ತಿರುಪತಿ ದೇವಸ್ಥಾನದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ ಅನಂತ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶತಮಾನಗಳಷ್ಟು ಹಳೆಯದಾದ ಧಾರ್ಮಿಕ ಸಂಪ್ರದಾಯದ ಭಾಗವಾಗಿ ಅವರು ದೇವರಿಗೆ ತಮ್ಮ ಕೂದಲನ್ನು (ಮುಡಿ) ನೀಡಿದ್ದಾರೆ. ದಿನವೂ ನೂರಾರು ಭಕ್ತರು ಈ ದೇಗುಲದಲ್ಲಿ ಮುಡಿ ಕೊಡುವ ಸಂಪ್ರದಾಯವಿದೆ. ಇತ್ತೀಚೆಗಷ್ಟೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅನಂತ್ ಅಂಬಾನಿ ಇದೀಗ ತಿರುಪತಿಗೆ ಭೇಟಿ ನೀಡಿದ್ದಾರೆ.

ತಿರುಪತಿ ದೇವಸ್ಥಾನದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ ಅನಂತ್ ಅಂಬಾನಿ
Anant Ambani
Image Credit source: PTI

Updated on: Jun 28, 2026 | 3:26 PM

ಮುಖ್ಯಾಂಶಗಳು

  • ತಿರುಪತಿ ತಿಮ್ಮಪ್ಪನಿಗೆ ಮುಡಿ ನೀಡಿದ ಅನಂತ್ ಅಂಬಾನಿ
  • ಇತ್ತೀಚೆಗೆ ಕೊಲ್ಲೂರು ದೇಗುಲಕ್ಕೂ ಭೇಟಿ ನೀಡಿದ್ದ ಅನಂತ್
  • ಅಂಬಾನಿ ಕುಟುಂಬ ತಿರುಪತಿ ತಿಮ್ಮಪ್ಪನ ಮಹಾನ್ ಭಕ್ತರು

ತಿರುಮಲ, ಜೂನ್ 28: ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ (Anant Ambani) ಅವರು ಇಂದು ಆಂಧ್ರಪ್ರದೇಶದ ಪವಿತ್ರ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಪೂರ್ಣ ಸಾಂಪ್ರದಾಯಿಕ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಅವರು, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಲ್ಲದೆ, ಭಗವಂತನಿಗೆ ತಮ್ಮ ಕೂದಲನ್ನು ದಾನ (ಮುಡಿ) ನೀಡುವ ಮೂಲಕ ಹರಕೆ ತೀರಿಸಿದ್ದಾರೆ. ಅಂಬಾನಿ ಕುಟುಂಬವು ತಿರುಪತಿ ದೇವಸ್ಥಾನದ ಭಕ್ತರಾಗಿದ್ದು, ಕುಟುಂಬದ ಯಾವುದೇ ಪ್ರಮುಖ ಕಾರ್ಯಕ್ರಮಗಳು ಅಥವಾ ಶುಭ ಸಮಾರಂಭಗಳಿಗೂ ಮುನ್ನ ಇಲ್ಲಿಗೆ ಭೇಟಿ ನೀಡುತ್ತಾರೆ.

ದೇವಾಲಯಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಮತ್ತು ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು. ರಂಗನಾಯಕುಲ ಮಂಟಪದಲ್ಲಿ ಅವರಿಗೆ ವೇದ ಮಂತ್ರಗಳ ಮೂಲಕ ಆಶೀರ್ವಾದ ನೀಡಿ, ತೀರ್ಥ ಪ್ರಸಾದ ಹಾಗೂ ದೇವರ ಪವಿತ್ರ ಶೇಷ ವಸ್ತ್ರವನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಯ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಅನಂತ್​​ ಅಂಬಾನಿ


ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮುಡಿಪು ಕೊಡುವುದು ಎಂದರೆ ದೇವರೆದುರು ತನ್ನಲ್ಲಿರುವ ‘ಅಹಂಕಾರ’ ಮತ್ತು ಗರ್ವವನ್ನು ಸಂಪೂರ್ಣವಾಗಿ ತ್ಯಜಿಸಿ, ಶರಣಾಗತಿಯಾಗುವುದರ ಸಂಕೇತವಾಗಿದೆ. ಅನಂತ್ ಅಂಬಾನಿ ಅವರು ಈ ಸಂಪ್ರದಾಯವನ್ನು ಪಾಲಿಸುವ ಮೂಲಕ ತಮ್ಮ ದೈವಭಕ್ತಿಯನ್ನು ಮೆರೆದಿದ್ದಾರೆ.


ಇದಕ್ಕೂ ಮುನ್ನ, ಜೂನ್ 12ರಂದು ಅನಂತ್ ಅಂಬಾನಿ ಅವರು ತಮ್ಮ ತಂದೆ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ತಮ್ಮ ಪತ್ನಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಜಂಟಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಮದುವೆಯ ಶುಭ ಸಂದರ್ಭದ ಮುನ್ನ ಕೂಡ ಇಡೀ ಕುಟುಂಬ ತಿರುಪತಿಗೆ ಬಂದು ದೇವರ ಆಶೀರ್ವಾದ ಪಡೆದಿತ್ತು. ಅನಂತ್ ಅಂಬಾನಿ ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕೂಡ ಮುಕೇಶ್ ಅಂಬಾನಿ ಅವರು ತಿರುಪತಿ ದೇವಸ್ಥಾನಕ್ಕೆ ತಂದು ದೇವರ ಪಾದದ ಮೇಲಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: Tirupati Friday Abhishekam: ತಿರುಪತಿ ತಿಮ್ಮಪ್ಪನ ಹತ್ತಾರು ಸೇವೆಗಳಲ್ಲಿ ಶುಕ್ರವಾರದ ಅಭಿಷೇಕಕ್ಕೆ ಅಷ್ಟೊಂದು ವಿಶೇಷ ಏಕೆ ಗೊತ್ತಾ?


ಆಂಧ್ರಪ್ರದೇಶದ ತಿರುಮಲ ಬೆಟ್ಟಗಳ ಮೇಲೆ ನೆಲೆಗೊಂಡಿರುವ ತಿರುಪತಿ ಬಾಲಾಜಿ ದೇವಾಲಯವು ದೇಶದ ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಕಲಿಯುಗದ ವೈಕುಂಠ ಎಂದೂ ಕರೆಯುತ್ತಾರೆ. ಇದು ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ವೆಂಕಟೇಶ್ವರನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದಲ್ಲಿ ಕೂದಲು ದಾನ ಮಾಡುವ ಸಂಪ್ರದಾಯವು ಸಹ ಪ್ರಾಚೀನ ಕಾಲದಿಂದಲೂ ನಡೆದು ಅತ್ಯಂತ ಮಹತ್ವದ ಧಾರ್ಮಿಕ ಆಚರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us