ಭಾರತದ ಮೇಲೆ ಚೀನಾ ಆಕ್ರಮಣದ ಆರೋಪ; ವಿವಾದಕ್ಕೀಡಾದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

ಪಾಕಿಸ್ತಾನದ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್​ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಇದೀಗ ಚೀನಾ ಬಗ್ಗೆ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. 1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ ಆರೋಪವಿದೆ ಎಂದು ಹೇಳಿಕೆ ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಭಾರತದ ಮೇಲೆ ಚೀನಾ ಆಕ್ರಮಣದ ಆರೋಪ; ವಿವಾದಕ್ಕೀಡಾದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್
Follow us
|

Updated on: May 30, 2024 | 8:46 PM

ನವದೆಹಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ಅಕ್ಟೋಬರ್ 1962ರಲ್ಲಿ “ಚೀನೀಯರು ಭಾರತದ ಮೇಲೆ ಆಕ್ರಮಣ ಮಾಡಿದ್ದಾರೆ ಎನ್ನುವ ಆರೋಪವಿದೆ” ಎಂದು ಹೇಳುವ ಮೂಲಕ ರಾಜಕೀಯ ಗದ್ದಲವನ್ನು ಪ್ರಾರಂಭಿಸಿದ್ದಾರೆ. ಬಿಜೆಪಿಯು ಈ ವಿವಾದಾತ್ಮಕ ಹೇಳಿಕೆಯನ್ನು ಟೀಕಿಸಿದೆ. ಈ ಹೇಳಿಕೆಯ ಕುರಿತು ಕಾಂಗ್ರೆಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ನಮ್ಮ ಪಕ್ಷದ ಹಿರಿಯ ನಾಯಕರು “ಆಕ್ರಮಣದ ಆರೋಪ” ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಸಂಜೆ, ದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ‘ನೆಹರೂ ಅವರ ಮೊದಲ ನೇಮಕಾತಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್, “ಅಕ್ಟೋಬರ್ 1962ರಲ್ಲಿ ಚೀನೀಯರು ಭಾರತದ ಮೇಲೆ ಆಕ್ರಮಣ ಮಾಡಿದರು ಎಂಬ ಆಪಾದನೆಯಿದೆ” ಎಂದು ಹೇಳಿದ್ದರು. ಭಾರತೀಯ ವಿದೇಶಾಂಗ ಸೇವೆಗೆ (ಐಎಫ್‌ಎಸ್) ಪ್ರವೇಶ ನಿರಾಕರಿಸಿದ ಸಮಯವನ್ನು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ನಿರಂತರವಾಗಿ ದೇಶವನ್ನು ಹೆದರಿಸಲು ಪ್ರಯತ್ನಿಸುತ್ತಿದೆ; ಮಣಿಶಂಕರ್ ಅಯ್ಯರ್ ಹೇಳಿಕೆಗೆ ಮೋದಿ ತಿರುಗೇಟು

ಮಣಿಶಂಕರ್ ಅಯ್ಯರ್ ಅವರ ಪದಗಳ ಆಯ್ಕೆಯು ಅನೇಕ ಜನರಿಂದ ಟೀಕೆಯನ್ನು ಉಂಟುಮಾಡಿತು. ಅವರ ಸ್ವಂತ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪಗಳನ್ನು ಎದುರಿಸಬೇಕಾಯಿತು. ಚುನಾವಣೆ ಸಮಯವಾದ್ದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನಂತರ ತನ್ನ ನಿಲುವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ನಾನು “ಆಪಾದನೆ” ಎಂಬ ಪದವನ್ನು ಬಳಸಬಾರದಿತ್ತು ಎಂದು ಒಪ್ಪಿಕೊಂಡರು.

ಮಣಿಶಂಕರ್ ಅಯ್ಯರ್ ಅವರ ವಿವಾದಾತ್ಮಕ ಹೇಳಿಕೆಯನ್ನು “ಪರಿಷ್ಕರಣೆಯ ಲಜ್ಜೆಗೆಟ್ಟ ಪ್ರಯತ್ನ” ಎಂದು ಟೀಕಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, “ನೆಹರು ಚೀನಾದ ಪರವಾಗಿ ಯುಎನ್‌ಎಸ್‌ಸಿಯಲ್ಲಿ ಖಾಯಂ ಸ್ಥಾನದ ಭಾರತದ ಹಕ್ಕನ್ನು ತ್ಯಜಿಸಿದರು. ರಾಹುಲ್ ಗಾಂಧಿ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದರು. ರಾಜೀವ್ ಗಾಂಧಿ ಫೌಂಡೇಶನ್ ಚೀನೀ ರಾಯಭಾರ ಕಚೇರಿಯಿಂದ ಹಣವನ್ನು ಸ್ವೀಕರಿಸಲಾಗಿದೆ ಮತ್ತು ಚೀನಾದ ಕಂಪನಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ಶಿಫಾರಸು ಮಾಡುವ ವರದಿಗಳನ್ನು ಪ್ರಕಟಿಸಿತು. ಅವುಗಳ ಆಧಾರದ ಮೇಲೆ, ಸೋನಿಯಾ ಗಾಂಧಿಯವರ ಯುಪಿಎ ಚೀನಾದ ಸರಕುಗಳಿಗೆ ಭಾರತೀಯ ಮಾರುಕಟ್ಟೆಯನ್ನು ತೆರೆಯಿತು. ಈಗ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಚೀನಾದ ಆಕ್ರಮಣಕ್ಕೆ ತೇಪೆ ಹಚ್ಚಲು ನೋಡಿದ್ದಾರೆ. 38,000 ಚದರ ಕಿಮೀ ಭಾರತೀಯ ಭೂಪ್ರದೇಶವನ್ನು ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದೆ. ಚೀನಿಯರ ಮೇಲಿನ ಕಾಂಗ್ರೆಸ್ ಪ್ರೀತಿಯನ್ನು ನಾವು ಯಾವ ರೀತಿ ಪರಿಗಣಿಸಬಹುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ