ಅನಂತನಾಗ್ ಎನ್‌ಕೌಂಟರ್: ಹುತಾತ್ಮ ಕರ್ನಲ್ ಮನ್‌ಪ್ರೀತ್ ಸಿಂಗ್​​ಗೆ ಮಗನ ಸೆಲ್ಯೂಟ್, ಕಂಬನಿಯ ವಿದಾಯ

ಭಾರತೀಯ ಸೇನೆಯ 19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕರ್ನಲ್ ಮನ್‌ಪ್ರೀತ್, ಮೇಜರ್ ಆಶಿಶ್ ಧೋಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಡಿಎಸ್​​ಪಿ ಹುಮಾಯೂನ್ ಭಟ್ ಕೋಕರ್‌ನಾಗ್‌ನ ಗಡೋಲ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಹುತಾತ್ಮರಾಗಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿದ್ದ ಮತ್ತೊಬ್ಬ ಯೋಧರೂ ಹುತಾತ್ಮರಾಗಿದ್ದಾರೆ

ಅನಂತನಾಗ್ ಎನ್‌ಕೌಂಟರ್: ಹುತಾತ್ಮ ಕರ್ನಲ್ ಮನ್‌ಪ್ರೀತ್ ಸಿಂಗ್​​ಗೆ ಮಗನ ಸೆಲ್ಯೂಟ್, ಕಂಬನಿಯ ವಿದಾಯ
ಕರ್ನಲ್ ಮನ್‌ಪ್ರೀತ್ ಸಿಂಗ್ ಪುತ್ರ ಸೆಲ್ಯೂಟ್ ಮಾಡುತ್ತಿರುವುದು
ರಶ್ಮಿ ಕಲ್ಲಕಟ್ಟ

Updated on: Sep 15, 2023 | 9:01 PM

ಶ್ರೀನಗರ ಸೆಪ್ಟೆಂಬರ್ 15: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ (Anantnag encounter) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್  (Colonel Manpreet Singh)ಅಂತಿಮ ಕ್ರಿಯೆ ವೇಳೆ ದೇಶಕ್ಕೆ ದೇಶವೇ ಕಂಬನಿ ಮಿಡಿದಿದೆ. ಪಂಜಾಬ್‌ನ ಮುಲ್ಲನ್‌ಪುರದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕರ್ನಲ್ ಮನ್‌ಪ್ರೀತ್ ಅವರು ಎರಡು ವರ್ಷದ ಮಗಳು ಮತ್ತು ಏಳು ವರ್ಷದ ಮಗನನ್ನು ಅಗಲಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವರಾಗಿದ್ದರೂ ಈ ಮಕ್ಕಳು ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕರ್ನಲ್ ಮನ್‌ಪ್ರೀತ್ ಅವರಿಗೆ ಗೌರವ ಸಲ್ಲಿಸಿದರು. ಸೇನಾಪಡೆಯ ಉಡುಗೆ ಧರಿಸಿದ್ದ ಅವರ ಪುತ್ರ ಕಬೀರ್ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡಿದಾಗ ಅಲ್ಲಿದ್ದವರು ಭಾವುಕರಾಗಿದ್ದು, ಈ ದೃಶ್ಯ ನೋಡಿದವರ ಕಣ್ಣು ಒದ್ದೆಯಾಗದೇ ಇರದು.

ಭಾರತೀಯ ಸೇನೆಯ 19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕರ್ನಲ್ ಮನ್‌ಪ್ರೀತ್, ಮೇಜರ್ ಆಶಿಶ್ ಧೋಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಡಿಎಸ್​​ಪಿ ಹುಮಾಯೂನ್ ಭಟ್ ಕೋಕರ್‌ನಾಗ್‌ನ ಗಡೋಲ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಹುತಾತ್ಮರಾಗಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿದ್ದ ಮತ್ತೊಬ್ಬ ಯೋಧರೂ ಹುತಾತ್ಮರಾಗಿದ್ದಾರೆ

ಕರ್ನಲ್ ಮನ್‌ಪ್ರೀತ್ ಅವರ ಪಾರ್ಥಿವ ಶರೀರವನ್ನು ರಾಷ್ಟ್ರಧ್ವಜದಲ್ಲಿ ಹೊದಿಸಲಾಗಿದ್ದು, ಅವರ ಸ್ಥಳೀಯ ಗ್ರಾಮವಾದ ಮುಲ್ಲನ್‌ಪುರದಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ: ಅನಂತ್​ನಾಗ್​ನಲ್ಲಿ ಮುಂದುವರೆದ ಎನ್​ಕೌಂಟರ್​ನಲ್ಲಿ ಮತ್ತೋರ್ವ ಯೋಧ ಹುತಾತ್ಮ

ಈ ಮೂರನೇ ತಲೆಮಾರಿನ ಭಾರತೀಯ ಸೇನಾ ಸಿಬ್ಬಂದಿಗೆ ಅಂತಿಮ ವಿದಾಯ ಹೇಳಲು ಒಟ್ಟುಗೂಡಿದ ಕುಟುಂಬ ಸದಸ್ಯರು ಮತ್ತು ಸಹ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನರಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ವಿಪಿ ಮಲಿಕ್ ಕೂಡ ಸೇರಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us