AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Play: ಅಂಕಪರದೆ; ಎಂಎಸ್​ಕೆ ಪ್ರಭು ಅವರ ‘ಬೆತ್ತಲೆ ಅರಸನ ರಾಜರಹಸ್ಯ’ ತಿಳಿಯಲು ಇಂದು ಮೈಸೂರಿನ ‘ನಟನ’ಕ್ಕೆ ಬನ್ನಿ

Bettale Arasana Raajarahasya : ‘ಪ್ರತಿ 24 ಗಂಟೆಗೆ ಒಬ್ಬ ಹೆಣ್ಣು, ಒಂದು ಶೃಂಗಾರ ಕಾವ್ಯ ಬೇಕೆನ್ನುವ. ಅದಿಲ್ಲದಿದ್ದರೆ ಬಟ್ಟೆಕಳಚಿ ಮೈಯುರಿ ಎಂದು ಓಡುವ ರಾಜ. ಅವನಿಗೆ 'ಹೇಗಾದರೂ' ಬಟ್ಟೆ ಹಾಕಿಸಲು ಹೊರಡುವ ಆಡಳಿತ ವರ್ಗ. ಬಲಿಯಾಗುವ ಅಮಾಯಕ ಜೀವಗಳು...’ ಕುಸುಮಾ ಆಯರಹಳ್ಳಿ

Play: ಅಂಕಪರದೆ; ಎಂಎಸ್​ಕೆ ಪ್ರಭು ಅವರ ‘ಬೆತ್ತಲೆ ಅರಸನ ರಾಜರಹಸ್ಯ’ ತಿಳಿಯಲು ಇಂದು ಮೈಸೂರಿನ ‘ನಟನ’ಕ್ಕೆ ಬನ್ನಿ
‘ಬೆತ್ತಲೆ ರಾಜನ ರಹಸ್ಯ’ ನಾಟಕದ ದೃಶ್ಯ
ಶ್ರೀದೇವಿ ಕಳಸದ
|

Updated on:Feb 06, 2022 | 3:12 PM

Share

ಅಂಕಪರದೆ | Ankaparade: ನುಡಿ ಪುಸ್ತಕದವರು ಮಾಡಿರುವ “ಮರೆಯಲಾರದ ಕತೆಗಳು” ಸರಣಿಯನ್ನು ಕೊಂಡಿದ್ದೆ. ಅದರಲ್ಲಿ ಎಂಎಸ್ ಕೆ ಪ್ರಭು ಅವರ ಕತೆಗಳ ಒಂದು ಪುಸ್ತಕವೂ ಇತ್ತು. ಅದರೊಳಗೆ ಅನೇಕ ಸೊಗಸಾದ ಅಚ್ಚರಿ ಹುಟ್ಟಿಸುವ, ಹೊಸ ಶೈಲಿಯ ಕತೆಗಳಿದ್ದವು. ತೆಂಗಿನಮರದ ಉದ್ದದ ಮನುಷ್ಯ, ಮುಖಾಬಿಲೆಯಂತಾ ಯೋಚನೆಗೆ ಹಚ್ಚುವ ಕತೆಗಳು. ಅದರೊಂದಿಗೇ ಇದ್ದ ಕತೆ “ಬೆತ್ತಲೆ ಅರಸನ ರಾಜರಹಸ್ಯ” ಈ ಕತೆಗೇ ಒಂದು ನಾಟಕೀಯತೆ ಇತ್ತು. ಕತೆಯನ್ನು ಓದುವಾಗ ದೃಶ್ಯಗಳು ಕಣ್ಮುಂದೆ ಹಾಯುತ್ತಿದ್ದವು. ರಂಗ ನನ್ನ ಕಣ್ಣೆದುರಿದ್ದ ಹಾಗೆ.  ಎಂಎಸ್‍ಕೆ ಪ್ರಭು ಸ್ವತಃ ನಾಟಕಕಾರರೂ ಆಗಿದ್ದರಿಂದ ಕತೆಯಲ್ಲಿ ನಾಟಕದ ಅಂಶಗಳು ಇಣುಕಿರಬಹುದು. ಆಮೇಲೆ ಅವರ ಸಮಗ್ರ ಕತೆಗಳನ್ನು ಓದಿದೆ. ಜೊತೆಗೆ ಕತೆಯನ್ನೊಮ್ಮೆ ಓದಿ, ಇದನ್ನು ನಾಟಕ ಮಾಡಬಹುದೆನಿಸುತ್ತದೆ ಅಂತ ಮಂಡ್ಯ ರಮೇಶ್ ಅವರಿಗೆ ಕೊಟ್ಟೆ. ಅವರು ಬಹಳ ಹಿಂದೆ ಆ ಕತೆಯನ್ನು ಓದಿದ್ದವರೇ. ಮರುಓದಿದಾಗ ಥಟ್ಟನೇ ನಾಟಕ ಮಾಡಬಹುದು. ನೀವೇ ಬರೆದುಕೊಡಿ ಅಂದುಬಿಟ್ಟರು.

ಕುಸುಮಾ ಆಯರಹಳ್ಳಿ, ಲೇಖಕಿ

*

ನಾಟಕ ಬರೆಯೋದೇನು ಸುಮ್ಮನೆ ಮಾತಾ? ಕತೆಯಾದರೆ ಬೇಕಾದ್ದು ಬರೀಬಹುದು. ಆದರೆ ನಾಟಕ ನಮ್ಮ ಕಲ್ಪನೆಯನ್ನು ರಂಗದ ಪಾತ್ರಧಾರಿಗಳಿಗೆ, ಸರಕಿಗೆ, ಹೊಂದಿಸುತ್ತಾ ನಿರೂಪಿಸಬೇಕಾದ ಬೇರೆಯದೇ ರೀತಿಯ ಬರವಣಿಗೆ. ಎಷ್ಟು ಹೆದರಿ ಕೂತೆ ಅಂದರೆ ಒಂದು ವರ್ಷ ಮತ್ತೆ ಆ ಸುದ್ದಿಯೇ ಎತ್ತಲಿಲ್ಲ. ರಮೇಶ್ ಸರ್ ಯಾವಾಗ ಸಿಕ್ಕರೂ ಯಾರಿಗಾದ್ರೂ ಪರಿಚಯಿಸೋವಾಗ “ನಮಗೊಂದು ನಾಟಕ ಬರ್ಕೊಡ್ತಾ ಇದಾರೆ” ಅಂತ ಹೇಳಿ ಅರೆಜೀವ ಮಾಡಿಬಿಡೋರು. ನನಗೂ ನಾಚಿಕೆಯಾಗೋದು. ಅಷ್ಟರಲ್ಲಿ ಲಾಕ್‍ಡೌನ್​, ಕೊರೊನಾ ಆಗಿ ರಂಗವೂ ಸ್ವಲ್ಪ ಹೊತ್ತು ವಿರಮಿಸಿತ್ತು.

ಇದ್ದಕ್ಕಿದ್ದಂತೆ ನಾನೇ ಒಂದು ದಿನ ಫೋನಿಸಿ ಇನ್ನೊಂದು ವಾರದಲ್ಲಿ ಬರೀತೀನಿ ಅಂದೆ. ಸೀರಿಯಲ್‍ಗೆ ಬರೆಯೋ ನಮ್ ಹಣೇಬರವೇ ಇಷ್ಟು. ಒದ್ಕೊಂಡು ಬರೋ ಒತ್ತಡದ ಹೊರತು ನಮ್ ಕೈ ಓಡಲ್ಲ, ಕತೆಯೊಂದು ನಾಟಕವಾಗುವಾಗ ದೃಶ್ಯಗಳನ್ನು ಕಟ್ಟುವಾಗ ಅಲ್ಲಿಲ್ಲದ ಕೆಲವನ್ನು ಸೇರಿಸಬೇಕಾಗುತ್ತದೆ. ಇರುವ ಕೆಲವನ್ನು ಬಿಡಬೇಕಾಗುತ್ತದೆ. ಕತೆಯಲ್ಲಿ ರಾಜನೊಂದಿಗೆ ಕಾರುಬಾರಿ ಮಾತ್ರವೇ ಇರುತ್ತಾನೆ. ಆದರೆ ಇಡೀ ನಾಟಕ ಕತೆಯ ಹಾಗೆ ಅವನ ಸ್ವಗತದಲ್ಲಿ ಮಾತಾಡಿದರೆ ಚೆನ್ನಾಗಿರುವುದಿಲ್ಲ. ಹಾಗಾಗಿ ಕತೆಯ ಅವನ ಸ್ವಗತದ ಮಾತುಗಳಿಗೆ ಇನ್ನೊಂದು ಮಂತ್ರಿಯ ಪಾತ್ರವನ್ನು ಸೃಷ್ಟಿಸಲಾಯ್ತು. ಬರೆದಾಗಿ ರಮೇಶ್ ಅವರಿಗೆ ಕೊಟ್ಟು, ಎಕ್ಸಾಂ ಬರೆದು ರಿಸಲ್ಟಿಗೆ ಕಾಯುವವಳ ಹಾಗಿದ್ದೆ. ಅವರು ಒಪ್ಪಿದ ಮೇಲೆ ಸಮಾಧಾನವೂ… ನಂಬಿಕೆಯೂ.

ಇದನ್ನೂ ಓದಿ : Theatre : ‘ಹೆಣ್ಣನ್ನು ನೋಯಿಸಿ ಅವ ಸೋಲುತ್ತಾನೆ, ನೊಂದು ಆಕೆ ಗಟ್ಟಿಯಾಗುತ್ತಾಳೆ‘ ಹಾವೇರಿಗೆ ಬನ್ನಿ ‘ಮಾಧವಿ’ಯ ನೋಡಲು

Ankaparade Bettale Arasana Raajarahasya Play by Kusuma Ayarahalli Directed by Mandya Ramesh Natana

ನಾಟಕದ ದೃಶ್ಯ

ನಾಟಕ ಬರೆದದ್ದು ಒಂದು ಅನುಭವವಾದರೆ ಅದನ್ನು ಓದಿದ ತಂಡದ ಜೊತೆ ನಡೆದ ಚರ್ಚೆ ಇನ್ನೂ ದೊಡ್ಡ ಅನುಭವ. ನಾಟಕವನ್ನು ಒಬ್ಬೊಬ್ಬರೂ ಬೇರೆ ಬೇರೆ ರೀತಿಯಲ್ಲಿ ಕಂಡಿದ್ದರು. ಕೃತಿಯೊಂದು ನೋಟ ಹಲವು! ಮತ್ತು ಆ ಯಾವ ನೋಟಗಳೂ ತಪ್ಪಲ್ಲ. ಅವರವರ ಗ್ರಹಿಕೆ ಅದು. ಎಷ್ಟೊಂದು ಗ್ರಹಿಕೆಗಳು. ಮತ್ತೊಮ್ಮೆ ಅದು ಆ ಕತೆಯದೇ ಶಕ್ತಿ. ಬೇರೆ ಬೇರೆ ಹಿನ್ನೆಲೆಯ, ಊರಿನ  ತಂಡದ ಮೇಲೆ ನಿಜಕ್ಕೂ ಪ್ರೀತಿ ಬಂತು. ನಾವು ನೋಡಿಯೇ ಇರದ ವ್ಯಕ್ತಿ ಬರೆದ ಕತೆಗೆ ಇಂದು ನಾನು ನಾಟಕ ರೂಪ ಕೊಡುವುದು, ಇನ್ಯಾರೋ ಅದನ್ನು ಅಭಿನಯಿಸುವುದು. ಈ ಅಕ್ಷರದ ನಂಟಿದೆಯಲ್ಲಾ… ಇದರ ಬಗೆಯನ್ನು ಬಗೆದು ವಿವರಿಸಲಾಗದು. ಒಂಥರಾ ಸಂಬಂಧ ನೋಡಿ ಇದು.

ರಾಜಾಡಳಿತ, ಪ್ರಜಾಪ್ರಭುತ್ವ ಯಾವುದೇ ಇರಲಿ, ಸಾಹಿತ್ಯ ನಾಟಕದಂತಹ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಸ್ವಾತಂತ್ರ್ಯವಿರವೇಕು. ಆಡಳಿತವು ಕಲೆಯನ್ನು ನಿಯಂತ್ರಿಸಲು ಹೋದರೆ, ತನಗೆ ಬೇಕಾದ ಹಾಗೆ ಬಳಸಿಕೊಳ್ಳಲು ಹೋದರೆ ಆಗುವ ಅನಾಹುತಗಳ ಸರಣಿಯೇ ಬೆತ್ತಲೆ ಅರಸನ ರಾಜರಸಹಸ್ಯ.

ರಾಜ ಅಥವಾ ಆಡಳಿತದ ಕೇಂದ್ರಸ್ಥಾನ ರೋಗಕ್ಕೀಡಾಗ, ವಿವೇಕ‌ ಕಳೆದುಕೊಂಡು ವರ್ತಿಸಲು ಆರಂಭಿಸಿದಾಗ ರಾಜನಿಗೂ ಪ್ರಜೆಗಳಿಗೂ ನಡುವೆ ನಿಂತ ಆಡಳಿತ ವರ್ಗ ಪ್ರಜೆಗಳ ಹಿತಮರೆತು ರೋಗ ಮುಚ್ಚಿಡಲು ಅರಮನೆಯ ಮಾನ ಕಾಯಲು ‘ಏನನ್ನು ಬೇಕಾದರೂ’ ಮಾಡಲು ಹೊರಟರೆ ಏನಾಗುತ್ತದೆ?

ಕವಿಯ ಕಲ್ಪನೆಗೆ ಚೌಕಟ್ಟು ಹಾಕಿ, ಹೀಗೆ ಮಾತ್ರ ಯೋಚಿಸು ಎನ್ನುವ ನಿರ್ಬಂಧ ಹೇರಿದರೆ… ಎಷ್ಟು ದಿನ ಕಾವ್ಯ ಹುಟ್ಟಬಲ್ಲದು? ಕಾವ್ಯವನ್ನು ಕೊಳ್ಳಲು ಸಾಧ್ಯವೇ ಆಡಳಿತ? ಕೊಳ್ಳುತ್ತೇವೆ.‌ ಅಧಿಕಾರವಿದ್ದರೆ ಏನನ್ನೂ ಮಾಡಬಹುದು ಎಂಬ ಹುಂಬತನದಿಂದ ಹೊರಟರೆ ಅಲ್ಲಿ ಎಲ್ಲವೂ ಅಸ್ತವ್ಯಸ್ತವಾಗುತ್ತದೆ.

ಒಂದು ತಪ್ಪನ್ನು ಸರಿಪಡಿಸಲು ಇನ್ನೊಂದು ತಪ್ಪು ಮಾಡುತ್ತಾ ತಪ್ಪುಗಳು ಗುಪ್ಪೆಯಾಗಿ, ಆ ಗುಪ್ಪೆಗೇ ಜೀವ ಬಂದು ತಿರುಗಿ ನಿಂತಾಗ.. ಕ್ರಾಂತಿಯಾಗುತ್ತದೆ..

ಇದನ್ನೂ ಓದಿ : Play : ನಾಳೆ ರಂಗಶಂಕರದಲ್ಲಿ ಬೆಂಗಳೂರು ಕಲೆಕ್ಟಿವ್ ಥಿಯೆಟರ್​ನಿಂದ ‘ಕೋವಿಗೊಂದು ಕನ್ನಡಕ’

Ankaparade Bettale Raajana Rahasya Play by Kusuma Ayarahalli Directed by Mandya Ramesh Natana

ನಿರ್ದೇಶಕ ಮಂಡ್ಯ ರಮೇಶ್, ಲೇಖಕಿ ಕುಸುಮಾ ಆಯರಹಳ್ಳಿ

ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ, ಎಲ್ಲ ರೀತಿಯ ಆಡಳಿತದ ಎಡವಟ್ಟುಗಳಿಗೂ ಸಾರ್ವತ್ರಿಕವಾಗಿ, ಸಾರ್ವಕಾಲಿಕವಾಗಿ ಹೊಂದಿಕೊಳ್ಳಬಲ್ಲ ಗುಣವುಳ್ಳ ‘ಬೆತ್ತಲೆ ಅರಸನ ರಾಜರಹಸ್ಯ’ ಕತೆ ನಮ್ಮ‌ಕನ್ನಡ ನೆಲದಲ್ಲಿ ಹುಟ್ಟಿರುವುದೇ ಹೆಗ್ಗಳಿಕೆ. 41 ವರ್ಷಗಳ ನಂತರವೂ ಈ ಕತೆ ಇವತ್ತಿಗಾಗಿಯೇ ಬರೆದ ಹಾಗಿರುವುದೇ ಆ ಕತೆಯ ಶ್ರೇಷ್ಠತೆಗೆ ಸಾಕ್ಷಿ!

ಪ್ರತಿ 24 ಗಂಟೆಗೆ ಒಬ್ಬ ಹೆಣ್ಣು, ಒಂದು ಶೃಂಗಾರ ಕಾವ್ಯ ಬೇಕೆನ್ನುವ. ಅದಿಲ್ಲದಿದ್ದರೆ ಬಟ್ಟೆಕಳಚಿ ಮೈಯುರಿ ಎಂದು ಓಡುವ ರಾಜ. ಅವನಿಗೆ ‘ಹೇಗಾದರೂ’ ಬಟ್ಟೆ ಹಾಕಿಸಲು ಹೊರಡುವ ಆಡಳಿತ ವರ್ಗ. ಬಲಿಯಾಗುವ ಅಮಾಯಕ ಜೀವಗಳು. ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ರಾಜ್ಯದಲ್ಲಿ ನೀರಿಗೆ ಹಣ ಕೊಟ್ಟು ಕೊಳ್ಳುವ ಸ್ಥಿತಿ. ಇದು ಆಡಳಿತ ಎಚ್ಚರ ತಪ್ಪಿದರೆ, ಕಲೆಯ ಕುತ್ತಿಗೆಗೆ ಕೈ ಹಾಕಿದರೆ ಉಂಟಾಗಬಹುದಾದ ಸ್ಥಿತಿಯ ವ್ಯಂಗ್ಯ ಮತ್ತು ವಾಸ್ತವ.

ತಂಡ : ನಟನ, ಮೈಸೂರು

ನಿರ್ದೇಶನ : ಮಂಡ್ಯ ರಮೇಶ್

ದಿನಾಂಕ : ಫೆಬ್ರವರಿ 6 ಮತ್ತು 13

ಸಮಯ : 6.30

ಸ್ಥಳ : ನಟನ ರಂಗಶಾಲೆ, ರಾಮಕೃಷ್ಣನಗರ, ಮೈಸೂರು

ಟಿಕೆಟ್ : 7259537777

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

ಇದನ್ನೂ ಓದಿ : Theatre: ಅಂಕಪರದೆ; ಹೋಟೆಲು, ಬಾರ್, ಪಬ್; ಶೇ. 100ರಷ್ಟು ಅನುಮತಿ ಕೊಟ್ಟ ಸರ್ಕಾರ ರಂಗಮಂದಿರಗಳಿಗೇಕೆ ಶೇ. 50?

Published On - 3:01 pm, Sun, 6 February 22