ಇಂದಿನಿಂದ‌ ಸಂಸತ್ ಬಜೆಟ್ ಅಧಿವೇಶನ ಆರಂಭ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ, ನಿರ್ಮಲಾ ಸೀತಾರಾಮನ್‌ರಿಂದ ಆರ್ಥಿಕ ಸಮೀಕ್ಷೆ ಮಂಡನೆ

| Updated By: ಆಯೇಷಾ ಬಾನು

Updated on: Jan 31, 2023 | 7:10 AM

Budget 2023: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ ನ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಇಂದಿನಿಂದ‌ ಸಂಸತ್ ಬಜೆಟ್ ಅಧಿವೇಶನ ಆರಂಭ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ, ನಿರ್ಮಲಾ ಸೀತಾರಾಮನ್‌ರಿಂದ ಆರ್ಥಿಕ ಸಮೀಕ್ಷೆ ಮಂಡನೆ
ರಾಷ್ಟ್ರಪತಿ ದ್ರೌಪದಿ ಮುರ್ಮು
Follow us on

ದೆಹಲಿ: ಇಂದಿನಿಂದ‌ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ‌. ನಾಳೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು, ಇಂದು ರಾಷ್ಟ್ರಪತಿ ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಇಂದು ನಿರ್ಮಲಾ‌‌ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಿದ್ದಾರೆ.

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ ನ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿ ಭಾಷಣದ ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ‌. ನಾಳೆ‌ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಹಣಕಾಸು ಸಚಿವರು ವಿತ್ತೀಯ ಕೊರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜನಪರ ಕಾರ್ಯಸೂಚಿ ನಡುವೆ ಸಮತೋಲನವನ್ನು ಕಂಡುಕೊಳ್ಳಬೇಕಿದ್ದು, ಉದ್ಯೋಗ ಸೃಷ್ಟಿ, ಮೂಲಸೌಕರ್ಯ, ಉತ್ಪಾದನೆ, ಕೃಷಿ ಮತ್ತು ಇತರ ಪ್ರಮುಖ ಕ್ಷೇತ್ರಗಳಿಗೆ ಸುಧಾರಿತ ಹಣವನ್ನು ಕೇಂದ್ರೀಕರಿಸುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರ ಕೊನೆಯ ಪೂರ್ಣ ಬಜೆಟ್ ಇದಾಗಿದೆ. ಈ ಹಿನ್ನಲೆ ಸಂಬಳ ಪಡೆಯುವ ನೌಕರರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಾಮಾನ್ಯ ಜನರಿಗೆ ವಿವಿಧ ತೆರಿಗೆ ಪರಿಹಾರ ಕ್ರಮಗಳನ್ನು ಸೀತಾರಾಮನ್ ಘೋಷಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಜನರ ನಿರೀಕ್ಷೆಗಳು ಸರ್ಕಾರದಿಂದ ಹೆಚ್ಚಿದೆ.

ಇದನ್ನೂ ಓದಿ: Budget 2023: ಮಂಗಳವಾರ ಸಂಸತ್ತಿನ ಜಂಟಿ ಅಧಿವೇಶನ, ಫೆ 1 ರಂದು ಕೇಂದ್ರ ಬಜೆಟ್ ಮಂಡನೆ -NDA ಕಾರ್ಯತಂತ್ರ ಸಭೆ ನಂತರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ಬಜೆಟ್ ಮೇಲಿನ ನಿರೀಕ್ಷೆಗಳು

  • ರಸಗೊಬ್ಬರಗಳು ಮತ್ತು ಕೃಷಿ ರಾಸಾಯನಿಕಗಳ ಮೇಲೆ ಅಧಿಕ ಸಹಾಯಧನ
  • ಪಶುಸಂಗೋಪನಾ ವಲಯಕ್ಕೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ
  • ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅಧಿಕ ಹಣ ಮೀಸಲಿರಿಸುವುದು
  • ಉದ್ಯೋಗ ಖಾತ್ರಿಯಡಿ ದಿನಗೂಲಿ ಹೆಚ್ಚಿಸಬೇಕು
  • ಕೃಷಿ ಸಮ್ಮಾನ್ ಯೋಜನೆಯಡಿ ಸಹಾಯಧನ ಹೆಚ್ಚಿಸಬೇಕು

ತೆರಿಗೆ ವಿನಾಯಿತಿ ಅಥವಾ ರಿಯಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಪರಿಹಾರವನ್ನು ನೀಡಬಹುದು ಎನ್ನುವ ನಿರೀಕ್ಷೆಯಿದೆ. ಸಂಬಳ ಪಡೆಯುವ ಉದ್ಯೋಗಿಗಳು ಭಾರತದಲ್ಲಿ ಪ್ರಮುಖ ತೆರಿಗೆ ಪಾವತಿದಾರಾಗಿದ್ದಾರೆ‌. ಅವರ ವೇತನವು ವರ್ಷಕ್ಕೆ 2.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಹೊಂದಿದೆ. ಆದರೆ, ಒಂದು ವರ್ಷದಲ್ಲಿ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ಅವರ ಸಂಬಳವೂ ತೆರಿಗೆ ಮುಕ್ತವಾಗಿರುತ್ತದೆ. ಇದು ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯಾಗಿದೆ, ವಿನಾಯಿತಿ ಅಲ್ಲ. ಒಂದು ವರ್ಷದಲ್ಲಿ ವೇತನವು ರೂ. 5 ಲಕ್ಷಕ್ಕಿಂತ ಹೆಚ್ಚಾದರೆ, ವಿನಾಯಿತಿ ಮಿತಿ ರೂ. 2.5 ಲಕ್ಷವನ್ನು ಹೊರತುಪಡಿಸಿ ಇಡೀ ಮೊತ್ತದ ಮೇಲಿನ ತೆರಿಗೆ ಅನ್ವಯವಾಗುತ್ತದೆ. ಈಗ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಬೇಕೆಂಬ ಬೇಡಿಕೆಗಳು ಕೇಳಿ ಬರುತ್ತಿವೆ.

ಕಳೆದ ಒಂದು ವರ್ಷದಿಂದ ರೆಪೊ ದರ ಗಣನೀಯವಾಗಿ ಏರಿಕೆಯಾಗಿದ್ದು, ಇದರಿಂದ ಗೃಹ ಸಾಲದ ಬಡ್ಡಿ ಹೆಚ್ಚುತ್ತಿದೆ. ಹಣದುಬ್ಬರದಿಂದ ದಿನಬಳಕೆಯ ವಸ್ತುಗಳ ಬೆಲೆಗಳು ವೇಗವಾಗಿ ಹೆಚ್ಚುತ್ತಿದ್ದು, ಸರ್ಕಾರ ಅವುಗಳನ್ನು ನಿಯಂತ್ರಿಸಬೇಕು. ವಿಶೇಷವಾಗಿ ಬೇಳೆಕಾಳುಗಳು, ಅಕ್ಕಿ, ಹಿಟ್ಟು, ಹಾಲು, ಗ್ಯಾಸ್ ಮತ್ತು ಇತರ ವಸ್ತುಗಳ ಬೆಲೆ ಏರಿಯಾಗಿದ್ದು, ಬೆಲೆ ಏರಿಕೆ ನಿಯಂತ್ರಿಸುವ ದೃಷ್ಟಿಯಿಂದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದಿಂದ ಮತ್ತಷ್ಟು ಹೊಡೆತ ಬಿದ್ದಿದೆ. ದೇಶದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಹಿನ್ನಲೆ ಉದ್ಯೋಗದ ವಿಚಾರದಲ್ಲಿ ಯುವ ವರ್ಗಕ್ಕೆ ಸಾಕಷ್ಟು ನಿರೀಕ್ಷೆಗಳಿವೆ. ಇತ್ತಿಚೆಗೆ ರೋಜ್‌ಗಾರ ಮೇಳೆದ ಮೂಲಕ ಮೋದಿ ಸರ್ಕಾರದ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗ ಭರ್ತಿ ಮಾಡುವ ಪ್ರಯತ್ನ ಮಾಡಿದ್ದರು, ಖಾಸಗಿ ವಲಯದ ನಿರೀಕ್ಷೆ ಹೆಚ್ಚಿದೆ. ಕೊವೀಡ್ ನಿಂದ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನಲೆ ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬಹುದು ಎನ್ನುವ ನಿರೀಕ್ಷೆಗಳಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ