‘ಕೆಲವು ವೈಫಲ್ಯ’ವನ್ನು ಸಿಎಂ ಸುಖು ಒಪ್ಪಿಕೊಂಡಿದ್ದಾರೆ, ಹಿಮಾಚಲ ಕಾಂಗ್ರೆಸ್ ಬಿಕ್ಕಟ್ಟು ಮುಗಿದಿದೆ: ಡಿಕೆ ಶಿವಕುಮಾರ್

ಕೆಲವು ವೈಫಲ್ಯ ಸಂಭವಿಸಿದೆ ಎಂದು ನಮ್ಮ ಸಿಎಂ ಒಪ್ಪಿಕೊಂಡಿದ್ದಾರೆ. ಆದರೆ ಅದು ಮುಂದುವರಿಯುವುದಿಲ್ಲ. ನಾವು ಎಲ್ಲಾ ಶಾಸಕರ ಜೊತೆ ಖುದ್ದಾಗಿ ಮಾತನಾಡಿದ್ದೇವೆ. ಪಿಸಿಸಿ ಅಧ್ಯಕ್ಷರು, ಸಿಎಂ ಜೊತೆ ಮಾತನಾಡಿದ್ದೇವೆ. ಒಂದು ಸುತ್ತಿನ ಚರ್ಚೆ ನಂತರ ನಡೆಯಲಿದೆ. ಹೀಗಾಗಿ ಅವರೆಲ್ಲರ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ. ಐದರಿಂದ ಆರು ಸದಸ್ಯರನ್ನೊಳಗೊಂಡ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿ ರಚಿಸುತ್ತಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.

ಕೆಲವು ವೈಫಲ್ಯವನ್ನು ಸಿಎಂ ಸುಖು ಒಪ್ಪಿಕೊಂಡಿದ್ದಾರೆ, ಹಿಮಾಚಲ ಕಾಂಗ್ರೆಸ್ ಬಿಕ್ಕಟ್ಟು ಮುಗಿದಿದೆ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

Updated on: Feb 29, 2024 | 8:43 PM

ಶಿಮ್ಲಾ ಫೆಬ್ರವರಿ 29: ರಾಜಕೀಯ ಗೊಂದಲದ ನಡುವೆಯೇ ಹಿಮಾಚಲ ಪ್ರದೇಶಕ್ಕೆ (Himachal Pradesh) ಕಾಂಗ್ರೆಸ್‌ನ ವೀಕ್ಷಕರಲ್ಲಿ ಒಬ್ಬರಾಗಿ ಕಳುಹಿಸಲಾದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರಾಜ್ಯ ಸರ್ಕಾರ ಮತ್ತು ಶಾಸಕರಲ್ಲಿ ಕೆಲವು ರೀತಿಯ ವೈಫಲ್ಯ ಸಂಭವಿಸಿದೆ ಎಂದು ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಅವರು ಒಪ್ಪಿಕೊಂಡಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಐದರಿಂದ ಆರು ಸದಸ್ಯರೊಂದಿಗೆ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ವೀಕ್ಷಕರು ಪಕ್ಷದ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದು, ನಂತರ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ. ಸರ್ಕಾರ ಸುರಕ್ಷಿತವಾಗಿದೆ ಮತ್ತು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಅವರು ಹೇಳಿದರು.

ಡಿಕೆ ಶಿವಕುಮಾರ್ ಹೇಳಿದ್ದೇನು?


“ಕೆಲವು ವೈಫಲ್ಯ ಸಂಭವಿಸಿದೆ ಎಂದು ನಮ್ಮ ಸಿಎಂ ಒಪ್ಪಿಕೊಂಡಿದ್ದಾರೆ. ಆದರೆ ಅದು ಮುಂದುವರಿಯುವುದಿಲ್ಲ. ನಾವು ಎಲ್ಲಾ ಶಾಸಕರ ಜೊತೆ ಖುದ್ದಾಗಿ ಮಾತನಾಡಿದ್ದೇವೆ. ಪಿಸಿಸಿ ಅಧ್ಯಕ್ಷರು, ಸಿಎಂ ಜೊತೆ ಮಾತನಾಡಿದ್ದೇವೆ. ಒಂದು ಸುತ್ತಿನ ಚರ್ಚೆ ನಂತರ ನಡೆಯಲಿದೆ. ಹೀಗಾಗಿ ಎ ಅವರೆಲ್ಲರ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ. ಐದರಿಂದ ಆರು ಸದಸ್ಯರನ್ನೊಳಗೊಂಡ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿ ರಚಿಸುತ್ತಿದ್ದೇವೆ. ಪಕ್ಷ ಉಳಿಸಲು ಮತ್ತು ಸರ್ಕಾರವನ್ನು ಉಳಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಸುಖು ನೇತೃತ್ವದ ಸರ್ಕಾರವು ಅಲ್ಪಸಂಖ್ಯೆಗೆ ಕುಸಿದಿದೆ ಎಂದು ಬಿಜೆಪಿ ಹೇಳಿಕೊಂಡಾಗ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ. ರಾಜ್ಯದ ಏಕೈಕ ರಾಜ್ಯಸಭಾ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತ್ತು.

ಆದಾಗ್ಯೂ, ಸುಖು ಅವರ ಸರ್ಕಾರವು ಬಹುಮತದಲ್ಲಿದೆ. ಅದು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಡಿಕೆಶಿ ಹೇಳಿದ್ದಾರೆ. ಪಕ್ಷದ ಶಾಸಕರೊಂದಿಗೆ ಮಾತನಾಡಲು ಮತ್ತು ನಂತರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಲು ಕಾಂಗ್ರೆಸ್ ವೀಕ್ಷಕರಾಗಿ ಭೂಪೇಶ್ ಬಘೇಲ್, ಡಿಕೆ ಶಿವಕುಮಾರ್ ಮತ್ತು ಭೂಪಿಂದರ್ ಹೂಡಾ ಅವರನ್ನು ನಿಯೋಜಿಸಿತ್ತು.

ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ರಾಜೀನಾಮೆ ನೀಡಿ ನಂತರ ರಾಜೀನಾಮೆಯನ್ನು ಹಿಂತೆಗೆದುಕೊಂಡರು. ಸ ತಮ್ಮ ರಾಜೀನಾಮೆಯ ವಿಷಯವನ್ನು ಒತ್ತಾಯಿಸುವುದಿಲ್ಲ ಎಂದು ಹೇಳಿದ್ದ ಸಿಂಗ್ ಸುಖು ಕರೆದ ಉಪಹಾರ ಸಭೆಯಿಂದ ದೂರ ಉಳಿದರು.

ಇಂದು ಮುಂಜಾನೆ ಹಿಮಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದರು, “ಕಾಂಗ್ರೆಸ್ ಚಿಹ್ನೆಯಲ್ಲಿ ಸ್ಪರ್ಧಿಸಿದ ಆರು ಶಾಸಕರು ತಮ್ಮ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳಿಗೊಳಪಡುತ್ತಾರೆ. ಆರು ಜನರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹ ಮಾಡಲಾಗುತ್ತದೆ ಎಂದು ಪಠಾನಿಯಾ ಹೇಳಿದ್ದಾರೆ.

ಇದನ್ನೂ ಓದಿ: ಯುಕೆ ಲೇಖಕಿ ನಿತಾಶಾ ಕೌಲ್‌ಗೆ ಭಾರತ ಪ್ರವೇಶ ನಿರಾಕರಿಸಿದ್ದೇಕೆ? ಸ್ಪಷ್ಟನೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಸುಧೀರ್ ಶರ್ಮಾ, ರಾಜಿಂದರ್ ರಾಣಾ, ದೇವಿಂದರ್ ಕೆ ಭುಟ್ಟೊ, ರವಿ ಠಾಕೂರ್, ಚೈತನ್ಯ ಶರ್ಮಾ ಮತ್ತು ಇಂದರ್ ದತ್ ಲಖನ್‌ಪಾಲ್ ಅನರ್ಹಗೊಂಡ ಆರು ಶಾಸಕರು.

2022 ರ ವಿಧಾನಸಭಾ ಚುನಾವಣೆಯ ನಂತರ, 68 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 25 ಅನ್ನು ಹೊಂದಿತ್ತು. ಉಳಿದ ಮೂರು ಸ್ಥಾನಗಳನ್ನು ಪಕ್ಷೇತರರು ಹೊಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Thu, 29 February 24