Theatre : ಎಲ್ಲಿ ಅಡಗಿಹರಿಲ್ಲಿ ಖಳನಾಯಕರು? ‘ಪ್ರಾಜೆಕ್ಟ್ ನಗ್ನ’ ಪ್ರದರ್ಶನ ಇಂದು ಸಂಜೆ ರಂಗಶಂಕರದಲ್ಲಿ

|

Updated on: Sep 26, 2021 | 2:37 PM

Kannada Play : ‘ಅಭಿವೃದ್ಧಿಯಿಂದ ಉಂಟಾದ ಅಸಮತೋಲನ ಮತ್ತು ಅದರ ಪರಿಣಾಮಗಳನ್ನು ಎದುರಿಸುವ ಮುಗ್ಧ, ಅಸಹಾಯಕ ಜನಸಮುದಾಯದ ನಡುವಿನ ಸಂದಿಗ್ಧ, ಸಂಕೀರ್ಣ, ಸನ್ನಿವೇಶಗಳ ಸೂಕ್ಷ್ಮ ರೂಪಕ ಈ ನಾಟಕ.’ ಅರ್ಚನಾ ಶ್ಯಾಮ್

Theatre : ಎಲ್ಲಿ ಅಡಗಿಹರಿಲ್ಲಿ ಖಳನಾಯಕರು? ‘ಪ್ರಾಜೆಕ್ಟ್ ನಗ್ನ’ ಪ್ರದರ್ಶನ ಇಂದು ಸಂಜೆ ರಂಗಶಂಕರದಲ್ಲಿ
ನಾಟಕಕಾರ ರಾಮ್ ಗಣೇಶ ಕಮತರ್, ರಂಗನಿರ್ದೇಶಕರಾದ ಬಿ. ಸುರೇಶ ಮತ್ತು ಅರ್ಚನಾ ಶ್ಯಾಮ್
Follow us on

Project Nagna Kannada Play : ಬೆಂಗಳೂರಿನ ರಂಗಶಂಕರದಲ್ಲಿ ‘ಅಂತರಂಗ’ ತಂಡದಿಂದ ಇಂದು ಮಧ್ಯಾಹ್ನ 3.30ಕ್ಕೆ ‘ಪ್ರಾಜೆಕ್ಟ್ ನಗ್ನ’ ನಾಟಕ ಪ್ರದರ್ಶನ ಏರ್ಪಟ್ಟಿದೆ. ಇದು ನಾಟಕಕಾರ ರಾಮ್ ಗಣೇಶ್ ಕಮತಮ್ ಅವರ ‘ಪ್ರಾಜೆಕ್ಟ್ ಸ್ಟ್ರಿಪ್’ ಇಂಗ್ಲಿಷ್ ನಾಟಕದ ಕನ್ನಡ ಅವತರಿಣಿಕೆಯಾಗಿದ್ದು, ನಿರ್ದೇಶಕ ಬಿ. ಸುರೇಶ ಅವರಿಂದ ಅನುವಾದಿಸಲ್ಪಟ್ಟಿದೆ. ರಂಗನಿರ್ದೇಶಕಿ ಅರ್ಚನಾ ಶ್ಯಾಮ್ ನಿರ್ದೇಶನದಲ್ಲಿರುವ ಈ ನಾಟಕ ಈಗಾಗಲೇ ಮೂರು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಈ ತನಕ 9 ನಾಟಕಗಳನ್ನು ನಿರ್ದೇಶಿಸಿರುವ ಅರ್ಚನಾ ಅವರಿಗೆ, ಈ ಹತ್ತನೇ ನಾಟಕ ವಿಭಿನ್ನ ಅನುಭವವನ್ನು ಕಟ್ಟಿಕೊಟ್ಟಿದ್ದು ಹೇಗೆ?  ನಾಟಕದ ಕಥಾವಸ್ತು ಇವರನ್ನು ಸೆಳೆದಿದ್ದು ಹೇಗೆ ಮತ್ತು ರಂಗವಿನ್ಯಾಸದ ವೈಶಿಷ್ಟ್ಯವೇನು ಎಂದು ಕೇಳಲಾಯಿತು.    

ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಎರಡೂ ಪರಸ್ಪರ ಎದುರಾಗಿ ಉಂಟುಮಾಡುವ ತಲ್ಲಣ ಮತ್ತು ಉಂಟಾಗುವ ಸಮಸ್ಯೆಗಳು ಹೊಸದಲ್ಲ. ಯಾವುದೇ ಸಮಾಜವೂ ಎದುರಿಸಲೇಬೇಕಾದ ಬಿಕ್ಕಟ್ಟು ಇದು. ಆದುದರಿಂದಲೇ ಈ ವಿಷಯ ಸಾಮಾಜಿಕ, ಆರ್ಥಿಕ, ನೈತಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದಿದೆ. ಅಂತೆಯೇ ಇದು ಲೇಖಕರನ್ನು, ನಾಟಕಕಾರರನ್ನು, ಕವಿಗಳನ್ನು, ಸೃಜನಶೀಲರನ್ನು ಮತ್ತು ಬುದ್ಧಿಜೀವಿಗಳನ್ನು ಇದು ಸೆಳೆಯುತ್ತಲೇ ಇದೆ.

ಅಭಿವೃದ್ಧಿಯಿಂದ ಉಂಟಾದ ಅಸಮತೋಲನ ಮತ್ತು ಅದರ ಪರಿಣಾಮಗಳನ್ನು ಎದುರಿಸುವ ಮುಗ್ಧ, ಅಸಹಾಯಕ ಜನಸಮುದಾಯದ ನಡುವಿನ ಸಂದಿಗ್ಧ, ಸಂಕೀರ್ಣ, ಸನ್ನಿವೇಶಗಳ ಸೂಕ್ಷ್ಮ ರೂಪಕ ಈ ನಾಟಕ. ನಾಟಕಕಾರ ರಾಮ್ ಗಣೇಶ್ ಕಮತಮ್ ಅವರು ರಚಿಸಿದ ‘ಪ್ರಾಜೆಕ್ಟ್ ಸ್ಟ್ರಿಪ್’ ಇಂಗ್ಲಿಷ್​ ನಾಟಕದ ಕನ್ನಡಾನುವಾದವಿದು. ಅತಿ ರಂಜಕತೆಯಿಲ್ಲದೆ ತೆಳು ಹಾಸ್ಯಲೇಪದೊಂದಿಗೆ ನೋಡುಗರನ್ನು ಈ ನಾಟಕ ಎದುರುಗೊಳ್ಳುತ್ತದೆ. ಮುಂದಿನದು ನಿರ್ದೇಶಕಿ ಅರ್ಚನಾ ಅವರ ಮಾತಿನಲ್ಲಿ…

ಇಂಗ್ಲಿಷ್​ನಲ್ಲಿ ಈ ನಾಟಕವನ್ನು ಓದಿದಾಗ ಮೊಟ್ಟಮೊದಲು ಎದುರಾದ ಪ್ರಶ್ನೆ, ನಾಯಕ ಮತ್ತು ಖಳನಾಯಕರು ಯಾರು? ಎಂದು. ಮತ್ತೆ ಮತ್ತೆ ಈ ನಾಟಕವನ್ನು ಓದಿದಾಗ ನನಗೆ ಅನಿಸಿದ್ದು, ಇದರಲ್ಲಿ ಅವರಿಬ್ಬರೂ ಇಲ್ಲವೇ ಇಲ್ಲ ಎಂಬುದು. ಸಾಮಾನ್ಯವಾಗಿ ನಾಟಕಗಳಲ್ಲಿ ಕಥಾನಾಯಕ, ಖಳನಾಯಕರುಗಳ ಪಾತ್ರಗಳು ರಂಗದ ಮೇಲೆ ಸ್ಪಷ್ಟವಾಗಿ ಗೋಚರಿಸಿಬಿಡುತ್ತವೆ.  ಆದರೆ ಇದರಲ್ಲಿ ನಿಜವಾದ ಕಥಾನಾಯಕರು ಬುಡಕಟ್ಟು ಜನರು. ಖಳನಾಯಕರಿದ್ದರೂ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಇಲ್ಲ. ಒಂದು ಚಿಕ್ಕ ದ್ವೀಪದಲ್ಲಿ ವಾಸಿಸುವ ಬುಡಕಟ್ಟು ಜನರು ದೊಡ್ಡ ದೊಡ್ಡ ಬಂಡವಾಳಶಾಹಿ ಕಂಪನಿಗಳ ದರ್ಪ, ದುರಾಸೆಗಳ ತುಳಿತಕ್ಕೆ ಒಳಗಾಗುತ್ತಾರೆ. ಅವರು ಬಿಸಾಕುವ ದುಡ್ಡಿನ ಆಸೆಗೆ ಅವರ ಕೈಕೆಳಗೆ ಕೆಲಸ ಮಾಡುವ ಕೈಗೊಂಬೆಗಳಾಗಿ ಕಾಣಿಸಿಕೊಳ್ಳುತ್ತಾರೆ.

‘ಪ್ರಾಜೆಕ್ಟ್ ನಗ್ನ’ ದೃಶ್ಯ

ಈ ನಾಟಕವು ನೋಡುಗರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ; ವಿಕಾಸ ಎಂದರೇನು, ಪ್ರಗತಿ ಎಂದರೇನು? ಬಂಡವಾಳಶಾಹಿ ಕಂಪನಿಗಳು ಪ್ರಗತಿ, ವಿಕಾಸದ ನೆಪದಲ್ಲಿ ಸುಳ್ಳುಗಳನ್ನು ಹೇಳಿಕೊಂಡು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳುಗೆಡುವುತ್ತವೆ. ನಿಸರ್ಗದೊಂದಿಗೆ ಬೆರೆತು ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಬುಡಕಟ್ಟು ಜನರ ಜೀವನಶೈಲಿ ವಿಕಸನಕ್ಕೆ ಹತ್ತಿರವೋ ಅಥವಾ ಈ ಬಂಡವಾಳಶಾಹಿಗಳದ್ದೋ? ಇವರಿಬ್ಬರ ನಡುವೆ ಅಲ್ಲಿರುವ ಚಿಕ್ಕಪುಟ್ಟ ಮೀನುಗಾರರನ್ನು ಭಯೋತ್ಪಾದಕರನ್ನಾಗಿ ಪರಿವರ್ತಿಸುವ ಹಿಂದಿನ ಕೈಗಳು ಯಾರವು? ದ್ವೀಪದಲ್ಲಿ ಶಾಂತಿ, ನೆಮ್ಮದಿಯನ್ನು ಕದಡುವ ಇಂತಹ ವಿಕೃತ ಶಕ್ತಿಗಳು ಯಾವುವು? ಇಂಥ ಪ್ರಶ್ನೆಗಳೇ ನನಗೆ ಈ ನಾಟಕವನ್ನು ನಿರ್ದೇಶಿಸಲು ಪ್ರೇರೇಪಿಸಿದವು. ಆನಂತರವಷ್ಟೇ ಇದನ್ನು ಅನುವಾದಿಸಿ ಕೊಡಲು ಬಿ. ಸುರೇಶ ಅವರನ್ನು ಕೇಳಿಕೊಂಡೆ.

ಈ ನಾಟಕ ರಂಗವಿನ್ಯಾಸದ ಹಂತಕ್ಕೆ ಬಂದಾಗ, ಬಣ್ಣಗಳ ವೈವಿಧ್ಯತೆಯ ಮೂಲಕ ದೃಶ್ಯ ಬದಲಾವಣೆಯನ್ನು ಸೂಚಿಸಿದರೆ ಸೂಕ್ತ ಎನ್ನಿಸಿತು. ಬಹುರಾಷ್ಟ್ರೀಯ ಕಂಪನಿಯ ದೃಶ್ಯವನ್ನು ನಿಯಾನ್ ಬಣ್ಣ ಸೂಚಿಸಿದರೆ, ದ್ವೀಪದ ದೃಶ್ಯವನ್ನು ಕಂದುಬಣ್ಣ ಸೂಚಿಸುತ್ತದೆ. ನಿಯಾನ್-ಕೃತಕ ಒಳಾಂಗಣ ಅಲಂಕಾರ ಪರಿಕರಗಳು. ಕಂದು- ಭೂಮಿಗೆ, ನಿಸರ್ಗಕ್ಕೆ ಹತ್ತಿರ ಎಂಬರ್ಥದಲ್ಲಿ. ಇಲ್ಲಿ ಗೋಂದಾ ಕಲಾಪ್ರಕಾರವನ್ನು ಅಳವಡಿಸಿಕೊಂಡಿದ್ದೇವೆ. ಒಂದೊಂದು ಪಾತ್ರವೂ ಒಂದೊಂದು ಬಣ್ಣವನ್ನೂ ಸಂಕೇತಿಸುತ್ತದೆ. ಕಲಾ ನಿರ್ದೇಶಕ ಶಶಿಧರ್ ಅಡಪ ಅವರು ಕಥಾವಸ್ತುವಿನ ಆಶಯಕ್ಕೆ ತಕ್ಕಂತೆ ರಂಗಸಜ್ಜಿಕೆಗೆ ಬೇಕಾದ ಎಲ್ಲಾ ಪರಿಕರಗಳನ್ನು ತಯಾರಿಸಿಕೊಟ್ಟಿದ್ದಾರೆ.

ಇಲ್ಲಿಯ ತನಕ ನಾನು ನಿರ್ದೇಶಿಸಿರುವ ಎಲ್ಲಾ ನಾಟಕಗಳಿಗಿಂತ ಇದು ವಿಭಿನ್ನ ಪ್ರಯತ್ನ. ತಂತ್ರಗಳನ್ನು ಮೀರಿ ಹೊಸದೊಂದು ಆಶಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ಪ್ರಯತ್ನಗಳು ಸಫಲವಾಗಬೇಕಾದರೆ ಈ ನಾಟಕ ಸಾಮಾನ್ಯ ಜನರನ್ನು ತಲುಪಬೇಕು.

ಅಂತರಂಗ ರಂಗತಂಡ

ಮೂಲ: ರಾಮ್ ಗಣೇಶ್ ಕಮತಮ್
ಕನ್ನಡಕ್ಕೆ : ಬಿ. ಸುರೇಶ
ವಿನ್ಯಾಸ ಮತ್ತು ನಿರ್ದೆಶನ : ಅರ್ಚನಾ ಶ್ಯಾಮ್
ರಂಗ ಪರಿಕರಗಳು : ರಾಮ್ ಮಂಜುನಾಥ್ ಮತ್ತು ಸಂತೋಷ್ ಮೈಸೂರು
ನಿರ್ಮಾಣ ನಿರ್ವಹಣೆ – ಸಂಗೀತ : ಪ್ರದೀಪ ಪ್ರದ್ಯುಮ್ನ
ಬೆಳಕು ವಿನ್ಯಾಸ ಮತ್ತು ನಿರ್ವಹಣೆ : ನವೀನ್ ಎಂ.ಜಿ.
ನಿರ್ಮಾಣ ಮೇಲ್ವಿಚಾರಣೆ: ಅಂಕಲ್ ಶ್ಯಾಮ್

ಕಲಾವಿದರು : ದೀಪಕ್ ಸುಬ್ರಮಣ್ಯ, ಶ್ರೀ ಪ್ರಿಯಾ, ಶ್ರೀಹರ್ಷ ಗ್ರಾಮ, ವರ್ಷಾ ಸುರೇಶ್, ಸಂತೋಷ್ ಮೈಸೂರು

ಅಂತರಂಗ ತಂಡ : ಸುಮಾರು 40 ವರ್ಷಗಳಿಂದ ಕ್ರಿಯಾಶೀಲ ರಂಗಕ್ರಿಯೆಗಳನ್ನು ನಡೆಸಿಕೊಂಡು ಬಂದಿರುವ ಈ ತಂಡ ಹವ್ಯಾಸಿ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. 42 ರಂಗ ನಾಟಕಗಳು, 8 ಬೀದಿ ನಾಟಕಗಳು ಮೂಡಿಬಂದಿವೆ. ಯಾವುದೇ ಸಮಯದಲ್ಲಿ ನಿಷ್ಕ್ರಿಯತೆಯತ್ತ ವಾಲದೆ ಇಷ್ಟು ದೀರ್ಘಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಪ್ರತಿವರ್ಷ ಇತರೇ ತಂಡಗಳನ್ನು ಆಹ್ವಾನಿಸಿ ‘ರಂಗಸಂಭ್ರಮ’ ವನ್ನು ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ಪ್ರಸಾಧನ ಕಲಾವಿದರಿಗೆ ಮೇಕಪ್ ನಾಣಿ ಪ್ರಶಸ್ತಿ ನೀಡುತ್ತ ಬಂದಿದೆ.

ಇದನ್ನೂ ಓದಿ : Girija Siddhi: ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಮೂಲಕ ಕರುನಾಡ ಮನೆದ್ದಿರುವ ಗಿರಿಜಾ ಸಿದ್ದಿ ಮತ್ತು ತಂಡದವರ ವಿಶೇಷ ಸಂದರ್ಶನ

Published On - 2:28 pm, Sun, 26 September 21