AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾದಿಯೇ ತೋರಿದ ಹಾದಿ: ‘ನಮ್ಮದು ಆಂಧ್ರಪ್ರದೇಶವಾದರೂ ನಾವು ಕಥೆ ಹೇಳುವುದು ಕನ್ನಡದಲ್ಲಿಯೇ’

Kinnari Artists : ಸೋರೆ ಬುರುಡೆಯನ್ನು ಒಣಗಿಸಿ ಬೀಜ ತೆಗೆದು ಬಿದಿರು ಕೋಲು ಹಾಕಿ ತಂತಿ ಕಟ್ಟಿದರೆ ಕಿನ್ನರಿ ತಯಾರು. ಕೆಲವರು ಇವರನ್ನು ಕಿನ್ನರಿ ಜೋಗಿ ಎಂದರೆ ಗೊತ್ತಿಲ್ಲದವರು ಮೂರು ಬುರುಡೆಯವರು ಎನ್ನುತ್ತಾರೆ.

ಹಾದಿಯೇ ತೋರಿದ ಹಾದಿ: ‘ನಮ್ಮದು ಆಂಧ್ರಪ್ರದೇಶವಾದರೂ ನಾವು ಕಥೆ ಹೇಳುವುದು ಕನ್ನಡದಲ್ಲಿಯೇ’
ಪತ್ನಿ ಗೌರಮ್ಮನೊಂದಿಗೆ ಕಿನ್ನರಿ ಜೋಗಿ ಸಿದ್ಧಪ್ಪ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Mar 03, 2022 | 2:59 PM

Share

ಹಾದಿಯೇ ತೋರಿದ ಹಾದಿ | Haadiye Torida Haadi: ‘ ಬೆಂಗಳೂರಿನಿಂದ ಸುಮಾರು ನಲವತ್ತೈದು ಕಿ.ಮೀ ದೂರದಲ್ಲಿರುವ ಚಿಕ್ಕಮುದ್ದೇನಹಳ್ಳಿಯಲ್ಲಿ ಕಿನ್ನರಿ ಜೋಗಿ ಸಿದ್ದಪ್ಪ ಕಿನ್ನರಿ ನುಡಿಸುತ್ತ ಎದುರಾದರು. ಅವರ ಹೆಂಡತಿ ಗೌರಮ್ಮ ಜೋಳಿಗೆ ಹಿಡಿದುಕೊಂಡು ಹಿಂದೆ ಬರುತ್ತಿದ್ದರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ಎಮ್ಮೆಟ್ಟಿ ಗ್ರಾಮದವರಾದ ಸಿದ್ದಪ್ಪ, 8 ಜನ ಮಕ್ಕಳಲ್ಲಿ 7ನೇ ಮಗುವಾಗಿ ಹುಟ್ಟಿದವರು. ಕಿನ್ನರಿ ನುಡಿಸುವುದು ಅವರ ಕುಲಕಸುಬು. ಇದನ್ನು ಬಿಟ್ಟು ಬೇರೆ ವ್ಯಾಪಾರ ಮಾಡುವಂತಿಲ್ಲ, ಏಕೆಂದರೆ ಪದ್ಧತಿಯನ್ನು ಬಿಡುವ ಹಾಗಿಲ್ಲ. ಕ್ಷತ್ರಿಯ ಕುಲಕ್ಕೆ ಸೇರಿದ ಇವರ ಇಡೀ ಕುಲವೇ ಕಿನ್ನರಿ ನುಡಿಸುತ್ತ ಬಂದಿದೆ. ಜೋಗಿಹಾಡು, ಕುಂತಿದೇವಿ ಕಥೆ, ಪಾಂಡವರ ಹುಟ್ಟಿದ ಕಥೆ, ಆಜ್ಞಾಪಾಶ, ಕುರುಕ್ಷೇತ್ರ ಇತ್ಯಾದಿ ಕಥೆಗಳನ್ನು ಕಿನ್ನರಿ ನುಡಿಸುತ್ತ ಹಾಡುತ್ತಾರೆ. ಹಳ್ಳಿಹಳ್ಳಿಗೆ ತಿರುಗಾಡಿ ಕಲೆಯ ಮೂಲಕ ಹೊಟ್ಟೆಹೊರೆಯುವ ಇವರು ಕನ್ನಡದವರೇ ಆಗಿಹೋಗಿದ್ದಾರೆ. ಜ್ಯೋತಿ ಎಸ್. ಸಿಟಿಝೆನ್​ ಜರ್ನಲಿಸ್ಟ್

*

(ಹಾದಿ 8)

ಊರಿಂದ ಊರಿಗೆ ಮನೆಯಿಂದ ಮನೆಗೆ ಭಿಕ್ಷೆಗಾಗಿ ಹೋದಾಗ ಕೆಲವರು ಅರಿಶಿಣ, ಕುಂಕುಮ ಕೊಟ್ಟು, ಬರ್ರಪ್ಪ ಜೋಗಪ್ಪನವರು ಅಂತ ಬರಮಾಡಿಕೊಂಡು ಒಂದು ಮೊರ ರಾಗಿನೋ, ರಾಗಿ ಹಸಿಟೋ ಕೊಟ್ಟು ಕಳುಹಿಸುತ್ತಾರೆ. ಹಲವರು ಕಡೆಗಣಿಸಿ ಮುಂದೆ ಹೋಗಿ ಅಂತಾರೆ. ಪ್ರತಿ ದಿನವೊಂದಕ್ಕೆ 5ಸೇರು ಹಸಿಹಿಟ್ಟು, 3ಸೇರು ಅಕ್ಕಿ, 5ಸೇರು ರಾಗಿ ಹೀಗೆ ಒಂದೊಂದನ್ನು ಒಂದೊಂದು ಜೋಳಿಗೆ ತುಂಬಿಸಿ ಕೊಳ್ಳುತ್ತಾ ಮನೆಗೆ ಹೋಗುತ್ತೇವೆ ಎನ್ನುತ್ತಾರೆ ಸಿದ್ಧಪ್ಪ.

ನಾನು ಏನೂ ಓದಿಲ್ಲ ಎನ್ನುವ ಇವರು ಇಷ್ಟು ಚಂದ ಹೇಗ್ ಹಾಡ್ತೀರಿ ಅಂದಾಗ ಇದೆಲ್ಲ ಯಾರೂ ಕಲಿಸಿದ್ದಲ್ಲ. ನಮ್ಮಪ್ಪ, ನಮ್ಮ ತಾತ ಹಾಡುತ್ತಿದ್ದನ್ನು ಕೇಳಿಸಿಕೊಂಡು ಬಾಯಿಂದ ಬಾಯಿಗೆ ಬಂದ ಜಾಡು ಇದು ಎನ್ನುತ್ತಾರೆ.

ನಾವು ಕಿನ್ನರಿ ನುಡಿಸುತ್ತ ಕಲ್ಕೋಟೆ, ಹುಲಿಕುಂಟೆ, ಸುಂದರನಹಳ್ಳಿ, ಆರೋಡಿ, ಶಾಸಲು, ಹಳ್ಳಿಪುರ, ತೊಂಡೆಬಾವಿ, ಅಲ್ಲಹಳ್ಳಿ, ಮಂಚೇನಹಳ್ಳಿ, ಅಜ್ಜಗೋಪ್ಪ ಇತ್ಯಾದಿ ಕಡೆಗಳಲ್ಲಿ ಭಿಕ್ಷೆಗಾಗಿ ಹೋಗುತ್ತೇವೆ. ಗಾಳಿ, ಚಳಿ, ಮಳೆ ಎನ್ನದೆ ಊರೂರು ಸುತ್ತುತ್ತೇವೆ. ಯಾವುದಾದರೂ ಊರ ಬಯಲಿನಲ್ಲಿ ಒಂದು ಕಡೆ ಟೆಂಟ್ ಹಾಕಿಕೊಂಡು ಒಂದು ವಾರ ಇರುತ್ತೇವೆ. ಕೆಲವೊಮ್ಮೆ ಹಾವು, ಚೇಳುಗಳ ಕಾಟ. ಶೌಚಾಲಯದ ಸಮಸ್ಯೆ ಒಂದಾ ಎರಡಾ ಕಷ್ಟ? ಮತ್ತೆ ಮುಂದಿನ ಊರು ಎಂದು ಬೇಸರಿಸುತ್ತಾರೆ.

ಎರಡು ದಿನಗಳ ಕಾಲ ನಿರಂತರವಾಗಿ ಕಿನ್ನರಿಯ ನಾದದೊಂದಿಗೆ ಕಥೆ ನುಡಿಯುತ್ತೇವೆ. ಪಾಂಡವರು ಹುಟ್ಟಿದ್ದು, ಬೆಳೆದದ್ದು, ತಾಯಿ ಮನೆಗೆ ಬರೋದು, ಪಾಂಡವರು ಕಾಡಿಗೆ ಹೋಗಿ ಊಟ, ನಿದ್ರೆಯಿಲ್ಲದೇ ವನವಾಸ ಮಾಡಿದ್ದು ಈ ರೀತಿಯಾಗಿ ಮುಂದುವರೆಸುತ್ತೇವೆ. ಊರಿನ ದೊಡ್ಡವರು ನಮ್ಮನ್ನು ಕರೆಸಿ ಕಥೆ ಮಾಡಿಸುತ್ತಾರೆ. ಕಥೆ ಎಲ್ಲ ಮುಗಿದಮೇಲೆ ರಾಗಿ, ಅಕ್ಕಿ, ಬೇಳೆ, ಅಷ್ಟೋ ಇಷ್ಟೋ ಹಣ ಕೊಟ್ಟು ಕಳುಹಿಸುತ್ತಾರೆ ಎಂದು ತಮ್ಮ ದಿನಚರಿಯನ್ನು ವಿವರಿಸುತ್ತಾರೆ.

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ; ‘ರೌಡಿ ಥರಾ ಕೈಗೊಂದು ಕಡಗ ಹಾಕಿಕೊ, ಬೆಂಗಳೂರಲ್ಲಿ ಯಾರೂ ನಿನ್ನ ತಂಟೆಗೆ ಬರಲ್ಲ!’

Kinnari Folk Artists of Karnataka Hadiye Torida Haadi Jyothi S

ಊರಿಂದೂರಿಗೆ ಓಡಾಡಲು ದ್ವಿಚಕ್ರವಾಹನವೇ ಆಧಾರ

ಸೋರೆ ಬುರುಡೆಯನ್ನು ಒಣಗಿಸಿ ಬೀಜ ತೆಗೆದು ಬಿದಿರು ಕೋಲು ಹಾಕಿ ತಂತಿ ಕಟ್ಟಿ ಇಂಪಾದ ನಾದ ಹೊರ ಹೊಮ್ಮುವಂತೆ ತಾವೇ ಕಿನ್ನರಿಯನ್ನು ತಯಾರಿ ಮಾಡಿಕೊಳ್ಳುತ್ತಾರೆ. ಕೆಲವರು ಇವರನ್ನು ಕಿನ್ನರಿ ಜೋಗಿ ಎಂದರೆ ಗೊತ್ತಿಲ್ಲದವರು ಮೂರು ಬುರುಡೆಯವರು ಅಂತಾರೆ.

ನಮಗೆ 6 ಜನರು ಮಕ್ಕಳು. 4 ಜನರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳುಹಿಸಿದ್ದೇನೆ. ಇಬ್ಬರು ಗಂಡುಮಕ್ಕಳು ಕಿನ್ನರಿ ನುಡಿಸುವುದನ್ನು ಕೇಳೋಕೂ ಬರಲ್ಲ, ಅವರನ್ನು ಓದಿಸುತ್ತಿದ್ದೇನೆ. ಅವರು ಹೇಳೋದು ಇಲ್ಲ ಎನ್ನುತ್ತಾರೆ 56 ವರ್ಷದ ಸಿದ್ದಪ್ಪ.

ಒಂದು ವರ್ಷದಲ್ಲಿ ಶಿವರಾತ್ರಿ, ಯುಗಾದಿ, ಗೌರಿ ಗಣೇಶ ಹಬ್ಬಗಳಲ್ಲಿ ಬೇರೆ ಬೇರೆ ಊರಿಗೆ ಭಿಕ್ಷೆ ಎತ್ತಿ ಮತ್ತೆ ಊರಿಗೆ ಹೋಗಿ ಜೀವನ ನಡೆಸುತ್ತೇವೆ. ಮತ್ತೆ ಅಲ್ಲಿ ಜೀವನೋಪಾಯಕ್ಕಾಗಿ ಕಳೆ ತೆಗೆಯುವುದು, ಹೊಲ ಕೊಯ್ಯುವುದು, ನೀರು ಕಟ್ಟುವುದು, ಬೇಸಾಯ ಇತ್ಯಾದಿ ಕೂಲಿ ಮಾಡುವುದು ಮಾಡುತ್ತೇವೆ ಎನ್ನುತ್ತಾರೆ ಗೌರಮ್ಮ.

ನಾವು ಕ್ಷತ್ರಿಯ ಮರಾಠಿಗರು. ನಮ್ಮ ಭಾಷೆಗೆ ಬರವಣಿಗೆಯಿಲ್ಲ. ನಾವು ನಮ್ಮನ್ನು ಪರಿಶಿಷ್ಟ ಜನಾಂಗದವರೆಂದೇ  ಹೇಳಿಕೊಳ್ಳಬೇಕು. ತುಮಕೂರು ಜಿಲ್ಲೆ, ಜನಕಲ್ ಹಟ್ಟಿ ಗ್ರಾಮ, ಮದಗಿರಿ ಹತ್ತಿರ ಸುಮಾರು 25 ವರ್ಷಗಳಿಂದ ವಾಸವಿದ್ದೇವೆ. ನಮಗೆ ಇರೋದಕ್ಕೆ ಅಂತ ಸ್ವಂತ ಮನೆಯಿಲ್ಲ. ನಾವು ಎಷ್ಟು ದಿನ ಹೀಗೆ ಬದುಕಬೇಕು. ನಮ್ಮ ಕಾಲವೇನೋ ಮುಗಿಯುತ್ತ ಬಂತು. ಮಕ್ಕಳಿಗಾದರೂ ಮಕ್ಕಳಿಗಾದರೂ ಒಳ್ಳೆಯ ಕಾಲ ಬರಲಿ ಎಂದು ಓದಿಸುತ್ತಿದ್ದೇವೆ ಎನ್ನುತ್ತಾರೆ ದಂಪತಿ.

(ಮುಂದಿನ ಹಾದಿ : 10.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಹಾದಿ : ಹಾದಿಯೇ ತೋರಿದ ಹಾದಿ: ಈ ಊರಿಗೆ ಆಸ್ಪತ್ರೆಯಿಲ್ಲ ಬಸ್ಸಿಲ್ಲ ದೇವಸ್ಥಾನವೂ ಇಲ್ಲ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!