ಹಿಂದೆಂದೂ ಕಂಡಿರದ ಪರಿಸ್ಥಿತಿ ಶ್ರೀಲಂಕಾದಲ್ಲಿದೆ, ಭಾರತವನ್ನು ಇದಕ್ಕೆ ಹೋಲಿಸುವುದು ಸರಿಯಲ್ಲ: ವಿದೇಶಾಂಗ ವ್ಯವಹಾರಗಳ ಸಚಿವ

ನಮ್ಮ ನೆರೆಯ ದೇಶದಲ್ಲಿ  ಇಂಥಾ ಸಮಸ್ಯೆ ಎದ್ದಿರುವಾಗ ಅದರ ಪರಿಣಾಮಗಳ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಅಲ್ಲಿನ  ಪರಿಸ್ಥಿತಿ ಗಂಭೀರವಾಗಿದೆ, ಭಾರತ ಅದರ ಬಗ್ಗೆ ಚಿಂತಿಸುತ್ತಿದೆ. ಆದರೆ ಭಾರತವನ್ನು ಅದರೊಂದಿಗೆ ಹೋಲಿಸುವುದು ಸರಿಯಲ್ಲ...

ಹಿಂದೆಂದೂ ಕಂಡಿರದ ಪರಿಸ್ಥಿತಿ ಶ್ರೀಲಂಕಾದಲ್ಲಿದೆ, ಭಾರತವನ್ನು ಇದಕ್ಕೆ ಹೋಲಿಸುವುದು ಸರಿಯಲ್ಲ: ವಿದೇಶಾಂಗ ವ್ಯವಹಾರಗಳ ಸಚಿವ
Edited By:

Updated on: Jul 19, 2022 | 7:12 PM

ದೆಹಲಿ: ಶ್ರೀಲಂಕಾದಲ್ಲಿನ ಬಿಕ್ಕಟ್ಟು (Sri Lanka Crisis) ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಕರೆದಿರುವ ಸರ್ವಪಕ್ಷಗಳ ಸಭೆ (All-party meeting) ದೆಹಲಿಯಲ್ಲಿ ನಡೆದಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar), ನಮ್ಮ ನೆರೆಯ ದೇಶದಲ್ಲಿ  ಇಂಥಾ ಸಮಸ್ಯೆ ಎದ್ದಿರುವಾಗ ಅದರ ಪರಿಣಾಮಗಳ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಅಲ್ಲಿನ  ಪರಿಸ್ಥಿತಿ ಗಂಭೀರವಾಗಿದೆ, ಭಾರತ ಅದರ ಬಗ್ಗೆ ಚಿಂತಿಸುತ್ತಿದೆ. ಆದರೆ ಭಾರತವನ್ನು ಅದರೊಂದಿಗೆ ಹೋಲಿಸುವುದು ಸರಿಯಲ್ಲ ಎಂದು  ಹೇಳಿದ್ದಾರೆ. ಶ್ರೀಲಂಕಾದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸುವುದಕ್ಕಾಗಿ ಎರಡು ದಿನಗಳ ಹಿಂದೆಯೇ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಗೆ ಕರೆ ನೀಡಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಜೈಶಂಕರ್ ವಹಿಸಬೇಕಾಗಿತ್ತು. ಆದರೆ ಇಂದು ನಡೆದ ಸಭೆಗೆ ನಿರ್ಮಲಾ ಗೈರು ಹಾಜರಾಗಿದ್ದು, ಇದಕ್ಕೆ ಜೈಶಂಕರ್ ಸಭೆಯ ಕ್ಷಮೆ ಕೇಳಿದ್ದಾರೆ. ಶ್ರೀಲಂಕಾದಲ್ಲಿ ಪರಿಸ್ಥಿತಿ ಗಂಭೀರವಾಗಿದೆ, ಹಿಂದೆಂದೂ ಕಂಡಿರದ ಪರಿಸ್ಥಿತಿ ಅಲ್ಲಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸುವುದಕ್ಕಾಗಿಯೇ ನಾವು ಸರ್ವಪಕ್ಷಗಳ ಸಭೆ ಕರೆದಿರುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಮೀನುಗಾರಿಕೆ ಸಚಿವಾಲಯದ ಸಚಿವರು ಇಲ್ಲೇ ಇದ್ದಾರೆ. ಶ್ರೀಲಂಕಾಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ನಮ್ಮ ಮುಂದೆ ಬರುವ ಸಮಸ್ಯೆ ಮೀನುಗಾರಿಕೆಯದ್ದು ಎಂದು ಹೇಳಿದ್ದಾರೆ.

ಶ್ರೀಲಂಕಾ ಮತ್ತು ಭಾರತದ ಬಗ್ಗೆ ಹೋಲಿಕೆ ಮಾಡುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶ್ರೀಲಂಕಾದ ಪರಿಸ್ಥಿತಿಯೇ ಭಾರತಕ್ಕೂ ಆಗಲಿದೆ ಎಂದು ಹೇಳುವುದನ್ನು ಕೇಳುತ್ತಿದ್ದೇವೆ. ಈ ಹೋಲಿಕೆ ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಪಿ ಚಿದಂಬರಂ, ವೈಎಸ್ ಆರ್ ಸಿಪಿ, ವಿಜಯಸಾಯಿ ರೆಡ್ಡಿ, ಎಐಎಡಿಎಂಕೆಯ ಎಂ ತಂಬಿದೊರೈ, ನ್ಯಾಷನಲ್ ಕಾಂಗ್ರೆಸ್ ಸಂಸದ ಫರೂಕ್ ಅಬ್ದುಲ್ಲಾ, ಡಿಎಂಕೆಯ ಟಿಆರ್ ಬಾಲು, ಎಂಡಿಎಂಕೆಯ ವೈಕೊ, ಸಿಪಿಐಯ ಬಿನೋಯ್ ವಿಶ್ವಂ ಸೇರಿದಂತೆ ವಿವಿಧ ಪಕ್ಷಗಳ ಶಾಸಕ, ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.

Published On - 6:44 pm, Tue, 19 July 22