೇಶ ಹೆಗಡೆ ಕೃತಿ ಇಂದು ಬಿಡುಗಡೆ

ಪುಟ್ಟಪರ್ತಿಯ ಸಾಯಿಬಾಬಾ

ಸಾಯಿಬಾಬಾರಾಗಲಿ ಅಥವಾ ಅವರ ಸಂಸ್ಥೆಗೆ ಸೇರಿದ ಯಾರದೇ ಮೇಲಾಗಲಿ, ಎಂದಿಗೂ ಭ್ರಷ್ಟಚಾರ, ಲೈಂಗಿಕ ದೌರ್ಜನ್ಯ ಅಥವಾ ಬೇರಾವುದೇ ಅಪರಾಧಗಳ ಕಾರಣಕ್ಕೆ ಕಾನೂನಿನ ಪ್ರಕಾರ ಕ್ರಮಗಳನ್ನು ಎದುರಿಸಲಿಲ್ಲ. ಅವರ ವಿರುದ್ಧ ಮಾಡಲಾದ ಯಾವುದೇ ಆರೋಪಗಳು ಅವರಿಗೆ ಯಾವುದೇ ವಿಧವಾದ ಹಾನಿಯನ್ನು ಉಂಟು ಮಾಡಲಿಲ್ಲ. ಅವರ ಭಕ್ತರು ಹೇಳುವಂತೆ, ಸಾಯಿಬಾಬಾರ ಮೇಲೆ ಆರೋಪಗಳು ಹೆಚ್ಚಾಗುತ್ತಿದ್ದಂತೆಯೇ ಅವರ ಭಕ್ತರ ಸಂಖ್ಯೆಯೂ ಏರುತ್ತಲೇ ಇತ್ತು. ಅವರ ದರ್ಶನ ಪಡೆಯಲು, ಆಶೀರ್ವಾದ ಪಡೆಯಲು ಅವರಿಂದ ಕಾಣಿಕೆಗಳನ್ನು ಪಡೆಯಲು, ಸಲಹೆ ಕೇಳಲು, ಅನೇಕ ವಿಜ್ಞಾನಿಗಳು, ಅತ್ಯುನ್ನತ ರಾಜಕಾರಣಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಸಚಿವರುಗಳು, ಚಲನಚಿತ್ರ ನಟರುಗಳು, ಕ್ರೀಡಾ ತಾರೆಯರು ಹೀಗೆ ಅನೇಕರು ಪುಟ್ಟಪರ್ತಿಗೆ ಹೋಗಲಾರಂಭಿಸಿದರು. ಜ್ಞಾನಪೀಠ ಪಡೆದ ಪ್ರಸಿದ್ಧ ಸಾಹಿತಿಯೊಬ್ಬರು ಸಾಯಿಬಾಬಾರು ಕ್ರಿಸ್ತನ ಅವತಾರವಲ್ಲವೆಂದೂ, ಆದರೆ ಕ್ರಿಸ್ತನನ್ನೇ ಭೂಮಿಗೆ ಕಳಿಸಿದ್ದ ಭಗವಂತನೆಂದೂ ಘೋಷಿಸಿದರು.
*
(ಈ ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 988669480)

ಇದನ್ನೂ ಓದಿ : Book Release: ಶೆಲ್ಫಿಗೇರುವ ಮುನ್ನ; ‘ಚಿಮ್ಮಿದ ರಕ್ತ’ ಇಂದು ಉಮರ್ ಫಾರೂಕ್ ಪುಸ್ತಕ ಬಿಡುಗಡೆ