AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಸೇನೆಯನ್ನು ಕಾಂಗ್ರೆಸ್ ನಂಬಬೇಕು : ಸೂಕ್ಷ್ಮ ವಿಚಾರಗಳನ್ನ ಎಲ್ಲಿ ಚರ್ಚಿಸಬೇಕೆಂಬ ಪರಿಜ್ಞಾನ ಕಾಂಗ್ರೆಸ್ ಗೆ ಇಲ್ಲವೇ? – ಪ್ರಲ್ಹಾದ್ ಜೋಶಿ ವಾಗ್ದಾಳಿ

Pralhad Joshi: ಸದನದಲ್ಲಿಂದು ಕಾಂಗ್ರೆಸ್ ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸಚಿವ ಜೋಶಿ, ರಾಜ್ಯಸಭೆ ಸಭಾಪತಿ ಅವರು ಪ್ರತಿಪಕ್ಷಗಳಲ್ಲಿ ಕೈ ಮುಗಿದು ಮನವಿ ಮಾಡಿದರು. ಆದರೆ ಖರ್ಗೆಯವರು ಸಭಾಧ್ಯಕ್ಷರ ಮನವಿಯನ್ನ ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ ಎಂದರೆ ಏನರ್ಥ?

ಭಾರತೀಯ ಸೇನೆಯನ್ನು ಕಾಂಗ್ರೆಸ್ ನಂಬಬೇಕು : ಸೂಕ್ಷ್ಮ ವಿಚಾರಗಳನ್ನ ಎಲ್ಲಿ ಚರ್ಚಿಸಬೇಕೆಂಬ ಪರಿಜ್ಞಾನ ಕಾಂಗ್ರೆಸ್ ಗೆ ಇಲ್ಲವೇ? - ಪ್ರಲ್ಹಾದ್ ಜೋಶಿ ವಾಗ್ದಾಳಿ
TV9 Web
| Updated By: ಸಾಧು ಶ್ರೀನಾಥ್​|

Updated on: Dec 22, 2022 | 7:05 PM

Share

ನವದೆಹಲಿ: ಚೀನಾ ಭಾರತ ಗಡಿ ವಿಚಾರವಾಗಿ ರಾಜ್ಯಸಭೆಯಲ್ಲಿ (Rajya Sabha) ಇಂದು ಕಾಂಗ್ರೆಸ್ (Congress) ನಡೆಸಿದ ಧರಣಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷ ಕಾಂಗ್ರೆಸ್ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವ ರೀತಿ ನಡೆದುಕೊಳ್ತಿದೆ ಎಂದು ಪ್ರಲ್ಹಾದ ಜೋಶಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಸೈನ್ಯದ (Indian Army) ಕುರಿತ ಸೂಕ್ಷ್ಮ ವಿಷಯಗಳ ಚರ್ಚೆ ನಡೆಯದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇಂತಹ ಪದ್ಧತಿ ಪಾಲಿಸಿದ್ದನ್ನು ಕಂಡಿದ್ದೇವೆ. ಸ್ವತಃ ರಾಜ್ಯಸಭೆಯ ಸಭಾಪತಿಯವರು ಸಂಧಾನಕ್ಕೆ ಕರೆದರೂ ಸಹ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬರಲು ಒಪ್ಪಲಿಲ್ಲ. ರಾಜ್ಯಸಭೆ ಪೀಠದಿಂದ ಏನೇ ನಿರ್ದೇಶನಗಳು ಬಂದರೂ ಸಹ ಅದನ್ನ ಉಲ್ಲಂಘಿಸಬೇಕು ಎಂಬ ನಿರ್ಧಾರ ಪ್ರತಿಪಕ್ಷಗಳು ಮಾಡಿದಂತಿದೆ. ಈ ರೀತಿಯ ನಡವಳಿಕೆ ಸದನದಲ್ಲಿ ತೋರುವುದು ಖರ್ಗೆಯವರಿಗೆ ಸರಿಯಾದುದಲ್ಲ ಎಂದು ಅವರು ಹೇಳಿದರು.

ಸದನದಲ್ಲಿಂದು ಕಾಂಗ್ರೆಸ್ ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸಚಿವ ಜೋಶಿ, ರಾಜ್ಯಸಭೆ ಸಭಾಪತಿ ಅವರು ಪ್ರತಿಪಕ್ಷಗಳಲ್ಲಿ ಕೈ ಮುಗಿದು ಮನವಿ ಮಾಡಿದರು. ಸದನದಲ್ಲಿ ಪೀಠಾಧ್ಯಕ್ಷರು ಎದ್ದು ನಿಂತು ಕೈ ಮುಗಿದು ಮನವಿ ಮಾಡುತ್ತಾರೆ ಎಂದರೆ ಪ್ರತಿಪಕ್ಷ ನಾಯಕ ಹಾಗು ಸಭಾ ನಾಯಕರು ಅದನ್ನು ಗೌರವಿಸಬೇಕು. ಆದರೆ ಮಲ್ಲಿಕಾರ್ಜುನ ಖರ್ಗೆಯವರು ಸಭಾಧ್ಯಕ್ಷರ ಮನವಿಯನ್ನ ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ ಎಂದರೆ ಏನರ್ಥ..? ಸಂಧಾನದ ಮಾತುಕತೆಗೆ ನಾನು ಬರಲ್ಲ ಎಂದು ಖರ್ಗೆ ನೇರವಾಗಿ ಹೇಳಿದರು. ಒಂದು ಸೌಜನ್ಯವನ್ನ ತೋರಿಸಲಿಲ್ಲ. ಈ ನಡವಳಿಕೆ ಖಂಡನೀಯ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕೊನೆ ಪಕ್ಷ ಪ್ರತಿಪಕ್ಷಗಳು ಚೀನಾ ವಿಚಾರದಲ್ಲಿ ನಮ್ಮ ಸೇನೆಯ ಹೇಳಿಕೆಯನ್ನಾದರೂ ನಂಬಬೇಕು. ಭಾರತೀಯ ಸೇನೆಯ ಮೇಲೆ ಕಾಂಗ್ರೆಸ್ ಗೆ ನಂಬಿಕೆ ಇಲ್ಲವೇ..? ಚೀನಾ ಭಾರತ ಗಡಿ ವಿಚಾರ ಸೂಕ್ಷ್ಮ ವಿಚಾರವಾಗಿದ್ದು, ಸಾರ್ವಜನಿಕವಾಗಿ ಚರ್ಚೆ ನಡೆಸುವುದು ಎಷ್ಟು ಸೂಕ್ತ..? ಕೆಲವು ಸೂಕ್ಷ್ಮ ವಿಚಾರಗಳನ್ನ ಸದನದಲ್ಲಿ ಚರ್ಚಿಸುವುದಕ್ಕಿದ್ದ, ಸಭಾನಾಯಕರು, ಪ್ರತಿಪಕ್ಷ ನಾಯಕರು ಒಟ್ಟಾಗಿ ಸೇರಿ ಚರ್ಚಿಸುವ ಅಗತ್ಯತೆ ಇರುತ್ತದೆ. ಕಾಂಗ್ರೆಸ್ ಆಡಳಿತ ನಡೆಸುವಾಗಲು ಇಂತಹ ಹಲವು ನಿದರ್ಶನಗಳಿವೆ.

ಕಾಂಗ್ರೆಸ್ ಆಡಳಿತ ನಡೆಸುವಾಗ ಇಂತಹ ಸಂದರ್ಭಗಳಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ರಾಷ್ಟ್ರದ ಹಿತ ಗಮನಿಸಿ ಸರ್ಕಾರಕ್ಕೆ ಸಹಕಾರ ನೀಡಿದೆ. ಸದನದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ. ಅಲ್ಲದೇ ಭಾರತೀಯ ಸೇನೆ ಕೂಡ ಹೇಳಿಕೆ ನೀಡಿದೆ. ಸೇನೆಯ ಹೇಳಿಕೆಯನ್ನಾದ್ರೂ ನಂಬಿ ಕಾಂಗ್ರೆಸ್ ಸುಗಮವಾಗಿ ಸದನ ನಡೆಯಲು ಅವಕಾಶ ಮಾಡಿಕೊಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪ್ರಲ್ಹಾದ ಜೋಶಿಯವರು, ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷದ ಮೇಲಿನವರನ್ನ ಮೆಚ್ಚಿಸಬೇಕಿದೆ. ಯಾರನ್ನೋ ಮೆಚ್ಚಿಸಲು ಸಂವಿಧಾನಾತ್ಮಕವಾಗಿ ನಡೆಯುವ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ಕಾಂಗ್ರೆಸ್ ಪಕ್ಷದ ನಡೆಸಿದ ಧರಣಿ ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ