ಚುನಾವಣಾ ಬಾಂಡ್‌ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ ಎಸ್​​ಬಿಐ

ಚುನಾವಣಾ ಬಾಂಡ್‌ಗಳ ಕುರಿತ ಎಲ್ಲಾ ವಿವರಗಳನ್ನು ಎಸ್‌ಬಿಐ, ಇಂದು (ಮಂಗಳವಾರ) ಸಂಜೆ 5:30 ರೊಳಗೆ ಚುನಾವಣಾ ಆಯೋಗಕ್ಕೆ ಕಳುಹಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ ಮಾರ್ಚ್ 15,2024 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡಲಿದೆ

ಚುನಾವಣಾ ಬಾಂಡ್‌ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ ಎಸ್​​ಬಿಐ
ಎಸ್​​ಬಿಐ
Follow us
|

Updated on:Mar 12, 2024 | 7:26 PM

ದೆಹಲಿ ಮಾರ್ಚ್ 12: ಸುಪ್ರೀಂಕೋರ್ಟ್‌ನ (Supreme Court) ಕಟ್ಟುನಿಟ್ಟಿನ ಆದೇಶಕ್ಕೆ ಅನುಗುಣವಾಗಿ ಚುನಾವಣಾ ಬಾಂಡ್‌ಗಳ (electoral bonds)ಎಲ್ಲಾ ಡೇಟಾವನ್ನು ಎಸ್‌ಬಿಐ (SBI) ಚುನಾವಣಾ ಆಯೋಗಕ್ಕೆ (Election Commission of India) ಇಂದು (ಮಂಗಳವಾರ) ಸಂಜೆ 5:30 ರೊಳಗೆ ಕಳುಹಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ ಮಾರ್ಚ್ 15,2024 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡಲಿದೆ. ಇದುವರೆಗೆ ಸುಪ್ರೀಂ ಕೋರ್ಟ್‌ಗೆ ಮೊಹರು ಮಾಡಿದ ಕವರ್‌ಗಳಲ್ಲಿ ಮಾತ್ರ ಸಲ್ಲಿಸಲಾಗಿದ್ದ ಚುನಾವಣಾ ಬಾಂಡ್‌ಗಳ ಫೈಲಿಂಗ್‌ಗಳನ್ನು ಇಸಿಐ ಈ ಮೂಲಕ ಸಾರ್ವಜನಿಕಗೊಳಿಸುತ್ತದೆ. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಸಂಜೆ 5 ಗಂಟೆಗೆ ಚುನಾವಣಾ ಸಮಿತಿಯು ಡೇಟಾವನ್ನು ಒಟ್ಟುಗೂಡಿಸಿ ಬಿಡುಗಡೆ ಮಾಡುತ್ತದೆ. ಆದರೆ ಬ್ಯಾಂಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ದೃಢೀಕರಿಸುವ ಅಫಿಡವಿಟ್ ಅನ್ನು ಇನ್ನೂ ಸಲ್ಲಿಸಿಲ್ಲ.

ಈ ಡೇಟಾವನ್ನು ಬಿಡುಗಡೆ ಮಾಡಲು ಮಾರ್ಚ್ 6 ರ ಗಡುವನ್ನು ವಿಸ್ತರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಮಾರ್ಚ್ 12 ಮಂಗಳವಾರ ಕಚೇರಿ ಅವಧಿಯೊಳಗೆ ಎಲ್ಲ ಮಾಹಿತಿ ಸಲ್ಲಿಸಬೇಕು ಎಂದು ತಾಕೀತು ಮಾಡಿತ್ತು.  ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ತಾವು ನೀಡಿರುವ ನಿರ್ದೇಶನ ಮಾತ್ತು ಗಡುವು ಪಾಲಿಸಲು ವಿಫಲವಾದಲ್ಲಿ “ಉದ್ದೇಶಪೂರ್ವಕವಾಗಿ ಅವಿಧೇಯತೆ” ತೋರಿದ್ದಕ್ಕಾಗಿ ಕಾನೂನು ಕ್ರಮಕೈಗೊಳ್ಳಲು ಪ್ರಕ್ರಿಯೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿತ್ತು.

ಎರಡೂ ಕಡೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಎರಡು “ಬೃಹತ್ ಸಂಗ್ರಾಹಕ” ಗಳಲ್ಲಿ ಸಂಗ್ರಹಿಸಲಾದ ಡೇಟಾವನ್ನು ಸಂಗ್ರಹಿಸಲು, ಕ್ರಾಸ್-ಚೆಕ್ ಮತ್ತು ಬಿಡುಗಡೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಬ್ಯಾಂಕ್ ವಾದಿಸಿತು. “ನಮಗೆ ಅನುಸರಿಸಲು ಸ್ವಲ್ಪ ಸಮಯ ಬೇಕು. ಇದು ರಹಸ್ಯವಾಗಿರಬೇಕೆಂದು ನಮಗೆ ತಿಳಿಸಲಾಗಿದೆ ಎಂದು ಬ್ಯಾಂಕ್ ಹೇಳಿದ್ದು ಜೂನ್ 30 ರವರೆಗೆ ಸಮಯ ಕೇಳಿದೆ. ಆ ಗಡುವು 2024 ರ ಸಾರ್ವತ್ರಿಕ ಚುನಾವಣೆಯ ಪೂರ್ಣಗೊಳ್ಳುವಿಕೆಯನ್ನು ಮೀರಿದೆ.

ಪ್ರತಿಕ್ರಿಯೆಯಾಗಿ ಸುಪ್ರೀಂಕೋರ್ಟ್ ಎಸ್‌ಬಿಐನ ಮುಂಬೈ ಶಾಖೆಯಲ್ಲಿ ದಾನಿಗಳ ವಿವರಗಳು ಲಭ್ಯವಿವೆ ಎಂದು ಸೂಚಿಸಿತು. ಬ್ಯಾಂಕ್ ಕೇವಲ “ಕವರ್‌ಗಳನ್ನು ತೆರೆಯಬೇಕು, ವಿವರಗಳನ್ನು ಸಂಗ್ರಹಿಸಬೇಕು ಮತ್ತು ಮಾಹಿತಿ ನೀಡಬೇಕು”. “ತಾಳೆ ಮಾಡುವ ಕೆಲಸ ಕೈಗೊಳ್ಳುವಂತೆ ನಾವು ನಿಮಗೆ ಹೇಳಿರಲಿಲ್ಲ. ಮುಚ್ಚಿದ ಲಕೋಟೆ ತೆರೆದು ಅದನ್ನು ಬಹಿರಂಗಪಡಿಸಲು ನಾವು ಕೇಳಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಬ್ರೇಕ್; ಪರೀಕ್ಷೆಗಳು ಮುಂದೂಡಿಕೆ

ಕಳೆದ ತಿಂಗಳು, ಒಂದು ಮಹತ್ವದ ತೀರ್ಪಿನಲ್ಲಿ, ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು “ಅಸಂವಿಧಾನಿಕ” ಎಂದು ಪರಿಗಣಿಸಿತು ಮತ್ತು ಇದು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಮಾರ್ಚ್ 6 ರೊಳಗೆ ಡೇಟಾವನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಮತ್ತು ಮಾರ್ಚ್ 13 ರೊಳಗೆ ಈ ಮಾಹಿತಿಯನ್ನು ಸಾರ್ವಜನಿಕಗೊಳಿಸುವಂತೆ ಚುನಾವಣಾ ಸಮಿತಿಗೆ ಸುಪ್ರೀಂ ನಿರ್ದೇಶಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Tue, 12 March 24