30 ವರ್ಷ ಹಿಂದಿನ ವಿವಾದ ಈಗ ಭುಗಿಲೇಳಲು ಕಾರಣವೇನು? ಕೊಪ್ಪಳ ಕನಕದಾಸ ವೃತ್ತ ವಿವಾದದ ಹಿಂದಿದೆ ರಾಜಕೀಯ ತಂತ್ರ

ಕೊಪ್ಪಳ: ಅದು 30 ವರ್ಷಗಳ ಹಿಂದೆ ಶಂಕು ಸ್ಥಾಪನೆಯಾದ ವೃತ್ತ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ವೃತ್ತಕ್ಕೆ ಶಂಕುಸ್ಥಾಪನೆ ಮಾಡಿದ್ರು. 30 ವರ್ಷಗಳಿಂದ ಇರದ ವಿವಾದ ಇದೀಗ ದಿಡೀರ್ ಭುಗಿಲೆದ್ದಿದೆ. ಜೊತೆಗೆ ಜಾತಿ ರಾಜಕಾರಣದ ತಿರುವು ಪಡೆದುಕೊಂಡಿದೆ. ಅಷ್ಟಕ್ಕೂ ಆ ವಿವಾದ ಇದೀಗ ಮುನ್ನಲೆಗೆ ಬರಲು ಕಾರಣ ಏನೂ, ಜಾತಿ ರಾಜಕಾರಣ, ವಿವಾದದ ಹಿಂದಿನ ರಾಜಕಾರಣದ ಒಳಸುಳಿಯನ್ನ ಟಿವಿ9 ಡಿಜಿಟಲ್ ನಿಮ್ಮ ಮುಂದಿಡಲಿದೆ. ಒಂದು ವೃತ್ತ. ಒಂದು ಪತ್ರ. ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಕೊಪ್ಪಳ ಬಸ್ ನಿಲ್ದಾಣದ […]

30 ವರ್ಷ ಹಿಂದಿನ ವಿವಾದ ಈಗ ಭುಗಿಲೇಳಲು ಕಾರಣವೇನು? ಕೊಪ್ಪಳ ಕನಕದಾಸ ವೃತ್ತ ವಿವಾದದ ಹಿಂದಿದೆ ರಾಜಕೀಯ ತಂತ್ರ
ಕನಕದಾಸ ವೃತ್ತ ವಿವಾದ
Edited By: ಆಯೇಷಾ ಬಾನು

Updated on: Jul 11, 2021 | 1:15 PM

ಕೊಪ್ಪಳ: ಅದು 30 ವರ್ಷಗಳ ಹಿಂದೆ ಶಂಕು ಸ್ಥಾಪನೆಯಾದ ವೃತ್ತ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ವೃತ್ತಕ್ಕೆ ಶಂಕುಸ್ಥಾಪನೆ ಮಾಡಿದ್ರು. 30 ವರ್ಷಗಳಿಂದ ಇರದ ವಿವಾದ ಇದೀಗ ದಿಡೀರ್ ಭುಗಿಲೆದ್ದಿದೆ. ಜೊತೆಗೆ ಜಾತಿ ರಾಜಕಾರಣದ ತಿರುವು ಪಡೆದುಕೊಂಡಿದೆ. ಅಷ್ಟಕ್ಕೂ ಆ ವಿವಾದ ಇದೀಗ ಮುನ್ನಲೆಗೆ ಬರಲು ಕಾರಣ ಏನೂ, ಜಾತಿ ರಾಜಕಾರಣ, ವಿವಾದದ ಹಿಂದಿನ ರಾಜಕಾರಣದ ಒಳಸುಳಿಯನ್ನ ಟಿವಿ9 ಡಿಜಿಟಲ್ ನಿಮ್ಮ ಮುಂದಿಡಲಿದೆ.

ಒಂದು ವೃತ್ತ. ಒಂದು ಪತ್ರ. ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಕೊಪ್ಪಳ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಾಣವಾಗ್ತಿರೋ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಅಷ್ಟಕ್ಕೂ ಚರ್ಚೆಯಾಗಲು ಕಾರಣ ಕೊಪ್ಪಳ ಸಂಸದ ಕರಡಿ ಸಂಗಣ್ಣ. ಕರಡಿ ಸಂಗಣ್ಣ ಕಳೆದ ತಿಂಗಳ 5ರಂದು ಕನಕದಾಸ ಮೂರ್ತಿ ಪ್ರತಿಷ್ಠಾಪನೆ ಜಾಗ ಅತಿಕ್ರಮಣವಾಗಿದೆ‌. ಯಾವುದೇ ಜನ ಪ್ರತಿನಿಧಿಗಳನ್ನ ಕರೆಯದೆ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ರು. ಅಲ್ಲಿಂದ ಆರಂಭವಾದ ವಿವಾದ ಇದೀಗ ರಾಜ್ಯಾದ್ಯಂತ ಪ್ರತಿಭಟನೆ ಹಂತಕ್ಕೆ ಬಂದು ನಿಂತಿದೆ. ಕರಡಿ ಸಂಗಣ್ಣ ಪತ್ರ ಬರೆದ ನಂತರ ಹಾಲುಮತ ಸಮಾಜ ಸಂಗಣ್ಣ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕರಡಿ ಸಂಗಣ್ಣ ಪತ್ರಕ್ಕೆ ರುದ್ರಣ್ಣ ಗುಳಗುಳಿ ಆಕ್ರೋಶ

ಮೊದಲು ಸ್ಥಳೀಯ ಸ್ವಾಮೀಜಿಗಳು ಹಾಗೂ ಕುರುಬ ಸಮುದಾಯದ ಜನ ಕರಡಿ ಸಂಗಣ್ಣ ಕ್ಷಮೇ‌ ಕೇಳಬೇಕೆಂದು ಪಟ್ಟು ಹಿಡಿದ್ರು. ಕೊನೆಗೆ ಹಾಲುಮತ ಮಾಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಸಂಗಣ್ಣ ಅವರಿಗೆ ಕರೆ ಮಾಡಿ ಪತ್ರದ ಕುರಿತು ಚರ್ಚೆ ಮಾಡಲು ಬರುವುದಾಗಿ ತಿಳಸಿದ್ತು. ಆದ್ರೆ ಸಂಗಣ್ಣ ಕರಡಿ ರಾಜ್ಯಾಧ್ಯಕ್ಷರಿಗೆ ಸರಿಯಾಗಿ ಸ್ಪಂದನೆ ಮಾಡಲಿಲ್ಲ. ಅದಲ್ಲದೆ ದೂರವಾಣಿ ಅರ್ದಕ್ಕೆ ಕಟ್ ಮಾಡಿದ್ರು, ಹೀಗಾಗಿ ಸಂಗಣ್ಣ ಕರಡಿ ಹಾಲುಮತ ಸಮಾಜ, ಕನಕ ಭಕ್ತರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡೋದಾಗಿ ಹಾಲುಮತ ಮಾಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ತಿಳಿಸಿದ್ದಾರೆ.

ಇದು ಮೇಲ್ನೋಟಕ್ಕೆ ಕಂಡು ಬರುವ ಒಂದು ಭಾಗ, ಆದ್ರೆ ಇದರ ಹಿಂದೆ ಇರೋದು ಪಕ್ಕಾ ರಾಜಕೀಯ. ಕರಡಿ ಸಂಗಣ್ಣ ಸುಮ್ಮ ಸುಮ್ಮನೆ ಪತ್ರ ಬರೆದಿಲ್ಲ. ಆ ಪತ್ರದ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ಯಾಕಂದ್ರೆ ಕುರುಬ ಸಮುದಾಯ ಬಿಟ್ಟು ಉಳಿದ ಲಿಂಗಾಯತ ಸಮುದಾಯಕ್ಕೆ ಕರಡಿ ಸಂಗಣ್ಣ ಒಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಉಳಿದ ಸಮಾಜಕ್ಕೆ ನಾನು ನಾಯಕ, ಪ್ರಶ್ನೆ ಮಾಡಿದ್ದೇನೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ. ಇಲ್ಲಿ ಕರಡಿ ಸಂಗಣ್ಣ ಇನ್ನೋಂದು ಲೆಕ್ಕಾಚಾರವೂ ಇದೆ, ಹೇಗಾದ್ರೂ ಮಾಡಿ ಇನ್ನೊಮ್ಮೆ ಶಾಸಕರಾಗಬೇಕು ಅಂದುಕೊಂಡಿದ್ದಾರೆ. ಮುಂಬರೋ ಚುನಾವಣೆಯಲ್ಲಿ ಕರಡಿ ಸಂಗಣ್ಣ ವಿಧಾನಸಭೆಗೆ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಸದ್ಯ ಕೊಪ್ಪಳದಲ್ಲಿ ಚಾಲ್ತಿ ಇದೆ. ಹೀಗಾಗಿ ಇದೊಂದು ವಿವಾದ ಹುಟ್ಟುಹಾಕಿ ಜಾತಿ ಲೆಕ್ಕಾಚಾರದ ಸಮೀಕ್ಷೆಯನ್ನ ಕರಡಿ ಸಂಗಣ್ಣ ತೇಲಿ ಬಿಟ್ಟಿದ್ದಾರೆ‌. ಕರಡಿ ಸಂಗಣ್ಣ ಬರೆದ ಪತ್ರದಲ್ಲಿ ಎಲ್ಲೂ ಮೂರ್ತಿ ಪ್ರತಿಷ್ಟಾಪನೆಗೆ ವಿರೋಧ ಇಲ್ಲ. ಆದ್ರೆ ಜನ ಪ್ರತಿನಿಧಿಗಳನ್ನ ಕೇಳಬೇಕಿತ್ತು, ಜಾಗ ಅತಿಕ್ರಮಣವಾಗಿದೆ ಅದನ್ನ ಪರಿಶೀಲಿಸಬೇಕ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ‌. ಈ ಮೂಲಕ ನಾನು ಕನಕದಾಸನ ವಿರೋಧಿ ಅಲ್ಲ, ಇಲ್ಲಿ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ಕೆಲಸ ನಗರಸಭೆ ಮಾಡ್ರಿದ್ರು, ಅದರ ಹಿಂದೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಇದಾರೆ ಅನ್ನೋದ ಸಂಗಣ್ಣ ಕರಡಿ ಅವರ ರಾಜಕೀಯ ಲೆಕ್ಕಾಚಾರ, ಇದು‌ ಸತ್ಯವೂ ಹೌದು. ಯಾಕಂದ್ರೆ ಇಲ್ಲಿ ಕನಕದಾಸ ಮೂರ್ತಿ ಪ್ರತಿಷ್ಠಾಪನೆ, ಉದ್ಯಾನವನ ನಿರ್ಮಾಣಕ್ಕೆ ಆಸಕ್ತಿ ತೋರಿರೋದು ಕೈ ಶಾಸಕ ಸಿದ್ದರಾಮಯ್ಯ ಅಪ್ತ ರಾಘವೇಂದ್ರ ಹಿಟ್ನಾಳ್.

ಕಳೆದ ಮೂವತ್ತು ವರ್ಷಗಳ ಹಿಂದೆ ಶಂಕು ಸ್ಥಾಪನೆಯಾದ ಒಂದು ವೃತ್ತ ಇದೀಗ ಮುನ್ನೆಲೆಗೆ ಬರಲು, ಕರಡಿ ಹಿಟ್ಬಾಳ್ ಕುಟುಂಬದ ರಾಜಕಾರಣ. ಕೈ ಶಾಸಕ ರಾಘವೇಂದ್ರ ಹಿಟ್ನಾಳ್ ಸಿದ್ದರಾಮಯ್ಯ ಮಾನಸ ಪುತ್ರ ಎಂದು ಕರೆಸಿಕೊಳ್ತಾರೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ‌. ಮೊದಲ ಬಾರಿ ಕರಡಿ ಸಂಗಣ್ಣ ವಿರುದ್ದ ಗೆದ್ರೆ, ಎರಡನೇ ಸಂಗಣ್ಣ ಪುತ್ರ ಅಮರೇಶ ಕರಡಿ ವಿರುದ್ದ ಗೆದ್ದಿದ್ದಾರೆ. ಕನಕದಾಸ ಮೂರ್ತಿ ಶಂಕುಸ್ಥಾಪನೆಯಾದ ಇಲ್ಲಿವರೆಗೂ 13 ವರ್ಷ ಹಿಟ್ನಾಳ್ ಕುಟುಂಬವೇ ಕೊಪ್ಪಳದಲ್ಲಿ ಆಡಳಿತ ಮಾಡಿದ್ರೂ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿರಲಿಲ್ಲ.

ಕಳೆದ ಎರಡು ಅವಧಿಯಲ್ಲಿ ರಾಘವೇಂದ್ರ ಹಿಟ್ನಾಳ್ ಕನಕದಾಸ ಮೂರ್ತಿ ಪ್ರತಿಷ್ಠಾಪನೆ, ಉದ್ಯಾನವನ ನಿರ್ಮಾಣ ಮಾಡ್ತೀನಿ ಅನ್ನೋ ಭರವಸೆ ಕೊಟ್ಟಿದ್ರು, ಆದ್ರೆ ಭರವಸೆ ಈಡೇರಲಿಲ್ಲ. ಇದೀಗ ಇನ್ನು ಎರಡೇ ವರ್ಷದಲ್ಲಿ ಚುನಾಚಣೆ ಬರಲಿದೆ. ಎಲ್ಲಿ ಕುರುಬ ಸಮಾಜದ ಕೆಂಗಣ್ಣಿಗೆ ನಾವು ಗುರಿಯಾಗ್ತೀವಿ ಅನ್ನೋ ಕಾರಣಕ್ಕೆ ರಾಘವೇಂದ್ರ ಹಿಟ್ನಾಳ್ ಕನಕದಾಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ‌. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಏಕಾಏಕಿ ಅಲ್ಲಿನ ವಾಣಿಜ್ಯ ಮಳಿಗೆ ನೆಲಸಮ ಮಾಡಲಾಯ್ತು.

ಶಿಥಿಲಗೊಂಡಿರೋ ನೆಪದಿಂದ ಹಿಟ್ನಾಳ್ ಅವರೇ ನೆಲಸಮ ಮಾಡಿಸಿದ್ರು ಅನ್ನೋ ಮಾತುಗಳು ಕೇಳಿ ಬರುತ್ತಿವೆ. ವಾಣಿಜ್ಯ ಮಳಿಗೆಯಲ್ಲಿ ಸುಮಾರು 60 ಕುಟುಂಬಗಳ ಜೀವನೋಪಾಯ ಮಾಡ್ತಿದ್ವು, ಅವರಿಗೆ ಯಾವುದೇ ನೋಟಿಸ್ ಕೊಡದೆ ಮಳಿಗೆ ಕೆಡವಿದ್ದು ಅಲ್ಲಿನ ವ್ಯಾಪಾರಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಆ ಸಮಯದಲ್ಲಿ ಅಲ್ಲಿನ ವ್ಯಾಪಾರಿಗಳ ಸಂಸದರ ಬಳಿ ಹೋದ್ರು,ಸಂಸದರು ಸ್ಪಂದಿಸರಿಲ್ಲ, ಏಕಾಏಕಿ ಪತ್ರ ಬರೆದಿದ್ದು ನೋಡಿದ್ರೆ ರಾಜಕೀಯ ಅನ್ನೋದ ಸಾಬೀತಾಗ್ತಿದೆ. ಇಲ್ಲಿ ಹಿಟ್ನಾಳ್ ಹಾಗೂ ಕರಡಿ ಕುಟುಂಬ ಒಂದು ವೃತ್ತದ ಮೂಲಕ ರಾಜಕೀಯ ಮಾಡಲು ಹೊರಟಿವೆ. ಕುಲ‌ಕುಲ ಎಂದು ಹೊಡಾದಡಬೇಡಿ ಎಂದು ಹೇಳಿದ ಕನಕದಾಸರನ್ನೆ ರಾಜಕೀಯ ನಾಯಕರು ತಮ್ಮ ಪ್ರತಿಷ್ಟೆಗೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೊಪ್ಪಳ ಅಮಾಯಕ ನಾಗರಿಕರದ್ದು, ಇದುವರೆಗೂ ಶಾಸಕ ರಾಘವೇಂದ್ರ ಹಿಟ್ನಾಳ್ ವಿವಾದದ ಬಗ್ಗೆ ಒಂದು ಮಾತನ್ನೂ ಮಾತಾಡಿಲ್ಲ, ಕರಡಿ ಸಂಗಣ್ಣ ಮಾತ್ರ ನಾನು ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ಮಾಡೇ ಇಲ್ಲ ಎನ್ನುತ್ತಿದ್ದಾರೆ.

ವಿಶೇಷ ವರದಿ -ಶಿವಕುಮಾರ್ ಪತ್ತಾರ್

ಇದನ್ನೂ ಓದಿ: ಸಂಸದ ಕರಡಿ ಸಂಗಣ್ಣ ಹಾಲುಮತ ಸಮಾಜದ ಕ್ಷಮೆ ಕೇಳಬೇಕು -ರುದ್ರಣ್ಣ ಗುಳಗುಳಿ ಆಕ್ರೋಶ

Web contact

TV9 Kannada

Read More
Follow Us