Ibrahim Sutar : ‘ನಾನು ಬಾಲ್ಯವಿವಾಹಿತ, ಘಟಪ್ರಭಾದ ಮರೇಂಬಿ ಕೈಹಿಡಿದಾಗ ನನಗೆ ಬರೀ ಹದಿನಾಲ್ಕು’

|

Updated on: Feb 05, 2022 | 12:43 PM

Child Marriage : ‘ಬಡವರಾದ ನಮಗೆ ಮಕ್ಕಳ ಲಗ್ನ ಮಾಡುವುದು ಆಗುತ್ತದೆಯೋ, ಇಲ್ಲವೋ? ಎಂಬ ಅನುಮಾನದಿಂದ, ಹಟ ಹಿಡಿದು, ಉಪವಾಸ ಕುಳಿತು, ನನ್ನ ಲಗ್ನ ಮಾಡಿಕೊಂಡೇ ಬಂದರು. ಆವಾಗ ಆ ಲಗ್ನಕ್ಕೆ ನೂರು ರೂಪಾಯಿ ಸಾಲ ಕೊಟ್ಟು ಸಹಾಯ ಮಾಡಿದ ನಮ್ಮ ಓಣಿಯಲ್ಲಿದ್ದ 'ತಾರಾಮಾ' ತಾಯಿಯನ್ನು ನಾನೆಂದಿಗೂ ಮರೆಯುವುದಿಲ್ಲ.‘ ಇಬ್ರಾಹಿಂ ಸುತಾರ

Ibrahim Sutar : ‘ನಾನು ಬಾಲ್ಯವಿವಾಹಿತ, ಘಟಪ್ರಭಾದ ಮರೇಂಬಿ ಕೈಹಿಡಿದಾಗ ನನಗೆ ಬರೀ ಹದಿನಾಲ್ಕು’
ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಇಬ್ರಾಹಿಂ ಸುತಾರರು ಪದ್ಮಶ್ರೀ ಪುರಸ್ಕಾರ ಪಡೆದ ಸಂದರ್ಭ
Follow us on

ಇಬ್ರಾಹಿಂ ಸುತಾರ | Ibrahim Sutar : ಬಾಲ್ಯದಲ್ಲಿಯೇ ನನ್ನ ವಿವಾಹ ನಡೆದು ಹೋಯಿತು. ನನ್ನ ವಿವಾಹ ನಡೆದದ್ದೂ ಕೂಡ ಒಂದು ಸೋಜಿಗದ ಪ್ರಸಂಗ. ಅದು ಹೇಗೆಂದರೆ ನನ್ನ ಲಗ್ನದ ಸಮಯದಲ್ಲಿ ನಮ್ಮ ಮನೆಯ ಮುಂದೆ ‘ಹಂದರ’ ಹಾಕಿರಲಿಲ್ಲ. ಲಗ್ನದ ತಯಾರಿ ಇರಲಿಲ್ಲ. ಆಮಂತ್ರಣ ಪತ್ರಿಕೆಯಿಲ್ಲ, ಯಾರಿಗೂ ಆಮಂತ್ರಣ ಕೊಟ್ಟಿರಲಿಲ್ಲ. ಇನ್ನೊಬ್ಬರ ಲಗ್ನಕ್ಕೆ ಹೋಗಿ ಕಾಡಿ ಬೇಡಿ ಕನ್ಯಾ ತೆಗೆದುಕೊಂಡು ನಮ್ಮ ತಾಯಿ ತಂದೆಗಳು ನನ್ನ ಲಗ್ನ ಮಾಡಿಕೊಂಡು ಬಂದರು. ಗೋಕಾಕ ತಾಲ್ಲೂಕಿನ ಘಟಪ್ರಭಾದಲ್ಲಿ ವಾಸಿಸುವಂಥ ನಮ್ಮ ಸೋದರತ್ತೆಯ ಮಗಳಾದ ‘ಮರೇಂಬಿ’ ಎನ್ನುವವಳೇ ನನ್ನ ಕೈ ಹಿಡಿದ ನನ್ನ ಧರ್ಮಪತ್ನಿ. ಅದೇನಾಯಿತೆಂದರೆ, ನಮ್ಮ ಸೋದರತ್ತೆಯ ಮಕ್ಕಳ ಲಗ್ನ ನಿಶ್ಚಯವಾಗಿತ್ತು. ಅವರು ನಮ್ಮ ಮನೆಗೆ ಲಗ್ನದ ಆಮಂತ್ರಣ ಕೊಡಲಿಕ್ಕೆ ಬಂದಾಗ, ನಮ್ಮ ತಾಯಿ ತಂದೆಗಳು ನಮ್ಮ ಸೋದರತ್ತೆಗೆ, ‘ಇದೇ ಸಂದರ್ಭದಲ್ಲಿ ಬಡವರಾದ ನಮಗೊಂದು ಕನ್ಯಾ ಕೊಟ್ಟು ನಮ್ಮ ಮಗನಿಗೆ ಲಗ್ನ ಮಾಡಿಕೊಡಿ’ ಎಂದರು. ಅದಕ್ಕೆ ಅವರು ನಿಮಗೆ ಕನ್ಯಾ ಕೊಡ್ತಿವಿ ಖರೇ, ಈಗಲ್ಲ. ಮುಂದಕ್ಕೆ ದೊಡ್ಡವರಾದ ಬಳಿಕ ಕೊಡ್ತೀವಿ, ಈಗ ನಾವು ಹೆಚ್ಚಿನ ತಯಾರಿ ಮಾಡಿಲ್ಲ’ ಅಂದರು. ಅದಕ್ಕೆ ನಮ್ಮ ತಾಯಿ ತಂದೆಗಳು ಕೇಳಲೇ ಇಲ್ಲ. ನನಗೆ ಲಗ್ನವಾದಾಗ 14 ವರ್ಷ.

*

(ಭಾಗ -3 )

ನಂತರ ಕುಡಚಿ ಗ್ರಾಮದ ಶ್ರೇಷ್ಠ ಸೂಫಿ ಸಂತರಾದ ಜುನ್ನೇದ ಪರಂಪರೆಯ ಹಜರತ್ ಅಬ್ಬಾಸ್ ಅಲಿ ಜುನ್ನೇದ ಬಾಬಾ ಅವರಿಂದ ಮಹಾಲಿಂಗಪುರದಲ್ಲಿ ಗುರುದೀಕ್ಷೆ ಪ್ರಾಪ್ತವಾಯಿತು. ಷರೀಯತ್, ತರೀಖತ್‌, ಹಕೀಕತ್, ಮಾರೀಫತ್ ಎಂಬ ಪದಾಂತಗಳ ಹಾಗೂ ಗುಪ್ತವಾದ, ರಹಸ್ಯವಾದ ‘ತತ್ವಜ್ಞಾನ’ದ ಕಿಂಚಿತ್ ಪ್ರಕಾಶವು ಪ್ರಾಪ್ತವಾಯಿತು. ಇಸ್ಲಾಮ್ ಧರ್ಮದ ಸೂಫಿಗಳೆಂದರೆ ಆರೂಢರು, ಭಗವದ್ಭಕ್ತರು, ಮಹಾ ಮಾನವತಾವಾದಿಗಳು, ಜಾತಿ, ಮತ, ಪಂಥಗಳ ಮಹಾಂತರೆಂಬುದು ಮೇರೆಯನ್ನು ಮೀರಿನಿಂತ ಆವಾಗ ನನಗೆ ಗೊತ್ತಾಯಿತು.

ಜಿಜ್ಞಾಸೆ

ನನಗೆ ತಿಳಿವಳಿಕೆಗೆ ಬಂದಾಗಿನಿಂದ ನಾನು ಗಮನಿಸಿದ್ದೇನೆಂದರೆ ನನ್ನ ಮನಸ್ಸಿನಲ್ಲಿ ಎಲ್ಲ ಧರ್ಮಗಳ ತತ್ವವನ್ನೂ ಅರಿಯಬೇಕೆಂಬ ತುಲನಾತ್ಮಕ ಅಧ್ಯಯನ ಮಾಡಬೇಕೆಂಬ, ಎಲ್ಲ ಸಿದ್ಧಾಂತಗಳ ಗುರಿ ಮತ್ತು ಸಾರವನ್ನು ತಿಳಿಯಬೇಕೆಂಬ ಹಂಬಲ, ಜಿಜ್ಞಾಸೆ ಸುಪ್ತವಾಗಿ-ಗುಪ್ತವಾಗಿ ಸದಾ ನನ್ನ ಮನಸ್ಸಿನಲ್ಲಿತ್ತು. ಅದಕ್ಕೆ ಅವಕಾಶದ ದಾರಿ ಮಾಡಿಕೊಟ್ಟಿದ್ದು ಭಜನಾ ಸಂಘ.

ಪತ್ನಿ ಮರೇಂಬಿಯೊಂದಿಗೆ  ಇಬ್ರಾಹಿಂ ಸುತಾರರು

ನಾವು ವಾಸವಾಗಿರುವ ಓಣಿಯಲ್ಲಿ ‘ಗುರು ಸಾಧು ನಿರಂಜನಾವಧೂತರ’ ಒಂದು ಗುಡಿ ಇದೆ. ಆ ಗುಡಿಯಲ್ಲಿ ನಮ್ಮ ಸ್ನೇಹಿತರಾದ ಕರೆಪ್ಪ ಪಾತ್ರೋಟ, ಯಶವಂತ ಪಾತ್ರೋಟ ಇವರು ದಿನಾಲು ಸಾಯಂಕಾಲ ಸೇರಿಕೊಂಡು ಭಜನೆ ಕಲಿಯುತ್ತಿದ್ದರು. ತತ್ವಪದಗಳನ್ನು ಹಾಡುತ್ತಿದ್ದರು.

ಒಂದು ದಿನ ನಾನು ಆಕಸ್ಮಿಕವಾಗಿ ಅಲ್ಲಿಂದ ಹಾಯ್ದು ಹೋಗುವಾಗ ‘ಮಾತು ಮಾತಿಗೆ ಶಂಕರಾ’ ಎಂಬ ಪದ್ಯ ನನ್ನ ಕಿವಿಗೆ ಬಿತ್ತು. ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಏಕೆಂದರೆ ಪ್ರತಿಯೊಂದು ಕೆಲಸದ ಆರಂಭದಲ್ಲಿ ಪರಮಾತ್ಮನನ್ನು ನೆನೆಯಬೇಕೆಂಬ ಉಪದೇಶ ಆ ಪದ್ಯದಲ್ಲಿತ್ತು. ನಾವೂ ಕೂಡ ಮಸೀದೆಯಲ್ಲಿ ಕಲಿತದ್ದೇನೆಂದರೆ ‘ಹರ್ ಕಾಮ ಬಿಸ್ಮಿಲ್ಲಾ ಕೆ ಸಾಥ ಶುರು ಕರೋ’ ಅಂದರೆ ‘ಪ್ರತಿಯೊಂದು ಕೆಲಸ ಅಲ್ಲಾಹನ ನೆನೆದು ಪ್ರಾರಂಭಿಸಿರಿ’ ಎಂದರ್ಥ. ಹೀಗಾಗಿ ಎಲ್ಲ ಧರ್ಮಗಳ ಗುರಿ ಒಂದೇ ಎಂಬುದು ಗೊತ್ತಾಯಿತು, ಇನ್ನೂ ವಿಶೇಷವಾಗಿ ತಿಳಿದುಕೊಳ್ಳಬೇಕೆಂಬ ಕುತೂಹಲ ಹುಟ್ಟಿ, ನನಗೂ ಭಜನೆ ಕಲಿಸಿರಿ ಎಂದು ಆ ಭಜನಾ ಸಂಘದಲ್ಲಿ ಸೇರಿಕೊಂಡೆನು. ಅವರೂ ಹೃದಯ ವೈಶಾಲ್ಯತೆಯಿಂದ ಬರಮಾಡಿಕೊಂಡರು.

ಇಬ್ರಾಹಿಂ ಸುತಾರರುಕುಟುಂಬದೊಂದಿಗೆ

ನನಗೆ ಭಜನೆ ಕಲಿಸಿದವರು ಹುಲ್ಯಾಳದ ಬಸಪ್ಪಣ್ಣ ಹಣಗಿಕಟ್ಟೆ, ಗುರುಪಾದಪ್ಪ ಕಕಮರಿ, ಭವರುದ್ದೀನ ಪೆಂಡಾರಿ, ಮಲ್ಲಪ್ಪ ಕಲಾದಗಿ ಇವರೆಲ್ಲರನ್ನೂ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸುತ್ತೇನೆ. ಇದಕ್ಕೆಲ್ಲ ಬಹಳಷ್ಟು ಪ್ರೋತ್ಸಾಹ ಕೊಟ್ಟವರು ಚನ್ನಪ್ಪಣ್ಣ ಕಿರಗಟಗಿ, ಮಲ್ಲಪ್ಪಣ್ಣ ಶಿರೋಳ ಹಾಗೂ ಪಾತ್ರೋಟ ಬಂಧುಗಳನ್ನು ಎಂದಿಗೂ ಮರೆಯುವುದಿಲ್ಲ.

(ಮುಗಿಯಿತು)

ಭಾಗ 1 : Ibrahim Sutar : ನನ್ನವ್ವ ನಂಬಿದ ‘ಕಟಕ್​ ರೊಟ್ಟಿ ಖಾರಾ ಎಣ್ಣಿ’ ಎಂಬ ಮೃಷ್ಟಾನ್ನಕ್ಕೆ ಶರಣುಶರಣೆನ್ನುತ್ತಿದ್ದ ಆ ದಿನಗಳು

ಭಾಗ 2 : Ibrahim Sutar : ‘ಅಕಸ್ಮಾತ್ ಆ ದಿನ ದಿಂಡಿಯಾತ್ರೆ ಪಂಢರಪುರಕ್ಕೆ ಹೊರಟಿದ್ದರೆ, ನಾನೂ ಅದರ ಬೆನ್ನು ಹತ್ತಿದ್ದರೆ’

 

Published On - 12:23 pm, Sat, 5 February 22