Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯವಸ್ಥೆ ವಿಫಲವಾಗಿದೆ, ಈಗ ಜನ್ ಕೀ ಬಾತ್ ಮುಖ್ಯ: ರಾಹುಲ್ ಗಾಂಧಿ

Rahul Gandhi: ವ್ಯವಸ್ಥೆ ವಿಫಲವಾಗಿದೆ. ಹಾಗಾಗಿ ಈಗ ಜನ್ ಕೀ ಬಾತ್ (ಜನರ ಮಾತು) ಮುಖ್ಯ. ಈ ಸಂದಿಗ್ದ ಕಾಲದಲ್ಲಿ ಜವಾಬ್ದಾರಿಯುತ ನಾಗರಿಕರ ಅವಶ್ಯಕತೆ ಇದೆ. ಎಲ್ಲ ರಾಜಕೀಯ ಕೆಲಸಗಳನ್ನು ಬಿಟ್ಟು, ದೇಶದ ಇತರ ನಾಗರಿಕರಿಗೆ ಸಹಾಯ ಮಾಡಿ ಎಂದು ನಾನು ಕಾಂಗ್ರೆಸ್ ಪಕ್ಷದ ಸಹೋದ್ಯೋಗಿಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದ ರಾಹುಲ್ ಗಾಂಧಿ.

ವ್ಯವಸ್ಥೆ ವಿಫಲವಾಗಿದೆ, ಈಗ ಜನ್ ಕೀ ಬಾತ್ ಮುಖ್ಯ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Apr 25, 2021 | 2:26 PM

ದೆಹಲಿ: ದೇಶದಲ್ಲಿನ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೊವಿಡ್ 19 ಸಂಕಷ್ಟದ ಹೊತ್ತಲ್ಲಿ ಜನರಿಗೆ ಸಹಾಯ ಮಾಡುವುದು ಪಕ್ಷದ ಕರ್ತವ್ಯ ಎಂದು ಹೇಳಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ರಾಹುಲ್ , ವ್ಯವಸ್ಥೆ ವಿಫಲವಾಗಿದೆ. ಹಾಗಾಗಿ ಈಗ ಜನ್ ಕೀ ಬಾತ್ (ಜನರ ಮಾತು) ಮುಖ್ಯ. ಈ ಸಂದಿಗ್ದ ಕಾಲದಲ್ಲಿ ಜವಾಬ್ದಾರಿಯುತ ನಾಗರಿಕರ ಅವಶ್ಯಕತೆ ಇದೆ. ಎಲ್ಲ ರಾಜಕೀಯ ಕೆಲಸಗಳನ್ನು ಬಿಟ್ಟು, ದೇಶದ ಇತರ ನಾಗರಿಕರಿಗೆ ಸಹಾಯ ಮಾಡಿ ಎಂದು ನಾನು ಕಾಂಗ್ರೆಸ್ ಪಕ್ಷದ ಸಹೋದ್ಯೋಗಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ಇದು ಕಾಂಗ್ರೆಸ್ ಕುಟುಂಬದ ಧರ್ಮ ಎಂದಿದ್ದಾರೆ.

ಮೋದಿ ಮನದ ಮಾತು

ಭಾನುವಾರ 11 ಗಂಟೆಗೆ ಪ್ರಸಾರವಾದ ಮನ್ ಕೀ  ಬಾತ್​ನಲ್ಲಿ ಮಾತನಾಡಿದ ಮೋದಿ, ದೇಶವಾಸಿಗಳೇ, ಕೊರೊನಾ ಸೋಂಕಿನ ವಿರುದ್ಧ ಗೆಲ್ಲಬೇಕಾಗಿದೆ. ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾನು ವಿವಿಧ ವಲಯಗಳ ತಜ್ಞರೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇನೆ. ಔಷಧ ಕ್ಷೇತ್ರ, ಲಸಿಕೆ ಉತ್ಪಾದಕರು, ಆಕ್ಸಿಜನ್​ ಉತ್ಪಾದನಾ ಘಟಕ ನಡೆಸುತ್ತಿರುವವರು, ಆರೋಗ್ಯ ವಲಯದ ಬಗ್ಗೆ ತಿಳಿದವರು ಕೇಂದ್ರ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ತಜ್ಞರು ನೀಡುವ ವೈಜ್ಞಾನಿಕ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಕೊರೊನಾವನ್ನು ಮಣಿಸಬೇಕು. ನಮ್ಮ ಸರ್ಕಾರ ಜವಾಬ್ದಾರಿಗಳನ್ನು ನಿಭಾಯಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದಿದ್ದಾರೆ.

ನಮ್ಮ ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಅದ್ಭುತ ಹೋರಾಟ ನಡೆಸುತ್ತಿದ್ದಾರೆ. ಕಳೆದ ವರ್ಷ ಅವರು ಗಳಿಸಿದ ಎಲ್ಲ ರೀತಿಯ ಅನುಭವಗಳನ್ನೂ ಪ್ರಯೋಗಿಸುತ್ತಿದ್ದಾರೆ. ದೇಶದ ಜನರು ಕೊರೊನಾ ಬಗ್ಗೆ ಯಾವುದೇ ಗಾಳಿಸುದ್ದಿಯನ್ನೂ ನಂಬಿ ಗಾಬರಿಯಾಗಬಾರದು. ನಿಮ್ಮ ಕುಟುಂಬದ ವೈದ್ಯರು, ಹತ್ತಿರದ ಡಾಕ್ಟರ್ಸ್​ ಜತೆ ಮಾತನಾಡಿ, ಸರಿಯಾದ ಮಾಹಿತಿ ತೆಗೆದುಕೊಳ್ಳಿ. ಅಗತ್ಯವಿದ್ದರೆ ಅವರನ್ನು ಸಂಪರ್ಕಿಸಿ. ಕೊರೊನಾ ಬಂದ ತಕ್ಷಣ ಯಾವ ಕಾರಣಕ್ಕೂ ಹೆದರಬೇಡಿ ಎಂದು ಧೈರ್ಯ ತುಂಬಿದರು. ಹಾಗೇ, ಕೆಲವು ವೈದ್ಯರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಾಟ್ಸ್​ಆ್ಯಪ್​, ಫೋನ್​ ಕಾಲ್ ಮೂಲಕ ರೋಗಿಗಳಿಗೆ ಕೌನ್ಸಿಲಿಂಗ್​ ಮಾಡುತ್ತಿದ್ದಾರೆ. ಅನೇಕ ಆಸ್ಪತ್ರೆಗಳು ತಮ್ಮ ವೆಬ್​​ಸೈಟ್​ನಲ್ಲಿ ಕೂಡ ಕೊರೊನಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ನಿಜಕ್ಕೂ ಇದೆಲ್ಲ ಶ್ಲಾಘನೀಯ ವಿಚಾರಗಳು ಎಂದು ಹೇಳಿದರು.

ತಪ್ಪದೆ ಲಸಿಕೆ ಪಡೆಯಿರಿ ಕೊರೊನಾ ಬಿಕ್ಕಟ್ಟು ಮಿತಿಮೀರಿದೆ. ಈ ಹೊತ್ತಲ್ಲಿ ಲಸಿಕೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಕೊರೊನಾ ಲಸಿಕೆ ಬಗ್ಗೆ ರೂಮರ್​​ಗಳನ್ನು ನಂಬಬೇಡಿ. ಧೈರ್ಯದಿಂದ ಪಡೆಯಿರಿ ಎಂದು ಪ್ರಧಾನಿ ದೇಶದ ಜನರಿಗೆ ಸಲಹೆ ನೀಡಿದರು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಉಚಿತವಾಗಿ ರಾಜ್ಯ ಸರ್ಕಾರಗಳಿಗೆ ಕೊರೊನಾ ಲಸಿಕೆ ಕಳಿಸಿದೆ. ಇನ್ನು ಮೇ 1ರಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಉಚಿತ ಲಸಿಕಾ ಅಭಿಯಾನವನ್ನು ರಾಜ್ಯ ಸರ್ಕಾರಗಳು ವಿಸ್ತರಿಸಬೇಕು. ತಮ್ಮ ರಾಜ್ಯದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಕ್ರಮ ವಹಿಸಬೇಕು ಎಂದು ಎಂದು ನರೇಂದ್ರ ಮೋದಿ ಹೇಳಿದರು. ಹಾಗೇ, ಕೇಂದ್ರದ ಉಚಿತ ಲಸಿಕೆ ಅಭಿಯಾನ ಹೀಗೆ ಮುಂದುವರಿಯಲಿದೆ ಎಂದೂ ತಿಳಿಸಿದರು.

ಗ್ರಾಮಗಳಲ್ಲಿ ಅರಿವುಮೂಡಿದೆ ದೇಶದ ಹಳ್ಳಿಯ ಜನರು ಕೊರೊನಾ ವಿರುದ್ಧ ಜಾಗೃತರಾಗಿದ್ದಾರೆ. ಕೊವಿಡ್​-19 ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ. ಅಲ್ಲಿನ ಜನರು ತಮ್ಮ ಹಳ್ಳಿಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು. ಹಾಗೇ, ದೇಶದ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್​, ಔಷಧಗಳ ಪೂರೈಕೆ ಹೆಚ್ಚಿಸಲು ಹಗಲಿರುಳೂ ಶ್ರಮಿಸಲಾಗುತ್ತದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ ಎಂದರು. ಹಾಗೇ, ಲಸಿಕೆಯನ್ನು ತಪ್ಪದೆ ತೆಗೆದುಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: Mann Ki Baat: ಕೊರೊನಾ 2ನೇ ಅಲೆ ತಾಳ್ಮೆ ಪರೀಕ್ಷಿಸುತ್ತಿದೆ, ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಡೋಣ: ಪ್ರಧಾನಿ ನರೇಂದ್ರ ಮೋದಿ

(Congress leader Rahul Gandhi alleged that System has failed so it is important to do Jan ki baat)