Gokak Falls : ಮುಖವಾಡದ ಮನುಷ್ಯರಿಗಿಂತ ಪ್ರತಿಫಲಾಪೇಕ್ಷೆ ಬಯಸದ ಪ್ರಾಣಿಗಳೇ ಮೇಲು

|

Updated on: May 04, 2022 | 3:27 PM

Pet Love: ಎಂಬಿಎ ಓದಿದ ಹುಡುಗಿ ಒಬ್ಬಳು ನನ್ನ ಬೆಕ್ಕು ಅವಳ ದಾರಿಗೆ ಅಡ್ಡ ಬಂದಿದ್ದಕ್ಕೆ ಶಪಿಸುತ್ತಿದ್ದನ್ನು ನೋಡಿ ದಂಗಾದೆ. ಅದಕ್ಕೆ ತದ್ವಿರುದ್ದ ಎನ್ನುವಂತೆ ಆನೆಗಳ ತರಬೇತಿ ಕೇಂದ್ರದಲ್ಲಿ ‘ಕಟ್ಟಿಹಾಕಿದ’ ಆನೆಗಳನ್ನು ನೋಡಿದ ನನ್ನ ಚಿಕ್ಕ ತಂಗಿ ರೋಸಿ ಹೋಗಿದ್ದಳು.

Gokak Falls : ಮುಖವಾಡದ ಮನುಷ್ಯರಿಗಿಂತ ಪ್ರತಿಫಲಾಪೇಕ್ಷೆ ಬಯಸದ ಪ್ರಾಣಿಗಳೇ ಮೇಲು
ರೂಪದರ್ಶಿ : ಆಶಾ ಪರ್ಸಿ
Follow us on

ಗೋಕಾಕ ಫಾಲ್ಸ್ | Gokak Falls : ಪ್ರೀತಿಗೆ ಕಣ್ಣಿಲ್ಲ ಅಂತ ಹೇಳ್ತಾರೆ. ಆದ್ರೆ ಪ್ರೀತಿಗೆ ಬಾಯಿ ಕೂಡ ಇಲ್ಲ ಅನ್ನೋದು ನನ್ನ ಅರಿವಿಗೆ ಬಂದದ್ದು ಪ್ರಾಣಿಗಳ ಒಡನಾಟಕ್ಕೆ ಬಿದ್ದಮೇಲೆಯೇ. ಕೆಲವರಿಗೆ ಸಾಕುಪ್ರಾಣಿಗಳು ತಮ್ಮ ಅಗತ್ಯಕ್ಕೆ ಬೇಕಾದ ಜೀವಿಗಳಾದರೆ, ಅದೆಷ್ಟೋ ಜನರಿಗೆ ಅವು ಬದುಕಿನ ಭಾಗವಾಗಿ, ಅವರೆಲ್ಲ ಭಾವಗಳಲ್ಲಿ ಪಾಲುದಾರರಾಗುವ ಒಡನಾಡಿಗಳೇ ಆಗಿರುತ್ತವೆ. ಹೀಗೆ ಮೊನ್ನೆ ತಮ್ಮ ಸಾಕುನಾಯಿಯ ಒಡನಾಟವನ್ನು ಅಕ್ಷರ ರೂಪಕ್ಕೆ ಇಳಿಸಿದ ಶೃತಿ ಜೈನ್ ಅವರ “ಝಿಪ್ಪಿಗ್ರಾಫಿ” ಎಂಬ ಪುಸ್ತಕ ಓದುತ್ತಿದ್ದೆ. ಪ್ರಾಣಿಪ್ರಿಯಳಾದ ನನಗೆ ಇಂತಹದ್ದೊಂದು ಪುಸ್ತಕದ ಕುರಿತು ಕೇಳಿದಾಗಲೂ ಓದದಿರುವುದು ಸಾದ್ಯವಾಗಲಿಲ್ಲ. ಓದುತ್ತಾ ಮನಸ್ಸು ಬಾಲ್ಯಕ್ಕೆ ಹೊರಳಿತು. ಅದು ನಮಗೆ ಬೇಸಿಗೆಯ ರಜೆ. ಮಕ್ಕಳೆಲ್ಲ ಊರೊಳಗೆ ಇದ್ದೆವು. ಆಗ ನಮ್ಮ ಮನೇಲಿ ಎಮ್ಮೆ, ಆಕಳು, ನಾಯಿ, ಬೆಕ್ಕು ಎಲ್ಲ ನಮ್ಮ ಸಂಗಾತಿಗಳು. ಆಗ ತಾನೇ ಹುಟ್ಟಿದ ಕರು ಅಂತೂ ಎಲ್ಲರ ಮುದ್ದು. ಅದಕ್ಕೆ ಗೌರಿ ಅಂತ ನಾಮಕರಣವು ಆಗಿತ್ತು. ದುರಾದೃಷ್ಟವಶಾತ್ ಅದು ಅಚಾನಕ್ ಆಗಿ ಮರಣಹೊಂದಿ ನಮ್ಮೆಲ್ಲರ ಕಣ್ಣೀರಿಗೆ ಕಾರಣವಾಗಿತ್ತು. ಅದರ ಜೊತೆಗಿನ ಒಡನಾಟ ನಮಗೆ ಅರಿಯದೆ ನಮ್ಮ ಜೊತೆ ಮರೆಯಲಾಗದಂತಹ ಬಾಂಧವ್ಯ ಬೆಸೆದು ಕೊಂಡಿತ್ತು. ಇಂದಿಗೂ ಅಷ್ಟೇ ನನಗೆ ಪ್ರಾಣಿಗಳ ಸಾಮೀಪ್ಯ ತುಂಬಾ ಹಿತವೆನಿಸುತ್ತದೆ.
ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

 

(ಹರಿವು 14)

ಮುಖವಾಡ ಧರಿಸಿ ವ್ಯಕ್ತಪಡಿಸುವ ಪ್ರೀತಿಗಿಂತ ಯಾವ ಪ್ರತಿಫಲಾಪೇಕ್ಷೆಯೂ ಇರದೇ ನಮ್ಮ ಸಾಮಿಪ್ಯವನ್ನು ಬಯಸುವ ಪ್ರಾಣಿಗಳೇ ಮೇಲು. ಈ ನಾಗಾಲೋಟದ ಬದುಕಿನಲ್ಲಿ ನಮ್ಮ ಒತ್ತಡವನ್ನು ಕಡಿಮೆ ಮಾಡುವ, ಮನಸ್ಸನ್ನು ಉಲ್ಲಾಸಗೊಳಿಸುವುದನ್ನು ಪ್ರೀತಿಯಿಂದಲೇ ನಿಭಾಯಿಸುತ್ತವೆ. ಅವುಗಳ ಸಾಂಗತ್ಯ ಎಂತಹ ಗೊಂದಲಗಳಿಂದಲೂ ನಮ್ಮನ್ನ ಅರೆಗಳಿಗೆ ದೂರಗೊಳಿಸುತ್ತದೆ ಎಂದರೆ ಉತ್ರ್ಪೇಕ್ಷೆ ಆಗಲಾರದು. ಯಾರೋ  ವೃದ್ಧದಂಪತಿ, ಜೀವನದ ಅಂಚಿನಲ್ಲಿ ಮಕ್ಕಳು ತಮ್ಮೊಟ್ಟಿಗೆ ಇರಲು ನಿರಾಕರಿಸಿದಾಗ ತಮ್ಮ ಸಾಕು ನಾಯಿಯೊಟ್ಟಿಗೆ ಕಳೆದು ಎಲ್ಲ ಆಸ್ತಿಯನ್ನೂ ಅದರ ಹೆಸರಿಗೆ ಬರೆದಿಟ್ಟಿದ್ದರು ಎಂಬ ಸುದ್ದಿಯೊಂದನ್ನು ಕೇಳಿದ್ದೆ (ಸುದ್ದಿಗೆ ಆಧಾರವಿಲ್ಲ). ಅವರ ಮಕ್ಕಳೆಲ್ಲ ವಿದೇಶ ಸೇರಿದ್ದರು. ಹಾಗಾಗಿ ನಾಯಿ, ಬೆಕ್ಕುಗಳ ಒಡನಾಟದಲ್ಲಿ ಜೀವನ ಸಾಗಿಸುವುದು ಅನಿವಾರ್ಯವಾಯಿತು.

ಇಂಥ ಅನೇಕರು ನಮ್ಮ ಸುತ್ತಮುತ್ತಲೂ ಇದ್ದಾರೆ. ಮದುವೆ, ಸಂಸಾರದಗುಂಜಿಗೆ ಹೋಗದೆ ಸಾಕು ಪ್ರಾಣಿಗಳ ಜೊತೆಗೆ ಬದುಕು ನೂಕುವವರು ಇದ್ದಾರೆ. ಅರ್ಥಾತ್ ಮಕ್ಕಳ, ಸಂಗಾತಿಗಳ ಪಾತ್ರವನ್ನು ಮರೆಸಬಲ್ಲ (ನಿಭಾಯಿಸಬಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ) ಶಕ್ತಿ ಇದೆ ಅವುಗಳಿಗೆ. ತಮ್ಮ ನಾಯಿಯೊಂದು ಹಾವಿನಿಂದ ಆಕಳನ್ನು ರಕ್ಷಿಸಿ ತಾನು ಜೀವತೆತ್ತ ಕಥೆಯನ್ನು ಅಜ್ಜ ಆಗಾಗ ಹೇಳುತ್ತಿದ್ದರು. ಅದರ ನಿಯತ್ತಿಗೆ ಸಾಟಿಯಾಗುವದು ಯಾವುದಿಲ್ಲ. ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರ ಬುದ್ಧಿ, ಅಂಧಶ್ರದ್ದೆ ಮೀರಲು ಸಾಧ್ಯವಾಗಿಲ್ಲ. ಪ್ರಾಣಿಗಳ ಕುರಿತಾಗಿಯೂ ಅನೇಕ ಅಂಧಶ್ರದ್ಧೆಗಳಿವೆ ನಮ್ಮಲ್ಲಿ. ಕಾಗೆ ಕನಿಷ್ಟ, ಕೋಗಿಲೆ ಶ್ರೇಷ್ಠ, ಬೆಕ್ಕು ಅಡ್ಡಬಂದರೆ ದುರಾದೃಷ್ಟ, ನರಿ ಮುಖ ಅದೃಷ್ಟ. ಹೀಗೆ ಹತ್ತು ಹಲವು ಮೌಢ್ಯಗಳುಂಟು.

ಎಂಬಿಎ ಓದಿದ ಹುಡುಗಿ ಒಬ್ಬಳು ನನ್ನ ಬೆಕ್ಕು ಅವಳ ದಾರಿಗೆ ಅಡ್ಡ ಬಂದಿದ್ದಕ್ಕೆ ಶಪಿಸುತ್ತಿದ್ದನ್ನು ನೋಡಿ ನಾನು ಅಕ್ಷರಶಃ ದಂಗಾದೆ. ಅದಕ್ಕೆ ತದ್ವಿರುದ್ದ ಎನ್ನುವಂತೆ ಆನೆಗಳ ತರಬೇತಿ ಕೇಂದ್ರದಲ್ಲಿ ಕಟ್ಟಿಹಾಕಿದ ಆನೆಗಳನ್ನು ನೋಡಿದ ನನ್ನ ಚಿಕ್ಕ ತಂಗಿ ಖುಷಿ ಪಡುವ ಬದಲು ರೋಸಿ ಹೋಗಿದ್ದಳು. ಇವುಗಳನ್ನು ಕಾಡಲ್ಲಿ ಬಿಡುವ ಬದಲು ಕಟ್ಟಿ ಹಾಕಿದ್ದೇಕೆ ಎಂಬುದೇ ಆಕೆಯ ದೊಡ್ಡ ಪ್ರಶ್ನೆ. ಪಂಜರಗಳಲ್ಲಿ ಪಕ್ಷಿಗಳನ್ನು ಕೂಡಿ ಹಾಕುವುದಂತೂ ಆಕೆಯ ಪಾಲಿಗೆ ಬಹುದೊಡ್ಡ ಅಪರಾಧದಂತೆ. ಇವಳಿಗೆ ಯೋಚಿಸುವ ಶಕ್ತಿ ಈಗಿನಿಂದಲೇ ಇದೆಯಲ್ಲ ಎಂದು ಖುಷಿಪಟ್ಟೆ.

ಇದನ್ನೂ ಓದಿ : ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ಪ್ರಾಣಿಗಳು ಮನುಜನ ಬದುಕಿನ ಸಂಗಾತಿಗಳಾಗಿ ಜೀವನ ಸವೆಸಿದ್ದು ಇಂದು ನಿನ್ನೆಯಿಂದ ಅಲ್ಲ. ಆದಿ ಮಾನವರು ಬೇಟೆಗೆ, ನಂತರ ಸವಾರಿಗೆ, ರಕ್ಷಣೆಗೆ, ಆಹಾರಕ್ಕೆ, ಮನರಂಜನೆಗೆ ಹೀಗೆ ಪ್ರಾಣಿಗಳನ್ನು ಬಳಸುತ್ತಲೇ ಬೆಳೆಯಿತು ನಮ್ಮ ಮನುಕುಲ. ಅದರಲ್ಲಿ ಅವುಗಳನ್ನು ಜೀವಿಗಳಾಗಿ ನೋಡಿದವರು ಎಷ್ಟೋ… ಗುಲಾಮರಂತೆ ನಡೆಸಿಕೊಂಡವರೆಷ್ಟೋ, ಹೊಟ್ಟೆಪಾಡಿಗಾಗಿ ಅವಲಂಬಿಸಿದವರೆಷ್ಟೊ..?! ನಾಯಿ, ಬೆಕ್ಕು, ಆಕಳು, ಎಮ್ಮೆ, ಎತ್ತು, ಮೊಲ, ಕೋಳಿ, ಕುದುರೆ, ಕತ್ತೆಗಳಂತಹ ಸಾಕು ಪ್ರಾಣಿಗಳು ಮನುಜನ ಒಡನಾಡಿಗಳಾಗಿ ಬೆಳೆದವು. ಆದರೆ ಕಾಡುಪ್ರಾಣಿಗಳದ್ದೆ ದುರದೃಷ್ಟಕರ ಸ್ಥಿತಿ. ಮನುಜನ ಸ್ವಾರ್ಥಕ್ಕೆ ಉಪಯೋಗವಾಗದ ಇವುಗಳು ಮನುಷ್ಯರ ಕರುಣೆಗೆ, ಪ್ರೀತಿಗೆ ಗುರಿಯಾಗದೆ ಹೋದವು. ಅವರ ಭಯಕ್ಕೆ ಕಾರಣವಾದ್ದರಿಂದ ಅವುಗಳ ರಕ್ಷಣೆಯ ಅರಿವು, ರಕ್ಷಿಸುವ ಮನಸ್ಸು ಕಡಿಮೆ ಆಯಿತು.

ನಮ್ಮ ಆಧುನಿಕತೆಯ ಧೋರಣೆಗಳಿಗೆ ಸಿಲುಕಿ ಕಾಡು, ಕಾಡುಪ್ರಾಣಿಗಳು ಅಳಿವಿನತ್ತ ಸಾಗಿದ್ದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸಹಜ ಸಂಗತಿಯೇ. ಇಂದಿಗೂ ವನ್ಯಜೀವಿಗಳ ರಕ್ಷಣೆಯ ಬಹುತೇಕ ಉದ್ದೇಶ ಅವುಗಳನ್ನು ನಮ್ಮ ಮುಂದಿನ ಪೀಳಿಗೆ ನೋಡಲಿ ಎಂಬುದೇ ಆಗಿರುತ್ತದೆ. ಬದುಕುವುದು ಅವುಗಳ ಹಕ್ಕು ಅದರ ಮೇಲೆ ನಮಗೆ ಯಾವ ಅಧಿಕಾರವೂ ಇಲ್ಲ ಎಂಬುದು ನಮಗಿನ್ನೂ ಯಾವಾಗ ಅರ್ಥವಾಗುವುದೋ ಏನೋ? ‘ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತದೆ. ಕಾಡುಗಳನ್ನು ನಾಶ ಮಾಡಿದಾಗ, ಅಲ್ಲಿರುವ ಪ್ರಾಣಿಗಳನ್ನು ಅವುಗಳ ಪರಿಸರವನ್ನು ಧ್ವಂಸ ಮಾಡಿದಾಗ ಅದ್ಭುತಗಳ ನಿರಂತರ ನಿಧಿಯೊಂದನ್ನು ನಮ್ಮ ಕಿರಿಯ ಜನಾಂಗ ಕಳೆದುಕೊಳ್ಳುತ್ತಿದೆಯಲ್ಲ ಎಂದು ಮನಸ್ಸು ಖಿನ್ನವಾಗುತ್ತದೆ’ ಎಂಬ ತೇಜಸ್ವಿ ಅವರ ಮಾತಿನಲ್ಲಿ ಕಾಡುಪ್ರಾಣಿಗಳ ಅಳಿವು ಮಾತ್ರವಲ್ಲ ನಮ್ಮ ಸೋಲು ಅಡಗಿದೆ.

ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶಪೂರ್ವಕ, ವಿಶೇಷ ಸೃಷ್ಟಿ ಎಂಬ ಭಾವವೊಂದು ಗಟ್ಟಿಯಾಗಿ ಬೇರೂರಿದೆ ನಮ್ಮಲ್ಲಿ. ಅದನ್ನು ಕಿತ್ತೆಸೆಯುವವರೆಗೂ ನಾವು ಮಾಡಿದ್ದೆಲ್ಲ ಸರಿಯೇ ಎಂಬ ಊಹೆಯಲ್ಲೆ ಬದುಕುತ್ತೇವೆ. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ ನಾವು ಪ್ರಕೃತಿಯ ಒಂದು ಭಾಗ ಎಂಬ ತೇಜಸ್ವಿಯ ನುಡಿ ಸರ್ವಕಾಲಕ್ಕೂ ಮನುಕುಲ ನೆನಪಿಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ.

*

(ಮುಂದಿನ ಹರಿವು : 18.5.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com 

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/gokak-falls