ಕೊಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಅತಿದೊಡ್ಡ ಬೆಂಕಿ ಅವಘಡ; 4,000 ಇವಿಎಂಗಳು ಸುಟ್ಟು ಕರಕಲು

ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ನಾಶವಾಗಿವೆ ಎಂದು ಪಶ್ಚಿಮ ಬಂಗಾಳದ ಸಚಿವ ಕೌಶಿಕ್ ಚೌಧರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಸುಟ್ಟು ಭಸ್ಮವಾಗಿರುವ ಈ ಇವಿಎಂ ಯಂತ್ರಗಳನ್ನು ರಾಜ್ಯದಲ್ಲಿ ಈ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 10 ಮತಕ್ಷೇತ್ರಗಳಲ್ಲಿ ಬಳಸಲಾಗಿತ್ತು ಎಂದು ಸಚಿವರು ಹೇಳಿದ್ದಾರೆ. ಇದು ಸಾಮಾನ್ಯವಾದ ಅಗ್ನಿ ಆಕಸ್ಮಿಕದಂತೆ ಕಂಡುಬರುತ್ತಿಲ್ಲ. ಇದರ ಹಿಂದೆ ಯಾವುದಾದರೂ ವ್ಯವಸ್ಥಿತ ಪಿತೂರಿ ಇರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ.

ಕೊಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಅತಿದೊಡ್ಡ ಬೆಂಕಿ ಅವಘಡ; 4,000 ಇವಿಎಂಗಳು ಸುಟ್ಟು ಕರಕಲು
Evms On Fire
Image Credit source: x

Updated on: Jun 12, 2026 | 4:55 PM

ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದಲ್ಲಿ 4,000 ಇವಿಎಂ (EVM) ಯಂತ್ರಗಳು ನಾಶವಾಗಿವೆ. ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಸುಟ್ಟು ಕರಕಲಾಗಿವೆ ಎಂದು ಪಶ್ಚಿಮ ಬಂಗಾಳದ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕೊಲ್ಕತ್ತಾದ ಅಲಿಪೋರ್ ಪ್ರದೇಶದಲ್ಲಿರುವ 9 ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಈ ಬೃಹತ್ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಇತರ ಇಲಾಖೆಗಳ ಕಚೇರಿಗಳೂ ಕಾರ್ಯನಿರ್ವಹಿಸುತ್ತಿದ್ದವು.

“ಬೆಂಕಿಯ ಜ್ವಾಲೆಗೆ ಸುಮಾರು 4,000 ಇವಿಎಂ ಯಂತ್ರಗಳು ನಾಶವಾಗಿವೆ. ಈ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 10 ಮತಕ್ಷೇತ್ರಗಳಲ್ಲಿ ಈ ಇವಿಎಂಗಳನ್ನು ಬಳಸಲಾಗಿತ್ತು,” ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ರಾಜ್ಯ ಸಚಿವರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಕೌಶಿಕ್ ಚೌಧರಿ, “ಇದು ಸಾಮಾನ್ಯ ಅಗ್ನಿ ಆಕಸ್ಮಿಕದಂತೆ ಕಂಡುಬರುತ್ತಿಲ್ಲ. ಇದರ ಹಿಂದೆ ಏನಾದರೂ ಪಿತೂರಿ ಇದೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಕಟ್ಟಡದ ಮೇಲಿನ ಅಂತಸ್ತುಗಳಿಗೆ ಬೆಂಕಿ ಹೇಗೆ ತಲುಪಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲ” ಎಂದಿದ್ದಾರೆ.


ಇದನ್ನೂ ಓದಿ: ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ

ಮೊದಲಿಗೆ ಕಟ್ಟಡದ ಎರಡನೇ ಮತ್ತು ಮೂರನೇ ಅಂತಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. “4, 5 ಮತ್ತು 6ನೇ ಅಂತಸ್ತುಗಳಿಗೆ ಯಾವುದೇ ಹಾನಿ ಮಾಡದ ಬೆಂಕಿ, ನೇರವಾಗಿ 7 ಮತ್ತು 8ನೇ ಅಂತಸ್ತುಗಳಿಗೆ ಹೇಗೆ ಹರಡಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಸುಮಾರು 24 ಗಂಟೆಗಳ ನಂತರವೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.


ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿ ದಕ್ಷಿಣ 24 ಪರಗಣ ಜಿಲ್ಲಾಡಳಿತವು ಅಲಿಪೋರ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದೆ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಈ ದೂರು ದಾಖಲಿಸಿದ್ದು, ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ನೋಂದಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಯಾವುದೇ ಕಾರಣದಿಂದ ಬೆಂಕಿ ಸಂಭವಿಸಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ

ಹಲವಾರು ಅಂತಸ್ತುಗಳಿಗೆ ಬೆಂಕಿ ಹರಡಿದ ಜಾಲದ ಶೈಲಿಯನ್ನು ತನಿಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ, ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಭದ್ರತೆ ಒದಗಿಸಲಾಗಿದೆ. ಪೊಲೀಸರು ಕಟ್ಟಡದ ಸುತ್ತಮುತ್ತ ಕಣ್ಗಾವಲು ಹೆಚ್ಚಿಸಿದ್ದಾರೆ. ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿಯ ಮೂಲವನ್ನು ಪತ್ತೆಹಚ್ಚಲು ಮಾದರಿಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಈ ಬೆಂಕಿ ದುರಂತ ಕೇವಲ ಆಕಸ್ಮಿಕವೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೇ ಎಂಬುದನ್ನು ನಿರ್ಧರಿಸಲು ಫೋರೆನ್ಸಿಕ್ ವರದಿ ಅತ್ಯಂತ ಪ್ರಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಪಿತೂರಿಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರೆ, ಬಿಜೆಪಿ ನಾಯಕ ರಾಕೇಶ್ ಸಿಂಗ್ ಇದು ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us