No Delete Option: ‘ಯಾವಳೇ ಅವಳು ಅಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಗೆ!’ ವಾರ್ಡನ್ ರೌದ್ರಾವತಾರ

Hostel Life: ‘ಅವತ್ತು ಕೃತಿ ಆ ಎಂ.ಡಿ ಯವರೊಡನೆ ಫೋನಿನಲ್ಲಿ ಕರ್ಚಿಫ್​ನಿಂದ ಧ್ವನಿಯನ್ನ ಬದಲಾಯಿಸಿ, ಇರೋ ಬರೋ ಎಲ್ಲ ವಿಷಯವನ್ನು ಒದರಿದ್ದಳು. ಅಷ್ಟೇ! ಏನೋ ಸಾಧನೆ ಮಾಡಿದ್ದಷ್ಟು ಹೆಮ್ಮೆ ತನ್ನ ಮೇಲೆ ತನಗೆ.’ ಡಾ. ಜ್ಯೋತಿ ಸಾಮಂತ್ರಿ

No Delete Option: ‘ಯಾವಳೇ ಅವಳು ಅಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಗೆ!’ ವಾರ್ಡನ್ ರೌದ್ರಾವತಾರ
ಡಾ. ಜ್ಯೋತಿ ಸಾಮಂತ್ರಿ
Follow us
|

Updated on: Feb 09, 2022 | 5:56 PM

No Delete Option: ಕಾಲೇಜಿಂದ ಬರುತ್ತ ಅಲ್ಲೊಂದು ಕಾಯಿನ್ ಬೂತು. ಅವರು ಮಾಡಿದ್ದ ಯೋಜನೆಯ ಪ್ರಕಾರ ನಂಬರ್ ಡಯಲ್ ಮಾಡಿದಳು. ಆ ವಿದ್ಯಾರ್ಥಿನಿಯರ ನಿಲಯವು ಒಂದು ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಒಬ್ಬರು ಮಾನವೀಯ ಗುಣಗಳಿಂದ ಭೂಷಿತರಾಗಿದ್ದವರು (ಅವರ ಹೆಸರು ಅಪ್ರಸ್ತುತ ಅಥವಾ ಗುಪ್ತವಾಗಿದ್ದರೆ ಎಲ್ಲರಿಗೂ ಒಳ್ಳೆಯದು!), ಅವಳ ಕೋರಿಕೆಯ ಮೇರೆಗೆ ಆ ಸಂಸ್ಥೆಯ ಎಂ.ಡಿಯವರ ನಂಬರ್ ಕೊಟ್ಟಿದ್ದರು. ಈ ಸಿನಿಮಾಗಳ ಪ್ರಭಾವ ಅದೆಷ್ಟಾಗಿರುತ್ತದೆಯೆಂದರೆ, ಅವತ್ತು ಕೃತಿ ಆ ಎಂ.ಡಿ ಯವರೊಡನೆ ಫೋನಿನಲ್ಲಿ ಕರ್ಚಿಫ್​ನಿಂದ ಧ್ವನಿಯನ್ನ ಬದಲಾಯಿಸಿ, ಇರೋ ಬರೋ ಎಲ್ಲ ವಿಷಯವನ್ನು ಒದರಿದ್ದಳು. ಅಷ್ಟೇ! ಏನೋ ಸಾಧನೆ ಮಾಡಿದ್ದಷ್ಟು ಹೆಮ್ಮೆ ತನ್ನ ಮೇಲೆ ತನಗೆ. ಸಂಜೆ, ಹಾಸ್ಟೆಲ್ ಒಳಗೆ ಇನ್ನೇನು ಕಾಲಿಡಬೇಕು, ರೌದ್ರಾವತಾರ ತಾಳಿದ್ದ ವಾರ್ಡನ್, “ಯಾವಳೇ ಅವಳು, ಇಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಿಗೆ. ಎಷ್ಟ್ ಸೊಕ್ಕು ಅಂತೀನಿ. ಯಾರು ಅಂತ ಗೊತ್ತಾದ್ರೆ ನೋಡಿ, ಚರ್ಮ ಸುಲೀತೀನಿ’’ ಇನ್ನೂ ಕೋಪದಿಂದ ಮತ್ತು ಕೆಟ್ಟದಾಗಿ ಬೈಯ್ಯಲು ಶುರುಮಾಡಿದ್ದರು.

ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr. Jyothi Samantri)

*

ಭಾಗ – 2

ಕೃತಿ, ಹಠವಾದಿ ಎಂಬುದು ಮೊದಲಿಂದಲೂ ಎಲ್ಲರಿಗೂ ತಿಳಿದ ವಿಷಯ. ಹಾಗೂ ಎಲ್ಲರನ್ನು ಕ್ಷಣಮಾತ್ರದಲ್ಲಿ ಸೆಳೆದುಬಿಡುವ ಸ್ವಭಾವ. ಬಡತನದ ಹಿನ್ನೆಲೆಯಿಂದ ಬಂದಿದ್ದರಿಂದ ಜವಾಬ್ದಾರಿ ಶ್ರಮ ಹಾಗೂ ಗಂಭೀರತೆ ಕೊಂಚ ಹೆಚ್ಚೇ ಇತ್ತು, ಹಾಗೆಯೇ ಅಹಂಕಾರ; ಸಾತ್ವಿಕ ಅಹಂಕಾರ! ತುಂಬಾ ಚನ್ನಾಗಿ ಓದುತ್ತಿದ್ದಳು. ಹಾಗಾಗಿ ಆ ವಾರ್ಡನ್​ಗೆ ಇವಳು ಮೆಚ್ಚಿನ ವಿದ್ಯಾರ್ಥಿನಿ.

ಇವಳು ಒಳಗೆ ಹೋದೊಡನೆಯೇ, ಒಂದು ಮೂಲೆಯಲ್ಲಿ ಕುರ್ಚಿಯ ಮೇಲೆ ಕೂತು ಸಂಜೆಯ ಗೂಗೆಯಂತೆ ಕೂಗುತ್ತಿದ್ದ ಮೇಡಂ ಸಡನ್ ಆಗಿ ಎದ್ದು ಬಂದು,

“ನೋಡೆ, ನೀವೇ ಯಾರೋ ಹೀಗ್ ಮಾಡಿದೀರಿ ಅಂತ ಗುಮಾನಿ ನಂಗೆ, ಬಾಯ್ಮುಚ್ಕೊಂಡ್ ಯಾರು ಅಂತ ಒಪ್ಕೊಳಿ, ಇಲ್ಲಾಂದ್ರೆ ಸರ್ ನ್ನೇ ಕರೆಸ್ಬೇಕಾಗುತ್ತೆ.”

ಕೃತಿ – “ ಮೇಡಂ, ನಮ್ಮ ಮೇಳೆ ಅನುಮಾನಾನಾ? ನಾವ್ ಹೀಗೆಲ್ಲ ಮಾಡ್ತೀವಂತ ನಿಮಗನ್ಸುತ್ತಾ?”

ವಾರ್ಡನ್ – “ನೀವಂದ್ರೆ ನೀನಲ್ಲ, ನಿನ್ ಬಗ್ಗೆ ಗೊತ್ತು ನಂಗೆ, ಏನಿದ್ರು ಮುಖಾಮುಖಿ. ನಿನ್ ದೋಸ್ತಿ ಇದಾವಲ್ಲ ಕಮಲ, ಲಕ್ಷ್ಮಿ ಅವರ ಮೇಲೆ ನಂಗೆ ಜಾಸ್ತಿ ಅನುಮಾನ”

ಜ್ಯೋತಿ ಸಾಮಂತ್ರಿ ಬರೆದ ಈ ಬರಹವನ್ನೂ ಓದಿ : Meeting Point : ‘ನಮ್ಮಷ್ಟಕ್ಕೆ ನಮ್ಮನ್ನು ಅರ್ಥ ಮಾಡಿಕೊಳ್ಳಲೂ ಬಿಡಬೇಡಿ’

ಕೃತಿ – “ನಿಮ್ಮಂಥ ಒಳ್ಳೇ ವ್ಯಕ್ತಿಗೆ ಹೀಗೆಲ್ಲ ಮಾಡ್ತಾರಲ, ಅವ್ರು ಯಾವತ್ತೂ ಉದ್ಧಾರ ಆಗಲ್ಲ ಮೇಡಂ. ಖಂಡಿತ ಆಗಲ್ಲ. ಆದ್ರೂ ನೀವು ಇದನ್ನ ಇಲ್ಲಿಗೆ ಬಿಡಬೇಡಿ ಮೇಡಂ, ಇನ್ನು ಏನೇನ್ ಮಾತಾಡಿದಾರೋ ಯಾರಿಗೆ ಗೊತ್ತು, ಸುಮ್ನೆ ಅಕ್ಕಿ ಬೇಳೆನೆಲ್ಲ ಚೆಲ್ಲಿ, ಬೇರೆಯದು ತರಿಸಿಬಿಡಿ. ಆವಾಗ ಸರ್ ಬಂದು ನೋಡಿ ಆ ಹುಡುಗಿ ಹೇಳಿದ್ದು ಸುಳ್ಳು ಅಂತ ಗೊತ್ತಾಗಿ, ಇನ್ನೊಂದ್ಸಲ ಯಾರ್ ಹಾಗ್ ಮಾಡಿದ್ರೂ ನಂಬಲ್ಲ”

ವಾರ್ಡನ್ – “ಭಲೆ ಇದೀಯ ನೀನು, ಊಟ ಮಾಡಿ ಮೂರು ದಿನ ಆದ್ರೂ ಕೊಬ್ಬು ನೋಡು, ಅಕ್ಕಿ ಬೇಳೆ ಚಲ್ಲಬೇಕ? ನಿಮ್ಮಪ್ಪನ ಮನೆಯಿಂದ ತಂದಿದ್ದೇನು ಅದು?”

ಅವರ ಕ್ರೋಧ ಅದೆಷ್ಟು ತಾರಕಕ್ಕೇರಿತ್ತೆಂದರೆ, ಜೀವಮಾನದಲ್ಲಿ ಕೇಳಿದ್ದ ಎಲ್ಲ ಅವಾಚ್ಯ ಶಬ್ದಗಳನ್ನ ನಿರರ್ಗಳವಾಗಿ ಆ 5 ನಿಮಿಷಗಳಲ್ಲಿ ಆಡಿ ಮುಗಿಸಿದ್ದರು. ಅಂಥ ಸಾವಿರ ನಿಮಿಷಗಳನ್ನ ಕಂಡ ಕೃತಿ, ಅವನ್ನ ತನ್ನ ಕಿವಿಗೂ ಬಡಿಯದಂತೆ ಎಚ್ಚರವಹಿಸಿ ತನ್ನ ಮಂಚದೆಡೆಗೆ ಧಾವಿಸಿದ್ದಳು.

7 ಗಂಟೆಗೆ ಮೀಟಿಂಗ್, ಬುಲಾವು ಬಂದಿತು. ಕೊಂಚ ಭಯವೇ ಆಗಿದ್ದರೂ, ತಾನೇ ಮಾತಾಡಿರುವುದೆಂದು ಕಂಡುಕೊಳ್ಳಲು ಸಾಧ್ಯವೇ ಇಲ್ಲವೆಂಬುದು ಕೃತಿಗೆ ಖಾತರಿಯಾಗಿತ್ತು. ಒಂದು ವೇಳೆ ಗೊತ್ತಾದರೂ, ನಾಮುಂದೆ ತಾಮುಂದೆ ಎಂದು ಆ ಕಾರ್ಯ ಸಾದಿಸಿದ್ದು ತಾವೇ ಎಂದು ಒಪ್ಪಿಕೊಳ್ಳಲು ಅಲ್ಲಿ ಸ್ನೇಹಿತೆಯರ ಒಗ್ಗಟ್ಟಿನ ಬಲವಿತ್ತು, ಹಾಗಾಗಿ ಯಾರ ಮೇಲೂ ಭಯದ ನೆರಳಿರಲಿಲ್ಲ.

(ಮುಂದಿನ ಭಾಗವನ್ನು ನಿರೀಕ್ಷಿಸಿ)

*

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

ಭಾಗ 1 : No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ