Crime News: ಹೆದ್ದಾರಿ ಬಳಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಕಾಲೇಜು ಯುವತಿ ಪತ್ತೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

| Updated By: ಸಾಧು ಶ್ರೀನಾಥ್​

Updated on: Feb 23, 2021 | 4:58 PM

Crime News: ಆಕೆಯ ತಂದೆ ಹೇಳುವ ಪ್ರಕಾರ ಅವರು ಮಗಳನ್ನು ಕಾಲೇಜಿನಿಂದ ಕರೆದುಕೊಂಡು ಹೋಗಲು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆಗಮಿಸಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಮಗಳು ಕಾಲೇಜಿನ ಬಳಿ ಇರಲಿಲ್ಲ. ಸ್ವಲ್ಪ ಹೊತ್ತು ಮಗಳಿಗೆ ಕಾದ ತಂದೆ ಆಮೇಲೆ ಹುಡುಕಾಡಲು ಶುರುಮಾಡಿದ್ದಾರೆ.

Crime News: ಹೆದ್ದಾರಿ ಬಳಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಕಾಲೇಜು ಯುವತಿ ಪತ್ತೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಲಕ್ನೋ: ಆಗಾಗ ಅಪರಾಧ ಚಟುವಟಿಕೆಗಳ ಕಾರಣದಿಂದ ಸುದ್ದಿ ಮಾಡುವ ಉತ್ತರ ಪ್ರದೇಶ (Uttar Pradesh) ರಾಜ್ಯ ಈಗ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆಗೆ ಸಾಕ್ಷಿಯಾಗಿದೆ. ಇಲ್ಲಿನ ಶಹಜಹಾನ್​ಪುರದ (Shahjahanpur) ಹೆದ್ದಾರಿ ಬಳಿಯಲ್ಲಿ ಸೋಮವಾರ ಸಂಜೆ  ಅರ್ಧ ಸುಟ್ಟ ಪರಿಸ್ಥಿತಿಯಲ್ಲಿ ಯುವತಿಯೊಬ್ಬಳು ಪತ್ತೆಯಾಗಿದ್ದು, ಈ ಘಟನೆಯು ಎಲ್ಲರನ್ನೂ ಆತಂಕಕ್ಕೆ ನೂಕಿದೆ. ಇಲ್ಲಿನ ಸ್ವಾಮಿ ಸುಖದೇವಾನಂದ್ ಕಾಲೇಜಿನ ಸುಮಾರು 20 ವರ್ಷ ವಯಸ್ಸಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ಈ ದುಸ್ಥಿತಿಯಲ್ಲಿ ಕಂಡುಬಂದಿದ್ದು, ಘಟನೆಗೆ ನಿರ್ದಿಷ್ಟ ಕಾರಣಗಳಿನ್ನೂ ತಿಳಿದುಬಂದಿಲ್ಲ.

ಶಹಜಹಾನ್​ಪುರದ ಹೆದ್ದಾರಿ ಬಳಿಯಲ್ಲೇ ಅರೆಸುಟ್ಟ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಶಹಜಹಾನ್​ಪುರ್​ ಎಸ್​ಪಿ ಎಸ್.ಆನಂದ್​, ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದಾರೆ.

ಯುವತಿಯ ದೇಹ ಭಾಗಶಃ ಸುಟ್ಟಿತ್ತಾದರೂ ಆಕೆಯ ಬಳಿ ಮಾತನಾಡಿ ಅವಳ ತಂದೆಯ ಫೋನ್​ ನಂಬರ್​ ಪಡೆದುಕೊಂಡು ಅವರಿಗೆ ಮಾಹಿತಿ ನೀಡಿದೆವು. ಆಕೆಯ ತಂದೆ ಹೇಳುವ ಪ್ರಕಾರ ಅವರು ಮಗಳನ್ನು ಕಾಲೇಜಿನಿಂದ ವಾಪಸ್​ ಕರೆದುಕೊಂಡು ಹೋಗಲು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆಗಮಿಸಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಮಗಳು ಕಾಲೇಜಿನ ಬಳಿ ಇರಲಿಲ್ಲ. ಸ್ವಲ್ಪ ಹೊತ್ತು ಮಗಳಿಗೆ ಕಾದ ತಂದೆ ಆಮೇಲೆ ಹುಡುಕಾಡಲು ಶುರುಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಯುವತಿ ಜಾಸ್ತಿ ಮಾಹಿತಿ ನೀಡುವ ಸ್ಥಿತಿಯಲ್ಲಿ ಇಲ್ಲವಾದ್ದರಿಂದ ಆಕೆ ಮಾತನಾಡುವುದಕ್ಕಾಗಿ ಕಾಯುತ್ತಿದ್ದೇವೆ. ಆಕೆಯಿಂದ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ನಂತರ ಸ್ಪಷ್ಟನೆ ಸಿಗಲಿದೆ. ಈಗ ತನಿಖೆಯ ಕಾರಣಕ್ಕಾಗಿ ಆಕೆಯ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ.

ಇನ್ನೊಂದೆಡೆ ಆಕೆಯ ತಂದೆ, ಮಗಳ ಪರಿಸ್ಥಿತಿ ಕಂಡು ಆಘಾತಗೊಂಡಿದ್ದು, ಕೊರೊನಾ ಕಾರಣದಿಂದ  15 ದಿನಗಳಿಗೊಮ್ಮೆ ಆಕೆಯನ್ನು ನಾನೇ ಸ್ವತಃ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದೆ. ವಾಪಸ್ ಹೋಗುವಾಗಲೂ ನಾನೇ ಬಂದು ಕರೆದೊಯ್ಯುತ್ತಿದ್ದೆ. ಈಗ ಏನಾಗಿದೆ ಎಂದು ಗೊತ್ತಾಗುತ್ತಿಲ್ಲ. ಆಕೆಯೂ ನಮ್ಮ ಬಳಿ ಏನೂ ಹೇಳಿಕೊಂಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಿನ ಜಾವ ಆಕ್ಸಿಡೆಂಟ್​: ನಿಂತಿದ್ದ ತೈಲ ಟ್ಯಾಂಕರ್​ಗೆ ಕಾರ್​ ಡಿಕ್ಕಿ, ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳ ಸಾವು

Published On - 3:37 pm, Tue, 23 February 21