ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ; ಒಂದು ತಿಂಗಳ ಕಾಲ ವಿಶೇಷ ಅಭಿಯಾನ ನಡೆಸಲು ಬಿಜೆಪಿ ಸಿದ್ಧತೆ

|

Updated on: May 15, 2023 | 1:01 PM

ಮೇ 29ರಂದು ದೇಶದೆಲ್ಲೆಡೆ ಏಕಕಾಲಕ್ಕೆ ಪತ್ರಿಕಾಗೋಷ್ಠಿ ನಡೆಯಲಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಇತರ ಪಕ್ಷದ ಹಿರಿಯ ನಾಯಕರು ರಾಜ್ಯ ರಾಜಧಾನಿಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳೊಂದಿಗೆ ಸಂವಾದ ನಡೆಸಿ ಸರ್ಕಾರದ ಸಾಧನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ; ಒಂದು ತಿಂಗಳ ಕಾಲ ವಿಶೇಷ ಅಭಿಯಾನ ನಡೆಸಲು ಬಿಜೆಪಿ ಸಿದ್ಧತೆ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು (Loksabha) ಒಳಗೊಂಡು ದೇಶಾದ್ಯಂತ ಒಂದು ತಿಂಗಳ ಕಾಲ ಬೃಹತ್ “ವಿಶೇಷ ಸಂಪರ್ಕ ಅಭಿಯಾನ”ವನ್ನು(Special contact campaign) ಯೋಜಿಸಿದೆ. ಇದು ಮೇ 30 ರಂದು ಪ್ರಾರಂಭವಾಗಿ ಜೂನ್ 30 ರಂದು ಮುಕ್ತಾಯಗೊಳ್ಳುತ್ತದೆ. ಮೇ 30 ರಂದು ಬೃಹತ್ ರ್ಯಾಲಿಯೊಂದಿಗೆ ಪ್ರಧಾನಿ ಮೋದಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮರುದಿನ ಮೇ 31 ರಂದು ಪ್ರಧಾನಿಯವರ ಎರಡನೇ ರ್ಯಾಲಿ ನಡೆಯಲಿದೆ. ದೇಶದಾದ್ಯಂತ 51 ಹಿರಿಯ ಬಿಜೆಪಿ ನಾಯಕರ ರ್ಯಾಲಿಗಳನ್ನು ಯೋಜಿಸಲಾಗಿದೆ.  396 ಲೋಕಸಭಾ ಸ್ಥಾನಗಳಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿದ್ದು, ಇದರಲ್ಲಿ ಕೇಂದ್ರ ಸಚಿವರು ಅಥವಾ ಪಕ್ಷದ ರಾಷ್ಟ್ರೀಯ ಅಧಿಕಾರಿಯ ಉಪಸ್ಥಿತಿ ಇರಲಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹಲವಾರು ರ್ಯಾಲಿಗಳು ನಡೆಯಲಿವೆ. ಈ ಅಭಿಯಾನದ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ನೀತಿಗಳು ಮತ್ತು ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುವುದು.ಈ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳಿಗೆ ಬಿಜೆಪಿಯ ಮುಖ್ಯಮಂತ್ರಿಗಳು, ರಾಜ್ಯಗಳ ವಿರೋಧ ಪಕ್ಷದ ನಾಯಕರು, ಸಂಸದರು ಮತ್ತು ಶಾಸಕರನ್ನು ಸಹ ಆಹ್ವಾನಿಸಲಾಗುತ್ತದೆ.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 250 ಸೇರಿದಂತೆ ಒಂದು ಲಕ್ಷ ನಿರ್ದಿಷ್ಟ ಕುಟುಂಬಗಳನ್ನು ದೇಶಾದ್ಯಂತ ಸಂಪರ್ಕಿಸಲಾಗುವುದು. ಕ್ರೀಡಾಪಟುಗಳು, ಕಲಾವಿದರು, ಕೈಗಾರಿಕೋದ್ಯಮಿಗಳು ಮತ್ತು ಯೋಧರು ಮೊದಲಾದ ಪ್ರಭಾವಿ ವ್ಯಕ್ತಿಗಳ ಕುಟುಂಬಗಳನ್ನು ಸಂಪರ್ಕಿಸಲಾಗುತ್ತದೆ.

ಮೇ 29ರಂದು ದೇಶದೆಲ್ಲೆಡೆ ಏಕಕಾಲಕ್ಕೆ ಪತ್ರಿಕಾಗೋಷ್ಠಿ ನಡೆಯಲಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಇತರ ಪಕ್ಷದ ಹಿರಿಯ ನಾಯಕರು ರಾಜ್ಯ ರಾಜಧಾನಿಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳೊಂದಿಗೆ ಸಂವಾದ ನಡೆಸಿ ಸರ್ಕಾರದ ಸಾಧನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಮೂರು ಹಂತದ ಕಾರ್ಯಕ್ರಮದ ಭಾಗವಾಗಿ, ಜೂನ್ 1 ರಿಂದ 22 ರವರೆಗೆ ಇತರ ಕಾರ್ಯಕ್ರಮಗಳನ್ನು ನಡೆಸಲು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಇವುಗಳಲ್ಲಿ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪತ್ರಿಕಾಗೋಷ್ಠಿ, ಗಣ್ಯ ವ್ಯಕ್ತಿಗಳ ಸಭೆ, ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಸಭೆ, ಉದ್ಯಮಿಗಳ ಸಮಾವೇಶಗಳು ಮತ್ತು ‘ವಿಕಾಸ್ ತೀರ್ಥ’ ಕಾರ್ಯಕ್ರಮಗಳನ್ನು ಆಯೋಜಿಸುವುದು.

ವಿಧಾನಸಭೆ ಮಟ್ಟದಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ವಿಧಾನಸಭಾ ಕ್ಷೇತ್ರದ ಹಿರಿಯ ಕಾರ್ಯಕರ್ತರೊಂದಿಗೆ ಸಭೆ ಮತ್ತು ಊಟ, ಪಕ್ಷದ ಎಲ್ಲಾ ಏಳು ಮೋರ್ಚಾಗಳ ಜಂಟಿ ಸಮಾವೇಶ, ಕಲ್ಯಾಣ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ಯೋಗ ದಿನದಂದು (ಜೂನ್ 21) ಕಾರ್ಯಕ್ರಮಗಳು ಇದರಲ್ಲಿ ಸೇರಿವೆ.

ಜೂನ್ 23 ರಂದು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರು 10 ಲಕ್ಷ ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಮನ್ ಕಿ ಬಾತ್ ವಿಷಯಗಳನ್ನು ಆಧರಿಸಿದ ಜನಶಕ್ತಿ ಕಲಾಕೃತಿ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ಮೋದಿ

ಜೂನ್ 20 ರಿಂದ 30 ರವರೆಗೆ ಮನೆ-ಮನೆ ಸಂಪರ್ಕ ಅಭಿಯಾನಗಳನ್ನು ನಡೆಸಲಾಗುವುದು. ಇದರೊಂದಿಗೆ “ಮಿಸ್ಡ್ ಕಾಲ್ ಅಭಿಯಾನ” ಕೂಡ ನಡೆಯಲಿದೆ. ಈ ಭಾರಿ ಪ್ರಚಾರಕ್ಕೆ ಸಿದ್ಧತೆ ನಡೆಸಲು ಪಕ್ಷದ ರಾಜ್ಯ ಘಟಕಗಳಿಗೆ ರಾಜ್ಯ ಕಾರ್ಯಕಾರಿ ಸಮಿತಿಯ ಒಂದು ದಿನದ ಸಭೆ ಕರೆಯಲು ಸೂಚನೆ ನೀಡಲಾಗಿದೆ.

ಪಕ್ಷದ ಪ್ರಚಾರ ಸಮಿತಿಯು ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಪ್ರಚಾರದ ಮೇಲ್ವಿಚಾರಣೆಗಾಗಿ ಕೇಂದ್ರ ಸಚಿವರು, ಮಾಜಿ ಸಚಿವರು, ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಸದಸ್ಯರು ಮತ್ತು ಹಿರಿಯ ನಾಯಕರನ್ನು ಒಳಗೊಂಡ ಎರಡು ಸದಸ್ಯರ ತಂಡಗಳನ್ನು ರಚಿಸಲಾಗಿದೆ.

ಮಾಧ್ಯಮಗಳಲ್ಲಿನ ಸಂಪಾದಕರು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ನಿರ್ದಿಷ್ಟ ಕುಟುಂಬಗಳ ಬಗ್ಗೆ ರಾಜ್ಯ ಘಟಕಗಳಿಂದ ಬಿಜೆಪಿ ಮಾಹಿತಿ ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ