Nitish Kumar: ಚಂದ್ರಶೇಖರ್​ ರಾವ್​​ ಕರೆದರೂ ಬಿಆರ್‌ಎಸ್ ಸಭೆಗೆ ನಾನು ಹೋಗುತ್ತಿರಲಿಲ್ಲ – ಬಿಹಾರ ಸಿಎಂ ನಿತೀಶ್ ಕುಮಾರ್​ ಸಂಚಲನಾತ್ಮಕ ಹೇಳಿಕೆ

| Updated By: ಸಾಧು ಶ್ರೀನಾಥ್​

Updated on: Jan 20, 2023 | 4:21 PM

KCR Bharat Rashtra Samithi: ತೆಲಂಗಾಣದಲ್ಲಿ ನಡೆದ ಸಭೆ ಕೇವಲ ಬಿಆರ್ ಎಸ್ ಗೆ ಸಂಬಂಧಿಸಿದ್ದು. ಹೊಸ ಮೈತ್ರಿ ಕುಟ ರಚನೆ ಅಂಗವಾಗಿ ಇದನ್ನು ಪರಿಗಣಿಸುವ ಅಗತ್ಯವಿಲ್ಲ ಎಂದೂ ಅವರು ಇದೇ ವೇಳೆ ಅಭಿಪ್ರಾಯಪಟ್ಟರು.

Nitish Kumar: ಚಂದ್ರಶೇಖರ್​ ರಾವ್​​ ಕರೆದರೂ ಬಿಆರ್‌ಎಸ್ ಸಭೆಗೆ ನಾನು ಹೋಗುತ್ತಿರಲಿಲ್ಲ - ಬಿಹಾರ ಸಿಎಂ ನಿತೀಶ್ ಕುಮಾರ್​ ಸಂಚಲನಾತ್ಮಕ ಹೇಳಿಕೆ
ಬಿಆರ್‌ಎಸ್ ಸಭೆಗೆ ಕೆಸಿಆರ್ ಕರೆದರೂ ನಾನು ಹೋಗುತ್ತಿರಲಿಲ್ಲ - ಬಿಹಾರ ಸಿಎಂ ನಿತೀಶ್ ಕುಮಾರ್
Follow us on

ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​​ ಸಾರಥ್ಯದ ನೂತನ ಸ್ವರೂಪದ (Bharat Rashtra Samithi, formerly Telangana Rashtra Samithi) ಬಿಆರ್‌ಎಸ್ ರಾಜಕೀಯ ಪಕ್ಷ ಆಯೋಜಿಸಿದ್ದ ದೂರಗಾಮಿ ಪರಿಣಾಮದ ಖಮ್ಮಮ್ ಸಾರ್ವಜನಿಕ ಸಭೆಯ ನಂತರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಕೆಲ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಎನ್​ಡಿಎ ಒಕ್ಕೂಟದ ಜೊತೆ ಗುರುತಿಸಿಕೊಳ್ಳದ ಪಕ್ಷಗಳೊಂದಿಗೆ ತೆಲಂಗಾಣ ಸಿಎಂ ಕೆಸಿಆರ್ (K Chandrashekar Rao) ನಡೆಸಿದ ಸಭೆಯ ಬಗ್ಗೆಯೂ ಮಾತನಾಡಿದ್ದಾರೆ ನಿತೀಶ್.

ತೆಲಂಗಾಣದ ಖಮ್ಮಂನಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ರಚನಾ ಸಭೆ ಭಾರೀ ಸಂಖ್ಯೆಯ ಜನರ ಮಧ್ಯೆ ನಡೆದಿದ್ದು ಗೊತ್ತೇ ಇದೆ. ಈ ಬೃಹತ್ ಸಾರ್ವಜನಿಕ ಸಭೆಯಲ್ಲಿ ಬಿಆರ್ ಎಸ್ ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಜೊತೆಗೆ ಮೂರು ರಾಜ್ಯಗಳ ಸಿಎಂಗಳು ಭಾಗವಹಿಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಎಡಪಕ್ಷಗಳ ಪ್ರಮುಖ ನಾಯಕರು ಬಿಆರ್‌ಎಸ್ ಸಭೆಯಲ್ಲಿ ಭಾಗವಹಿಸಿ ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಲ್ಲುವುದಾಗಿ ಘೋಷಿಸಿದರು. ಗಮನಮಾರ್ಹವೆಂದರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮ​ಮಾರಸ್ವಾಮಿ ಸಹ ಗೈರು ಹಾಜರಾಗಿದ್ದರು.

ಆದರೆ ಏತನ್ಮಧ್ಯೆ ಬಿಆರ್‌ಎಸ್ ಖಮ್ಮಮ್ ಸಭೆಯ ಮರುದಿನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಎನ್‌ಡಿಎ ಯೇತರ ಪಕ್ಷಗಳೊಂದಿಗೆ ನಡೆಸಿದ ಸಭೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಈ ಸಭೆಗೆ ಆಹ್ವಾನ ನೀಡಿದ್ದರೂ ‘ಸಾವಧಾನ ಯಾತ್ರೆ’, ರಾಜ್ಯ ಬಜೆಟ್‌ಗೆ ಸಂಬಂಧಿಸಿದ ಸಭೆಗಳು ಮತ್ತು ಇತರ ಚಟುವಟಿಕೆಗಳಲ್ಲಿ ನಿರತರಾಗಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ನಿತೀಶ್ ಕುಮಾರ್ ಸಮಜಾಯಿಷಿ ಕೊಟ್ಟಿದ್ದಾರೆ. ಪಾಟ್ನಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನಿತೀಶ್ ಈ ಪ್ರತಿಕ್ರಿಯೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿತೀಶ್ ಕುಮಾರ್, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಗೆ ಪರ್ಯಾಯವಾಗಿ ಎಲ್ಲಾ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಬರಬೇಕೆಂದು ನಾನು ಬಯಸುತ್ತೇನೆ. ಸ್ವಂತ ಹಿತಾಸಕ್ತಿಗಾಗಿ ಏನನ್ನೂ ಬಯಸುವುದಿಲ್ಲ ಎಂದು ಮನದಾಳದ ಮಾತುಗಳನ್ನಾಡಿದ ಅವರು, ರಾಷ್ಟ್ರದ ಹಿತಾಸಕ್ತಿಗಾಗಿ ಎಲ್ಲ ವಿರೋಧ ಪಕ್ಷದ ನಾಯಕರು ಒಗ್ಗೂಡಿ ಮುನ್ನಡೆಯುತ್ತಾರಾ ಎಂಬುದನ್ನೂ ನೋಡಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ತೆಲಂಗಾಣದಲ್ಲಿ ನಡೆದ ಸಭೆ ಕೇವಲ ಬಿಆರ್ ಎಸ್ ಗೆ ಸಂಬಂಧಿಸಿದ್ದು. ಹೊಸ ಮೈತ್ರಿ ಕುಟ ರಚನೆ ಅಂಗವಾಗಿ ಇದನ್ನು ಪರಿಗಣಿಸುವ ಅಗತ್ಯವಿಲ್ಲ ಎಂದೂ ಅವರು ಇದೇ ವೇಳೆ ಅಭಿಪ್ರಾಯಪಟ್ಟರು. ಆಹ್ವಾನ ಪಡೆದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಒಂದು ವೇಳೆ ನನಗೆ ಆಹ್ವಾನ ಪತ್ರ ತಲುಪಿದ್ದರೂ ನಾನು ತುಂಬಾ ಬ್ಯುಸಿಯಾಗಿರುವುದರಿಂದ ಭಾಗವಹಿಸುವುದಕ್ಕೆ ಆಗುತ್ತಿರಲಿಲ್ಲ ಎಂದು ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ