Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್​ಸಿಂತ್’ ನಾಟಕ

|

Updated on: Mar 07, 2022 | 5:27 AM

Play : ಇದು ರಂಗರಥದ ಮತ್ತೊಂದು ಹೊಸ ನಾಟಕ, ಹೊಸ ಪ್ರಯೋಗ. ಸ್ವಾರ್ಥ-ಆಸೆ, ದುರಾಸೆಗಳ ಸುಳಿಯಲ್ಲಿ ಸಿಕ್ಕು, ಬದುಕಿನ ತಾಳತಪ್ಪಿಸಿಕೊಂಡ ಜನರನ್ನು ಅವರ ಕುಕರ್ಮಗಳು ತಾಂಡವವಾಡಿಸುತ್ತವೆ. ಲೋಕ ಬಿಟ್ಟರೂ ಲೆಕ್ಕ ಬಿಡುವುದಿಲ್ಲ.

Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್​ಸಿಂತ್’ ನಾಟಕ
‘ಆ್ಯಬ್​ಸಿಂತ್’ ರಂಗತಾಲೀಮಿನ ದೃಶ್ಯ
Follow us on

ಅಂಕಪರದೆ | Ankaparade : ಆ್ಯಬ್‌ಸಿಂತ್ ನಾಟಕದ ಕಥಾನಕವು ಮನುಷ್ಯನ ದುರಾಸೆ ಹಾಗೂ ಕರ್ಮಗಳ ಮೇಲೆ ಬೆಳಕುಚೆಲ್ಲುತ್ತದೆ. ಸೇನಾ ಕರ್ನಲ್ ಒಬ್ಬನ ನಿಗೂಢ ಸಾವಿನ ಮೇಲೆ ಈ ನಾಟಕದ ಕಥೆಯು ಹೆಣೆದುಕೊಂಡಿದೆ. ಕರ್ನಲ್‌ನ ಸಾವು ಕೊಲೆಯಲ್ಲ, ಅದು ಸಹಜ ಸಾವು ಎಂದು ಕೋರ್ಟ್​ನಿಂದ ತೀರ್ಪು ಬಂದಿರುತ್ತದಾದರೂ, ಹೈ ವೇ ಹೋಟೆಲ್ ಒಂದರಲ್ಲಿ, ಮೂರು ವರ್ಷದ ನಂತರ ಅಕಸ್ಮಿಕವಾಗಿ ಸೇರುವ ಐದು ಜನ ಹಳೇ ಸ್ನೇಹಿತರು, ಈ ಸಾವಿನ ನಿಗೂಢ ರಹಸ್ಯವನ್ನು ಮತ್ತೆ ಕೆದಕಲು ಪ್ರಾರಂಭಿಸುತ್ತಾರೆ. ಕರ್ನಲ್ ಅವರದ್ದು ಕೊಲೆಯೇ ಆಗಿದ್ದರೆ, ಕರ್ನಲ್‌ನ ಕೊಂದವರು ಯಾರು… ಮತ್ತು ಏಕೆ ? ಕರ್ಮ ಹಿಂಬಾಲಿಸುತ್ತದೆ. ಇದು ಯಾರಿಗೂ ಕಾಯುವುದಿಲ್ಲ; 1930ರಲ್ಲಿ ಸ್ಟೂಅರ್ಟ್ರೆಡಿಯು ಬರೆದ ಒಂದು ಸಣ್ಣಕಥೆಯಿಂದ ಸ್ಫೂರ್ತಿ ಪಡೆದು, ಆ ಕಥೆಯನ್ನು ನಾಟಕಕಾರ ಆಸೀಫ್ ಕ್ಷತ್ರಿಯ ರಂಗಕ್ಕೆ ತಂದಿದ್ದಾರೆ. ಈ ಹೊಚ್ಚಹೊಸ ನಾಟಕವನ್ನು ವಿಶೇಷವಾಗಿ ವ್ಯೋಮ-360 ನಾಟಕೋತ್ಸವ 2022 ಕ್ಕಾಗಿಯೇ ವಿನ್ಯಾಸಗೊಳಿಸಿದೆ.

ಒಂದು ನಿಗೂಢ ಕೊಲೆಯ ಸುತ್ತ ನಡೆಯುವ ಈ ನಾಟಕ, ತಪ್ಪಿತಸ್ಥರನ್ನು ಕಾಲದ ಕಟಕಟೆಯಲ್ಲಿ ನಿಲ್ಲಿಸಲು ತನ್ನದೇ ಆದ ದಾರಿಯನ್ನು ಹುಡುಕಿಕೊಳ್ಳುತ್ತದೆ. ಕರ್ಮ ಯಾವತ್ತೂ ಹಿಂಬಾಲಿಸುತ್ತಲೇ ಇರುತ್ತದೆ ಎಂಬ ಸತ್ಯವನ್ನು, ಕಾಲ ದರ್ಶಿಸಿಯೇಬಿಡುತ್ತದೆ. ‘‘ವ್ಯೋಮ-360 ನಾಟಕೋತ್ಸವ’’ ಸಲುವಾಗಿ ಆ್ಯಬ್‌ಸಿಂತ್ ನಾಟಕವನ್ನು ವಿಶೇಷವಾಗಿ ವಿನ್ಯಾಸಗೊಳಿಸಿರುವ ನಿರ್ದೇಶಕ ಆಸೀಫ್ ಕ್ಷತ್ರಿಯ, ‘ಅನಂತ ರಂಗಾಯಾಮಗಳ ವ್ಯೋಮ, ರಂಗ ಪ್ರಸ್ತುತಿಯ ವಿವಿಧ ಮತ್ತು ವಿಶಿಷ್ಟ ಸಾಧ್ಯತೆಗಳಿಗೆ ಯಾವತ್ತೂ ಪ್ರೋತ್ಸಾಹ ಕೊಡುತ್ತಲೇ ಬಂದಿದೆ. ‘ವ್ಯೋಮ ಆರ್ಟ್ ಸ್ಪೇಸ್ ಮತ್ತು ಸ್ಟುಡಿಯೋ ಥಿಯೇಟರ್’ನ ರೂವಾರಿಗಳಾದ ಡಾ. ರಾಜಶ್ರೀ ಮತ್ತು ಶರತ್ ಪರ್ವತವಾಣಿಯವರು, ತಮ್ಮ ಅವಿರತ ಶ್ರಮ ಮತ್ತು ರಂಗಚಟುವಟಿಕೆಗಳಲ್ಲಿ ತೋರುವ ಅಗಾಧ ಸೃಜನಶೀಲತೆ, ನಮ್ಮಂತಹ ಅನೇಕ ರಂಗತಂಡಗಳಿಗೆ ಸ್ಫೂರ್ತಿಯ ಸೆಲೆ. ಸಾಂಪ್ರದಾಯಿಕ ರಂಗಸ್ಥಳದಲ್ಲಿ ಪ್ರಸ್ತುತಪಡಿಸುವ ನಾಟಕಕ್ಕೆ ಒಂದು ಇತಿ-ಮಿತಿ ಮತ್ತು ಸಿದ್ಧ ಚೌಕಟ್ಟಿದ್ದರೆ, ವ್ಯೋಮ- ಬ್ಲ್ಯಾಕ್ ಬಾಕ್ಸ್ ಥಿಯೇಟರ್, ಸೃಜನಶೀಲತೆಯ ಅಪಾರ ಆಯಾಮಗಳನ್ನು ತೆರೆದಿಡುತ್ತದೆ’ ಎನ್ನುತ್ತಾರೆ.

ಈ ನಾಟಕೋತ್ಸವದ ವೈಶಿಷ್ಟ್ಯವೇ ಒಂದು ಸೋಜಿಗ. 6 ಸಣ್ಣ ನಾಟಕಗಳ ಈ ಉತ್ಸವದಲ್ಲಿ, ಒಂದೊಂದು ನಾಟಕವು, ರಂಗಸ್ಥಳದ ಪ್ರತ್ಯೇಕ ಒಂದು ಭಾಗವನ್ನು ಬಳಸಿಕೊಳ್ಳುತ್ತದೆ. ಹೀಗೆ, ಎಲ್ಲಾ ನಾಟಕಗಳೂ ಸೇರಿ ವ್ಯೋಮ ರಂಗಸ್ಥಳದ 360 ಡಿಗ್ರಿ, ಅಂದರೆ, ಸುತ್ತಲೂ ಇರುವ ವೈವಿಧ್ಯಮಯ ವಾಸ್ತು ವಿನ್ಯಾಸಗಳನ್ನು ಬಳಸಿಕೊಳ್ಳುತ್ತದೆ.

ಈ ಕುತೂಹಲ ಮತ್ತು ಸಂಭ್ರಮಗಳು ಒಂದು ಕಡೆಯಾದರೆ, ಸಾರ್ವಜನಿಕ ವಲಯಗಳಲ್ಲಿ ನಾಟಕಗಳ ಬಗ್ಗೆ ಉದಾಸೀನ ಮತ್ತು ನಿರ್ಲಕ್ಷ್ಯ, ಬೇಸರ ತರಿಸುವಂಥದ್ದು ಎಂಬ ಅಭಿಪ್ರಾಯವನ್ನು ಈ ನಾಟಕದ ನಿರ್ದೇಶಕಿ ಶ್ವೇತಾ ಶ್ರೀನಿವಾಸ್ ವ್ಯಕ್ತಪಡಿಸುತ್ತಾರೆ, ‘ಯುವಪೀಳಿಗೆಯಲ್ಲಿ, ಕಲೆಯ ಬಗ್ಗೆ ಅಭಿರುಚಿ ತುಂಬುವ, ಸೃಜನಶೀಲತೆಯನ್ನು ವೃದ್ಧಿಸುವ ಮತ್ತು ಬದುಕಿನಲ್ಲಿ ಸಂಯಮ, ಸಹಬಾಳ್ವೆಯನ್ನು ಕಲಿಸುವ ರಂಗಭೂಮಿ ಚಟುವಟಿಕೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಯಾಕೆ ಉದಾಸೀನ ಎನ್ನುವುದೇ ಅರ್ಥವಾಗುತ್ತಿಲ್ಲ. ಯಾವುದೇ ಅಂಗಡಿ ಮುಂಗಟ್ಟುಗಳಿರಲಿ, ಸಾರ್ವಜನಿಕ ಸ್ಥಳಗಳಿರಲಿ, ಗ್ರಂಥಾಲಯಗಳಿರಲಿ, ಹೋಟೆಲ್‌ಗಳಿರಲಿ, ಸಣ್ಣಸಣ್ಣ ಫುಡ್ ಜಾಯಿಂಟ್‌ಗಳಿರಲಿ, ನಾಟಕದ ಪ್ರಚಾರಕ್ಕಾಗಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲು, ಯಾವುದಾದರೊಂದು ಮೂಲೆಯ ಸಣ್ಣ ಸ್ಥಳವನ್ನು ಕೊಡಲು ಮೀನಾಮೇಷ ಎಣಿಸುತ್ತಾರೆ.’

ಇದನ್ನೂ ಓದಿ : Theatre: ಅಂಕಪರದೆ; ಹೋಟೆಲು, ಬಾರ್, ಪಬ್… ಶೇ. 100ರಷ್ಟು ಅನುಮತಿ ಕೊಟ್ಟ ಸರ್ಕಾರ ರಂಗಮಂದಿರಗಳಿಗೇಕೆ ಶೇ. 50?

ಆ್ಯಬ್​ಸಿಂತ್ ನಾಟಕದ ನಿರ್ದೇಶಕರುಗಳಾದ ಆಸೀಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್

‘ಅಷ್ಟೇ ಏಕೆ ರಂಗಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ಕೊಡಬೇಕಾದ ಶಾಲಾ-ಕಾಲೇಜುಗಳಲ್ಲಿ ಹಲವು ಸಂಸ್ಥೆಗಳು, ನಾಟಕದ ಪೋಸ್ಟರ್‌ಗಳನ್ನು ಪ್ರದರ್ಶಿಸಲು ಅನುಮತಿ ಕೊಡುತ್ತಿಲ್ಲ. ಹಾಗಾಗಿಯೇ ಈಗಿನ ಸಾಕಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಂಗಸಂಸ್ಕೃತಿಯಿಂದ ದೂರವಾಗಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ನೋಡುತ್ತಲೋ-ಮಾಡುತ್ತಲೋ, ವಾಟ್ಸ್ಯಾಪ್​ನಲ್ಲಿ ಹರಿದಾಡುವ ದ್ವೇಷದ, ಮತಾಂಧತೆಯ ಅಥವಾ ರಾಜಕೀಯ ಸುಳ್ಳು-ಸತ್ಯಗಳಿಗೆ ಬಲಿಯಾಗಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸುವುದರಲ್ಲಿ ಅಶಕ್ತರಾಗುತ್ತಿದ್ದಾರೆ. ರಂಗಚಟುವಟಿಕೆಗಳಿಗೆ ಪ್ರತಿ ಶಾಲಾ-ಕಾಲೇಜುಗಳೂ ಪ್ರೋತ್ಸಾಹ ಕೊಟ್ಟರೆ, ನಿಸ್ಸಂದೇಹವಾಗಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಪುರೋಗಾಮಿ ಬೆಳವಣಿಗೆಯನ್ನು ಕಾಣಬಹುದು’ ಎನ್ನುತ್ತಾರೆ.

ಈ ಎಲ್ಲ ಅಂಶಗಳ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಲೇ ಈ ವಾರಾಂತ್ಯದ ಇಂದಿನ ಸಂಜೆಯನ್ನು ವ್ಯೋಮದಲ್ಲಿ ಸಮೃದ್ಧಗೊಳಿಸಿಕೊಳ್ಳಲು ಪ್ರಯತ್ನಿಸಬಹುದು.

ನಾಟಕ: ಆ್ಯಬ್ಸಿನ್ತ್
ತಂಡ : ರಂಗರಥ, ಬೆಂಗಳೂರು
ಭಾಷೆ: ಕನ್ನಡ ಮತ್ತು ಇಂಗ್ಲಿಷ್
ನಿರ್ದೇಶನ : ಶ್ವೇತಾ ಶ್ರೀನಿವಾಸ್, ಆಸೀಫ್ ಕ್ಷತ್ರಿಯ
ಅವಧಿ: 40 ನಿಮಿಷಗಳು
ದಿನಾಂಕ : 5.3.2022
ಸಮಯ : ಸಂಜೆ 6ಕ್ಕೆ.
ಸ್ಥಳ: ವ್ಯೋಮ ಆರ್ಟ್ ಸ್ಪೇಸ್ ಮತ್ತು ಸ್ಟುಡಿಯೋ ಥಿಯೇಟರ್, ಜೆ.ಪಿ.ನಗರ, ಬೆಂಗಳೂರು
ಟಿಕೆಟ್ : ರೂ. 100. ಸಂಪರ್ಕ : 9632225583

*

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

ಇದನ್ನೂ ಓದಿ : Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?

Published On - 9:39 am, Sat, 5 March 22