ಚಾರ್ ಧಾಮ್ ಯಾತ್ರೆ ಹೋಗ್ತೀರಾ? ಕೇಂದ್ರ ಸರ್ಕಾರದ ಈ ಮಹತ್ವದ ಸೂಚನೆ ಗಮನಿಸಿ
ಕೇಂದ್ರ ಗೃಹ ಸಚಿವಾಲಯವು ಧಾರ್ಮಿಕ ಯಾತ್ರಿಕರು ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಆನ್ಲೈನ್ ಬುಕಿಂಗ್ ವಂಚನೆಗಳು ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ನಕಲಿ ವೆಬ್ಸೈಟ್ಗಳು ಮತ್ತು ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ವಂಚನೆ ನಡೆಯುತ್ತಿದೆ. ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ಬಳಸುವಂತೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡುವಂತೆ ಸರ್ಕಾರ ಮನವಿ ಮಾಡಿದೆ.

ನವದೆಹಲಿ, ಏಪ್ರಿಲ್ 19: ಧಾರ್ಮಿಕ ಯಾತ್ರಿಕರು ಹಾಗೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಆನ್ಲೈನ್ ಬುಕಿಂಗ್ ವಂಚನೆ (Online Fraud) ಜಾಲ ದೇಶಾದ್ಯಂತ ಹೆಚ್ಚಳವಾಗುತ್ತಿದೆ. ಯಾತ್ರಿಕರಿಗೆ ಅತಿಥಿ ಗೃಹ, ಹೋಟೆಲ್ ಬುಕಿಂಗ್, ಆನ್ಲೈನ್ ಕ್ಯಾಬ್ ಮತ್ತು ಟ್ಯಾಕ್ಸಿ ಬುಕಿಂಗ್ಗಳು ಮತ್ತು ಪ್ಯಾಕೇಜ್ಗಳು, ಧಾರ್ಮಿಕ ಪ್ರವಾಸದ ಹೆಸರಿನಲ್ಲಿ ವಂಚಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ. ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮತ್ತು ಬದರಿನಾಥಗಳನ್ನು ಒಳಗೊಂಡ ಚಾರ್ ಧಾಮ್ ಯಾತ್ರೆ 2025 ರ (Char Dham Yatra 2025) ಆರಂಭಕ್ಕೆ ಕೆಲವೇ ದಿನಗಳಿರುವ ಸಂದರ್ಭದಲ್ಲಿ, ಗೃಹ ಇಲಾಖೆ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದೆ.
ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C), ಧಾರ್ಮಿಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದು, ಉತ್ತರಾಖಂಡದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಸಾವಿರಾರು ಭಕ್ತರು ತಯಾರಿ ನಡೆಸುತ್ತಿರುವ ಸಮಯದಲ್ಲಿ ಎಚ್ಚರಿಕೆ ನೀಡಿದೆ.
ಅಸಲಿ ವೆಬ್ಸೈಟ್ಗಳನ್ನೇ ಹೋಲುವಂತಿರುವ ನಕಲಿ ಸೈಟ್ಗಳು
ಸೈಬರ್ ಅಪರಾಧಿಗಳು ಅಸಲಿ ಸೇವಾ ಪೂರೈಕೆದಾರ ವೆಬ್ಸೈಟ್ಗಳನ್ನೇ ಹೋಲುವ ನಕಲಿ ವೆಬ್ಸೈಟ್ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸುವ ಮೂಲಕ ಯಾತ್ರಾರ್ಥಿಗಳ ಧಾರ್ಮಿಕ ಭಾವನೆಗಳು ಮತ್ತು ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಈ ವಂಚನೆಯ ತಾಣಗಳು ಕೇದಾರನಾಥಕ್ಕೆ ಹೆಲಿಕಾಪ್ಟರ್ ಬುಕಿಂಗ್, ಅತಿಥಿ ಗೃಹ ಮತ್ತು ಹೋಟೆಲ್ ಕಾಯ್ದಿರಿಸುವಿಕೆಗಳು, ಕ್ಯಾಬ್ ಅಥವಾ ಟ್ಯಾಕ್ಸಿ ಸೇವಾ ಬುಕಿಂಗ್ಗಳು ಮತ್ತು ಸಂಪೂರ್ಣ ರಜಾ ಅಥವಾ ಧಾರ್ಮಿಕ ಪ್ರವಾಸ ಪ್ಯಾಕೇಜ್ಗಳಂತಹ ಸೇವೆಗಳ ಜಾಹೀರಾತು ನೀಡಿ ಜನರನ್ನು ಮರುಳು ಮಾಡುತ್ತವೆ ಎಂದು ಸಚಿವಾಲಯ ತಿಳಿಸಿದೆ.
ವಾಟ್ಸ್ಆ್ಯಪ್, ಫೇಸ್ಬುಕ್ ಜಾಹೀರಾತು ಹಾಗೂ ಸಂದೇಶಗಳ ಬಗ್ಗೆ ಇರಲಿ ಎಚ್ಚರ
ದಾರಿ ತಪ್ಪಿಸುವಂಥ ಫೇಸ್ಬುಕ್ ಪೋಸ್ಟ್ಗಳು, ವಾಟ್ಸ್ಆ್ಯಪ್ ಸಂದೇಶಗಳು ಮತ್ತು ಗೂಗಲ್ನಂತಹ ಜನಪ್ರಿಯ ಸರ್ಚ್ ಇಂಜಿನ್ಗಳಲ್ಲಿ ಪೇಯ್ಡ್ ಜಾಹೀರಾತುಗಳ ಮೂಲಕ ವಂಚಕರು ಜನರ ಮನಗೆಲ್ಲುತ್ತಾರೆ. ಜನರನ್ನು ಆಕರ್ಷಿಸಲು ರಿಯಾಯಿತಿ ದರಗಳನ್ನು ನೀಡುತ್ತಾರೆ. ಅಸ್ತಿತ್ವದಲ್ಲಿಲ್ಲದ ಸೇವೆಗಳಿಗೆ ಮುಂಗಡ ಪಾವತಿಗಳನ್ನು ಮಾಡುವಂತೆ ಮಾಡಿ ಹಣ ಲಪಟಾಯಿಸುತ್ತಾರೆ ಎಂದು ಎಚ್ಚರಿಕೆ ಸಂದೇಶದಲ್ಲಿ ಸಚಿವಾಲಯ ಉಲ್ಲೇಖಿಸಿದೆ.
ಬುಕಿಂಗ್ಗೆ ಅಧಿಕೃತ ವೆಬ್ಸೈಟ್, ತಾಣಗಳನ್ನೇ ಬಳಸಿ
ಧಾರ್ಮಿಕ ಯಾತ್ರಾರ್ಥಿಗಳು ಅಥವಾ ಇತರ ಪ್ರವಾಸಿಗರು ಅಧಿಕೃತ ಪೋರ್ಟಲ್ಗಳು ಮತ್ತು ಸರ್ಕಾರಿ-ಅಧಿಕೃತ ವೆಬ್ಸೈಟ್ಗಳ ಮೂಲಕ ಮಾತ್ರ ಬುಕಿಂಗ್ ಮಾಡುವಂತೆ ಸಚಿವಾಲಯ ಶಿಫಾರಸು ಮಾಡಿದೆ.
ಇದನ್ನೂ ಓದಿ: ಶಿಕ್ಷಣದ ಗುಣಮಟ್ಟ ಸುಧಾರಣೆಗೆ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ; ಕೇಂದ್ರ ಸಚಿವ ರಾಜನಾಥ್ ಸಿಂಗ್ ಘೋಷಣೆ
ಚಾರ್ ಧಾಮ್ ಯಾತ್ರೆಯನ್ನು ಹಿಂದೂ ಧರ್ಮದ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಚಾರ್ ಧಾಮ್ ಯಾತ್ರೆ ತೆರಳುತ್ತಾರೆ. ಇದೀಗ ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವುದರಿಂದ, ಯಾತ್ರಿಕರು ತಾವು ವ್ಯವಹರಿಸುವ ವೆಬ್ಸೈಟ್ಗಳು ಮತ್ತು ಏಜೆನ್ಸಿಗಳ ದೃಢೀಕರಣವನ್ನು ಎರಡು ಬಾರಿ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಒತ್ತಿ ಹೇಳುತ್ತಾರೆ.
ಅನುಮಾನಾಸ್ಪದ ವೆಬ್ಸೈಟ್, ಜಾಹೀರಾತುಗಳ ಬಗ್ಗೆ ದೂರು ನೀಡಿ
ಯಾವುದೇ ಅನುಮಾನಾಸ್ಪದ ವೆಬ್ಸೈಟ್ಗಳು ಅಥವಾ ಜಾಹೀರಾತುಗಳು ಗಮನಕ್ಕೆ ಬಂದಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ಗೆ (www.cybercrime.gov.in) ದೂರು ನೀಡುವಂತೆ ಸೂಚಿಸಲಾಗಿದೆ. ಇದರಿಂದಾಗಿ ಅಂತಹ ಚಟುವಟಿಕೆಗಳನ್ನು ತಡೆಯುವ ಕಾರ್ಯದಲ್ಲಿ ಇಲಾಖೆಗೆ ಸಹಾಯವಾಗುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








